ಎಟಿಎಂನಲ್ಲಿ ಹಣ ಕಳವು ಪ್ರಕರಣ: ಉತ್ತರ ಪ್ರದೇಶದ ಇಬ್ಬರು ಸೆರೆ
ಬೆಂಗಳೂರು, ಫೆ.8: ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಿ ಎಟಿಎಂ ಯಂತ್ರದ ಸೆನ್ಸಾರ್ ಸಂಪರ್ಕ ಬ್ಲಾಕ್ ಮಾಡಿ ಹಣ ಕಳವು ಮಾಡುತ್ತಿದ್ದ ಉತ್ತರಪ್ರದೇಶ ಮೂಲದ ಇಬ್ಬರು ಗಾರೆ ಕೆಲಸಗಾರರನ್ನು ಸುದ್ದುಗುಂಟೆಪಾಳ್ಯ ಠಾಣಾ ಪೆÇಲೀಸರು ಬಂಧಿಸಿದ್ದಾರೆ. ವಿಪಿನ್ ವಾಲ್ ಮತ್ತು ಜ್ಞಾನ್ ಸಿಂಗ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಷಿ ತಿಳಿಸಿದ್ದಾರೆ.
ನಗರದ ಜಯದೇವ ಸಿಗ್ನಲ್ ರಿಂಗ್ ರಸ್ತೆಯಲ್ಲಿರುವ ಎಸ್ಬಿಐ ಎಟಿಎಂ ಕೇಂದ್ರದಲ್ಲಿ ಆರೋಪಿಗಳು ಮೊದಲಿಗೆ ತಮ್ಮ ಎಟಿಎಂ ಕಾರ್ಡ್ ಅನ್ನು ಎಟಿಎಂ ಯಂತ್ರದಲ್ಲಿ ಸ್ವೈಪ್ ಮಾಡುತ್ತಿದ್ದರು. ಯಂತ್ರದಿಂದ ಹಣ ಹೊರ ಬರಬೇಕೆನ್ನುವಷ್ಟರಲ್ಲಿ ಕೈ ಅಡ್ಡ ಹಿಡಿದು ಸೆನ್ಸಾರ್ ಬ್ಲಾಕ್ ಮಾಡಿ ನೋಟುಗಳನ್ನು ಎಳೆಯುತ್ತಿದ್ದರು.
ಸೆನ್ಸಾರ್ ಬ್ಲಾಕ್ ಆದ ಹಿನ್ನೆಲೆಯಲ್ಲಿ ಎಟಿಎಂನಲ್ಲಿದ್ದ ಹಣ ಆರೋಪಿಗಳ ಕೈಸೇರಿದರೂ ಅವರ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳ್ಳುತ್ತಿರಲಿಲ್ಲ. ಹೀಗೆ, ಎರಡು ಬಾರಿ 10 ಸಾವಿರ ರೂ. ಕಳವು ಮಾಡಿದ್ದರು. ಎಟಿಎಂ ಯಂತ್ರದಲ್ಲಿ ತುಂಬಲಾಗಿದ್ದ ಹಣದಲ್ಲಿ ಹೆಚ್ಚುವರಿಯಾಗಿ 10 ಸಾವಿರ ರೂ. ಕಡಿತಗೊಂಡಿರುವುದು ಬ್ಯಾಂಕ್ ಸಿಬ್ಬಂದಿ ಗಮನಕ್ಕೆ ಬಂದಿತ್ತು.
ಕೂಡಲೇ ಎಚ್ಚೆತ್ತುಕೊಂಡು ಬ್ಯಾಂಕ್ ಸಿಬ್ಬಂದಿ ಈ ಕುರಿತು ಪೆÇಲೀಸರಿಗೆ ದೂರು ನೀಡಿದ್ದರು. ಆರೋಪಿಗಳು ಫೆ.4 ರಂದು ಮತ್ತೆ ಇದೇ ಎಟಿಎಂ ಕೇಂದ್ರಕ್ಕೆ ಬಂದು ಹಣ ತೆಗೆಯಲು ಪ್ರಯತ್ನಿಸಿದಾಗ ಇವರ ಮೇಲೆ ನಿಗಾ ಇಟ್ಟಿದ್ದ ಬ್ಯಾಂಕ್ ಸಿಬ್ಬಂದಿ, ಆರೋಪಿಗಳನ್ನು ವಿಚಾರಿಸಿದಾಗ ಗೊಂದಲದ ಹೇಳಿಕೆ ನೀಡಿದ್ದರು. ನಂತರ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದಾಗ ನಡೆದ ಕೃತ್ಯದ ಬೆಳಕಿಗೆ ಬಂದಿದೆ.