ಶತಾಯುಷಿ ಹುಸೇನ್ ಸಾಹೇಬ್ ನಿಧನ

Update: 2021-04-19 17:12 GMT

ಕುಂದಾಪುರ ಎ 19: ಉಪನಗರ ಕೋಟೇಶ್ವರದಲ್ಲಿ ಸುದೀರ್ಘ ಕಾಲದಿಂದ ಹೂವಿನ ವ್ಯಾಪಾರ ನಡೆಸುತ್ತಾ ಹೂವಿನ ಸಾಯಿಬ್ರು ಎಂದೇ ಜನಾನುರಾಗಿಗಳಾಗಿದ್ದ ಶತಾಯುಷಿ ಹುಸೇನ್ ಸಾಹೇಬ್ ಸೋಮವಾರ ಬೀಜಾಡಿ ಗ್ರಾಮದ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 101 ವರ್ಷ ವಯಸ್ಸಾಗಿತ್ತು. ಕಲ್ಯಾಣೋತ್ಸವಗಳು, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವ ಕೋಟೇಶ್ವರದಲ್ಲಿ ಎಲ್ಲಾ ಸಮಾರಂಭಗಳು, ದೇವಾಲಯಗಳಿಗೆ, ಅಲಂಕಾರಕ್ಕೆ ಅವಶ್ಯವಿರುವ ಹೂವು, ವಿಭಿನ್ನ ವಿನ್ಯಾಸದ ಹೂ ಮಾಲೆಗಳನ್ನು ಕ್ಪ್ತಲ ಸಮಯದಲ್ಲಿ ಪೂರೈಸುತ್ತಿದ್ದ ಹುಸೇನರು, ಎಲ್ಲಾ ವರ್ಗದ ಜನರ ಪ್ರೀತಿ - ವಿಶ್ವಾಸಕ್ಕೆ ಪಾತ್ರರಾಗಿದ್ದರು. ಹುಸೇನರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಹಿತೈಷಿಗಳನ್ನು ಅಗಲಿದ್ದಾರೆ. ಅವರ ನಿಧನದ ವಾರ್ತೆ ತಿಳಿಯುತ್ತಿದ್ದಂತೆಯೇ ಸ್ಥಳೀಯ ಶ್ರೀ ಕೋಟಿಲಿಂಗೇಶ್ವರ ದೇವಳದ ಮಾಜಿ ಧರ್ಮದರ್ಶಿ ಮಾರ್ಕೊಡು ಗೋಪಾಲಕೃಷ್ಣ ಶೆಟ್ಟಿ, ಶ್ರೀ ಮಹಾದೇವಿ ಮಾರಿಯಮ್ಮ ದೇವಾಲಯದ ಅರ್ಚಕ ಸುರೇಶ್ ಜೋಗಿ, ಜಿ ಎಸ್ ಬಿ ಸಮುದಾಯದ ಮುಖಂಡರು, ಅಭಿಮಾನಿಗಳು ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ