ನೂತನ ಸಚಿವರಿಗೆ ಖಾತೆ ಹಂಚಿಕೆ, ಹಿರಿಯ ಸಚಿವರ ಖಾತೆ ಅದಲು-ಬದಲು

Update: 2021-01-21 12:07 GMT

ಬೆಂಗಳೂರು, ಜ.21: ಸಚಿವ ಸಂಪುಟ ವಿಸ್ತರಣೆಯಾಗಿ ವಾರದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಖಾತೆಗಳನ್ನು ಹಂಚಿಕೆ ಮಾಡಿದ್ದು, ನೂತನ ಸಚಿವರಿಗೆ ನೀಡಿರುವ ಖಾತೆಗಳಲ್ಲಿ ಕೆಲವರಿಗೆ ಬಂಪರ್ ಹೊಡೆದಿದ್ದು, ಇನ್ನೂ ಕೆಲವರಿಗೆ ಹಿನ್ನೆಡೆಯಾಗಿದೆ.

ವಾರದ ಹಿಂದೆಯೆಷ್ಟೇ ಏಳು ಮಂದಿ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಹಿರಿಯ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಕೆ.ಗೋಪಾಲಯ್ಯ, ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ್, ಕೆ.ಸಿ.ನಾರಾಯಣಗೌಡ ಸೇರಿದಂತೆ ಹತ್ತು ಸಚಿವರ ಖಾತೆಗಳನ್ನು ಅದಲು-ಬದಲು ಮಾಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಮತ್ತು ಇಂಧನ ಖಾತೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಬಳಿಯೆ ಉಳಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ಕ್ಷೇತ್ರದ ಹಿರಿಯ ಶಾಸಕ ಉಮೇಶ್ ಕತ್ತಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹೊಣೆಗಾರಿಕೆ, ಎಸ್.ಅಂಗಾರ ಅವರಿಗೆ ಮೀನುಗಾರಿಕೆ, ಬಂದರು, ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ್ ಆರ್.ನಿರಾಣಿಗೆ ಗಣಿ ಮತ್ತು ಭೂ ವಿಜ್ಞಾನ ಖಾತೆ ನೀಡಲಾಗಿದೆ. ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿಗೆ ಅರಣ್ಯ.

ಪರಿಷತ್ ಸದಸ್ಯರಾದ ಎಂ.ಟಿ.ಬಿ.ನಾಗರಾಜ್‍ಗೆ ಅಬಕಾರಿ, ಆರ್.ಶಂಕರ್ ಗೆ ರೇಶ್ಮೆ, ಸಿ.ಪಿ.ಯೋಗೇಶ್ವರ್ ಗೆ ಸಣ್ಣ ನೀರಾವರಿ, ಗೃಹ ಸಚಿವ ಬೊಮ್ಮಾಯಿಗೆ ಹೆಚ್ಚುವರಿಯಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ, ಜೆ.ಸಿ.ಮಾಧುಸ್ವಾಮಿಗೆ ವೈದ್ಯಕೀಯ ಶಿಕ್ಷಣ ಖಾತೆ ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾಗಿದ್ದ ಸಿ.ಸಿ.ಪಾಟೀಲ್‍ಗೆ ಸಣ್ಣ ಕೈಗಾರಿಕೆ ಜತೆಗೆ ವಾರ್ತಾ ಇಲಾಖೆ ಜವಾಬ್ದಾರಿಯನ್ನು ನೀಡಲಾಗಿದೆ.

ಕೋಟಾ ಶ್ರೀನಿವಾಸ ಪೂಜಾರಿಗೆ ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಾ.ಕೆ.ಸುಧಾಕರ್ ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಹಿಂಪಡೆದಿದ್ದು, ಮಾಧುಸ್ವಾಮಿಗೆ ನೀಡಲಾಗಿದೆ. ಆನಂದ್ ಸಿಂಗ್‍ಗೆ ಪ್ರವಾಸೋದ್ಯಮ ಪರಿಸರ ಜೀವಿಶಾಸ್ತ್ರ ಇಲಾಖೆಯನ್ನು ನೀಡಲಾಗಿದೆ.

ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಅಶ್ವತ್ಥ ನಾರಾಯಣ ಸಹಿತ ಮೂವರು ಉಪಮುಖ್ಯಮಂತ್ರಿಗಳು, ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಸೇರಿದಂತೆ ಉಳಿದ ಸಚಿವರು ಯಾವುದೇ ಖಾತೆಗಳನ್ನು ಅದಲು-ಬದಲು ಮಾಡಿಲ್ಲ.

ಸಚಿವರ ಖಾತೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ-ಹಣಕಾಸು, ಗುಪ್ತಚರ, ಯೋಜನೆ, ಕಾರ್ಯಕ್ರಮ, ಅಂಕಿ-ಸಂಖ್ಯೆ ಅನುಷ್ಠಾನ, ಮೂಲಭೂತ ಸೌಕರ್ಯ, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ, ಇಂಧನ ಹಾಗೂ ಬೆಂಗಳೂರು ಅಭಿವೃದ್ಧಿ.

-ಉಮೇಶ್ ಕತ್ತಿ-ಆಹಾರ ಮತ್ತು ನಾಗರಿಕ ಪೂರೈಕೆ

-ಎಸ್.ಅಂಗಾರ-ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ

-ಬಸವರಾಜ ಬೊಮ್ಮಾಯಿ-ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ

-ಜೆ.ಸಿ.ಮಾಧುಸ್ವಾಮಿ-ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

-ಸಿ.ಸಿ.ಪಾಟೀಲ್- ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ

-ಅರವಿಂದ ಲಿಂಬಾವಳಿ-ಅರಣ್ಯ

-ಮುರಗೇಶ್ ನಿರಾಣಿ- ಗಣಿ ಮತ್ತು ಭೂ ವಿಜ್ಞಾನ

-ಎಂಟಿಬಿ ನಾಗರಾಜ್-ಅಬಕಾರಿ

-ಕೋಟಾ ಶ್ರೀನಿವಾಸ ಪೂಜಾರಿ- ಮುಜರಾಯಿ, ಹಿಂದುಳಿದ ವರ್ಗ

-ಡಾ.ಸುಧಾಕರ್-ಆರೋಗ್ಯ ಮತ್ತು ಕುಟುಂಬ ಕಲ್ಯಾಣ

-ಆನಂದ್ ಸಿಂಗ್-ಪ್ರವಾಸೋದ್ಯಮ, ಪರಿಸರ

-ಸಿ.ಪಿ.ಯೋಗೇಶ್ವರ್-ಸಣ್ಣ ನೀರಾವರಿ

-ಪ್ರಭು ಚೌಹಾಣ್-ಪಶುಸಂಗೋಪನೆ

-ಶಿವರಾಂ ಹೆಬ್ಬಾರ್-ಕಾರ್ಮಿಕ

-ಆರ್.ಶಂಕರ್-ಪೌರಾಡಳಿತ

-ಗೋಪಾಲಯ್ಯ-ತೋಟಗಾರಿಕೆ, ಸಕ್ಕರೆ

-ಕೆ.ಸಿ.ನಾರಾಯಣ ಗೌಡ-ಯುವ ಸಬಲೀಕರಣ, ಹಜ್ ಮತ್ತು ವಕ್ಫ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News