ದುರ್ಬಲರಿಗೆ ಮೀಸಲಾತಿ ಮರೀಚಿಕೆಯಾಗಲಿದೆಯೇ?

Update: 2021-03-11 19:30 GMT

ಭಾರತ ಒಂದು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಯಿತು. ಅನೇಕ ಪಂಚವಾರ್ಷಿಕ ಯೋಜನೆಗಳು ಮುಗಿದವು. ಪ್ರತಿವರ್ಷ ಬಜೆಟ್‌ಗಳು ಮಂಡನೆಯಾದವು. ಹೊರದೇಶಗಳಿಂದ ಲಕ್ಷಾಂತರ ಕೋಟಿ ಸಾಲ ತಂದು ಅನೇಕ ಯೋಜನೆಗಳು ಬಂದವು. ಎಲ್ಲಾ ಪಕ್ಷಗಳು ಪ್ರಣಾಳಿಕೆ ಹೊರಡಿಸಿದವು. ಅನೇಕರು ಪ್ರಧಾನ ಮಂತ್ರಿಗಳಾದರು, ಆದರೆ ಇಂದು ದೇಶದ ಸ್ಥಿತಿಗತಿ ಹೇಗಿದೆ, ಎತ್ತ ಸಾಗುತ್ತಿದೆ ಎಂದು ನೋಡಿದರೆ ನಮಗೆ ಭಯವಾಗುತ್ತದೆ. ಇಂದು ಭಾರತದಲ್ಲಿ ಅತಿ ಹೆಚ್ಚು-ಹೆಚ್ಚು ಚರ್ಚೆಗೊಳಪಡುತ್ತಿರುವ ವಿಷಯಗಳಲ್ಲಿ ಮೀಸಲಾತಿಯೂ ಒಂದು.

ಪ್ರಾಚೀನ ಭಾರತದಲ್ಲಿ ಮೀಸಲಾತಿಯ ಇತಿಹಾಸ 

ಮೀಸಲಾತಿ ಜಾರಿಗೆ ಬಂದಿದ್ದು 1950ರ ಜನವರಿ 26ರಿಂದ ಅಲ್ಲ. ಅದು ಪ್ರಾಚೀನ ಭಾರತದಲ್ಲಿಯೂ ನಾವು ಕಾಣಬಹುದು. ಕಿ.ಪೂ. 185ರಲ್ಲಿ ಅಂದು ಮೌರ್ಯ ದೊರೆಯಾದ ಬೃಹದೃಥಮೌರ್ಯನನ್ನು ಮೋಸದಿಂದ ಕೊಂದ ಸುಂಗ ಸಾಮ್ರಾಜ್ಯದ ದೊರೆ ಪುಷ್ಯಮಿತ್ರ ಸುಂಗನು ಮೌರ್ಯ ಸಾಮ್ರಾಜ್ಯವನ್ನು ತನ್ನ ಅಧೀನಕ್ಕೆ ತೆಗೆದುಕೊಂಡ ನಂತರ ತನ್ನ ಆಡಳಿತದ ಅನುಕೂಲಕ್ಕಾಗಿ ಸುಮತಿಭಾರ್ಗವನೆಂಬ ಬ್ರಾಹ್ಮಣನಿಂದ ಸಂವಿಧಾನವೊಂದನ್ನು ಬರೆಸಿದ. ಅದೇ ಮನುಸ್ಮತಿ ಅಥವಾ ಮನು ಸಂವಿಧಾನವಾಗಿದೆ. ಇದನ್ನು ಆಧರಿಸಿ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ವಿಂಗಡಿಸಿ ಬ್ರಾಹ್ಮಣರಿಗೆ-ಶಿಕ್ಷಣ, ಪೌರೋಹಿತ್ಯದ ಹಕ್ಕನ್ನು, ಕ್ಷತ್ರೀಯರಿಗೆ-ಖಡ್ಗ ಹಿಡಿಯುವ, ಅಧಿಕಾರ ಮಾಡುವ ಹಕ್ಕನ್ನು ಹಾಗೂ ವೈಶ್ಯರಿಗೆ-ವ್ಯಾಪಾರ, ಕೃಷಿ, ಸಂಪತ್ತುಗಳನ್ನು ಹೊಂದುವ ಹಕ್ಕನ್ನೂ ನೂರಕ್ಕೆ ನೂರು ಭಾಗ ಮೀಸಲಾಗಿರಿಸಿ ಶೂದ್ರರಿಗೆ ಈ 3 ಜನರ ಸೇವೆ ಮಾಡುವ ಅಥವಾ ಕೆಲಸ ಮಾಡುವ ಮೀಸಲಾತಿ ನೀಡಲಾಯಿತು. ಇದನ್ನು ಕಾನೂನು ಮಾಡಿದ ಮೊದಲ ಗ್ರಂಥ ಮನುಸ್ಮತಿಯೇ ಆಗಿದೆ. ಇಲ್ಲಿನ ಮೂಲನಿವಾಸಿ ಶೂದ್ರರು, ಒಕ್ಕಲಿಗ, ಲಿಂಗಾಯತ, ಕುರುಬ, ಗಾಣಿಗ, ಕುಂಬಾರ, ಕ್ಷೌರಿಕ, ರೆಡ್ಡಿ, ಕಮ್ಮಾ, ಗೌಡ, ಅಗಸ, ಮಡಿವಾಳ ಇವರನ್ನು ವಿದ್ಯೆ, ಅಧಿಕಾರ ಮತ್ತು ಆಸ್ತಿ ಗಳಿಕೆಯ ಹಕ್ಕುಗಳಿಂದ ಸಂಪೂರ್ಣವಾಗಿ ವಂಚಿಸಿದರು. ಇದರಿಂದಾಗಿ ಇವರೆಲ್ಲ ವಿದ್ಯೆ ಇಲ್ಲದೆ ಅಜ್ಞಾನಿಗಳಾಗಿ, ಬಡವರಾಗಿ, ಗುಲಾಮರಾದರು ಮತ್ತು ದೈಹಿಕ ಗುಲಾಮಗಿರಿಗೆ ಒಳಪಟ್ಟರು.

ಆಧುನಿಕ ಭಾರತದಲ್ಲಿ ಮೀಸಲಾತಿಯ ಬೆಳವಣಿಗೆ
* ಆಧುನಿಕ ಭಾರತದಲ್ಲಿ (1902ರಲ್ಲಿ) ಬ್ರಾಹ್ಮಣೇತರರಿಗೆ ಪ್ರಥಮ ಬಾರಿಗೆ ಮೀಸಲಾತಿಯನ್ನು ಜಾರಿಗೆ ತಂದವರು ಕೊಲ್ಲಾಪುರ ಸಂಸ್ಥಾನದ ಛತ್ರಪತಿ ಶಾಹುಮಹಾರಾಜರು. ಅವರು ಬ್ರಾಹ್ಮಣೇತರ ಎಸ್ಸಿ/ಎಸ್ಟಿ/ಒಬಿಸಿ ಸಮುದಾಯಗಳಿಗೆ ಶೇ. 50 ಮೀಸಲಾತಿಯನ್ನು ಜಾರಿಗೆ ತಂದರು. ಆದರೆ ಅದನ್ನು ಬಾಲಗಂಗಾಧರ ತಿಲಕರು ವಿರೋಧಿಸಿದರು.

* ಪ್ರಥಮ ಬಾರಿಗೆ ನಮ್ಮ ರಾಜ್ಯದ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ನಾಲ್ವಡಿಕೃಷ್ಣರಾಜ ಒಡೆಯರ್‌ರವರು 1921ರಲ್ಲಿ ಎಲ್ಲಾ ಹಿಂದುಳಿದ ಜಾತಿಗಳಿಗೆ ಅಥವಾ ಬ್ರಾಹ್ಮಣೇತರರಿಗೆ ಶೇ. 75ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದರು. ಇದನ್ನು ಸರ್. ಎಂ. ವಿಶ್ವೇಶ್ವರಯ್ಯ ದಿವಾನ್ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ವಿರೋಧಿಸಿದರು. * ಮದ್ರಾಸ್‌ನಲ್ಲಿ ಪ್ರಥಮ ಬಾರಿಗೆ 1921ರಲ್ಲಿ ಸರಕಾರಿ ಆದೇಶದ ಮೂಲಕ ಬ್ರಾಹ್ಮಣೇತರರಿಗೆ ಒಬಿಸಿಗಳಿಗೆ ಶೇ. 44, ಬ್ರಾಹಣರಿಗೆ ಶೇ. 16, ಮುಸ್ಲಿಮರಿಗೆ ಶೇ. 16, ಆಂಗ್ಲೋ ಇಂಡಿಯನ್ನರಿಗೆ/ಕ್ರಿಶ್ಚಿಯನ್ನರಿಗೆ ಶೇ. 16 ಮತ್ತು ಎಸ್ಸಿ/ಎಸ್ಟಿಗಳಿಗೆ ಶೇ. 8ರಷ್ಟು ಮೀಸಲಾತಿ ನೀಡಲಾಯಿತು.

* 1909, 1919, 1935ರ ಭಾರತ ಸರಕಾರದ ಕಾಯ್ದೆಯಡಿ ಮೀಸಲಾತಿಗೆ ಅವಕಾಶ ನೀಡಲಾಯಿತು.

* 1950, ಜನವರಿ 26ರಂದು ನಮ್ಮ ಸಂವಿಧಾನ ಜಾರಿಗೆ ಬಂತು. ಅದರಲ್ಲಿ ಎಸ್ಸಿ ಶೇ. 15, ಎಸ್ಟಿ ಶೇ. 03, ಒಬಿಸಿಗಳಿಗೆ ಶೇ. 27 ಮೀಸಲಾತಿ ನೀಡಲಾಯಿತು. 15(4) 16(4) ಕ್ರಮವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯವನ್ನು ಕಲ್ಪಿಸಿತು. ಇದಕ್ಕೆ ಯಾವುದೇ ಕಾಲಮಿತಿ ವಿಧಿಸಿಲ್ಲ. ಸಂವಿಧಾನದ 330 ಮತ್ತು 332ನೇ ವಿಧಿಗಳಲ್ಲಿ ವಿಧಾನಸಭೆ, ಲೋಕಸಭೆಗಳಲ್ಲಿ ರಾಜಕೀಯ ಮೀಸಲಾತಿಯನ್ನು ನೀಡಲಾಯಿತು ಮತ್ತು ಸಂವಿಧಾನದ 340ರಡಿ ಹಿಂದುಳಿದ ವರ್ಗಗಳಿಗೆ ಆಯೋಗವನ್ನು ರಚಿಸಿ ಅವರ ಅಭಿವೃದ್ಧಿಗೆ ಅಗತ್ಯಕ್ರಮ ವಹಿಸಲು ತಿಳಿಸಲಾಗಿತ್ತು.

ಭಾರತ ದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಬೆಳವಣಿಗೆ
 * ಈ ದೇಶದಲ್ಲಿ ಪ್ರಥಮ ಬಾರಿಗೆ ಸಂವಿಧಾನದಲ್ಲಿ 340 ರಡಿ 1953 ಜನವರಿ 29ರಂದು ಕಾಕಾ ಕಾಲೇಲ್ಕರ್‌ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೊದಲ ಆಯೋಗವನ್ನು ನೇಮಿಸಿತು. ಈ ಆಯೋಗವು 1955ರ ಮಾರ್ಚ್ 30ರಂದು ತನ್ನ ವರದಿಯನ್ನು ಸಲ್ಲಿಸಿತು. ಈ ವರದಿಯಲ್ಲಿ 2,399 ಜಾತಿಗಳ ಪಟ್ಟಿಯನ್ನು ಸಲ್ಲಿಸಿ ಇದರಲ್ಲಿ 837 ಜಾತಿಗಳು ಅತಿಹಿಂದುಳಿದ ಜಾತಿಗಳೆಂದು ಹೇಳಿತು. ಈ ವರದಿಯು ಹಿಂದುಳಿದ ವರ್ಗಗಳಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ತಾಂತ್ರಿಕ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 70ರಷ್ಟು ಮೀಸಲಾತಿ ನೀಡಬೇಕು ಮತ್ತು ಸರಕಾರಿ ನೌಕರಿಗಳಲ್ಲಿ ಸ್ಥಳೀಯರಿಗೆ ಕೆಳಕಂಡಂತೆ ಕ್ಲಾಸ್-1 ಹುದ್ದೆಗಳಲ್ಲಿ ಶೇ. 25, ಕ್ಲಾಸ್-2 ಹುದ್ದೆಗಳಲ್ಲಿ ಶೇ. 33, ಕ್ಲಾಸ್-3 ಮತ್ತು 4 ಹುದ್ದೆಗಳಲ್ಲಿ ಶೇ. 40 ಮೀಸಲಾತಿಯನ್ನು ಈ ಆಯೋಗ ಶಿಫಾರಸು ಮಾಡಿತ್ತು.

* ಭಾರತ ದೇಶದಲ್ಲಿ 2ನೇ ಹಿಂದುಳಿದ ವರ್ಗಗಳ ಆಯೋಗವನ್ನು 1978ರಲ್ಲಿ ಬಿ.ಪಿ. ಮಂಡಲ್‌ರವರ ಅಧ್ಯಕ್ಷತೆಯಲ್ಲಿ ರಚಿಸಿತು. ಈ ಆಯೋಗವು 1980ನೇ ಡಿಸೆಂಬರ್ 31ಕ್ಕೆ ವರದಿಯನ್ನು ಸಲ್ಲಿಸಿ 3,743 ಜಾತಿಗಳನ್ನು ಹಿಂದುಳಿದ ಜಾತಿಗಳೆಂದು ಗುರುತಿಸಿ ದೇಶದ ಜನಸಂಖ್ಯೆಯಲ್ಲಿ ಶೇ. 52ರಷ್ಟು ಇರುವ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಶಿಫಾರಸು ಮಾಡಿತು. ಉದಾ:- ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ, ಕುರುಬ, ಕುಂಬಾರ, ತಿಗಳ, ವಿಶ್ವಕರ್ಮ, ಬಣಜಿಗ, ಉಪ್ಪಾರ, ಬೆಸ್ತ, ನಾಯ್ಡು, ರೆಡ್ಡಿ, ಕೆಮ್ಮಾ, ಕ್ಷತ್ರಿಯ, ಮಡಿವಾಳ, ಗೊಲ್ಲ, ಹೂಗಾರ, ಈಡಿಗ ಮುಂತಾದ ಸುಮಾರು 333 ಜಾತಿಗಳನ್ನು ಮಂಡಲ್ ಆಯೋಗ ತನ್ನ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಿದೆ. ಇದು ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ರಾಜಕೀಯದಲ್ಲಿ, ಕೈಗಾರಿಕಾ ಕ್ಷೇತ್ರದಲ್ಲಿ ಒಬಿಸಿಗಳಿಗೆ 27ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿತು.

* ಭಾರತ ಸಂವಿಧಾನದ 124ನೇ ತಿದ್ದುಪಡಿ ಮಾಡಿ 2019ರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ಮೀಸಲಾತಿ ನೀಡಿತ್ತು. ಇದರಲ್ಲಿ ಎಸ್ಸಿ, ಎಸ್ಟಿ, ಒಬಿಸಿಗಳನ್ನು ಹೊರತುಪಡಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ಮೀಸಲಾತಿ ನೀಡಿತ್ತು.

ಎಲ್ಲಿ ಮೀಸಲಾತಿ ಇಲ್ಲ?  
ISRO, IIM, IIT, IISC, AIIMS, PGI, JIPMER, NIMHANS, ರಕ್ಷಣೆ, ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿ ವ್ಯವಸ್ಥೆ ಇಲ್ಲ.
 
ಮೀಸಲಾತಿಯ ದುರಂತ ಕಥೆ
 1992ರಲ್ಲಿ ಎಲ್.ಪಿ.ಜಿ. (ಹೊಸ ಆರ್ಥಿಕ ವ್ಯವಸ್ಥೆ) ಅಂದರೆ ಸರಕಾರಿ ಕ್ಷೇತ್ರವನ್ನು ಖಾಸಗಿ ಕ್ಷೇತ್ರವನ್ನಾಗಿ ಮಾರ್ಪಡಿಸುವ ಸಲುವಾಗಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ನೀತಿಯನ್ನು ಜಾರಿಗೆ ತರಲಾಯಿತು. ಈಗ ಎಲ್ಲೆಡೆ ಖಾಸಗಿ ಕ್ಷೇತ್ರವು ಬೆಳೆದು ನಿಂತಿದೆ. 1991ರಲ್ಲಿ ಶೇ. 1.52ರಷ್ಟಿದ್ದ ಸರಕಾರಿ ಉದ್ಯೋಗದರ 2008ರ ವೇಳೆಗೆ ಶೇ -0.65 ಕ್ಕೆ ಕುಸಿದಿದೆ. ಖಾಸಗಿ ಉದ್ಯೋಗದರ ಇದೇ ಅವಧಿಯಲ್ಲಿ 0.45 ರಿಂದ ಶೇ. 1.74ಕ್ಕೆ ಹೆಚ್ಚಾಗಿದೆ. ಆದ್ದರಿಂದ ಮೀಸಲಾತಿ ಕಡಿಮೆ ಆಗುತ್ತಿದೆ.

ಮೀಸಲಾತಿ ಏಕೇ ಬೇಕು?
ಭಾರತ ದೇಶದಲ್ಲಿ ಜಾತಿ ದೌರ್ಜನ್ಯ, ದಬ್ಬಾಳಿಕೆಗಳು, ಸಾಮಾಜಿಕ ಅಸಮಾನತೆ, ಬಡತನ, ಅಸಮಾನತೆ, ಲಿಂಗತಾರತಮ್ಯ, ಆರ್ಥಿಕ ತಾರತಮ್ಯ ಇವು ಇರುವವರೆಗೂ ಮೀಸಲಾತಿ ಬೇಕು. ಭೂಮಿ ಮತ್ತು ಆರ್ಥಿಕ ಸಂಪತ್ತು ರಾಷ್ಟ್ರೀಕರಣವಾಗಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಬಯಸಿದ್ದರು. ಎಲ್ಲಿಯವರೆಗೆ ಸಾಮಾಜಿಕ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಇರಬೇಕು ಎಂಬುದು ಬಾಬಾ ಸಾಹೇಬರ ನಿರ್ಧಾರವಾಗಿತ್ತು.

2018ರ ಅಂಕಿ-ಅಂಶದ ಪ್ರಕಾರ, ದೇಶದ ಶೇ. 1ರಷ್ಟು ಶ್ರೀಮಂತರ ಬಳಿ ದೇಶದ ಸಂಪತ್ತಿನ ಶೇ. 51.5ರಷ್ಟಿದೆ. ಶೇ. 4 ಶ್ರೀಮಂತರ ಬಳಿ 17.1ರಷ್ಟಿದೆ. ಶೇ. 5 ಶ್ರೀಮಂತರ ಬಳಿ ಶೇ. 8.8ರಷ್ಟಿದೆ. ಶೇ. 10ರಷ್ಟು ಜನರ ಬಳಿ 9.2ರಷ್ಟಿದೆ. ಶೇ. 20 ಜನ ಸಾಮಾನ್ಯರ ಬಳಿ ಕೇವಲ ಶೇ. 8.6ರಷ್ಟಿದೆ. ಶೇ. 68ರಷ್ಟು ಬಡಜನರ ಬಳಿ ಕೇವಲ ಶೇ. 4.7ರಷ್ಟಿದೆ. ಶೇ. 54 ಹಿಂದುಳಿದವರಲ್ಲಿ ಕೇವಲ ಶೇ. 10 ಜನರು ಮಾತ್ರ ಸರಕಾರಿ ಸೇವೆಯಲ್ಲಿ ಇದ್ದಾರೆ. ಎಸ್ಸಿ/ಎಸ್ಟಿ ಶೇ. 22 ಜನರಲ್ಲಿ ಶೇ. 1.8 ಮಾತ್ರ ಉನ್ನತ ಶಿಕ್ಷಣ ಪಡೆದಿದ್ದಾರೆ. ಈ ಅಸಮಾನತೆಯನ್ನು ಹೋಗಲಾಡಿಸಲು ಮೀಸಲಾತಿ ಬೇಕು. ಮೀಸಲಾತಿಯು ಬಡತನ ನಿವಾರಣೆಯ ಕಾರ್ಯಕ್ರಮ ಅಲ್ಲ. ಜಾತಿ ದೌರ್ಜನ್ಯಗಳಿಂದ ತುಳಿತಕ್ಕೆ ಒಳಪಟ್ಟವರನ್ನು ಅದು ಸಮಾಜದ ಮುಖ್ಯವಾಹಿನಿಗೆ ತರುವ ಒಂದು ಅಸ್ತ್ರವಾಗಬೇಕು.

Similar News