ಜ್ಯೋತಿಷಿ ಮಾತು ಕೇಳಿ ಮನೆಗೆ ಬೀಗ; ಮರುದಿನವೇ 7.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು !

Update: 2021-04-06 12:17 GMT

ಬೆಂಗಳೂರು, ಎ.6: ಜ್ಯೋತಿಷಿ ಹೇಳಿದ ಮಾತಿನಿಂದ ವ್ಯಕ್ತಿಯೋರ್ವ ಮನೆಗೆ ಬೀಗ ಹಾಕಿದ್ದು, ಮರುದಿನವೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಆಗಿರುವ ಘಟನೆ ಇಲ್ಲಿನ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಿಂಗೇನಹಳ್ಳಿಯ ಆನಂದ್ ಎಂಬವರ ತೋಟದ ಮನೆಗೆ ದುಷ್ಕರ್ಮಿಗಳು ನುಗ್ಗಿ 7.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಆನಂದ್ ಅವರ ತಾಯಿ ಜಯಮ್ಮ ಮಾ.8ರಂದು ಸಾವನ್ನಪ್ಪಿದ್ದು ಸಾವಿನ ಕುರಿತು ಜ್ಯೋತಿಷಿಯ ಬಳಿ ಆನಂದ್ ಕೇಳಿದ್ದಾರೆ. ನಿಮ್ಮ ತಾಯಿ ಮರಣದ ಗಳಿಗೆ ನಿಮಗೆ ಕೆಡಕನ್ನುಂಟು ಮಾಡಲಿದ್ದು, ಆಕೆಯ ಆತ್ಮ ಸುತ್ತಾಡುವುದರಿಂದ 3 ತಿಂಗಳು ಮನೆಗೆ ಬೀಗ ಹಾಕಿ ಬೇರೆಡೆ ವಾಸವಾಗಿರಿ ಎಂದು ಸಲಹೆ ನೀಡಿದ್ದಾನೆ ಎನ್ನಲಾಗಿದೆ.

ಅದರಂತೆ, ಜ್ಯೋತಿಷಿ ಮಾತು ಕೇಳಿದ ಆನಂದ್ ಕುಟುಂಬ ಮಾ.21ರಂದು ಮನೆಗೆ ಬೀಗ ಹಾಕಿಕೊಂಡು ಅದೇ ಊರಿನಲ್ಲಿದ್ದ ಸಹೋದರಿಯ ಮನೆಯಲ್ಲಿ ವಾಸವಿದ್ದರು. ಆದರೆ, ಮರುದಿನವೇ ಮನೆಯ ಬಳಿಬಂದು ನೋಡಿದಾಗ ಮನೆಯ ಬೀಗ ಒಡೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆನಂದ್ ಇಂದು (ಎ.6) ದೂರು ನೀಡಿದ್ದು, ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News