ಲಸಿಕೆ ಪಡೆದ ಬಳಿಕ ಗಂಭೀರ ಪರಿಣಾಮ ಉಂಟಾದರೆ ಪರಿಹಾರ ಪಾವತಿಸುತ್ತೇವೆ: ಭಾರತ್ ಬಯೋಟೆಕ್
ಹೊಸದಿಲ್ಲಿ: ಲಸಿಕೆ ಪಡೆದ ಬಳಿಕ ಯಾವುದೇ ಗಂಭೀರ ವ್ಯತಿರಿಕ್ತ ಪರಿಣಾಮ ಬೀರಿದರೆ, ಲಸಿಕೆ ಸ್ವೀಕರಿಸಿದವರಿಗೆ ಪರಿಹಾರವನ್ನು ನೀಡಲಾಗುವುದು ಎಂದು ಕೋವಿಡ್-19 ಲಸಿಕೆ 'ಕೋವ್ಯಾಕ್ಸಿನ್’ ತಯಾರಕರಾದ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಯಾವುದೇ ಪ್ರತಿಕೂಲ ಪರಿಣಾಮಗಳು ಅಥವಾ ಗಂಭೀರ ಪರಿಣಾಮಬೀರಿದ ಸಂದರ್ಭದಲ್ಲಿ ಸರಕಾರ ನಿಯೋಜಿಸಿದ ಹಾಗೂ ಅಧಿಕೃತ ಕೇಂದ್ರಗಳು/ಆಸ್ಪತ್ರೆಗಳಲ್ಲಿ ವೈದ್ಯಕೀಯವಾಗಿ ಮಾನ್ಯತೆ ಪಡೆದ ಗುಣಮಟ್ಟದ ಚಿಕಿತ್ಸೆ ನೀಡಲಾಗುವುದು.ಲಸಿಕೆ ಪಡೆದಿರುವುದರಿಂದಲೇ ಗಂಭೀರ ವ್ಯತಿರಿಕ್ತ ಪರಿಣಾಮಬೀರಿದೆ ಎಂದು ಸಾಬೀತಾದರೆ ಪರಿಹಾರವನ್ನು ಪ್ರಾಯೋಜಕರು(ಬಿಬಿಐಎಲ್)ಪಾವತಿಸುತ್ತಾರೆ ಎಂದು ಭಾರತ್ ಬಯೋಟೆಕ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಕೋವಿಶೀಲ್ಡ್ ಗೆ ಆದ್ಯತೆ: ಇದೆ ವೇಳೆ ದಿಲ್ಲಿಯ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯ ಸ್ಥಾನೀಯ ವೈದ್ಯರುಗಳ ಸಂಘಟನೆಗಳು, ತಮಗೆ ಯುನಿವರ್ಸಿಟಿ ಆಫ್ ಆಕ್ಸ್ ಫರ್ಡ್ಸ್ ಅಭಿವೃದ್ದಿಪಡಿಸಿರುವ 'ಕೋವಿಶೀಲ್ಡ್' ಲಸಿಕೆಯನ್ನೇ ನೀಡಬೇಕೆಂದು ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ. ಭಾರತ್ ಬಯೋಟೆಕ್ ಅಭಿವೃದ್ದಿ ಪಡಿಸಿರುವ 'ಕೋವಾಕ್ಸಿನ್' ಕುರಿತು ವೈದ್ಯರು ಆತಂಕವನ್ನು ವ್ಯಕ್ತಪಡಿಸಿದ್ದಾರೆ ಎಂದು INDIA TODAY ವರದಿ ಮಾಡಿದೆ.