ಉತ್ತರಾಖಂಡ ರಾಜ್ಯಕ್ಕೆ ಒಂದು ದಿನದ ಮುಖ್ಯಮಂತ್ರಿಯಾದ ಸೃಷ್ಟಿ ಗೋಸ್ವಾಮಿ: ಕಾರಣವೇನು ಗೊತ್ತೇ?
Update: 2021-01-24 07:08 GMT
ಹೊಸದಿಲ್ಲಿ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಸಂದರ್ಭ ಸೃಷ್ಟಿ ಗೋಸ್ವಾಮಿ ಒಂದು ದಿನದ ಮಟ್ಟಿಗೆ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ಪಡೆದಿದ್ದಾರೆ.
ಹರಿದ್ವಾರ ಮೂಲದ ಸೃಷ್ಟಿ ರಾಜ್ಯ ಸರಕಾರ ನಡೆಸುವ ವಿವಿಧ ಯೋಜನೆಗಳ ಪರಿಶೀಲನೆ ಮಾಡಲು ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯದ ಉಪಕ್ರಮದ ಭಾಗವಾಗಿ ದೇಶದಲ್ಲಿ ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರವಿವಾರ ಟ್ವೀಟ್ ಮಾಡಿದ ರಾವತ್, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಎಲ್ಲ ಹೆಣ್ಣುಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಹತ್ಪೂರ್ವಕವಾಗಿ ಹಾರೈಸುವೆ. ಎಲ್ಲ ಹೆಣ್ಣುಮಕ್ಕಳ ಸ್ವಾವಲಂಬನೆ ಹಾಗೂ ಅವರ ಸಬಲೀಕರಣಕ್ಕೆ ನಮ್ಮ ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು.