ಮೊಮ್ಮಗಳ ವಿದ್ಯಾಭ್ಯಾಸಕ್ಕಾಗಿ ಮನೆಯನ್ನೇ ಮಾರಿ ಆಟೋರಿಕ್ಷಾದಲ್ಲಿ ಜೀವಿಸುತ್ತಿರುವ ವೃದ್ಧ

Update: 2021-02-14 12:54 GMT

ಮುಂಬೈ: ಜಾಲತಾಣ ‘ಹ್ಯೂಮನ್ಸ್ ಆಫ್ ಬಾಂಬೆ ’ ಮುಂಬೈ ಮಹಾನಗರದ ಆಟೋರಿಕ್ಷಾ ಚಾಲಕರೋರ್ವರ ಹೃದಯವನ್ನು ಕಲಕುವ ಕಥನವನ್ನು ಶೇರ್ ಮಾಡಿಕೊಂಡ ಬಳಿಕ ಅವರಿಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ‘ಹ್ಯೂಮನ್ಸ್ ಆಫ್ ಬಾಂಬೆ ’ಗೆ ನೀಡಿದ ಸಂದರ್ಶನದಲ್ಲಿ ದೇಶರಾಜ್ ತನ್ನ ಇಬ್ಬರು ಪುತ್ರರನ್ನು ಕಳೆದುಕೊಂಡ ಬಳಿಕ ಮೊಮ್ಮಕ್ಕಳು ಮತ್ತು ಸೊಸೆಯಂದಿರನ್ನು ಸಾಕುವ ಜವಾಬ್ದಾರಿಯು ತನಗೆ ಬದುಕಿನಲ್ಲಿ ಮುಂದೆ ಸಾಗಲು ಬಲ ನೀಡಿದೆ ಎಂದು ಹೇಳುವ ಮೂಲಕ ಈ ಮುದಿವಯಸ್ಸಿನಲ್ಲಿಯೂ ದುಡಿಯಬೇಕಾದ ತನ್ನ ಅನಿವಾರ್ಯತೆಯನ್ನು ಬಹಿರಂಗಗೊಳಿಸಿದ್ದಾರೆ.

ಮುಂಬೈನ ಖಾರ್ ಉಪನಗರಿಯಲ್ಲಿ ಬಾಡಿಗೆಗೆ ರಿಕ್ಷಾವನ್ನು ಓಡಿಸುತ್ತಿರುವ ದೇಶರಾಜ್ ಅವರ 40ರ ಹರೆಯದ ಹಿರಿಯ ಪುತ್ರ ಆರು ವರ್ಷಗಳ ಹಿಂದೆ ಕೆಲಸಕ್ಕೆಂದು ಮನೆಯಿಂದ ತೆರಳಿದ್ದವನು ವಾಪಸಾಗಿರಲಿಲ್ಲ. ಒಂದು ವಾರದ ಬಳಿಕ ರೈಲ್ವೆ ಹಳಿಯಲ್ಲಿ ಆತನ ಶವ ಪತ್ತೆಯಾಗಿತ್ತು. ಆದರೆ ಮಗನ ಅಗಲುವಿಕೆಗೆ ಶೋಕಿಸಲೂ ಮುದಿತಂದೆಗೆ ಸಮಯವಿರಲಿಲ್ಲ!

‘ಮಗನೊಂದಿಗೆ ನಾನೂ ಭಾಗಶಃ ಸತ್ತಿದ್ದೆ. ಆದರೆ ನನ್ನ ಮೇಲೆ ಹೊಣೆಗಾರಿಕೆಗಳಿದ್ದವು ನೋಡಿ...ಮಗನಿಗಾಗಿ ದುಃಖಿಸಲೂ ನನಗೆ ಸಮಯವಿರಲಿಲ್ಲ. ಮರುದಿನ ಬೆಳಿಗ್ಗೆಯೇ ನಾನು ನನ್ನ ರಿಕ್ಷಾದೊಂದಿಗೆ ರಸ್ತೆಗೆ ಮರಳಿದ್ದೆ ’ಎಂದು ದೇಶರಾಜ್ ಹೇಳಿದರು. ಎರಡು ವರ್ಷಗಳ ಬಳಿಕ ಅವರ ಕಿರಿಯ ಪುತ್ರ ಆತ್ಮಹತ್ಯೆ ಮಾಡಿಕೊಂಡು ವೃದ್ಧತಂದೆಯ ಹೊರೆಯನ್ನು ಇನ್ನಷ್ಟು ಹೆಚ್ಚಿಸಿದ್ದ. ‘ನನ್ನ ಸೊಸೆಯಂದಿರು ಮತ್ತು ನಾಲ್ವರು ಮೊಮ್ಮಕ್ಕಳನ್ನು ಸಾಕುವ ಜವಾಬ್ದಾರಿ ಇನ್ನೂ ನನ್ನನ್ನು ಸಕ್ರಿಯವಾಗಿರಿಸಿದೆ’ ಎಂದು ದೇಶರಾಜ್ ತಿಳಿಸಿದರು.

ಆಗ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಮೊಮ್ಮಗಳು ತಾನು ಶಾಲೆಯನ್ನು ಬಿಡಬೇಕೇ ಎಂದು ಪ್ರಶ್ನಿಸಿದಾಗ,ಆಕೆ ಬಯಸಿದಷ್ಟು ಓದಬಹುದು ಎಂದು ತಾತ ಭರವಸೆ ನೀಡಿದ್ದರು.

ಕುಟುಂಬದ ತುತ್ತಿನ ಚೀಲಗಳನ್ನು ತುಂಬಲು ದೇಶರಾಜ್ ತನ್ನ ದುಡಿಮೆಯ ಅವಧಿಯನ್ನು ಹೆಚ್ಚಿಸಿದ್ದರು. ಬೆಳಿಗ್ಗೆ ಆರು ಗಂಟೆಗೆ ಮನೆಯನ್ನು ಬಿಡುವ ಅವರು ಮಧ್ಯರಾತ್ರಿ 12 ಗಂಟೆಯವರೆಗೂ ಆಟೋ ಓಡಿಸುತ್ತಾರೆ. ಇಷ್ಟೆಲ್ಲ ಕಷ್ಟಪಟ್ಟರೂ ಅವರ ತಿಂಗಳ ಗಳಿಕೆ ಸುಮಾರು 10,000 ರೂ.ಗಳು ಮಾತ್ರ. ಅದರಲ್ಲಿ 6,000 ರೂ.ಮೊಮ್ಮಕ್ಕಳ ಶಿಕ್ಷಣದ ಖರ್ಚಿಗೆ ಹೋಗುತ್ತದೆ. ಉಳಿದ 4,000 ರೂ.ಗಳಲ್ಲಿ ದೇಶರಾಜ್ ದಂಪತಿ ಸೇರಿದಂತೆ ಕುಟುಂಬದ ಹೊಟ್ಟೆ ಹೊರೆಯಬೇಕು. ಹೆಚ್ಚಿನ ದಿನಗಳಲ್ಲಿ ಅವರಿಗೆ ತಿನ್ನಲು ಏನೂ ಇರುವುದಿಲ್ಲ.
ಆದರೆ ಮೊಮ್ಮಗಳು 12ನೇ ತರಗತಿಯ ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕಗಳನ್ನು ಗಳಿಸಿದಾಗ ದೇಶರಾಜ್ ಪಟ್ಟಿದ್ದ ಕಷ್ಟವೆಲ್ಲವೂ ಸಾರ್ಥಕವಾಗಿತ್ತು. ಅಂದು ಇಡೀ ದಿನ ಅವರು ಪ್ರಯಾಣಿಕರನ್ನು ಉಚಿತವಾಗಿ ಸಾಗಿಸುವ ಮೂಲಕ ಮೊಮ್ಮಗಳ ಯಶಸ್ಸಿನ ಸಂಭ್ರಮವನ್ನಾಚರಿಸಿದ್ದರು.

ಆದರೆ ತಾನು ಬಿ.ಎಡ್.ಕೋರ್ಸ್ ಮಾಡಲು ದಿಲ್ಲಿಗೆ ತೆರಳಲು ಬಯಸಿದ್ದೇನೆ ಎಂದು ಮೊಮ್ಮಗಳು ತಿಳಿಸಿದಾಗ ಇದು ತನ್ನಿಂದ ಸಾಧ್ಯವಿಲ್ಲ ಎನ್ನುವುದು ದೇಶರಾಜ್ಗೆ ಗೊತ್ತಿತ್ತು.

‘ಆದರೆ ಯಾವುದೇ ಬೆಲೆ ತೆತ್ತಾದರೂ ಅವಳ ಕನಸುಗಳನ್ನು ನಾನು ಈಡೇರಿಸಲೇಬೇಕಿತ್ತು. ಹೀಗಾಗಿ ನಮ್ಮ ಮನೆಯನ್ನು ಮಾರಾಟ ಮಾಡಿ ಆಕೆಯ ಶುಲ್ಕವನ್ನು ಪಾವತಿಸಿದ್ದೆ ’ಎಂದು ಅವರು ಹೇಳಿದರು. ದೇಶರಾಜ್ ತನ್ನ ಪತ್ನಿ,ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಸ್ವಗ್ರಾಮದಲ್ಲಿಯ ಸಂಬಂಧಿಯೋರ್ವನ ಮನೆಗೆ ಕಳುಹಿಸಿದ್ದಾರೆ ಮತ್ತು ಮುಂಬೈಯಲ್ಲಿ ಆಟೋರಿಕ್ಷಾ ಚಾಲನೆಯನ್ನು ಮುಂದುವರಿಸಿದ್ದಾರೆ.
 
ಈಗೊಂದು ವರ್ಷವಾಯಿತು,ಪ್ರಾಮಾಣಿಕವಾಗಿ ಹೇಳಬೇಕೆಂದರೆ ಬದುಕು ಅಷ್ಟೇನೂ ಕೆಟ್ಟದ್ದಾಗಿಲ್ಲ. ರಾತ್ರಿ ಆಟೋದಲ್ಲಿಯೇ ಮಲಗುತ್ತೇನೆ. ಹಗಲಿಡೀ ಪ್ರಯಾಣಿಕರನ್ನು ಸಾಗಿಸುತ್ತಿರುತ್ತೇನೆ ಎಂದ ದೇಶರಾಜ್,ತಾನು ತರಗತಿಗೆ ಮೊದಲಿಗಳಾಗಿದ್ದೇನೆ ಎಂದು ತಿಳಿಸಲು ಮೊಮ್ಮಗಳು ಕರೆ ಮಾಡಿದಾಗೆಲ್ಲ ತನ್ನೆಲ್ಲ ನೋವುಗಳು ಮಾಯವಾಗುತ್ತವೆ. ಅವಳು ತನಗೆ ಹೆಮ್ಮೆಯನ್ನು ತಂದಿದ್ದಾಳೆ. ಆಕೆ ತನ್ನ ಕುಟುಂಬದಲ್ಲಿ ಮೊದಲ ಪದವೀಧರೆಯಾಗಲಿದ್ದಾಳೆ ಎಂದರು. ಮೊಮ್ಮಗಳು ಪದವೀಧರೆಯಾದ ದಿನ ಉಚಿತ ಸವಾರಿಯ ಭರವಸೆಯನ್ನು ಅವರು ತನ್ನ ಗ್ರಾಹಕರಿಗೆ ನೀಡಿದ್ದಾರೆ.

ದೇಶರಾಜ್ ಕಥೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರ ಹೃದಯಗಳನ್ನು ಕಲಕಿದೆ. ಅವರಿಗೆ ಆರ್ಥಿಕ ನೆರವು ನೀಡಲು ಬಹಳಷ್ಟು ಜನರು ಮುಂದೆ ಬಂದಿದ್ದಾರೆ. ಫೇಸ್ಬುಕ್ ಬಳಕೆದಾರ ಗುಂಜನ ರಾಟಿ ಎನ್ನುವವರು ದೇಶರಾಜ್ಗಾಗಿ ನಿಧಿಯನ್ನು ಆರಂಭಿಸಿದ್ದು,276 ದಾನಿಗಳಿಂದ 5.3 ಲ.ರೂ.ಗೂ ಹೆಚ್ಚಿನ ಹಣ ಸಂಗ್ರಹವಾಗಿದೆ. ಕಾಂಗ್ರೆಸ್ ನಾಯಕಿ ಅರ್ಚನಾ ದಾಲ್ಮಿಯಾ ಅವರು ದೇಶರಾಜ್ರ ನೋವಿನ ಕಥೆಯನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು,ಮಾಜಿ ಕೇಂದ್ರ ಸಚಿವ ಮಿಲಿಂದ ದೇವ್ರಾ ಅದನ್ನು ರಿಟ್ವೀಟ್ ಮಾಡಿದ್ದಾರೆ. ದೇಶರಾಜ್ರ ದೂರವಾಣಿ ಸಂಖ್ಯೆಯನ್ನು ಶೇರ್ ಮಾಡಿಕೊಂಡಿರುವ ದಾಲ್ಮಿಯಾ ಅವರಿಗೆ ನೆರವಾಗುವಂತೆ ಮುಂಬೈಯಿಗರನ್ನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News