ಬೆಂಗಳೂರು: ಸಬ್‍ಇನ್‍ಸ್ಪೆಕ್ಟರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Update: 2021-03-04 18:24 GMT

ಬೆಂಗಳೂರು, ಮಾ.4: ದರೋಡೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳ ಸಂಬಂಧ ಆರೋಪಿ ಜ್ಞಾನೇಶ್ ಎಂಬಾತನನ್ನು ವಶಕ್ಕೆ ಪಡೆಯಲು ತೆರಳಿದ ಸಬ್‍ಇನ್‍ಸ್ಪೆಕ್ಟರ್ ಹರಿನಾಥ್ ಮೇಲೆಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಹಲ್ಲೆಯಿಂದ ಕೈಗೆ ಗಾಯಗೊಂಡಿರುವ ಮಹದೇವಪುರ ಠಾಣೆ ಸಬ್‍ಇನ್‍ಸ್ಪೆಕ್ಟರ್ ಹರಿನಾಥ್ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಹದೇವಪುರ, ಎಚ್‍ಎಎಲ್, ಕೆಆರ್‍ಪುರಂ, ಕಾಡುಗೋಡಿ ಸೇರಿ ನಗರದ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 25ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜ್ಞಾನೇಶ್, ಕೆಜಿಎಫ್‍ನ ಅಂಡರ್‍ಸನ್‍ಪೇಟೆಯಲ್ಲಿ ಗುರುವಾರ ಮುಂಜಾನೆ ಅಡಗಿರುವ ಮಾಹಿತಿಯಾಧರಿಸಿ ಸಬ್‍ಇನ್‍ಸ್ಪೆಕ್ಟರ್ ಹರಿನಾಥ್ ಐವರು ಸಿಬ್ಬಂದಿಯೊಂದಿಗೆ ಬಂಧಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಪೊಲೀಸ್ ವಾಹನವನ್ನು ಕಂಡ ಜ್ಞಾನೇಶ್ ಮತ್ತವನ ಸಹಚರರು ಓಡಲು ಯತ್ನಿಸಿದ್ದು ಆತನ ಬೆನ್ನಟ್ಟಿ ಬಂಧಿಸಲು ಹೋದ ಹರಿನಾಥ್ ಅವರ ಕೈಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಆತನ ಜತೆಗಿದ್ದ ಮತ್ತೊಬ್ಬ ಸಹಚರ ಪರಾರಿಯಾಗಿದ್ದು ಅವರಿಬ್ಬರಿಗಾಗಿ ಬೆಳಗ್ಗೆವರೆಗೆ ನಡೆಸಿದ ಕಾರ್ಯಾಚರಣೆ ವಿಫಲವಾಗಿದೆ. ಇನ್ನು, ಸಬ್‍ಇನ್‍ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ಜ್ಞಾನೇಶ್ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News