ಕುಸಿದ ಭಾರತಕ್ಕೆ ಆಸರೆಯಾದ ವಿರಾಟ್ ಕೊಹ್ಲಿ: ಇಂಗ್ಲೆಂಡ್ ಗೆಲುವಿಗೆ 157 ರನ್ ಗುರಿ
ಅಹಮದಾಬಾದ್, ಮಾ.16: ಆರಂಭಿಕ ಕುಸಿತಕ್ಕೆ ಒಳಗಾದರೂ ನಾಯಕ ವಿರಾಟ್ ಕೊಹ್ಲಿಯ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಅತಿಥೇಯ ಭಾರತ ತಂಡವು ಮೂರನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ್ದು, ಇಂಗ್ಲೆಂಡ್ ಗೆಲುವಿಗೆ 157 ರನ್ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಆರಂಭಿಕ ಆಘಾತಕ್ಕೆ ಒಳಗಾಯಿತು. ಕೆ.ಎಲ್ ರಾಹುಲ್ ಶೂನ್ಯಕ್ಕೆ ಔಟಾಗಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ರೋಹಿತ್ ಶರ್ಮಾ 15, ಕಳೆದ ಪಂದ್ಯದ ಹೀರೋ ಇಶಾನ್ ಕಿಶಾನ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ರಿಷಬ್ ಪಂತ್ (25) ತಂಡವನ್ನು ಆಧರಿಸಿದರು. ಶ್ರೇಯಸ್ ಅಯ್ಯರ್ (9) ರನ್ ಗಳಿಸಲಷ್ಟೇ ಶಕ್ತವಾದರು. ಬಳಿಕ ಹಾರ್ದಿಕ್ ಪಾಂಡ್ಯ (17) ಜೊತೆ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ ನಡೆಸಿದರು. 46 ಎಸೆತಗಳಲ್ಲಿ 77 ರನ್ ಗಳಿಸಿದ ವಿರಾಟ್ ಕೊಹ್ಲಿ ಔಟಾಗದೇ ಉಳಿದರು.
ಇಂಗ್ಲೆಂಡ್ ಪರ ಮಾರ್ಕ್ ವುಡ್ 3, ಜೋರ್ಡನ್ 2 ವಿಕೆಟ್ ಕಬಳಿಸಿದರು.
ಈ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಿತ್ತು. ಸೂರ್ಯಕುಮಾರ್ ಬದಲಿಗೆ ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಸರಣಿಯಲ್ಲಿ ತಲಾ ಒಂದೊಂದು ಪಂದ್ಯ ಗೆದ್ದಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸಮಬಲ ಸಾಧಿಸಿವೆ.