ಬೆಳದಿಂಗಳ ಪ್ರೀತಿ ಪಸರಿಸುವ ಪನ್ನೀರು

Update: 2021-04-24 19:30 GMT

ಹನಿಗವಿತೆ ಇಂದು ಅತ್ಯಂತ ಜನಪ್ರಿಯತೆ ಪಡೆದಿರುವ ಸಾಹಿತ್ಯದ ಪ್ರಕಾರಗಳಲ್ಲಿ ಒಂದು. ಮೂರೇ ಮೂರು ಸಾಲುಗಳಲ್ಲಿ ಓದುಗರ ಮೊಗದಲ್ಲಿ ನಗೆಯರಳಿಸುವ, ಅಗಾಧ ಅರ್ಥವನ್ನು ಹೊಮ್ಮಿಸುವ, ವ್ಯವಸ್ಥೆಯ ವಿರುದ್ಧ ಪ್ರತಿಭಟನೆಯ ಅಸ್ತ್ರದ ತರಹ ಕೆಲಸ ಮಾಡುವ ಹನಿಗವಿತೆ, ಬಹಳಷ್ಟು ಬರಹಗಾರರ ಇಷ್ಟದ ಆಯ್ಕೆಯೂ ಆಗಿದೆ. ಚುಟುಕುಗಳೆಂದರೆ ಮೂಗು ಮುರಿಯುವ ಸಾಹಿತ್ಯಿಕ ವಲಯ ವಿತ್ತು. ಅದು ಕವಿತಾ ಪ್ರಕಾರವೇ ಅಲ್ಲ ಎಂದು ವಾದಕ್ಕಿಳಿಯುವ ಸಾಹಿತಿಗಳಿದ್ದರು. ಆದರೀಗ ಮೂಗು ಮುರಿದವರೇ ಮಸ್ತಕದ ಮೇಲೆ ಹೊತ್ತು ಮೆರೆಯುವ ಕಾಲ ಬಂದಿದೆ. ಅತ್ಯಂತ ದೀರ್ಘವಾದ ಕತೆ, ಕವಿತೆ, ಕಾದಂಬರಿ ಓದು ವಷ್ಟು ಸಮಯ ಯಾರ ಬಳಿಯಿದೆ ಹೇಳಿ? ಪತ್ರಿಕೆಯ ಯಾವುದೇ ಒಂದು ಮೂಲೆಯಲ್ಲಿ ಸುಲಭವಾಗಿ ಜಾಗ ಗಿಟ್ಟಿಸುವ, ಓದುಗರ ಗಮನ ಸೆಳೆಯುವ ತಾಕತ್ತು ಈ ಹನಿಗವಿತೆಗಿದೆ.

ಮಕ್ಕಳ ಸಾಹಿತಿ ಎಂದೇ ಗುರುತಿಸಿಕೊಳ್ಳುವ ಬಹುಮುಖ ಪ್ರತಿಭೆಯ, ವೃತ್ತಿಯಿಂದ ಅಧ್ಯಾಪಕರಾಗಿರುವ ಪರಮೇಶ್ವರಪ್ಪಕುದರಿ ‘ಪನ್ನೀರು’ ಎಂಬ ಹನಿಗವಿತೆಗಳ ಸಂಕಲನ ಹೊರತಂದಿದ್ದಾರೆ. ಬದುಕಿನ ಹಲವು ಮಗ್ಗಲುಗಳನ್ನು ದರ್ಶಿಸುವ 300 ಹನಿಗಳು ಈ ಸಂಕಲನದಲ್ಲಿವೆ. ಬೆನ್ನುಡಿಯ ಮಾತುಗಳನ್ನಾಡಿರುವ ವೈ. ಬಿ. ಎಚ್. ಜಯದೇವ್ ಹೇಳಿರುವ ಹಾಗೆ ‘‘ಪನ್ನೀರು ಮಧುರ ಭಾವಗಳ ಸಿಂಚನದ ಜೇನ್ಕೊಡ. ಇಲ್ಲಿ ಬೆಳದಿಂಗಳ ಪ್ರೀತಿಯಿದೆ. ಬಿಸಿಯುಸಿ ರಿನ ತಹತಹವಿದೆ. ತಣ್ಣಗೆ ಉರಿಯುವ ಹಣತೆಗಳಿವೆ. ಲಾವಾರಸ ಸಿಡಿಸುವ ಜ್ವಾಲಾಮುಖಿಗಳೂ ಇವೆ. ಹಾಗೆಂದೇ ಇಲ್ಲಿನ ಹನಿಗಳು ಸೂಜಿಗಲ್ಲಿನಂತೆ ಓದುಗರನ್ನು ಸೆಳೆದುಕೊಳ್ಳುವ ತಾಕತ್ತನ್ನು ಒಳಗೊಂಡಿವೆ.’’ ಡುಂಡಿರಾಜ್ ಹೇಳುವ ಹಾಗೆ ಹನಿಗವಿತೆಗಳನ್ನು ಸಹಜವಾಗಿ ಬರೆದರೆ ಕಾವ್ಯಮಯ. ಒತ್ತಾಯದಿ ಬರೆದರೆ ಕಾವ್ಯ ಮಾಯ! ಇಂದಿನ ಬಹಳಷ್ಟು ಬರಹಗಾರರು ಈ ಮಾತನ್ನು ಗಮನಿಸಬೇಕಿದೆ. ಕುದರಿ ಅವರ ಪನ್ನೀರಿನಲ್ಲಿ ಸಹಜವಾಗಿ ಅರಳಿನಿಂತ ಕಾವ್ಯಕುಸುಮಗಳನ್ನು ಕಾಣಬಹುದು.

ನಮ್ಮ ಬದುಕಿನ ಶಿಲುಬೆಯನ್ನು ನಾವೇ ಹೊರಬೇಕು. ಕಷ್ಟವೋ, ಸುಖವೋ ಅತ್ತು-ನಕ್ಕು ನಾವೇ ಹಗುರಾಗಬೇಕು. ಇನ್ನೊಬ್ಬರ ಹೆಗಲ ಬಯಸಿ, ಅತಿಯಾದ ನಿರೀಕ್ಷೆ ಇಟ್ಟುಕೊಂಡೆವೋ ಭ್ರಮನಿರಸನ ಆಗುವುದಂತೂ ನಿಶ್ಚಿತ. ಅದಕ್ಕೆ ದಾಸರು ಹೇಳಿಲ್ಲವೇ? ಯಾರಿಗೆ ಯಾರುಂಟು ಎರವಿನ ಸಂಸಾರ ಎಂದು. ನಮ್ಮೆಳಗಿನ ಆತ್ಮಬಲವೇ ನಮ್ಮನ್ನು ಕಾಯುವುದು ಕೊನೆಯವರೆಗೆ. ನಿನ್ನ ಕಣ್ಣುಗಳಲ್ಲಿ ಇಣುಕುವ ನೋವಿಗೆ ಮಿಡಿಯುವ ಯಾವ ಹೃದಯಗಳು ಇಲ್ಲಿಲ್ಲ. ಸುಮ್ಮನೆ ಕಣ್ಣೀರು ಕೆಡವಬೇಡ, ಬಿರಿದು ಕರಗುವ ಯಾವ ಬಂಡೆಗಲ್ಲು ಇಲ್ಲಿಲ್ಲ ಎನ್ನುವ ಹಾಗೆ ಪರಮೇಶ್ವರಪ್ಪ‘ಆತ್ಮಸಾಕ್ಷಿ’ ಎನ್ನುವ ಹನಿಗವಿತೆಯಲ್ಲಿ ಕುಸಿದು ಕೂತವರಿಗೆ ತೋಳ ತಬ್ಬುವ ಆತ್ಮಬಲದ ಸಾಥ್ ನೀಡುತ್ತಾರೆ.

ಧೈರ್ಯದಿಂದ ಹೋರಾಡೋಣ
ಕೊನೆ ಉಸಿರಿರುವತನಕ!
ಯಾರು ಜೊತೆಗಿರಲಿ ಬಿಡಲಿ
ಆತ್ಮಸಾಕ್ಷಿಯೊಂದು ಅಸ್ತ್ರವಾಗಿರಲಿ
ಬದುಕಿರುವತನಕ!

ನಮ್ಮನ್ನು ತೊರೆದು ಹೋದವರನ್ನು ಶಪಿಸುತ್ತಾ ಕೂತರೆ ಅವರು ಸಾಯಲಿ ಎಂದು ನಾವೇ ನಿತ್ಯ ವಿಷ ಸೇವಿಸಿದಂತೆ. ತೊರೆದು ಹೋದವರು ದಿವಿನಾಗಿರಲಿ ಎಂಬ ಹಾರೈಕೆಯೇ ನಮ್ಮ ಬದುಕಿಗೆ ಶ್ರೀರಕ್ಷೆ. ನಮ್ಮ ಜೊತೆಗಿರುವಷ್ಟು ದಿನವಾದರೂ ಅವರು ನಮಗೆ ಖುಷಿ ನೀಡಿ ಹೋದರಲ್ಲ, ಹಾಗಾಗಿ ಕೃತಜ್ಞತೆ ಸಲ್ಲಿಸುವ ಉದಾರ ಮನಸ್ಥಿತಿ ನಮ್ಮದಾಗಿರಬೇಕು ಎನ್ನುತ್ತದೆ ‘ಧನ್ಯವಾದ’ ಎನ್ನುವ ಹನಿಗವಿತೆ.

ಪ್ರೀತಿಯ ಮನಸೇ
ನನ್ನದೊಂದು ಭಿನ್ನಹ
ಮರೆತು ಹೋದವರ ಬಗ್ಗೆ
ನೀನು ಚಿಂತಿಸಬೇಡ!
ಇದ್ದಷ್ಟು ದಿನ
ಅವರು ನೀಡಿದ
ಸಂತೋಷಕ್ಕೆ ಧನ್ಯವಾದ ತಿಳಿಸು!

‘‘ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ’’ ಎಂದು ಕೋರಿಕೊಂಡರು ಕವಿ ಈಶ್ವರ ಸಣಕಲ್ಲ. ಜಗತ್ತಿನ ಖುಷಿಗಾಗಿ ಮಿಡಿಯುವುದು ಕವಿಯ ಕರ್ತವ್ಯ ಕೂಡ. ನೋವ ನುಂಗಿ ನಗುವ ಚಿಮ್ಮಿಸಿದಾಗಲೇ ಬದುಕಿಗೊಂದು ಅರ್ಥ. ಈ ನಗುವಿನ ಸಂತೆಯಲ್ಲಿ ದುಃಖ ಮಾರ ಹೊರಟರೆ ಕೊಳ್ಳುವ ವರಾರು ಹೇಳಿ? ಆದ್ದರಿಂದಲೇ ಇದಿರಾದ ಪ್ರತಿ ಜೀವಕೂ ದುಃಖ ಮರೆಮಾಚಿ ನಗು ಹಂಚುತ್ತಿರಬೇಕು. ಅಂತಹ ಶಕ್ತಿಯನ್ನು ನಮಗೆ ಕರುಣಿಸು ಎಂದು ಆ ವಿಶ್ವಾತ್ಮನಲ್ಲಿ ಸದಾ ಮೊರೆಯಿಡುತ್ತಿರಬೇಕು ಎಂಬುದನ್ನು ‘ನಗುವ ಶಕ್ತಿ’ ಕವಿತೆ ಪ್ರತಿಬಿಂಬಿಸುತ್ತದೆ.

ಎಲ್ಲ ನೋವೂ ನನ್ನೊಳಗಿರಲಿ
ಹೊರ ಜಗತ್ತಿಗೆ ನನ್ನ ನಗುವೊಂದೇ ಕಾಣಲಿ!
ಓ ದೇವ ನೋವು ನುಂಗಿ
ನಗುವ ಶಕ್ತಿಯ ಕೊಡುತಿರು

ಜೀವನ ಪರ್ಯಂತ! ಜಗತ್ತನ್ನು ಬಿಡದೆ ಕಾಡುತ್ತಿರುವ ಕೊರೋನ ಎಂಬ ಸೂಕ್ಷ್ಮ್ಮಾಣು ಜೀವಿಯ ಮುಂದೆ ಇಡೀ ಲೋಕವೇ ಮಂಡಿಯೂರಿ ಕುಳಿತಿದೆ. ನಮ್ಮ ಸ್ವಾರ್ಥ, ನಿಸರ್ಗದ ಮೇಲಿನ ದೌರ್ಜನ್ಯ ಈ ಸ್ಥಿತಿಗೆ ಕಾರಣ ಎಂಬುದು ತಿಳಿದ ಸಂಗತಿ. ಮನುಷ್ಯನ ಅಸಹಾಯಕತೆ, ಸಣ್ಣತನಗಳೆಲ್ಲ ಅನಾವರಣವಾಗುತ್ತಿರುವ ಆತಂಕದ ಸನ್ನಿವೇಶವಿದು. ಬದುಕನ್ನು ಒಪ್ಪಿಸಿಕೊಂಡು ಹೋಗುವುದೇ ಇಂದಿನ ಬಹುಮುಖ್ಯ ಸವಾಲು. ಇಂತಹ ಸಂದಿಗ್ಧ ಸ್ಥಿತಿಗೆ ಕನ್ನಡಿ ಹಿಡಿದಂತೆ ಮೂಡಿ ಬಂದ ಕವಿತೆಯೊಂದು ಇಲ್ಲಿದೆ.

ಬಹಳ ಸದ್ದು ಮಾಡುತಿಹುದು
ಕೊರೋನ ಎಂಬ ಮಾಯೆ
ಮನೆಯಲ್ಲಿ ಇರಿ ಎಂಬುದು
ಅದರ ಸೂತ್ರ!
ಅರಿತು ಅಳವಡಿಸಿಕೊಂಡರೆ
ನಮ್ಮೆಲ್ಲರ ಭಾವೀ ಬದುಕು ಸೂಸೂತ್ರ!
ಇಲ್ಲವಾದರೆ ಬದುಕು ಅತಂತ್ರ!!

‘‘ನಿನ್ನ ನೆನಪಲ್ಲಿ ನಾನು ಸುಟ್ಟು ಬೂದಿ ಆದಾಗಲೇ ತಿಳಿಯಿತು ಎಲ್ಲ ಬೆಂಕಿಯನ್ನೂ ನೀರು ಆರಿಸಲಾರದೆಂದು’’ ಹೀಗೆ ಪ್ರೀತಿ ಪ್ರೇಮಗಳ ಕುರಿತಾಗಿಯೇ ಇರುವ ಸಂಕಲನದ ಬಹುಪಾಲು ಹನಿಗವಿತೆಗಳು ವಿಷಾದಭಾವ ಮೂಡಿಸುತ್ತವೆ. ಬದುಕಿನ ಅಂತಿಮ ಸತ್ಯವನ್ನು ಮನಗಾಣಿಸುತ್ತವೆ. ಸಾಗುವ ಬಾಳ ಹಾದಿಗೆ ಅರಿವಿನ ದೀವಿಗೆ ಹೊತ್ತಿಸಿ ದಡ ಸೇರಿಸುವ, ಗುರಿ ತಲುಪಿಸುವ ಧನ್ಯತೆಯನ್ನೂ ಇಲ್ಲಿನ ಹನಿಗವಿತೆಗಳು ಮಾಡುತ್ತವೆ.

Similar News