ವಸತಿ ನಿಲಯದಲ್ಲಿ ಬಿಬಿಎ ವಿದ್ಯಾರ್ಥಿ ಅನುಮಾನಾಸ್ಪದ ಸಾವು

Update: 2021-03-14 16:15 GMT

ಬೆಂಗಳೂರು, ಮಾ.14: ಬಿಬಿಎ ವಿದ್ಯಾರ್ಥಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಂಧ್ರ ಮೂಲದ ವಿದ್ಯಾರ್ಥಿ ಮೋಕ್ಷಗ್ನ್ಯ ರೆಡ್ಡಿ (20)ಎಂದು ಪೊಲೀಸರು ಗುರುತಿಸಿದ್ದಾರೆ.

ಬಿಬಿಎ ವ್ಯಾಸಂಗಮಾಡುತ್ತಿದ್ದ ರೆಡ್ಡಿಯು ನೇಣುಬಿಗಿದ ಸ್ಥಿತಿಯಲ್ಲಿ ವರ್ತೂರು ಸಮೀಪದ ಕೃಪಾನಿಧಿ ಕಾಲೇಜಿನ ವಸತಿ ನಿಲಯದಲ್ಲಿ ರವಿವಾರ ಪತ್ತೆಯಾಗಿದ್ದಾನೆ. ಮೂರು ದಿನಗಳ ಹಿಂದೆಯೇ ಯುವಕ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ನಾಲ್ಕು ದಿನಗಳಿಂದ ಯುವಕ ಆಂಧ್ರದಲ್ಲಿರುವ ಪೋಷಕರಿಗೆ ಫೋನ್ ಮಾಡಿರಲಿಲ್ಲ. ಇದರಿಂದ ಅನುಮಾನ ಬಂದು ಪೋಷಕರು ಬೆಂಗಳೂರಿನಲ್ಲಿರುವ ತಮ್ಮ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಕಾಲೇಜಿಗೆ ತೆರಳಿ ವಿಚಾರಿಸಿ ಕೊಠಡಿ ತೆಗೆದು ನೋಡಿದಾಗ ವಿದ್ಯಾರ್ಥಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ವರ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News