×
Ad

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಕಪ್ಪು ಪಟ್ಟಿ ಧರಿಸಿ ಸಾರಿಗೆ ನೌಕರರ ಧರಣಿ

Update: 2021-04-01 17:13 IST

ಬೆಂಗಳೂರು, ಎ.1: ತಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಎಂಟಿಸಿ, ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕು ವಿಭಾಗಗಳ ನೌಕರರು, ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ವಿವಿಧೆಡೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನೂರಾರು ನೌಕರರು ಕಪ್ಪು ಪಟ್ಟಿ ಧರಿಸಿ, ಕರ್ತವ್ಯಕ್ಕೆ ಹಾಜರಾದರು.

ಸಾರಿಗೆ ನೌಕರರನ್ನು 6ನೇ ವೇತನ ಆಯೋಗದ ಅಡಿ ತರಬೇಕೆನ್ನುವುದು ನಮ್ಮ ಪ್ರಮುಖ ಬೇಡಿಕೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ನು, ನೌಕರರು ಈ ಮೊದಲು ನಡೆಸಿದ ಪ್ರತಿಭಟನೆ ವೇಳೆ ಮಂಡಿಸಲಾಗಿದ್ದ, 9 ಬೇಡಿಕೆಗಳ ಪೈಕಿ 8 ಅನ್ನು ಈಡೇರಿಸಿರುವುದಾಗಿ ಸರಕಾರ ಹೇಳುತ್ತಿದೆ. ಆದರೆ, ಅವು ನ್ಯೂನ್ಯತೆಯಿಂದ ಕೂಡಿವೆ. 6ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸುವ ಕುರಿತಂತೆ ಈವರೆಗೆ ಯಾವುದೇ ಮಹತ್ತರ ಬೆಳವಣಿಗೆಗಳು ನಡೆದಿಲ್ಲ ಎಂದು ಅವರು ಧರಣಿ ನಿರತ ನೌಕರರು ಅಸಮಾಧಾನ ವ್ಯಕ್ತಪಡಿಸಿದರು.

ಆರೋಗ್ಯ ಸೇವೆಯ ಬೇಡಿಕೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ 2016ರ ಸುತ್ತೋಲೆಯನ್ನೆ ಮುಂದುವರಿಸಲಾಗಿದೆ. ಅಂತರ್ ನಿಗಮಗಳ ವರ್ಗಾವಣೆ ಪದ್ಧತಿ ವೈಜ್ಞಾನಿಕವಾಗಿ ಶಿಕ್ಷಕರ ಕೌನ್ಸಲಿಂಗ್ ಮಾದರಿಯಲ್ಲಿ ನಡೆಯಬೇಕೆಂದು ಕೇಳಲಾಗಿತ್ತು. ಹಲವಾರು ನಿಬಂಧನೆಗಳನ್ನು ಹಾಕಿ ಶೇ.2ರಷ್ಟು ವರ್ಗಾವಣೆಗೆ ಅವಕಾಶ ನೀಡಿದ್ದಾರೆ. ಮೇಲಾಧಿಕಾರಿಗಳ ಕಿರುಕುಳ ತಪ್ಪಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಘಟಕಗಳಲ್ಲಿ ಆತ್ಮಹತ್ಯೆ ಪ್ರಯತ್ನಗಳು ಹೆಚ್ಚುತ್ತಿವೆ ಎಂದು ನೌಕರರು ಬೇಸರ ವ್ಯಕ್ತಪಡಿಸಿದರು.

ಇಂದಿನಿಂದ ಸರಣಿ ಪ್ರತಿಭಟನೆ: ಇಂದಿನಿಂದ ಎ.6ರವರೆಗೆ ಸಂಸ್ಥೆಯ ಎಲ್ಲಾ ನೌಕರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರು ಹಾಗೂ ಸರಕಾರ ಗಮನ ಸೆಳೆಯಲಿದ್ದಾರೆ. ಎ.2ರಂದು ಸಾರ್ವಜನಿಕ ಪ್ರದೇಶಗಳಲ್ಲಿ ಕಾಫಿ, ಟೀ ಮತ್ತು ಬಜ್ಜಿ, ಬೋಂಡಾಗಳನ್ನು ತಯಾರಿಸಿ ನೌಕರರು ಮಾರಾಟ ಮಾಡಲಿದ್ದಾರೆ.

ಅದೇ ರೀತಿ, ಎ.3ರಂದು ನೌಕರರು ಮತ್ತು ಕುಟುಂಬದ ಸದಸ್ಯರು ನಗರದ ಮುಖ್ಯ ವೃತ್ತಗಳಲ್ಲಿ ಮಾನವ ಸರಪಣಿ ನಿರ್ಮಿಸಿ ಭಿತ್ತಿ ಪತ್ರ ಪ್ರದರ್ಶಿಸಿ ಪ್ರತಿಭಟಿಸಲಿದ್ದಾರೆ. ಎ.4ರಂದು ಸಾರ್ವಜನಿಕರಿಗೆ ಕರಪತ್ರ ಹಂಚುವುದು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಬೇಡಿಕೆಗಳನ್ನು ಮಂಡಿಸಲಾಗುವುದು. ಅದೇ ರೀತಿ, ಎ.5ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು. ಎ.6ರಂದು ನೌಕರರ ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೋರಾಟದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News