ಭೂಮ್ತಾಯಿ ಒಡಲ ಸೊಲ್ಲು...

Update: 2021-01-10 19:30 GMT

 ಭಾಗ-2

ಅವರ ಮಾತುಗಳು ನನಗೆ ಅರ್ಥಮಾಡಿಸಿತ್ತು - ಸಾಮಾನ್ಯವಾಗಿ ಗಿಡಮರಗಳ ಎಲೆಯ ತುದಿಯ ವಿಸ್ತೀರ್ಣದವರೆಗೂ ಬೇರುಗಳು ಬೆಳೆದಿರುತ್ತವೆ. ಆ ಕಟ್ಟ ಕಡೆ ತುದಿಯ ಬೇರು ಮಾತ್ರ ನೀರಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಒಂದು ವೇಳೆ ಆ ಗಿಡಮರಗಳ ಬುಡಕ್ಕೆ ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ನಿರಂತರವಾಗಿ ಕೊಡುವುದರಿಂದ ಬೇರುಗಳು ಹೆಚ್ಚು ಉದ್ದ ಬೆಳೆಯದೆ ಗಟ್ಟಿಯಾಗಿ ನಿಲ್ಲಬೇಕಿದ್ದ ಮರಗಿಡಗಳು ಅತೀ ಕಡಿಮೆ ಒತ್ತಡದಲ್ಲಿ ಗಾಳಿ ಬೀಸಿದರೂ ಬಿದ್ದು ಹೋಗುವ ಪರಿಸ್ಥಿತಿ ಎದುರಾಗುತ್ತದೆ ಎನ್ನುವುದನ್ನು ಮನಗಂಡೆ.

ನಾರಾಯಣ ರೆಡ್ಡಿಯವರು ಪ್ರತಿಯೊಂದು ವಿಷಯದ ಬಗ್ಗೆಯೂ ಕೂಲಕಂಷವಾಗಿ ಅಧ್ಯಯನ ಮಾಡುತ್ತ, ಸಾಧ್ಯತೆ ಬಾಧ್ಯತೆಯನ್ನು ನೋಡುತ್ತಾ, ತಮ್ಮ ಜಮೀನಿನಲ್ಲಿ ಪ್ರಯೋಗಗಳನ್ನು ಮಾಡುತ್ತಾ ಯಶಸ್ಸನ್ನು ಕಂಡು ಆ ನಂತರ ಇತರರಿಗೆ ಹೇಳುತ್ತಿದ್ದರು. ಕೃಷಿಯ ಯಶಸ್ಸಿಗೆ ಬೇರೆಯವರು ಕಂಡು ಹಿಡಿದ ಅಥವಾ ಯಶಸ್ವಿಯಾದ ಯಾವುದೇ ಪದ್ಧತಿಗಳನ್ನು ಅಥವಾ ವಿಚಾರಗಳನ್ನು ಒಪ್ಪಿಕೊಳ್ಳುವ ಮನಸ್ಸು ಮತ್ತು ಅದು ರೈತರಿಗೆ ಒಳ್ಳೆಯದು ಮಾಡಲಪ್ಪ ಎನ್ನುವ ಅವರ ಅಂತಃಕರಣದಿಂದಲೇ ನಾರಾಯಣ ರೆಡ್ಡಿಯವರು ನಮಗೆ ದೊಡ್ಡವರಾಗಿ ಕಾಣುತ್ತಾರೆ.

ಇನ್ನೊಮ್ಮೆ ಹೀಗೆ ಮಾತಿಗೆ ಕುಳಿತಾಗ ‘ಏನು ನೀವು ನಿಮ್ಮ ತೋಟವನ್ನು ಒಂದು ಯುನಿವರ್ಸಿಟಿ ಮಾಡಲು ಹೊರಟಿದ್ದೀರಂತೆ?’’ ಎಂದು ಕೇಳಿದರು. ಅದಕ್ಕೆ ನಾನು, ‘‘ಹಾಗೇನಿಲ್ಲ ಸರ್, ಪಾಲೇಕರ್‌ರವರು ನಮ್ಮ ತೋಟಕ್ಕೆ ಭೇಟಿ ಕೊಟ್ಟಿದ್ದರು, ಆ ಸಂದರ್ಭದಲ್ಲಿ ಯುನಿವರ್ಸಿಟಿ ಮಾತು ಬಂತು ಅಷ್ಟೆ’ ಎಂದೆ. ಅದಕ್ಕವರು ‘ಮಾಡಿ, ಮಾಡಿ ರೈತರಿಗೆ ಅನುಕೂಲವಾಗುತ್ತೆ ಎನ್ನುವುದಾದರೆ ಅದಕ್ಕಿಂತ ಒಳ್ಳೆಯ ಕೆಲಸ ಬೇರೆ ಏನಿದೆ?’’ ಎಂದರು. ನಾನು ಮಾತು ಮುಂದುವರಿಸುತ್ತಾ ‘ಸರ್, ಕರ್ನಾಟಕದ ಪ್ರತಿಯೊಂದು ಹಳ್ಳಿಯಲ್ಲೂ ಒಂದೊಂದು ಮಾದರಿ ತೋಟವನ್ನು (ರಾಸಾಯನಿಕ ಮುಕ್ತ ಕೃಷಿ ಪದ್ಧತಿಯಡಿ) ಕಟ್ಟುವ ಕನಸಿದೆ. ಈ ಕೆಲಸಕ್ಕೆ ನೀವೇ ಮುಂದಾಳತ್ವವನ್ನು ವಹಿಸಿಕೊಂಡು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಬೇಕೆಂಬ ಬೇಡಿಕೆಯನ್ನಿಟ್ಟೆ. ಸ್ವಲ್ಪ ಹೊತ್ತು ಯೋಚಿಸುತ್ತಾ ನಿಧಾನವಾಗಿ ಹೇಳಿದರು- ‘‘ಅದು ಅಷ್ಟು ಸುಲಭದ ಕೆಲಸವಲ್ಲ, ನನಗೂ ವಯಸ್ಸಾಗುತ್ತಾ ಇದೆ, ಎಷ್ಟು ಅಂತ ಓಡಾಡಲಿ. ನಿಮ್ಮ ಪ್ರಯತ್ನವನ್ನು ಮುಂದುವರಿಸಿ ಒಳ್ಳೆಯದಾಗಲಿ’’ ಎಂದು ಹೃದಯ ತುಂಬಿ ಹಾರೈಸಿದರು.

ಇಷ್ಟಾದರೂ ಒತ್ತಡ ಹಾಕುವುದನ್ನು ನಿಲ್ಲಿಸದ ನಾನು ‘‘ಪ್ರತಿ ಹಳ್ಳಿಯಲ್ಲಿ ಒಂದೇ ತರವಾದ ಮಾದರಿ ತೋಟವನ್ನು ನಿರ್ಮಿಸುವ ಬದಲು ಒಂದೊಂದು ಹಳ್ಳಿಯಲ್ಲೂ ಒಂದೊಂದು ಮಾದರಿ ತೋಟ ಮಾಡಿದರೆ ಹೇಗೆ ಸರ್?’’ ಎಂದು ಕೇಳಿದೆ. ಅದಕ್ಕವರು ‘‘ನೋಡಿ ಮೊದಲು ಆ ಹಳ್ಳಿಯ ವಾತಾವರಣಕ್ಕೆ ಅನುಗುಣವಾಗಿ, ಮಣ್ಣಿನ ಗುಣವನ್ನು ಪರೀಕ್ಷಿಸಿ, ನೀರಿನ ಲಭ್ಯತೆಯನ್ನು ತಿಳಿದು ಆ ನಂತರ ಆಯಾ ಜಾಗಕ್ಕೆ ಸೂಕ್ತವಾದ ಗಿಡಮರಗಳನ್ನು ಆಯ್ಕೆ ಮಾಡಬೇಕು. ಇದೆಲ್ಲದರ ಜೊತೆಯಲ್ಲಿ ಮುಖ್ಯವಾಗಿ ಹ್ಯೂಮಸ್ ಹಾಗೂ ಸಾವಯವ ಇಂಗಾಲದ ಪ್ರಮಾಣವನ್ನು ಹೆಚ್ಚಿಸುವಂತಹ ಕೆಲಸ ಮಾಡಬೇಕು. ಇಷ್ಟು ನೀವು ಮಾಡಿದರೆ ಸಾಕು, ಮಾದರಿ ತೋಟ ಅದರ ಪಾಡಿಗೆ ಅದು ತಯಾರಾಗುತ್ತದೆ’’ ಎಂದರು.

ಪ್ರತಿ 8 ಕಿ.ಮೀ.ಗೂ ವಾತಾವರಣದಲ್ಲಿ, ಮಳೆಯ ಪ್ರಮಾಣದಲ್ಲಿ, ಮಣ್ಣಿನ ಲಕ್ಷಣದಲ್ಲಿ, ರೋಗ ಲಕ್ಷಣದಲ್ಲಿ, ಗಾಳಿಯ ಒತ್ತಡ ಬದಲಾಗುತ್ತಿರುತ್ತದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಬೆಳೆಗಳ ಆಯ್ಕೆಯನ್ನು ಮಾಡಿಕೊಳ್ಳಬೇಕು ಹಾಗೂ ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆಗಳನ್ನು ಆಯೋಜಿಸಿಕೊಳ್ಳಬೇಕು ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತಿದ್ದರು. ಇಂದು ಬಯಲು ಸೀಮೆಯಲ್ಲಿ ಸಾವಿರಾರು ಎಕರೆಯಲ್ಲಿ ಹೆಚ್ಚು ನೀರನ್ನು ಬೇಡುವ ತೆಂಗು, ಅಡಿಕೆ ಮುಂತಾದ ಬೆಳೆಗಳನ್ನು ಏಕ ಬೆಳೆ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ. ಸಾವಿರ ಅಡಿ ದಾಟಿದರೂ ಬೋರ್ವೆಲ್‌ನಲ್ಲಿ ನೀರಿಲ್ಲದ ಪರಿಸ್ಥಿತಿಯನ್ನು ನೆನೆದರೆ ಮುಂದಿನ ದಿನಗಳು ಹೇಗಪ್ಪ ಎನ್ನುವ ಭಯ ಕಾಡುತ್ತದೆ...

ನಾರಾಯಣ ರೆಡ್ಡಿಯವರನ್ನು ಮತ್ತು ಪಾಲೇಕರ್‌ಅವರನ್ನು ಒಂದೇ ವೇದಿಕೆಯಲ್ಲಿ ನೋಡುವ ತವಕ ಬಹು ದಿನಗಳದ್ದು. ನಾನು ಆಯೋಜಿಸಿದ್ದ ಪಾಲೇಕರ್ ಅವರ 5 ದಿನಗಳ ಕಾರ್ಯಾಗಾರಕ್ಕೆ ರೆಡ್ಡಿಯವರನ್ನು ಆಹ್ವಾನಿಸಲು ಹೋದಾಗ ಪಾಲೇಕರ್ ಮತ್ತು ಅವರು ಪ್ರತಿಪಾದಿಸುತ್ತಿರುವ ಕೃಷಿಯ ಬಗ್ಗೆ ನಡೆದ ಮಾತುಕತೆಗಳು ಹೀಗಿವೆ:

‘‘ಸರ್, ಪಾಲೇಕರ್ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು?’’ ಎಂದು ಕೇಳಿದೆ. ಈ ಪ್ರಶ್ನೆಗೆ ಉತ್ತರಿಸುತ್ತ ರೆಡ್ಡಿಯವರು ‘‘ಏನ್ ಶೂನ್ಯ ಬಂಡವಾಳ ರೀ ಅದು. ಕೃಷಿಗೆ ಬಂಡವಾಳ ಬೇಕೇಬೇಕು’’ ಎನ್ನುತ್ತಿದ್ದಂತೆ ಮಧ್ಯೆ ಮಾತನಾಡಿ ‘‘ಸರ್ ಶೂನ್ಯ ಬಂಡವಾಳದ ಕೃಷಿ ಎಂದರೆ ಮುಖ್ಯ ಬೆಳೆಗಳಿಗಾಗುವ ಖರ್ಚನ್ನು ಅಂತರ್‌ಬೆಳೆಗಳಿಂದ ಪಡೆಯುವುದು ಎಂದು ಸರ್’’ ಎಂದೆ. ‘‘ಅಂತರ್ ಬೆಳೆಗಳನ್ನು ಬೆಳೆಯುವುದಕ್ಕಾದರು ಖರ್ಚಾಗುತ್ತದಲ್ಲಪ್ಪಾ, ಹೇಗೆ ಶೂನ್ಯ ಬಂಡವಾಳ ಎಂದು ಹೇಳುತ್ತಾರೆ?. ಜೀವಾಮೃತವನ್ನು ಮಾತ್ರ ನಾನು ಒಪ್ಪುತ್ತೇನೆ, ಆದರೆ ಅವರ ಇಡೀ ಸಿದ್ಧಾಂತವನ್ನಲ್ಲ’’ ಅಂದರು.

ತಮ್ಮ ಮಾತನ್ನು ಮುಂದುವರಿಸುತ್ತಾ ‘‘ಕೃಷಿ ವಿಜ್ಞಾನ ಬಹಳ ಹಿಂದಿನಿಂದಲೂ ಇದೆ. ಕೃಷಿ ಯುನಿವರ್ಸಿಟಿ ಬಂದ ಮೇಲೆ ಸವಿವರವಾಗಿ ಒಂದು ಪಠ್ಯ ಕ್ರಮದಲ್ಲಿ ಕೃಷಿ ವಿಜ್ಞಾನ ನಮಗೆ ಅರ್ಥವಾಯಿತು. ಒಂದು ಕಡೆ ವಿಜ್ಞಾನ ಮತ್ತು ಆರಂಭ ಮಾಡುವಾಗ ದೊರೆತ ಜ್ಞಾನ, ಈ ಎರಡನ್ನು ಸೇರಿಸಿ ನಾವು ರೈತರಿಗೆ ಹೇಳಬೇಕು. ಇದನ್ನು ಬಿಟ್ಟು ಬರೀ ವಿಜ್ಞಾನವನ್ನು ಮಾತ್ರ ಹೇಳಿದರೆ ಒಬ್ಬ ಸಾಮಾನ್ಯ ರೈತನಿಗೆ ಭೂಮಿಯಲ್ಲಿ ಏನು ಮಾಡಬೇಕು ಎಂದು ಹೇಗೆ ಗೊತ್ತಾಗುತ್ತಪ್ಪ. (ಸ್ವಲ್ಪ ಹೊತ್ತು ಯೋಚಿಸುತ್ತಾ)ನಮ್ಮ ಕೃಷಿ ವಿಜ್ಞಾನಿಗಳನ್ನು ಬೈದುಕೊಂಡು ಓಡಾಡುತ್ತಾರೆ, ಆಮೇಲೆ ನೈಸರ್ಗಿಕ ಕೃಷಿ ವಿಜ್ಞಾನ ನಂದೇ ಎನ್ನುವ ಧೋರಣೆ ಇದೆಯಲ್ಲ ಅದು ನನಗೆ ತುಂಬಾ ಮುಜುಗರ. ಆಮೇಲೆ ಪಾಲೇಕರ್‌ರವರು, ಒಂದು ಎಕರೆಗೆ ಇಷ್ಟೇ ದುಡ್ಡು ಬರುತ್ತದೆ ಎನ್ನುತ್ತಾರಂತೆ. ಅದು ಆರು ಲಕ್ಷನೋ ಏಳು ಲಕ್ಷನೋ ಇರಬೇಕು. ಇಷ್ಟು ದುಡ್ಡು ದುಡಿದವರು ಯಾರಿದ್ದಾರೆ? ಪಾಲೇಕರ್ ಆದರೂ ಬೆಳೆದಿದ್ದಾರಾ ಎಂದರೆ, ಅವರಿಗೆ ತೋಟವೇ ಇಲ್ಲ ಎಂದು ಹೇಳುತ್ತಾರಲ್ಲಪ್ಪ’’ ಎಂದು ಸ್ವಲ್ಪ ಹೊತ್ತು ಮೌನವಾದರು.

ನಾನೇ ಮಾತು ಆರಂಭಿಸಿ, ಸುಮಾರು 20 ಲಕ್ಷಕ್ಕೂ ಹೆಚ್ಚು ರೈತರು ಅವರ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರಂತೆ ಎಂದೆ. ಅದಕ್ಕವರು ‘‘ನೋಡಿ ಇಲ್ಲಿ ನಂಬರ್ ಮುಖ್ಯ ಅಲ್ಲ. ಆ ರೈತ ನಿಜವಾಗಿಯೂ ಖುಷಿಯಿಂದ ಇದ್ದಾನಾ? ನಾಲ್ಕು ಕಾಸು ಸಂಪಾದಿಸಿದ್ದಾನಾ? ನೆಮ್ಮದಿ ಜೀವನ ಸಿಕ್ಕಿದೆಯಾ ಎನ್ನುವುದು ಮುಖ್ಯ ಆಗುತ್ತೆ. ನನ್ನಿಂದ ಕಲಿತವರು ಸುಮಾರು 40 ಸಾವಿರಕ್ಕಿಂತಲೂ ಜಾಸ್ತಿಯಿದ್ದಾರೆ. ನನ್ನ ತೋಟಕ್ಕೆ ಸಾವಿರಾರು ಮಂದಿ ಬಂದಿದ್ದಾರೆ. ಕಣ್ಣಾರೆ ನೋಡಿದ್ದಾರೆ. ನಾನು ಸುಮಾರು ರೈತರ ತೋಟಕ್ಕೆ ಹೋಗಿ ಸಲಹೆ ಸೂಚನೆ ಕೊಡುತ್ತೇನೆ. ಆಗ ಆ ರೈತನಿಗೆ ಅರ್ಥ ಆಗುತ್ತೆ. ಬರೀ ಭಾಷಣದಿಂದ ರೈತರನ್ನು ಉದ್ಧಾರ ಮಾಡುವುದಕ್ಕೆ ಆಗುವುದಿಲ್ಲ’’ ಎಂದರು. ಆಮೇಲೆ ‘‘ನಾನು ನನ್ನ ತೋಟದಲ್ಲಿ ಬೆಳೆದಿರುವ ಬೆಳೆಗಳ ಇಳುವರಿಯ ಬಗ್ಗೆ ಖಚಿತವಾದ ಮಾಹಿತಿಯನ್ನು ಕೊಡುತ್ತೇನೆ. ಸುಮ್ಮನೆ ಹಾರಿಕೆಯ ಉತ್ತರ ಕೊಡುವುದಿಲ್ಲ. ಪ್ರತಿಯೊಂದು ಬೆಳೆಗೂ ನಿರ್ದಿಷ್ಟವಾದ ಕೆಲಸ ಇರುತ್ತೆ. ರೋಗ ರುಜಿನಗಳ ಬಗ್ಗೆ, ಪೋಷಕಾಂಶಗಳ ಬಗ್ಗೆ ನೀರಿನ ಅವಶ್ಯಕತೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಬೇಕಾಗುತ್ತ್ತದೆ. ಬರೀ ಜೀವಾಮೃತ, ಬೀಜಾಮೃತ ಅಂದರೆ ಸಾಕಾಗುವುದಿಲ್ಲ. ನಾವು ಯಾವಾಗಲೂ ಮಣ್ಣಲ್ಲಿ ನಿಂತು ಕೆಲಸ ಮಾಡಬೇಕು. ಇಲ್ಲವೆಂದರೆ ಜನಗಳ ಬಾಯಿ ಮುಚ್ಚಿಸುವುದಕ್ಕೆ ಸುಳ್ಳು ಹೇಳಬೇಕಾಗುತ್ತದೆ’’ ಎಂದರು.

ಮಾತು ಹಾಗೆ ಮುಂದುವರಿಯುತ್ತಾ, ‘‘ಶೂನ್ಯ ಬಂಡವಾಳ ಎನ್ನುವ ಪದ ತಪ್ಪು ಎನ್ನುವುದಾದರೆ ನೀವು ಹೇಳುವ ಸಾವಯವ ಕೃಷಿ ಎನ್ನುವ ಪದವೂ ನನಗೆ ಬೇರೆ ರೀತಿ ಕಾಣುತ್ತದೆ ಸರ್. ಇಂದು ಸಾವಯವ ಕೃಷಿಯಲ್ಲೂ ಕೂಡಾ ಒಳಸುರಿ ದಂಧೆ ಹೆಚ್ಚಾಗಿದೆ. ಅಂದರೆ ಸಾವಯವ ಗೊಬ್ಬರಗಳು, ಕ್ರಿಮಿನಾಶಕಗಳು, ಕಳೆನಾಶಕ ಮತ್ತು ಬಹಳ ಮುಖ್ಯವಾಗಿ ಒಂದು ಎಕರೆಗೆ ಹತ್ತಾರು ಟ್ರಾಕ್ಟರ್ ಗೊಬ್ಬರವನ್ನು ಹಾಕುವುದು, ಒಟ್ಟಿನಲ್ಲಿ ಬೇಸಾಯಕ್ಕಾಗುವ ಖರ್ಚು ಮಾತ್ರ ಕಮ್ಮಿ ಅಗಲ್ಲ. ಇದಕ್ಕೆ ಏನ್ ಮಾಡುವುದು ಸರ್’’ ಎಂದೆ. ಅವರ ಉತ್ತರ ಸರಳವಾಗಿತ್ತು- ‘‘ನೋಡಿ ಸಾವಯವ ಕೃಷಿ ಎಂದರೆ ಸಾವಯವ ಪದಾರ್ಥಗಳನ್ನು ಬಳಸಿ ಮಾಡುವ ಕೃಷಿ. ನಾವು ಏನನ್ನು ಹೊರಗಡೆಯಿಂದ ತರಬೇಕಾಗಿಲ್ಲ. ಹಸು ಇದ್ರೆ ಸಾಕು. ಅದು ಎಚ್ ಎ್ ಆದರೂ ಸರಿಯೇ, ನಾಟಿ ಹಸು ಆದರೂ ಸರಿಯೇ. ಮಳೆಗಾಲದಲ್ಲಿ ಒಂದಿಂಚು ಜಾಗ ಬಿಡದೆ ಏನನ್ನಾದರು ಬೆಳೆಯಿರಿ. ಆ ತ್ಯಾಜ್ಯಗಳನ್ನು ಅಲ್ಲೇ ಬಿಡಿ. ಒಂದಷ್ಟು ದಿನದಲ್ಲಿ ಅದು ಮಣ್ಣಿನಲ್ಲಿ ಕೊಳೆತು ಗೊಬ್ಬರವಾಗುತ್ತದೆ. ಮುಂದೆ ಒಂದು ದಿನ ಅದೇ ಹ್ಯೂಮಸ್ ಆಗುತ್ತೆ. ಭೂಮಿಗೆ ನೆರಳು ಕೊಡುವುದಕ್ಕೆಂದು ಒಂದಷ್ಟು ಗಿಡಮರಗಳನ್ನು ಬೆಳೆಯಿರಿ. ಜೀವಾಣುಗಳು ಉತ್ಪತ್ತಿಯಾಗುತ್ತೆ. ತೀರ ನಿಮಗೆ ಬೇಕು ಅಂದರೆ ವರ್ಮಿ ಕಾಂಪೋಸ್ಟ್ಟ್ ತಯಾರಿಸಿ ಭೂಮಿಗೆ ಕೊಡಿ. ನನ್ನ ತೋಟದಲ್ಲಿ ಏನನ್ನೂ ಹಾಕದೆ ಬೆಳೆದು ನಿಂತಿರುವ ಗಿಡಮರಗಳನ್ನು ನೋಡ್ರಪ್ಪ ನಿಮಗೆ ಅರ್ಥವಾಗುತ್ತೆ’’ ಅಂದರು. ಅಲ್ಲಿ ನಮ್ಮ ಸುತ್ತಲೂ ಸಮೃದ್ಧಿಯಾಗಿ ಬೆಳೆದು ನಿಂತ ಮರಗಿಡಗಳು ನಳನಳಿಸುತ್ತಿದ್ದವು.

Writer - ಅವಿನಾಶ್ ಟಿ.ಜಿ.ಎಸ್.

contributor

Editor - ಅವಿನಾಶ್ ಟಿ.ಜಿ.ಎಸ್.

contributor

Similar News