ಬೆಂಗಳೂರು: ಆಸ್ಟರ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳಿಗೆ ಹೃದಯ ಮತ್ತು ಶ್ವಾಸಕೋಶಗಳ ಸಂಯೋಜಿತ ಕಸಿ ಯಶಸ್ವಿ
ಬೆಂಗಳೂರು, ಜ.12: ಬೆಂಗಳೂರಿನ ಆಸ್ಟರ್ ಆಸ್ಪತ್ರೆಗಳು ಮತ್ತು ಹೈದರಾಬಾದ್ನ ಕಿಮ್ಸ್ ಆಸ್ಪತ್ರೆಗಳ ವೈದ್ಯರ ತಂಡಗಳ ಜಂಟಿ ಪ್ರಯತ್ನದ ಫಲವಾಗಿ, ಸವಾಲಿನ ಎರಡೂ ಶ್ವಾಸಕೋಶ ಕಸಿ ಮತ್ತು ಹೃದಯ ಮತ್ತು ಶ್ವಾಸಕೋಶಗಳ ಸಂಯೋಜಿತ ಕಸಿಯ ಮೂಲಕ ತೆರಪಿನ ಶ್ವಾಸಕೋಶದ ಕಾಯಿಲೆ (ಐಎಲ್ಡಿ)ಯಿಂದ ಬಳಲುತ್ತಿದ್ದ ತಮಿಳುನಾಡಿನ 62 ವರ್ಷದ ಹಿರಿಯ ನಾಗರಿಕ ಮತ್ತು ಮತ್ತು ಜಾರ್ಖಂಡ್ನ 40 ವರ್ಷದ ಜನ್ಮಜಾತ ಹೃದಯ ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಜಾರ್ಖಂಡ್ನ 40 ವರ್ಷದ ರೋಗಿ ಪವನ್ ಕುಮಾರ್ ಸಿಂಗ್ ಅವರಿಗೆ ಮಹತ್ವದ ರಚನಾತ್ಮಕ ಸಮಸ್ಯೆಗಳೊಂದಿಗೆ ಜನ್ಮಜಾತ ಹೃದ್ರೋಗವಿತ್ತು ಮತ್ತು ತೀವ್ರವಾದ ಶ್ವಾಸಕೋಶದ ಅಧಿಕ ರಕ್ತದೊತ್ತಡವಿತ್ತು. ಇನ್ನೊಂದು ಪ್ರಕರಣದಲ್ಲಿ, 62 ವರ್ಷದ ಮಾರ್ಗಬಂಧು ಅವರು ಐಎಲ್ಡಿ ಸಮಸ್ಯೆ ಹೊಂದಿದ್ದರು. ಉತ್ತಮ ವೈದ್ಯಕೀಯ ನಿರ್ವಹಣೆಯ ಹೊರತಾಗಿಯೂ ಅವರಲ್ಲಿ ಫೈಬ್ರೋಸಿಸ್ ಬೆಳೆಯುತ್ತಲೇ ಇತ್ತು. ಕನಿಷ್ಠ ದೈಹಿಕ ಚಟುವಟಿಕೆಗಳ ಜೊತೆಗೆ, ಅವರು ಆಮ್ಲಜನಕವನ್ನು ಅವಲಂಬಿಸಿದ್ದರು.
ಎರಡೂ ಪ್ರಕರಣಗಳ ಬಗ್ಗೆ ಕಿಮ್ಸ್ ಹಾರ್ಟ್ ಮತ್ತು ಶ್ವಾಸಕೋಶ ಕಸಿ ಸಂಸ್ಥೆಯ ಥೊರಾಸಿಕ್ ಆರ್ಗನ್ ಟ್ರಾನ್ಸ್ಪ್ಲಾಂಟ್ಸ್ ಮತ್ತು ಅಸಿಸ್ಟ್ ಡಿವೈಸಸ್ ನ ಅಧ್ಯಕ್ಷ ಮತ್ತು ನಿರ್ದೇಶಕ ಡಾ. ಸಂದೀಪ್ ಅತ್ತಾವರ ಅವರು ಹೇಳುವಂತೆ 'ಇಬ್ಬರೂ ರೋಗಿಗಳನ್ನು ಕಸಿಗಾಗಿ ಬೆಂಗಳೂರಿನ ಆಸ್ಟರ್ ಸಿಎಮ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ ನಲ್ಲಿ ಕಸಿ ನಡೆಸಲಾಯಿತು. ಎರಡೂ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ. ರೋಗಿಗಳನ್ನು ಈಗ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಮತ್ತು ಅವರು ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ಇಬ್ಬರೂ ಸುಮಾರು ಮೂರು ತಿಂಗಳ ಅವಧಿಯಲ್ಲಿ ಸಾಮಾನ್ಯ ಜೀವನಕ್ಕೆ ಮರಳಬಹುದು ಎಂದು ತಿಳಿಸಿದ್ದಾರೆ.
ಡಾ. ಸಂದೀಪ್ ಅತ್ತಾವರ್ ದೇಶದ ಅತ್ಯಂತ ಅನುಭವಿ ಹೃದಯ ಮತ್ತು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರು. ಕಸಿ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ 24 ವರ್ಷಗಳ ಅನುಭವ ಹೊಂದಿರುವ ಡಾ. ಅತ್ತಾವರ್, ಇಲ್ಲಿಯವರೆಗೆ 12,000 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ ಮತ್ತು ಶ್ವಾಸಕೋಶ, ಹೃದಯ ಮತ್ತು ಕೃತಕ ಹೃದಯ ಕಸಿ (ಎಲ್ವಿಎಡಿ) ಗಾಗಿ 250 ಕ್ಕೂ ಹೆಚ್ಚು ಕಸಿ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ.
ಬೆಂಗಳೂರಿನ ಆಸ್ಟರ್ ಆಸ್ಪತ್ರೆಗಳ ಇಂಟರ್ವೆನ್ಷನಲ್ ಪಲ್ಮನಾಲಜಿ, ಸ್ಲೀಪ್ ಮೆಡಿಸಿನ್ ಮತ್ತು ಶ್ವಾಸಕೋಶ ಕಸಿ ಸಲಹಾತಜ್ಞ ಡಾ.ಪವನ್ ಯಾದವ್, “ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಯಶಸ್ವಿ ಡಬಲ್ ಶ್ವಾಸಕೋಶ ಕಸಿ ಮತ್ತು ಸಂಯೋಜಿತ ಹೃದಯ ಮತ್ತು ಶ್ವಾಸಕೋಶ ಕಸಿ ನಮ್ಮ ಆಸ್ಪತ್ರೆಯ ಕಸಿ ಯೋಜನೆಗೆ ಹೊಸ ಗರಿ ಮೂಡಿಸಿದೆ. ಸಾಂಕ್ರಾಮಿಕ ಸಮಯದಲ್ಲಿ ಕಸಿ ಶಸ್ತ್ರಚಿಕಿತ್ಸೆ ನಡೆಸುವುದು ಅನೇಕ ವೈದ್ಯಕೀಯ ಮತ್ತು ಲಾಜಿಸ್ಟಿಕ್ ಸವಾಲುಗಳನ್ನು ಹೊಂದಿದೆ. ಈ ಕಸಿ ಮಾಡುವಾಗ ಅಂಗಾಂಗ ಸ್ವೀಕರಿಸುವವರು, ಕುಟುಂಬ ಸದಸ್ಯರು ಮತ್ತು ನಮ್ಮ ತಂಡದ ಸುರಕ್ಷತೆಗಾಗಿ ನಾವು ಕಟ್ಟುನಿಟ್ಟಾದ ಪ್ರೋಟೋಕಾಲ್ಗಳು ಮತ್ತು ಆದೇಶಗಳಿಗೆ ಬದ್ಧರಾಗಿದ್ದೆವು. ಇಬ್ಬರೂ ರೋಗಿಗಳ ಆರೋಗ್ಯ ಸ್ಥಿರವಾಗಿದೆ ಮತ್ತು ಅವರ ಮನೆಗಳಲ್ಲೇ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ,” ಎಂದರು.
ತನ್ನ ಸಹೋದರನ ಜೀವವನ್ನು ಉಳಿಸಿದ್ದಕ್ಕಾಗಿ ವೈದ್ಯರಿಗೆ ಧನ್ಯವಾದ ಸಲ್ಲಿಸಿದ ಪವನ್ ಕುಮಾರ್ ಸಿಂಗ್ ಅವರ ಸಹೋದರ ಆಶಿಶ್ ಸಿಂಗ್, “ನನ್ನ ಸಹೋದರನಿಗೆ 2017 ರಲ್ಲಿ ಶ್ವಾಸಕೋಶದ ಅತಿಸೂಕ್ಷ್ಮತೆಯನ್ನು ಗುರುತಿಸಲಾಯಿತು ಮತ್ತು ಸಮಯದೊಂದಿಗೆ, ಅವರ ಸ್ಥಿತಿ ಮತ್ತಷ್ಟು ಕ್ಷೀಣಿಸಲಾರಂಭಿಸಿತು. ಪಲ್ಮನರಿ ಹೈಪರ್ಟೆನ್ಷನ್ ಬೆಳೆದು, ಇಡೀ ದಿನ ಆಮ್ಲಜನಕವನ್ನು ಅವಲಂಭಿಸಬೇಕಾಗಿ ಬಂದಾಗ ಅವರ ಜೀವನ ಯು-ಟರ್ನ್ ತೆಗೆದುಕೊಂಡಿತು. ಹಲವಾರು ವರ್ಷಗಳಿಂದ ಇದೇ ಸ್ಥಿತಿಯಲ್ಲಿ ಬಳಲಿದ ಬಳಿಕ, 2019 ರಲ್ಲಿ ನಮ್ಮ ಸಹೋದರನ ಸ್ಥಿತಿಗೆ ಪರಿಹಾರವನ್ನು ಒದಗಿಸಬಲ್ಲ ಸಂಯೋಜಿತ ಹೃದಯ ಮತ್ತು ಶ್ವಾಸಕೋಶದ ಕಸಿಯ ಬಗ್ಗೆ ತಿಳಿದುಕೊಂಡೆವು ಮತ್ತು ಆಗ ನಮಗೆ ಆಸ್ಟರ್ ಆಸ್ಪತ್ರೆಯನ್ನು ಸೂಚಿಸಲಾಯಿತು. ನನ್ನ ಸಹೋದರನ ಜೀವವನ್ನು ಉಳಿಸಿದ್ದಕ್ಕಾಗಿ ಮತ್ತು ಹೊಸ ವರ್ಷವನ್ನು ಹೊಸದಾಗಿ ಪ್ರಾರಂಭಿಸಲು ಹೊಸ ಭರವಸೆ ಒದಗಿಸಿದ್ದಕ್ಕಾಗಿ ನಾವು ವೈದ್ಯರಿಗೆ ಕೃತಜ್ಞರಾಗಿರುತ್ತೇವೆ,” ಎಂದು ತಮ್ಮ ಸಂತಸ ಹಂಚಿಕೊಂಡರು.
ಬೆಂಗಳೂರಿನ ಆಸ್ಟರ್ ಆಸ್ಪತ್ರೆಗಳ ಸಿಇಒ ಡಾ. ನಿತೀಶ್ ಶೆಟ್ಟಿ, “ಆರೋಗ್ಯ ವ್ಯವಸ್ಥೆಗೆ ಸಹಯೋಗ ತುಂಬಾ ಮುಖ್ಯ. ಏಕೆಂದರೆ ಇದು ಸಾಧ್ಯತೆಗಳು ಮತ್ತು ಪರಿಣತಿಯ ಸಂಯೋಜನೆಯ ಮೂಲಕ ರೋಗಿಗಳ ಸಮಗ್ರ ಆರೈಕೆಗೆ ಅವಕಾಶ ನೀಡುವ ಸಾಮರ್ಥ್ಯ ಹೊಂದಿದೆ. ಮತ್ತಿದು ಕಸಿಗಳಲ್ಲಿ ಎದುರಾಗುತ್ತಿರುವ ಆರೋಗ್ಯ ರಕ್ಷಣೆ ಸವಾಲುಗಳನ್ನು ಮೆಟ್ಟಿ ನಿಲ್ಲಲು ಅಗತ್ಯ. ಇಂತಹ ಸಂಘಟನೆ ವೈದ್ಯಕೀಯ ಆರೈಕೆಯ ಮಾನದಂಡಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯ ರಕ್ಷಣೆ ದೇಶದಾದ್ಯಂತ ಎಲ್ಲರ ಕೈಗೆಟುಕುವಂತೆ ಮಾಡುತ್ತದೆ. ಆಸ್ಪತ್ರೆಗಳ ನಡುವಿನ ಸಹಯೋಗವು ಸಂಕೀರ್ಣ ವೈದ್ಯಕೀಯ ಕಾರ್ಯಕ್ಷೇತ್ರಗಳ ಬಗ್ಗೆ ಸಂಶೋಧನೆಗೆ ಚಾಲನೆ ನೀಡುತ್ತದೆ ಮತ್ತು ಇಂತಹ ಸಹಕಾರಿ ವಿಧಾನದಿಂದ ಉತ್ತಮ ಪರಿಹಾರಗಳು ಸಿಗಲಿವೆ, ” ಎಂದು ತಿಳಿಸಿದರು.