ಮಂಗಳವಾರದಿಂದ 15 ದಿನಗಳ ಕಾಲ ರಾಜ್ಯಾದ್ಯಂತ ಕೊರೋನ ಕರ್ಫ್ಯೂ: ಸಿಎಂ ಯಡಿಯೂರಪ್ಪ

Update: 2021-04-26 17:56 GMT

ಬೆಂಗಳೂರು, ಎ. 26: `ಕೋವಿಡ್-19 ಸೋಂಕಿನ ಎರಡನೆ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾಳೆ(ಎ.27)ಯಿಂದ ಹದಿನೈದು (15) ದಿನಗಳ ಕಾಲ (ಮೇ 12ರ ಬೆಳಗ್ಗೆ 6 ಗಂಟೆಯ ವರೆಗೆ) ರಾಜ್ಯಾದ್ಯಂತ ಸಂಪೂರ್ಣ ಕೊರೋನ ಕರ್ಫ್ಯೂ ಜಾರಿ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಂಪುಟ ಸಹೋದ್ಯೋಗಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಬೆಳಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಹಾಲು, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಲಾಗುವುದು. ನಾಳೆ ರಾತ್ರಿ 9 ಗಂಟೆಯಿಂದ ನೈಟ್‍ಕರ್ಫ್ಯೂ ಜಾರಿಯಲ್ಲಿರಲಿದ್ದು, ಮೇ 12ರ ಬೆಳಗ್ಗೆ 6 ಗಂಟೆಯ ವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ' ಎಂದು ಘೋಷಿಸಿದರು.

ಬೆಳಗ್ಗೆ 10ಗಂಟೆಯ ಬಳಿಕ ವ್ಯಾಪಾರಸ್ಥರು ಪೊಲೀಸರ ಮಧ್ಯಪ್ರವೇಶ, ಬಲಪ್ರಯೋಗಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ತಮ್ಮ ಎಲ್ಲ ರೀತಿಯ ವಹಿವಾಟನ್ನು ಸ್ಥಗಿತಗೊಳಿಸುವ ಮೂಲಕ ಲಾಕ್‍ಡೌನ್‍ಗೆ ಸಹಕಾರ ನೀಡಬೇಕು. ಸಾರ್ವಜನಿಕರು ಯಾವುದೇ ಕಾರಣಕ್ಕೂ ಮನೆಗಳಿಂದ ಹೊರಗೆ ಬರಬಾರದು. ಈ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಮಾರ್ಗಸೂಚಿಯನ್ನು ಹೊರಡಿಸಲಿದ್ದಾರೆ' ಎಂದು ಯಡಿಯೂರಪ್ಪ ವಿವರಣೆ ನೀಡಿದರು.

ಸಾರಿಗೆ ಸಂಪೂರ್ಣ ಬಂದ್: `ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ), ಮೆಟ್ರೋ ಸಹಿತ ಯಾವುದೇ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಸಂಪೂರ್ಣ ಲಾಕ್‍ಡೌನ್ ಘೋಷಣೆ ಮಾಡಿರುವ ಸಂದರ್ಭದಲ್ಲಿ ಜನರೇ ಹೊರಗೆ ಬರುವುದಿಲ್ಲ ಎಂದರೆ ಸಾರಿಗೆ ವ್ಯವಸ್ಥೆ ಒದಗಿಸದರೆ ಜನರು ಎಲ್ಲಿಂದ ಬರುತ್ತಾರೆ' ಎಂದು ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನಿಸಿದರು.

ಉತ್ಪಾದನೆ, ನಿರ್ಮಾಣ, ಕೃಷಿ ಚಟುವಟಿಕೆಗೆ ಅವಕಾಶ: `ಗಾರ್ಮೆಂಟ್ಸ್(ಸಿದ್ಧ ಉಡುಪು ಕಾರ್ಖಾನೆಗಳು ಬಂದ್) ಹೊರತುಪಡಿಸಿ ಉತ್ಪಾದನೆ, ಕಟ್ಟಡ ನಿರ್ಮಾಣ, ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಹಣ್ಣು, ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಅಂತರರಾಜ್ಯ ಗೂಡ್ಸ್ ವಾಹನಗಳ ಸಂಚಾರ ಅಭಾದಿತ. ಉಳಿದಂತೆ ಎಲ್ಲ ಚಟುವಟಿಕೆಗಳು ಮತ್ತು ವಹಿವಾಟಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ' ಎಂದು ಯಡಿಯೂರಪ್ಪ ತಿಳಿಸಿದರು.

ಅಧಿಕಾರಿಗಳಿಗೆ ಹೊಣೆ: `ಕೋವಿಡ್-19 ಸೋಂಕಿನ ಎರಡನೆ ಅಲೆ ನಿಯಂತ್ರಣಕ್ಕೆ ಹೇರಿರುವ ನಿರ್ಬಂಧವನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ, ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಜೊತೆಗೆ ಮೇಲ್ಕಂಡ ಅಧಿಕಾರಿಗಳು ನೋಡಲ್ ಅಧಿಕಾರಿಗಳಾಗಿರುತ್ತಾರೆ. ಕೋವಿಡ್ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು' ಎಂದು ಯಡಿಯೂರಪ್ಪ ಇದೇ ವೇಳೆ ನಿರ್ದೇಶನ ನೀಡಿದರು.

ಮಹಾರಾಷ್ಟ್ರ ಮೀರಿಸುತ್ತಿದೆ: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿನ ಪರಿಸ್ಥಿತಿ ಮಹಾರಾಷ್ಟ್ರ ರಾಜ್ಯವನ್ನು ಮೀರಿಸುತ್ತಿದ್ದು, ಪ್ರತಿನಿತ್ಯ 20 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಸಂಪುಟದ ಎಲ್ಲ ಸಹೋದ್ಯೋಗಿಗಳೊಂದಿಗೆ ಹಾಗೂ ಕೋವಿಡ್ ನಿಯಂತ್ರಣ ಸಂಬಂಧದ ತಜ್ಞರ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ರಾಜ್ಯಾದ್ಯಂತ ಸಂಪೂರ್ಣ ಕರ್ಫ್ಯೂ ವಿಧಿಸಲು ನಿರ್ಧರಿಸಲಾಗಿದೆ ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

ಆಕ್ಸಿಜನ್ ಕೊರತೆ ಇಲ್ಲ: ಕೇಂದ್ರದಿಂದ 800 ಟನ್ ಆಕ್ಸಿಜನ್ ಪೂರೈಕೆಗೆ ಅನುಮತಿ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿಯೂ ಆಕ್ಸಿಜನ್ ಕೊರತೆ ಉಂಟಾಗುವುದಿಲ್ಲ. ಅಲ್ಲದೆ, 1.22 ಲಕ್ಷ ರೆಮ್‍ಡಿಸಿವಿರ್ ಚುಚ್ಚುಮದ್ದು ರಾಜ್ಯಕ್ಕೆ ಕೇಂದ್ರ ಸರಕಾರ ಒದಗಿಸಲಿದೆ. ಹೀಗಾಗಿ ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಆತಂಕಗೊಳ್ಳುವ ಅಗತ್ಯವಿಲ್ಲ' ಎಂದು ಯಡಿಯೂರಪ್ಪ ಇದೇ ವೇಳೆ ಅಭಯ ನೀಡಿದರು.

ಆರು ತಿಂಗಳು ಎಲ್ಲ ಚುನಾವಣೆ ಮುಂದೂಡಿಕೆ: `ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ದೃಷ್ಟಿಯಿಂದ ರಾಜ್ಯದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಸೇರಿ ಹತ್ತು ನಗರ ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಸೇರಿದಂತೆ ಇನ್ನೂ ಆರು ತಿಂಗಳು ಯಾವುದೇ ಚುನಾವಣೆಗಳನ್ನು ನಡೆಸದಂತೆ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ' ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

-ಎ.27ರ ರಾತ್ರಿ 9ಗಂಟೆಯಿಂದ ರಾಜ್ಯಾದ್ಯಂತ 15 ದಿನಗಳ ಕಾಲ ಮೇ 12ರ ಬೆಳಗ್ಗೆ 6ಗಂಟೆಯ ವರೆಗೆ ಕೋವಿಡ್ ಕರ್ಫ್ಯೂ, ಕಟ್ಟುನಿಟ್ಟಿನ ನಿರ್ಬಂಧನೆ ಜಾರಿ

ಏನಿರಲಿದೆ

-ನಾಳೆ(ಎ.27)ಯಿಂದ ಪ್ರತಿನಿತ್ಯ ಬೆಳಗ್ಗೆ 6ಗಂಟೆಯಿಂದ 10 ಗಂಟೆಯ ವರೆಗೆ ಹಾಲು, ತರಕಾರಿ, ಹಣ್ಣು-ಹಂಪಲು, ದಿನಸಿ ಸಹಿತ ಅಗತ್ಯ ವಸ್ತುಗಳ ಖರೀದಿಗೆ ಕೊರೋನ ಕರ್ಫ್ಯೂವಿನಿಂದ ವಿನಾಯಿತಿ. ತುರ್ತು ಅಗತ್ಯತೆಗೆ ಆಸ್ಪತ್ರೆ ಸಹಿತ ಇನ್ನಿತರ ಸೇವೆಗಳ ವಾಹನ ಸಂಚಾರಕ್ಕೆ ಮುಕ್ತ ಅವಕಾಶವಿದೆ.

-ಕಟ್ಟಡ ನಿರ್ಮಾಣ, ಉತ್ಪಾದನಾ ವಲಯ(ಗಾರ್ಮೆಂಟ್ಸ್ ಹೊರತುಪಡಿಸಿ), ಸರಕು ಸಾಗಾಣೆ, ಕೃಷಿ ಚಟುವಟಿಕೆಗಳಿಗೆ ಅವಕಾಶ

-ಹೊಟೇಲ್, ಬಾರ್ ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ, ಬ್ಯಾಂಕ್, ಎಟಿಎಂ, ಕಂದಾಯ ಕಚೇರಿಗಳ ಕಾರ್ಯನಿರ್ವಹಣೆಗೆ ಅನುಮತಿ

-ಅಗತ್ಯ ಸೇವೆಗಳಾದ ಹಾಲು, ಆಸ್ಪತ್ರೆ, ಆಂಬುಲೆನ್ಸ್, ಔಷಧಾಲಯಗಳು, ಮಾಧ್ಯಮ ಕಚೇರಿಗಳು ಕಾರ್ಯನಿರ್ವಹಣೆಗೆ ಯಾವುದೇ ನಿರ್ಬಂಧವಿಲ್ಲ

-ಕೃಷಿ ಉತ್ಪಾದನೆಗಳು ಹಣ್ಣು, ತರಕಾರಿ ಸಹಿತ ಅಂತರ ರಾಜ್ಯ ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

-ವಿಮಾನ ಮತ್ತು ರೈಲು ಸೇವೆ ಎಂದಿನಂತೆ ಇರಲಿದೆ.

ಏನಿರುವುದಿಲ್ಲ:

-ಕೆಎಸ್ಸಾರ್ಟಿಸಿ, ಬಿಎಂಟಿಸಿ, ಮೆಟ್ರೋ ರೈಲು ಸಂಚಾರ ಹದಿನೈದು ದಿನಗಳ ಸಂಪೂರ್ಣ ನಿಷೇಧಿಸಲಾಗಿದೆ. ಬೆಳಗ್ಗೆ 6ಗಂಟೆಯಿಂದ 10 ಗಂಟೆಯ ಬಳಿಕ ದಿನಸಿ ಅಂಗಡಿಗಳ ಸಹಿತ ಎಲ್ಲ ರೀತಿಯ ವಾಣಿಜ್ಯ ಮಳಿಗೆಗಳು, ಅಂಗಡಿ-ಮುಂಗಟ್ಟುಗಳ ಸಂಪೂರ್ಣ ಬಂದ್ ಆಗಿರಲಿವೆ.

-ಆಟೋರಿಕ್ಷಾ, ಟ್ಯಾಕ್ಸಿ, ಕ್ಯಾಬ್‍ಗಳು ಸಹಿತ ಯಾವುದೇ ಸಾರಿಗೆ ಸಂಚಾರ ಇರುವುದಿಲ್ಲ. ತುರ್ತು ಅಗತ್ಯಕಷ್ಟೇ ಸ್ವಂತ ವಾಹನಗಳನ್ನು ಬಳಕೆ ಮಾಡಿ ಸಂಚಾರ ಮಾಡಬಹುದು. ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸಿದರೆ ಪೊಲೀಸರು ತಮ್ಮ ವಾಹನಗಳನ್ನು ಸೀಝ್ ಮಾಡಲಿದ್ದಾರೆ. ಅಲ್ಲದೆ, ಕೋವಿಡ್ ನಿಯಮ ಉಲ್ಲಂಘನೆಯಡಿ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆಂದು ಎಚ್ಚರಿಕೆ ನೀಡಲಾಗಿದೆ.

ಪ್ರತ್ಯೇಕ ಮಾರ್ಗಸೂಚಿ

ವಿಧಾನಸೌಧ ಮತ್ತು ವಿಕಾಸಸೌಧಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗಾಗಿ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News