ಗಂಭೀರ ಸ್ಥಿತಿಯಲ್ಲಿದ್ದರೂ ರಕ್ಷಣೆಗೆ ಬಾರದ ಜನತೆ: ಪ್ರಾಣ ಬಿಟ್ಟ ಅಪಘಾತದ ಗಾಯಾಳು
Update: 2021-03-06 17:16 GMT
ಬೆಂಗಳೂರು, ಮಾ.6: ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಬಾರದೆ ಮಾನವೀಯತೆ ಮರೆತ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಇಲ್ಲಿನ ಬ್ಯಾಟರಾಯಪುರ ವ್ಯಾಪ್ತಿಯ ನಾಗರಭಾವಿ ದುರ್ಗಾ ಪರಮೇಶ್ವರಿ ದೇಗುಲದ ಬಳಿ ಸರಣಿ ಅಪಘಾತ ಉಂಟಾಗಿ, ಬೈಕ್ ಸವಾರನ ಕಾಲಿನ ಮೇಲೆ ಲಾರಿ ಹರಿದು ರಕ್ತಸ್ರಾವವಾಗಿ ಗಂಭೀರ ಸ್ಥಿತಿಯಲ್ಲಿದ್ದರೂ, ಜನರು ಆತನ ರಕ್ಷಣೆಗೆ ಮುಂದಾಗಿಲ್ಲ. ಬದಲಾಗಿ ರಸ್ತೆ ಬದಿ ನಿಂತುಕೊಂಡು ಮೊಬೈಲ್ನಲ್ಲಿ ವೀಡಿಯೋ ಚಿತ್ರೀಕರಣ ನಡೆಸಿದ್ದಾರೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಕೆಲ ಸ್ಥಳೀಯರು 108 ಆಂಬುಲೆನ್ಸ್ ಗೆ ಕರೆ ಮಾಡಿದರೂ, ಸೂಕ್ತ ಪ್ರತಿಕ್ರಿಯೆ ದೊರೆತಿಲ್ಲ ಎನ್ನಲಾಗಿದೆ. ನಂತರ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.