ಕೃಷಿ ಕಾಯ್ದೆಗಳ ವಿರುದ್ಧ ಬೀದಿಗಿಳಿದ ಕಾಂಗ್ರೆಸ್: ‘ರಾಜಭವನ ಚಲೋ' ಮೂಲಕ ಶಕ್ತಿ ಪ್ರದರ್ಶನ

Update: 2021-01-20 15:55 GMT

ಬೆಂಗಳೂರು, ಜ. 20: ‘ಕೃಷಿ, ಎಪಿಎಂಸಿ, ಭೂ ಸುಧಾರಣೆ, ಗೋಹತ್ಯೆ ನಿಷೇಧ, ವಿದ್ಯುತ್ ಕಾಯ್ದೆಗಳ ತಿದ್ದುಪಡಿ' ವಿರೋಧಿಸಿ ಕೇಂದ್ರ-ರಾಜ್ಯ ಸರಕಾರಗಳ ವಿರುದ್ಧ ಕಾಂಗ್ರೆಸ್ ಪಕ್ಷ ಬೀದಿಗಿಳಿದಿದ್ದು ‘ರಾಜಭವನ ಚಲೋ' ಮೂಲಕ ಶಕ್ತಿ ಪ್ರದರ್ಶನ ನಡೆಸಿತು. ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸಲು ಮುಂದಾಗಿದ್ದಾರೆಂದು ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ಬಂಧಿಸಿದರು.

ಬುಧವಾರ ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ವರೆಗೆ ಬೃಹತ್ ರ್‍ಯಾಲಿ ನಡೆಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ರ್‍ಯಾಲಿಯುದ್ದಕ್ಕೂ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.

ದಿಲ್ಲಿಯಲ್ಲಿ 58 ದಿನಗಳಿಂದ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರಕಾರ ರೈತರ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ, ರೈತರ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನಾ ರ್‍ಯಾಲಿ, ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ. ಕೋವಿಡ್ ಹಿನ್ನೆಲೆಯಲ್ಲಿ ತಟಸ್ಥವಾಗಿದ್ದ ಪ್ರತಿಪಕ್ಷ ಕಾಂಗ್ರೆಸ್, ‘ರಾಜಭವನ ಚಲೋ' ಮೂಲಕ ಮೈಕೊಡವಿ ಎದ್ದು ನಿಂತಿದ್ದು, ಸುಮಾರು 25 ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡಿದ್ದು ಇದಕ್ಕೆ ಸಾಕ್ಷಿಯಾಗಿತ್ತು.

ಕಂಗೊಳಿಸಿದ ಕಾಂಗ್ರೆಸ್ ಬಾವುಟ-ಹಸಿರು ಶಾಲು: ಇಲ್ಲಿನ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗಿನ ಆನಂದರಾವ್ ವೃತ್ತ, ರೇಸ್‍ಕೋರ್ಸ್ ರಸ್ತೆ, ಕೆ.ಜಿ.ರಸ್ತೆ, ಗಾಂಧಿನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಎಲ್ಲೆಡೆ ಕಾಂಗ್ರೆಸ್ ಬಾವುಟ, ಹಸಿರು ಶಾಲುಗಳೇ ಕಂಗೊಳಿಸಿದವು.

ಕೊರೋನ ಸೋಂಕಿನ ಮಾರ್ಗಸೂಚಿ ಹಿನ್ನೆಲೆಯಲ್ಲಿ ಪ್ರತಿಭಟನೆಗಳಿಂದ ದೂರವೇ ಉಳಿದಿದ್ದ ಕಾಂಗ್ರೆಸ್ ಇದೇ ಮೊದಲ ಬಾರಿಗೆ ಕೊರೋನ ನಿಯಮಾವಳಿಗಳನ್ನು ಲೆಕ್ಕಿಸದೆ ನಡೆಸಲಾದ ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಸೇರಿದ್ದರು. ಅಲ್ಲದೆ, ಕೇಂದ್ರ-ರಾಜ್ಯ ಸರಕಾರಗಳ ನೀತಿಗಳ ವಿರುದ್ಧ ಕಿಡಿಕಾರಿದರು.

ಮುತ್ತಿಗೆ ಯತ್ನಕ್ಕೆ ಪೊಲೀಸರ ತಡೆ: ರಾಜಭವನ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಪಕ್ಷ ಕಾರ್ಯಕರ್ತರನ್ನು ಪೊಲೀಸರು ಇಲ್ಲಿನ ಶೇಷಾದ್ರಿ ರಸ್ತೆಯಲ್ಲಿನ ಫ್ರೀಡಂ ಪಾರ್ಕ್ ಬಳಿಯೇ ತಡೆದು ನಿಲ್ಲಿಸಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ, ಮಾತಿನ ಚಕಮಕಿ ಹಾಗೂ ವಾಗ್ವಾದ ನಡೆಯಿತು.

ಇದೇ ವೇಳೆ ಶೇಷಾದ್ರಿ ರಸ್ತೆಯಲ್ಲೇ ಕೆಲಕಾಲ ರಸ್ತೆ ತಡೆ ನಡೆಸಿದ ಕಾರ್ಯಕರ್ತರು ಸರಕಾರದ ವಿರುದ್ಧ ರಣಕಹಳೆ ಮೊಳಗಿಸಿದರು. ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಆಗಮಿಸುವ ವೇಳೆ ಕೆಲವು ಕಡೆಗಳಲ್ಲಿ ಕೆಪಿಸಿಸಿ ಕಿಸಾನ್ ಘಟಕದ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಹೀಗಾಗಿ ಅಲ್ಲಲ್ಲೇ ಪ್ರತಿಭಟನೆ ನಡೆಸಿದ್ದಾರೆಂದು ಗೊತ್ತಾಗಿದೆ.

ಕೇಂದ್ರ-ರಾಜ್ಯ ಸರಕಾರಗಳ ವಿರುದ್ಧ ವಾಗ್ದಾಳಿ: ಆ ಬಳಿಕ ಇಲ್ಲಿನ ಫ್ರೀಡಂ ಪಾರ್ಕ್ ಬಳಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರೈತ ಚಳವಳಿ ಬೆಂಬಲಿಸುವ ಹೋರಾಟದ ಮೊದಲ ಹೆಜ್ಜೆ ಇಡುತ್ತಿದ್ದು, ಈ ವರ್ಷ ನೂರು ಕ್ಷೇತ್ರಗಳಲ್ಲಿ ಪ್ರಮುಖ ನಾಯಕರು ಜನರ ಮಧ್ಯೆ ನಿಂತು ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.

ಇನ್ನು ಮುಂದೆ ಕೊಠಡಿಯಲ್ಲಿ ಕೂತು ಸಭೆ ನಡೆಸುವುದಿಲ್ಲ. ಬದಲಿಗೆ ಪ್ರತಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ಈ ಹೋರಾಟ ಮಾಡುತ್ತೇವೆ. ಇದು ಕೇವಲ ರಾಜ್ಯ ಮಟ್ಟದ ಹೋರಾಟ ಅಲ್ಲ. ರಾಜ್ಯದ ಎಲ್ಲ ತಾಲೂಕಿನಲ್ಲೂ ಚಳವಳಿ ನಡೆಯಲಿದೆ ಎಂದ ಅವರು, ಇಂದು ನಾವೆಲ್ಲ ಒಂದು ಅಪರೂಪದ ಹೋರಾಟಕ್ಕೆ ಸಾಕ್ಷಿಯಾಗಿದ್ದೇವೆ. ಈ ಹೋರಾಟ ರಾಜ್ಯ ಹಾಗೂ ರಾಷ್ಟ್ರಕ್ಕೆ ಒಂದು ಸ್ಪಷ್ಟ ಸಂದೇಶ ರವಾನಿಸಲಿದೆ ಎಂದರು.

ಇದು ಕಾಂಗ್ರೆಸ್ ಹೋರಾಟವಲ್ಲ. ಇದು ರಾಜ್ಯ ಹಾಗೂ ದೇಶದ ಅನ್ನದಾತನ ಧ್ವನಿ ಪ್ರತಿಬಿಂಬಿಸುವ ಕಾರ್ಯಕ್ರಮ. ಕೇಂದ್ರದ ಮೂರು ಕರಾಳ ಶಾಸನಗಳ ವಿರುದ್ಧ, ರೈತರು, ಕಾರ್ಮಿಕರು ಹಾಗೂ ನೋವು ಅನುಭವಿಸುತ್ತಿರುವ ಜನರ ಪರವಾಗಿ ಧ್ವನಿ ಎತ್ತಿ, ಅವರ ಬೆನ್ನಿಗೆ ನಿಲ್ಲಲು ಬೀದಿಗಿಳಿದು ಹೋರಾಟ ಮಾಡುವ ಪವಿತ್ರ ದಿನ ಎಂದು ಅವರು ತಿಳಿಸಿದರು.

ಈ ಹೋರಾಟದಲ್ಲಿ ಪಾಲ್ಗೊಂಡು ರೈತರ ಧ್ವನಿ, ನೋವು, ಸಂಕಟ ಪ್ರಧಾನಿ, ರಾಷ್ಟ್ರಪತಿ ಹಾಗೂ ಸಿಎಂಗೆ ತಲುಪುವಂತೆ ಮಾಡಿದ ಎಲ್ಲ ನಾಯಕರು, ಕಾರ್ಯಕರ್ತರು, ರೈತರ ಪಾದಗಳಿಗೆ ನಮಸ್ಕಾರಗಳು ಎಂದ ಅವರು, ಹೋರಾಟನಿರತ ಅನ್ನದಾತನ ಪರವಾಗಿ ಕಾಂಗ್ರೆಸ್ ನಿಂತಿದ್ದು, ಮುಂದೆಯೂ ಅವರೊಂದಿಗೆ ಇರಲಿದೆ ಎಂದು ಅವರು ಅಭಯ ನೀಡಿದರು.

ಎಷ್ಟು ಹಣ ಕೊಟ್ಟಿರಿ ಲೆಕ್ಕಕೊಡಿ: ಕೊರೋನ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಈ ಸರಕಾರ ಯಾವುದೇ ರೀತಿಯಲ್ಲಿ ಹಣವನ್ನು ನೀಡಿಲ್ಲ. ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಲಿಲ್ಲ. ಪ್ರಧಾನಿ ಘೋಷಿಸಿದ್ದ 20 ಲಕ್ಷ ಕೋಟಿ ರೂ.ಯಾರಿಗೆ ತಲುಪಿತು. ಮುಖ್ಯಮಂತ್ರಿ ಯಡಿಯೂರಪ್ಪನವರೇ ನೀವು ಯಾರಿಗೆ ಎಷ್ಟು ಹಣ ಕೊಟ್ಟಿದ್ದೀರಿ ಎಂಬ ಮಾಹಿತಿ ಕೊಡಿ ಎಂದು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೇವಲ ಬಂಡವಾಳಶಾಹಿ ಪರವಾಗಿವೆ. ನಾವು ರೈತರಿಗೆ ಶಕ್ತಿ ನೀಡಲಿಲ್ಲ ಎಂದರೆ, ಪ್ರತಿಭಟನೆ ನಡೆಸಿ ಅಸುನೀಗಿದ ರೈತರಿಗೆ ಗೌರವ ನೀಡದಿದ್ದರೆ, ಅನ್ನದಾತನ ರಕ್ಷಣೆ ಮಾಡದಿದ್ದರೆ, ನಮ್ಮ ಜನ್ಮ ಸಾರ್ಥಕವಾಗುವುದಿಲ್ಲ ಎಂದು ಶಿವಕುಮಾರ್ ಕಾರ್ಯಕರ್ತರನ್ನು ಮುಂದಿನ ಹೋರಾಟಕ್ಕೆ ಹುರಿದುಂಬಿಸಿದರು. ಆ ಬಳಿಕ ಕೆಪಿಸಿಸಿ ಮುಖಂಡರ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಡಾ.ಜಿ.ಪರಮೇಶ್ವರ್, ಸಂಸದ ಡಿ.ಕೆ.ಸುರೇಶ್, ರಾಮಲಿಂಗಾರೆಡ್ಡಿ, ಕೆ.ಬಿ.ಕೋಳಿವಾಡ, ದಿನೇಶ್ ಗುಂಡೂರಾವ್, ಯು.ಟಿ.ಖಾದರ್, ಕೆ.ಜೆ.ಜಾರ್ಜ್, ಝಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅಸ್ವಸ್ಥ: ಕೇಂದ್ರದ ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ನಡೆದ ‘ರಾಜಭವನ ಚಲೋ’ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಖಾನಾಪುರ ಕ್ಷೇತ್ರದ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅಸ್ವಸ್ಥರಾದ ಘಟನೆ ಜರುಗಿತು. ಫ್ರೀಡಂಪಾರ್ಕ್‍ನಲ್ಲಿ ನಡೆದ ಬಹಿರಂಗ ಸಭೆಯ ಬಳಿಕ ರಾಜಭವನದತ್ತ ರೈತರೊಂದಿಗೆ ತೆರಳುತ್ತಿದ್ದ ವೇಳೆ ಮಹಾರಾಣಿ ಕಾಲೇಜು ಬಳಿ ಪೊಲೀಸರು, ರೈತರನ್ನು ತಡೆದರು. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ನಡೆದು ತಳ್ಳಾಟವು ನಡೆದಿದೆ. ಇದೇ ಸಂದರ್ಭದಲ್ಲಿ ಅಂಜಲಿ ನಿಂಬಾಳ್ಕರ್ ಅಸ್ವಸ್ಥಗೊಂಡಿದ್ದರಿಂದ, ಅಲ್ಲೆ ರಸ್ತೆಯಲ್ಲಿ ಕೆಲಕಾಲ ಕೂತು ವಿಶ್ರಾಂತಿ ಪಡೆದರು.

ಪೇದೆ ಮೇಲೆ ಶಾಸಕಿ ಸೌಮ್ಯಾರೆಡ್ಡಿ ಹಲ್ಲೆ; ಆರೋಪ

ಮಹಾರಾಣಿ ಕಾಲೇಜು ಬಳಿ ಪ್ರತಿಭಟನಾನಿರತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾರೆಡ್ಡಿ, ಮಹಿಳಾ ಪೊಲೀಸ್ ಪೇದೆ ಜೊತೆ ವಾಗ್ವಾದ ನಡೆಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇದೇ ವೇಳೆ ಅವರು ಸ್ಥಳದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎದುರು ಅಸಮಾಧಾನ ಹೊರಹಾಕುತ್ತಿರುವುದು ಕಂಡು ಬರುವಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪೇದೆ ವಿರುದ್ಧ ದೂರು: ರಾಜಭವನ ಚಲೋ ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ದಾರೆಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರಿಗೆ ಶಾಸಕಿ ಸೌಮ್ಯಾ ರೆಡ್ಡಿ ದೂರು ನೀಡಿದ್ದಾರೆ.

ಸಂಚಾರ ದಟ್ಟಣೆ: ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಿಂದಾಗಿ ಬೆಂಗಳೂರಿನ ಮೆಜೆಸ್ಟಿಕ್, ಶೇಷಾದ್ರಿ ರಸ್ತೆ, ರೇಸ್‍ಕೋರ್ಸ್ ರಸ್ತೆ, ನೃಪತುಂಗ ರಸ್ತೆ, ಮೈಸೂರು ರಸ್ತೆ, ವಿಧಾನಸೌಧದ ಸುತ್ತಮುತ್ತಲ ರಸ್ತೆಗಳು ಸೇರಿದಂತೆ ನಗರದಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿ, ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಯಿತು. ಬೆಂಗಳೂರು-ಮೈಸೂರು ರಸ್ತೆಯಲ್ಲಿನ ಸ್ಯಾಟಲೈಟ್ ಬಸ್ ನಿಲ್ದಾಣದ ಎದುರು ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು.

ನೀರು ಕುಡಿಯಲು ಬಿಡದೆ ಎಳೆದಾಡಿದರು:

‘ನಾವು ರಾಜಭವನ ಕಡೆ ಹೊರಟ ವೇಳೆ ಏಕಾಏಕಿ ಇಪ್ಪತ್ತಕ್ಕೂ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿ ನಮ್ಮನ್ನು ತಡೆದರು. ನನಗೆ ತಲೆ ಸುತ್ತು ಬಂದಂತೆ ಆಗಿ ನೀರು ಕುಡಿಯಲು ಕಾಯುತ್ತಿದ್ದೆ. ಆದರೆ, ಅವರು ನನಗೆ ನೀರು ಕುಡಿಯಲು ಬಿಡಲಿಲ್ಲ. ನಮ್ಮನ್ನು ಮುಟ್ಟಬೇಡಿ, ನಾವೇ ಹೋಗ್ತೀವಿ ಎಂದು ಬೇಡಿದರೂ ರಸ್ತೆಯಲ್ಲೇ ಸೀರೆ ಮತ್ತು ಕೂದಲು ಹಿಡಿದು ಎಳೆದಾಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಾವು ಪೊಲೀಸ್ ಸಿಬ್ಬಂದಿಯ ಮೇಲೆ ಯಾವುದೇ ಹಲ್ಲೆ ನಡೆಸಿಲ್ಲ. ನಗರ ಪೊಲೀಸ್ ಆಯುಕ್ತರಿಗೆ ಈ ಸಂಬಂಧ ದೂರನ್ನು ನೀಡಿದ್ದೇನೆ'

-ಸೌಮ್ಯಾರೆಡ್ಡಿ, ಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News