ಬೆಂಗಳೂರು ನಗರದಲ್ಲಿ ಹೆಚ್ಚಿದ ಕೊರೋನ ಸೋಂಕು: ಪ್ರತಿ ಮನೆಗೆ ಹೋಗಿ ಪರೀಕ್ಷೆ ಮಾಡಲು ಸೂಚನೆ

Update: 2021-04-08 13:59 GMT

ಬೆಂಗಳೂರು, ಎ. 8: ಬೆಂಗಳೂರು ನಗರದಲ್ಲಿ ಕೊರೋನ ಸೋಂಕು ನಿಯಂತ್ರಿಸಲು ಪ್ರತಿದಿನ 1 ಲಕ್ಷ ಪರೀಕ್ಷೆ ಮಾಡಲು ಹಾಗೂ ಒಂದು ಪ್ರಕರಣಕ್ಕೆ 20 ಸಂಪರ್ಕಿತರ ಪತ್ತೆಗೆ ಸೂಚಿಸಲಾಗಿದೆ. ಜೊತೆಗೆ ಮನೆ-ಮನೆ ಭೇಟಿ ವ್ಯವಸ್ಥೆ ತರಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಿಸುವ ಸಂಬಂಧ ಬಿಬಿಎಂಪಿ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೋನ ಪ್ರಕರಣ ಹೆಚ್ಚಿರುವುದರಿಂದ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದೆ. ಅಧಿಕಾರಿಗಳು ಜನರ ಮನೆಗೆ ಬಂದು ಕೊರೋನ ಪರೀಕ್ಷೆ ಮಾಡಿದರೆ ಸಹಕರಿಸಬೇಕು. ಯಾರೂ ಗಲಾಟೆ ಮಾಡಬಾರದು ಎಂದು ಮನವಿ ಮಾಡಿದರು.

ಮನೆಮನೆ ಸರ್ವೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 8,500 ಬೂತ್ ಇದ್ದು, ಪ್ರತಿ ಕಡೆ ತಂಡ ರಚಿಸಲಾಗುವುದು. ಈ ತಂಡ ಪ್ರತಿ ಮನೆಗೆ ಹೋಗಿ ಪರೀಕ್ಷೆ ಮಾಡಲಿದೆ. ಕೊರೋನ ರೋಗಿಗಳಿಗೆ ಸಹಾಯ, ಐಸೋಲೇಟ್ ಆದವರ ಸಂಚಾರ, ಅವರಿಗೆ ಆರೋಗ್ಯ ರಕ್ಷಣೆ, ಮುದ್ರೆ ಹಾಕುವುದು, ಆರೋಗ್ಯ ಪರೀಕ್ಷೆ, ಸೋಂಕಿಗೊಳಗಾದವರಿಗೆ ಆಕ್ಸಿಜನ್ ವ್ಯವಸ್ಥೆ ಹೇಗಿದೆ ಎಂಬ ಮೊದಲಾದ ಕೆಲಸಗಳನ್ನು ಈ ತಂಡ ಮಾಡಲಿದೆ. ಕಳೆದ ವರ್ಷವೇ ಈ ಕಾರ್ಯಕ್ರಮ ಹಾಕಿಕೊಂಡಿದ್ದರೂ ನೂರಕ್ಕೆ ನೂರು ಆಗಿರಲಿಲ್ಲ. ಇದನ್ನು ಪ್ರಾಶಸ್ತ್ಯದಲ್ಲಿ ಮಾಡಲಾಗುತ್ತದೆ. ಪ್ರತಿ ವಾರ್ಡ್ ಗೆ ಒಂದರಂತೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುತ್ತಿದ್ದು, ಒಟ್ಟು 250 ಸಿದ್ಧವಿದೆ ಎಂದು ಅವರು ಹೇಳಿದರು.

ಶೇ.50ರಷ್ಟು ಹಾಸಿಗೆ ಮೀಸಲಿಗೆ ಸೂಚನೆ: ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆ ಕೋವಿಡ್ ವೈರಸ್ ಸೋಂಕಿತರಿಗೆ ಮೀಸಲಿಡಬೇಕೆಂದು ಸೂಚಿಸಲಾಗಿದೆ. ಸರಕಾರಿ ಆಸ್ಪತ್ರೆಯಿಂದ ಶಿಫಾರಸು, ನೇರವಾಗಿ ಹೋಗುವ ಬಗ್ಗೆ ಸ್ಪಷ್ಟಪಡಿಸಲಾಗುವುದು. 2 ಸಾವಿರ ಗೃಹ ರಕ್ಷಕ ದಳ (ಹೋಮ್ ಗಾರ್ಡ್) ಸಿಬ್ಬಂದಿ ಬೇಕೆಂದು ಆಯುಕ್ತರು, ಗೃಹ ಇಲಾಖೆಗೆ ಕೇಳಿದ್ದು, ನಾನು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೋರುತ್ತೇನೆ. ಇವರು ಕೋವಿಡ್ ನಡವಳಿಕೆ ಮೇಲೆ ನಿಗಾ ಇಡಲಿದ್ದಾರೆ ಎಂದು ತಿಳಿಸಿದರು.

ಹಾಸಿಗೆ ಲಭ್ಯ: ಬೆಂಗಳೂರು ನಗರದಲ್ಲಿ 1 ಸಾವಿರ ಹಾಸಿಗೆ ಕೋವಿಡ್ ವೈರಸ್ ಸೋಂಕಿತರಿಗೆ ಲಭ್ಯವಿದೆ. 3ರಿಂದ 4 ಸಾವಿರಗಳಷ್ಟು ಹಾಸಿಗೆಗಳು ಬೇಕೆಂದು ಆಯುಕ್ತರು ಕೋರಿದ್ದಾರೆ. ಬೆಂಗಳೂರಿನಲ್ಲಿ ಹಾಸಿಗೆ ಲಭ್ಯತೆ ಕುರಿತು ವೆಬ್‍ಸೈಟ್‍ನಲ್ಲೇ ಮಾಹಿತಿ ಹಾಕಲಾಗುವುದು. ಇದರಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಸರಕಾರ ಆಸ್ಥೆ ವಹಿಸಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಸಂಜೆ ಪ್ರಧಾನಿ ಮೋದಿಯವರ ಸಭೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಮಾಹಿತಿ ನೀಡಲಿದ್ದಾರೆ. ಹಾಗೆಯೇ ಸಲಹೆಗಳನ್ನು ನೀಡಲಿದ್ದಾರೆ. ರಾಜ್ಯದಲ್ಲಿ ಈಗಾಗಲೇ 25ರಿಂದ 30 ಲಕ್ಷ ಕೋವಿಡ್ ಡೋಸ್ ಸಂಗ್ರಹವಿದೆ. ಇನ್ನೂ 25 ಲಕ್ಷ ಲಸಿಕೆಗಳನ್ನು ಕಳುಹಿಸಿಕೊಡುವುದು ಎಂದು ಕೇಂದ್ರ ಸರಕಾರ ತಿಳಿಸಿದೆ. ಲಸಿಕೆ ಕೊರತೆ ಇಲ್ಲ ಎಂದು ಸುಧಾಕರ್ ಮಾಹಿತಿ ನೀಡಿದರು.

ಬೆಂಗಳೂರು ನಗರದ ಆರೋಗ್ಯ ಸಿಬ್ಬಂದಿ ವಸತಿ ಸಮುಚ್ಛಯಕ್ಕೆ ಹೋಗಿ ಲಸಿಕೆ ನೀಡಲಿದ್ದಾರೆ. ಇದಕ್ಕೆ ತಂಡ ರಚಿಸಲಾಗುವುದು. ರಾಜಕೀಯ ಸಭೆ, ಸಮಾರಂಭಗಳನ್ನು ಮಾರ್ಗಸೂಚಿ ಅನ್ವಯ ಮಾಡಬೇಕಿದೆ. ಇಲ್ಲದಿದ್ದಲ್ಲಿ ನಾವೆಲ್ಲರೂ ನೈತಿಕ ಹೊಣೆ ಹೊರಬೇಕಾಗುತ್ತದೆ. ಈ ಕುರಿತು ಚುನಾವಣಾ ಆಯುಕ್ತರಿಗೆ ಕೋರಲಾಗಿದೆ ಎಂದು ಸಚಿವ ಸುಧಾಕರ್ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News