ಟ್ರ್ಯಾಕ್ಟರ್ ರ‍್ಯಾಲಿ: ಬ್ಯಾರಿಕೇಡ್ ಕಿತ್ತೆಸೆದ ರೈತರು

Update: 2021-01-26 04:22 GMT

ಹೊಸದಿಲ್ಲಿ : ಟ್ರ್ಯಾಕ್ಟರ್ ರ್ಯಾಲಿಯ ಹಿನ್ನೆಲೆಯಲ್ಲಿ ವ್ಯವಸ್ಥೆಗೊಳಿಸಿರುವ ಭದ್ರತಾ ಕೋಟೆಯನ್ನು ಭೇದಿಸಿ ಮಂಗಳವಾರ ಮುಂಜಾನೆ ರೈತರು ರಾಜಧಾನಿಗೆ ಲಗ್ಗೆ ಇಟ್ಟಿದ್ದಾರೆ.

ರಾಜಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ಮುಕ್ತಾಯದ ಬಳಿಕ ಮುಂಜಾನೆ 10ಕ್ಕೆ ರೈತರ ಟ್ರ್ಯಾಕ್ಟರ್ ರ‍್ಯಾಲಿ ರಾಜಧಾನಿ ಪ್ರವೇಶಿಸಲು ಸಮಯ ನಿಗದಿಯಾಗಿತ್ತು. ಆದರೆ ಪೊಲೀಸರು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದ ಪ್ರತಿಭಟನಾಕಾರರು ನಿಗದಿತ ಅವಧಿಗಿಂತ ಮುನ್ನವೇ ರಾಜಧಾನಿಯನ್ನು ಪ್ರವೇಶಿಸಿದರು.

ದೆಹಲಿ- ಹರ್ಯಾಣ ರಾಜ್ಯಗಳನ್ನು ಪ್ರತ್ಯೇಕಿಸುವ ಸಿಂಘು ಗಡಿಯಲ್ಲಿ ಮತ್ತು ರಾಷ್ಟ್ರ ರಾಜಧಾನಿಯ ಪಶ್ಚಿಮದಲ್ಲಿರುವ ಟಿಕ್ರಿ ಗಡಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ರಾಷ್ಟ್ರಧ್ವಜಗಳನ್ನು ಹಿಡಿದ ಸಾವಿರಾರು ಮಂದಿ ಜಾಥಾದಲ್ಲಿ ಆಗಮಿಸುತ್ತಿರುವುದು, ಹಲವಾರು ಮಂದಿ ಟ್ರ್ಯಾಕ್ಟರ್‌ಗಳಲ್ಲಿ ಮುನ್ನುಗ್ಗುವ ದೃಶ್ಯ ಕಂಡುಬರುತ್ತಿದೆ.

ಕಳೆದ ನವೆಂಬರ್‌ನಿಂದ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ 5000ಕ್ಕೂ ಹೆಚ್ಚು ಮಂದಿ ಹೊರವರ್ತುಲ ರಸ್ತೆಯತ್ತ ಜಾಥಾ ಹೊರಟಿದ್ದಾರೆ. ಟಿಕ್ರಿ ಗಡಿಯಲ್ಲಿ ರೈತ ಮುಖಂಡರು ಉದ್ವಿಗ್ನ ರೈತರನ್ನು ಸಮಾಧಾನಪಡಿಸುತ್ತಿದ್ದು, ಪ್ರತಿಭಟನಾಕಾರರು ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ರ‍್ಯಾಲಿಯ ಸಮಯದ ಬಗ್ಗೆ ನಿರ್ಧರಿಸಲು ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸುತ್ತಿರುವುದಾಗಿ ಪ್ರತಿಭಟಕಾರ ಮುಖಂಡರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News