ಎಸಿಬಿ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಲಂಚಕ್ಕೆ ಬೇಡಿಕೆ: ದೂರು ದಾಖಲು
Update: 2021-01-09 12:01 GMT
ಬೆಂಗಳೂರು, ಜ.9: ಭ್ರಷ್ಟಾಚಾರ ನಿಗ್ರಹದಳ(ಎಸಿಬಿ) ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಇಂಜಿನಿಯರೊಬ್ಬರ ಬಳಿ ಲಂಚ ಕೇಳಿದ ಆರೋಪದಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಧನಂಜಯ್ ಮೂರ್ತಿ ಅವರಿಗೆ ಎಸಿಬಿ ಡಿವೈಎಸ್ಪಿ ಜಗದೀಶ್ ಹೆಸರಿನಲ್ಲಿ ಕರೆ ಮಾಡಿ ನಿಮ್ಮ ವಿರುದ್ಧ ಆರೋಪಗಳಿವೆ. ತನಿಖೆ ಮಾಡಬೇಕಿದೆ ಎಂದು ಮೊದಲಿಗೆ ಹೆದರಿಸಿದ್ದಾನೆ. ಬಳಿಕ ಶ್ರೀಲಂಕಾ, ಮಾನಸ ಸರೋವರ ಯಾತ್ರೆಗೆ ಫ್ಲೈಟ್ ಟಿಕೆಟ್ ಬುಕ್ ಮಾಡುವಂತೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಇದರಿಂದ ಅನುಮಾನಗೊಂಡ ಧನಂಜಯ ಮೂರ್ತಿ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.