ಚೂರಿ ಇರಿದು ಕೋಳಿ ಅಂಗಡಿ ಮಾಲಕನ ಹತ್ಯೆ

Update: 2020-12-31 14:38 GMT

ಬೆಂಗಳೂರು, ಡಿ.31: ಕೋಳಿ ಅಂಗಡಿ ನಡೆಸುತ್ತಿದ್ದ ಯುವಕನೊಬ್ಬನನ್ನು ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ  ಕಾಡುಗೊಂಡನಹಳ್ಳಿಯಲ್ಲಿ ನಡೆದಿದೆ.

ಮೃತನನ್ನು ಕಾಡುಗೊಂಡನಹಳ್ಳಿಯ ಅನ್ವರ್ ಪಾಳ್ಯದ ಸುಲ್ತಾನ್ ಪಾಷ(27) ಎಂದು ಗುರುತಿಸಲಾಗಿದೆ. ಡಿ.30ರ ರಾತ್ರಿ ಮನೆಯ ಹತ್ತಿರದ ಅಂಗಡಿ ಬಳಿ ನಿಂತಿದ್ದ ಸುಲ್ತಾನ್‍ನನ್ನು ಮಾತನಾಡುವ ನೆಪದಲ್ಲಿ ಇಬ್ಬರು ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿ ಜಗಳ ಮಾಡಿ ಸುಲ್ತಾನ್ ಕುತ್ತಿಗೆ ಬಳಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಆತನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಸುಲ್ತಾನ್ ಹಾಗೂ ಇಬ್ಬರ ನಡುವೆ ನಿವೇಶನ ಹಾಗೂ ಆಸ್ತಿಯ ವಿಚಾರವಾಗಿ ವಿವಾದವಿದ್ದು ಅದೇ ದ್ವೇಷದಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಈ ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೊಂಡನಹಳ್ಳಿ ಠಾಣಾ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News