ಯುವತಿಯ ಅತ್ಯಾಚಾರ, ಮತಾಂತರಕ್ಕೆ ಯತ್ನ ಆರೋಪ: ಓರ್ವನ ಬಂಧನ

Update: 2021-01-11 17:00 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.11: ದುಷ್ಕರ್ಮಿಗಳು ಯುವತಿಯ ಅತ್ಯಾಚಾರವೆಸಗಿ, ಮತಾಂತರಕ್ಕೂ ಯತ್ನಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಓರ್ವನನ್ನು ಸಿಕೆ ಅಚ್ಚುಕಟ್ಟು ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಶಬ್ಬೀರ್ ಅಹ್ಮದ್ ಬಂಧಿತ ಆರೋಪಿಯಾಗಿದ್ದು, ಈತನ ಸಹೋದರ ರಿಲ್ವಾನ್ ಎಂಬಾತ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಆರೋಪಿಗಳಿಬ್ಬರು ನಗರದಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಹೋಟೆಲ್‍ವೊಂದರ ಸ್ವಾಗತಕಾರಣಿ ಉದ್ಯೋಗಕ್ಕೆ ಸಂತ್ರಸ್ತೆಯನ್ನು ಆರೋಪಿ ಶಬ್ಬೀರ್ ಅಹ್ಮದ್ ಸೇರಿಸಿದ್ದ. ಕೆಲ ದಿನಗಳ ನಂತರ, ಸಲುಗೆ ಬೆಳೆಸಿಕೊಂಡು ಸಂತ್ರಸ್ತೆಯನ್ನು ಹೋಟೆಲ್‍ವೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಈ ವಿಚಾರ ಹೊರಗಡೆ ಹೇಳದಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ತದನಂತರ, ಆರೋಪಿಯ ಸಹೋದರ ರಿಲ್ವಾನ್ ಸಹ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಆನಂತರ, ನೀನು ಧರ್ಮ ಬದಲಾವಣೆ ಮಾಡಬೇಕೆಂದು ಒತ್ತಡ ಹೇರಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿರುವುದಾಗಿ ತಿಳಿದುಬಂದಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News