'ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್’ ರಾಷ್ಟ್ರಮಟ್ಟದಲ್ಲಿಯೇ ಅತ್ಯುತ್ತಮ ಸಂಘಟನಾ ಕ್ರೀಡಾಕೂಟ ಆಗಬೇಕು

Update: 2021-04-05 17:02 GMT

ಬೆಂಗಳೂರು ಎ.5: ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್-2022 ದೇಶಕ್ಕೆ ಮಾದರಿ ಆಗುವ ರೀತಿಯಲ್ಲಿ ಕ್ರೀಡಾಕೂಟ ನಡೆಯಬೇಕು. ಅದಕ್ಕೆ ಬೇಕಾದ ಸಿದ್ಧತೆ ಈಗಿನಿಂದಲೆ ಶುರುವಾಗಬೇಕು. ಸಂಪೂರ್ಣ ಕ್ರಿಯಾಯೊಜನೆ ಸಿದ್ಧಪಡಿಸಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನ ಪೂರ್ವ ಸಿದ್ದತಾ ಸಭೆ ಇಂದು ನಡೆಸಲಾಯಿತು.

ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕಳೆದ ತಿಂಗಳು ಬೆಂಗಳೂರಿಗೆ ಆಗಮಿಸಿದ್ದ ವೇಳೆ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‍ನ ಎರಡನೇ ಆವೃತ್ತಿ ಬೆಂಗಳೂರಿನಲ್ಲಿ ನಡೆಸುವುದಾಗಿ ಘೋಷಿಸಿದ್ದರು. ಅಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಯುವಸಬಲೀಕರಣ ಮತ್ತು ಕ್ರೀಡೆ ಸಚಿವ ಡಾ.ನಾರಾಯಣಗೌಡ ಅವರೊಂದಿಗೂ ಚರ್ಚೆ ನಡೆಸಿದ್ದರು.

ಬೆಂಗಳೂರಿನ ಹಾರೋಹಳ್ಳಿಯಲ್ಲಿರುವ ಜೈನ್ ವಿಶ್ವವಿದ್ಯಾನಿಲಯದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು. 2022ರಲ್ಲಿ ಬೆಂಗಳೂರಿನಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನಡೆಯಲಿದೆ. ರಾಷ್ಟ್ರಮಟ್ಟದಲ್ಲಿಯೇ ಅತ್ಯುತ್ತಮವಾದ ಸಂಘಟನಾ ಕ್ರೀಡಾಕೂಟ ಇದಾಗಬೇಕು. ಕ್ರೀಡೆ, ವಸತಿ, ಸಾರಿಗೆ ಸೇರಿದಂತೆ ಎಲ್ಲ ವಿಭಾಗದಲ್ಲೂ ಉತ್ಕೃಷ್ಟ ಮಟ್ಟದ ಸೇವೆ ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಜೈನ್ ವಿವಿಯಲ್ಲಿಯೆ ವಿವಿಧ ಕ್ರೀಡೆಗೆ ಅವಕಾಶ ಇದೆ. ರಾಷ್ಟ್ರಮಟ್ಟದ ಕ್ರೀಡಾಕೂಟವಾಗಿರುವ ಕಾರಣ ಕೆಲವು ಕ್ರೀಡಾಂಗಣವನ್ನು ಉನ್ನತಮಟ್ಟಕ್ಕೆ ಏರಿಸಬೇಕು. ಕಂಠೀರವ ಕ್ರೀಡಾಂಗಣ ಸೇರಿದಂತೆ, ಬೇರೆ ಬೇರೆ ಕಡೆಗಳಲ್ಲಿ ಕ್ರೀಡಾಕೂಟ ಆಯೋಜನೆ ಬಗ್ಗೆ ಚರ್ಚಿಸಲಾಗಿದೆ.

ಜೈನ್ ವಿವಿ ಉಪಕುಲಪತಿ ಡಾ.ಚೆನರಾಜ್ ರಾಯ್ಚಂದ್ ಮಾತನಾಡಿ, ರಾಜ್ಯ ಸರಕಾರದ ಸಹಕಾರದೊಂದಿಗೆ ಕ್ರೀಡಾಕೂಟ ಯಶಸ್ಸುಗೊಳಿಸುತ್ತೇವೆ. 8 ತಿಂಗಳ ಸಮಯಾವಕಾಶ ಮಾತ್ರ ಇದ್ದು, ಅಷ್ಟರೊಳಗೆ ಎಲ್ಲ ಸಿದ್ಧತೆ ಆಗಲಿದೆ ಎಂದು ಸಭೆಗೆ ಭರವಸೆ ನೀಡಿದರು.

ಮೈದಾನವನ್ನು ಉನ್ನತೀಕರಣಗೊಳಿಸುವ ಕಾರ್ಯ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ರಾಜ್ಯ ಸರಕಾರದ ನೆರವನ್ನು ಜೈನ್ ವಿವಿ ಕೋರಿದ್ದು, ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಶಾಲಿನಿ ರಜನೀಶ್ ತಿಳಿಸಿದರು.

ಯಾವುದೇ ಕುಂದು ಕೊರತೆ ಇರದಂತೆ ಅಂತರ್‍ರಾಷ್ಟ್ರೀಯ ಗುಣಮಟ್ಟದ ವ್ಯವಸ್ಥೆ ಆಗಬೇಕು. ಸುಮಾರು ಎರಡು ವಾರಗಳ ಕಾಲ ಕ್ರೀಡಾಕೂಟ ನಡೆಯಲಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೇತೃತ್ವದಲ್ಲಿ ಜೈನ್ ಯುನಿವರ್ಸಿಟಿ ಸಹಭಾಗಿತ್ವದೊಂದಿಗೆ ಕ್ರೀಡಾಕೂಟ ನಡೆಯಲಿದೆ. ರಾಜ್ಯದಲ್ಲಿರುವ ಎಲ್ಲ ಕ್ರೀಡಾ ಸಂಸ್ಥೆಗಳ ಜೊತೆ ಸಭೆ ನಡೆಸಿ ಅಭೂತಪೂರ್ವವಾಗಿ ಕ್ರೀಡಾಕೂಟ ಆಯೋಜನೆ ಮಾಡಲು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಪ್ರಮುಖವಾಗಿ ಕ್ರೀಡಾಕೂಟದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುತ್ತಿದೆ.  4 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಆಗಮಿಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕ್ರೀಡಾಕೂಟದ ವೀಕ್ಷಣೆಗೆ ಆಗಮಿಸುತ್ತಾರೆ. ಆದುದರಿಂದ, ಊಟ, ವಸತಿ ಜೊತೆಗೆ ಮೂಲಭೂತ ಸೌಕರ್ಯ, ವಾಹನ ಪಾರ್ಕಿಂಗ್ ವ್ಯವಸ್ಥೆ ಎಲ್ಲವು ಸಮರೋಪಾದಿಯಲ್ಲಿ ಆಗಬೇಕು ಎಂದು ಶಾಲಿನಿ ರಜನೀಶ್ ಹೇಳಿದರು.

ರಾಜ್ಯದ ಕ್ರೀಡಾಪ್ರತಿಭೆಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಹೆಸರು ತರಬೇಕು. ಆ ನಿಟ್ಟಿನಲ್ಲಿ ಕ್ರೀಡಾಪಟುಗಳು ಈಗಿನಿಂದಲೆ ಸಿದ್ಧತೆ ನಡೆಸಬೇಕು. ಅಲ್ಲದೆ ಉನ್ನತ ಶಿಕ್ಷಣ ಇಲಾಖೆ ಜೊತೆಯೂ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು. ಸಭೆ ಬಳಿಕ ವಿವಿ ಆವರಣದಲ್ಲಿರುವ ವಿವಿಧ ಕ್ರೀಡಾಂಗಣಗಳನ್ನು ಅಧಿಕಾರಿಗಳು ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News