×
Ad

ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ಮೀಸಲಿಡಿ: ಎಸ್‍ಡಿಪಿಐ

Update: 2021-02-28 21:12 IST

ಬೆಂಗಳೂರು, ಫೆ.28: ಪ್ರಸ್ತುತ ವಾರ್ಷಿಕ ಸಾಲಿನ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 10 ಸಾವಿರ ಕೋಟಿ ರೂ. ಮೀಸಲಿಡಲು ರಾಜ್ಯ ಸರಕಾರ ಮುಂದಾಗಬೇಕೆಂದು ಎಸ್‍ಡಿಪಿಐ ಒತ್ತಾಯ ಮಾಡಿದೆ.

ರವಿವಾರ ನಗರದ ಎಸ್‍ಡಿಪಿಐ ಪ್ರಧಾನ ಕಚೇರಿಯಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿಯ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಅವರು ಹಕ್ಕೋತ್ತಾಯ ಮಂಡನೆ ಮಾಡಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ 2021-22ರ ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿದ್ದು, ಒಂದು ಕೋಟಿಗೂ ಹೆಚ್ಚಿರುವ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕಾಗಿ ಈ ಬಾರಿಯ ಬಜೆಟ್‍ನಲ್ಲಿ ಕನಿಷ್ಠ 10 ಸಾವಿರ ಕೋಟಿಯನ್ನು ಮೀಸಲಿಡಬೇಕು ಎಂದು ಆಗ್ರಹಿಸಿದರು.

ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಶಿಕ್ಷಣ, ಸ್ವಉದ್ಯೋಗ, ಕುಶಲಕರ್ಮ, ಆರೋಗ್ಯ, ವಸತಿ ಮತ್ತಿತರ ಹಲವಾರು ಸಮಸ್ಯೆಗಳಿಗೆ ಪ್ರತ್ಯೇಕ ಅನುದಾನ ಅಗತ್ಯವಿದೆ. ಕಳೆದ ಮೂರು ಬಜೆಟ್‍ಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನುದಾನವನ್ನು ನಿರಂತರವಾಗಿ ಕಡಿತಗೊಳಿಸಲಾಗುತ್ತಿರುವುದು ಸರಿಯಲ್ಲ. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ತೀರ ಹಿಂದುಳಿದಿರುವ ಅಲ್ಪಸಂಖ್ಯಾತರ ಸಮುದಾಯಗಳಲ್ಲಿ ಕೆಲವು ನಿರ್ದಿಷ್ಟ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಅನುದಾನ ಅಗತ್ಯವಾಗಿದೆ ಎಂದು ಒತ್ತಾಯಿಸಿದರು.

ಹಲವು ತಿಂಗಳುಗಳಿಂದ ದೇಶದಾದ್ಯಂತ ರೈತರು ತಮ್ಮ ಸಂಕಷ್ಟಗಳ ಬಗ್ಗೆ ಹೋರಾಡುತ್ತಿದ್ದಾರೆ. ಈ ಹೋರಾಟಗಳಿಗೆ ಸರಕಾರಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ದೇಶದ ಬೆನ್ನೆಲುಬು ರೈತರು. ಒಟ್ಟು ಆರ್ಥಿಕತೆಯು ಕೃಷಿಯೊಂದಿಗೆ ಅವಲಂಬಿತವಾಗಿದೆ. ಮುಂದಿನ ತಲೆಮಾರಿಗೆ ಆಹಾರದ ಕೊರತೆಯಾಗದಿರಲು ಕೃಷಿ ಭೂಮಿಗಳನ್ನು ಹೆಚ್ಚಿಸಬೇಕು. ಸರ್ವಪಕ್ಷಗಳ ಸಲಹೆ ಪಡೆದು ಕೂಡಲೇ ರೈತರ ಸಮಸ್ಯೆಗಳ ಬಗ್ಗೆ ಬಗೆಹರಿಸಬೇಕು ಎಂದರು.

ರಾಜ್ಯದ ಮಹಾನಗರ ಪಾಲಿಕೆ, ಮುನ್ಸಿಪಾಲಿಟಿ ಹಾಗೂ ಜಿಲ್ಲಾ, ತಾಲೂಕು, ಪಟ್ಟಣ ಮತ್ತು ಗ್ರಾಮ ಪಂಚಾಯತ್ ಗಳಿಗೆ ರಾಜ್ಯ ಸರಕಾರದ ನೇರ ಅನುದಾನ ಹೆಚ್ಚಿಸಬೇಕು. ಸ್ಥಳೀಯ ಸರ್ಕಾರಗಳಿಗೆ ಹೆಚ್ಚು ಅನುದಾನ ನಿಧಿ ನೀಡಿದರೆ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಅಬ್ದುಲ್ ನಝೀರ್ ಸಾಬ್ ಅವರ ಕಲ್ಪನೆಯ ಸ್ಥಳೀಯ ಸಂಸ್ಥೆಗಳು ಅನುಷ್ಠಾನವಾದಗ ದೇಶ ಮುನ್ನಡೆ ಸಾಧಿಸಲಿದೆ ಎಂದು ನುಡಿದರು.

ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಮಝೀದ್ ಖಾನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಪ್ಸರ್ ಕೆ., ಮುಝಾಹಿದ್ ಪಾಶಾ, ರಾಜ್ಯ ಕಾರ್ಯದರ್ಶಿಗಳಾದ ಅಬ್ರಾರ್ ಅಹ್ಮದ್, ಅಶ್ರಫ್ ಮಾಚಾರ್, ಕಾರ್ಯದರ್ಶಿ ಮಂಡಳಿ ಸದಸ್ಯ ಅಕ್ರಂ ಹಸನ್ ಹಾಗೂ ಎ.ಆರ್.ಪಟೇಲ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News