ಹಜ್ ಭವನದಲ್ಲಿ ಕೋವಿಡ್ ಚಿಕಿತ್ಸೆಗೆ 450 ಹಾಸಿಗೆ ವ್ಯವಸ್ಥೆ: ಶಾಸಕ ಎಸ್.ಆರ್.ವಿಶ್ವನಾಥ್

Update: 2021-04-28 16:16 GMT

ಬೆಂಗಳೂರು, ಎ.28: ಯಲಹಂಕ ವಲಯ ವ್ಯಾಪ್ತಿಯಲ್ಲಿರುವ ಹಜ್ ಭವನವನ್ನು ಕೋವಿಡ್-19 ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ 450 ಜನರಿಗೆ ಏಕಕಾಲಕ್ಕೆ ಚಿಕಿತ್ಸೆ ನೀಡಲು ಹಾಸಿಗೆ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಯಲಹಂಕ ಕ್ಷೇತ್ರದ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದರು.

ಬುಧವಾರ ಯಲಹಂಕದ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕ್ಷೇತ್ರದಲ್ಲಿ ಸಾರ್ವಜನಿಕರು ಕೋವಿಡ್-19 ನಿಂದ ಸಂಕಷ್ಟಕ್ಕೆ ಒಳಗಾಗಬಾರದು ಎಂಬ ದೃಷ್ಟಿಯಿಂದ ಸರಕಾರ ಕೈಗೊಂಡಿರುವ ಕ್ರಮಗಳ ಜತೆಯಲ್ಲಿ ನಮ್ಮ ವಿಶ್ವವಾಣಿ ಫೌಂಡೇಷನ್ ಕೈಜೋಡಿಸಿದೆ ಎಂದರು.

ವೈದ್ಯರ ಕೊರತೆಯನ್ನು ನೀಗಿಸುವ ಸಲುವಾಗಿ ಮೂರು ತಿಂಗಳ ಮಟ್ಟಿಗೆ ಖಾಸಗಿ ವೈದ್ಯರನ್ನು ನಿಯೋಜನೆ ಮಾಡಿಕೊಂಡು ಚಿಕಿತ್ಸೆ ಕೊಡಿಸಲಾಗುತ್ತದೆ. ಈ ಅವಧಿಯಲ್ಲಿ ವೈದ್ಯರಿಗೆ ಫೌಂಡೇಷನ್ ವತಿಯಿಂದಲೇ ವೇತನವನ್ನು ನೀಡಲಾಗುತ್ತದೆ ಎಂದು ವಿಶ್ವನಾಥ್ ತಿಳಿಸಿದರು.

ಕೋವಿಡ್-19 ಸೋಂಕು ಪೀಡಿತರ ಕುಟುಂಬಗಳು ಹಸಿವಿನಿಂದ ಬಳಲುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಫೌಂಡೇಷನ್ ದಿನಸಿ ಪದಾರ್ಥಗಳನ್ನು ವಿತರಣೆ ಮಾಡುತ್ತಿದೆ. ಕ್ಷೇತ್ರದ ಯಾವುದೇ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಎದುರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಆಮ್ಲಜನಕವನ್ನು ವಿತರಿಸುವಂತೆ ವ್ಹೀಲ್ ಅಂಡ್ ಆಕ್ಸೆಲ್ ಕಂಪನಿಯೊಂದಿಗೆ ನಡೆಸಿದ ಮಾತುಕತೆ ಸಫಲವಾಗಿದೆ ಎಂದು ಅವರು ಹೇಳಿದರು.

ಇದರನ್ವಯ ಕಂಪನಿಯು ಕ್ಷೇತ್ರದ ಎಲ್ಲ ಆಸ್ಪತ್ರೆಗಳಿಗೆ ಉಚಿತವಾಗಿ ಆಮ್ಲಜನಕವನ್ನು ಪೂರೈಕೆ ಮಾಡುವ ಭರವಸೆ ನೀಡಿದೆ ಮತ್ತು ಪೂರೈಕೆಗೆ ಬೇಕಾಗುವ ಕನ್ವರ್ಟರ್ ವಾಹನವನ್ನು ತನ್ನದೇ ಖರ್ಚಿನಲ್ಲಿ ಖರೀದಿಸಲು ನಿರ್ಧರಿಸಿದೆ. ಮೂರ್ನಾಲ್ಕು ದಿನಗಳಲ್ಲಿ ಆಸ್ಪತ್ರೆಗಳಿಗೆ ಉಚಿತವಾಗಿ ಆಮ್ಲಜನಕವನ್ನು ಪೂರೈಕೆ ಮಾಡಲಿದೆ ಎಂದು ವಿಶ್ವನಾಥ್ ಹೇಳಿದರು.

ಅದೇ ರೀತಿ, ಫೆಡರಲ್ ಮೊಘಲ್ ಸಂಸ್ಥೆಯೊಂದಿಗೂ ಮಾತುಕತೆ ನಡೆಸಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಗೆ ಅಗತ್ಯವಿರುವ ಸಲಕರಣೆಗಳನ್ನು ಉಚಿತವಾಗಿ ಒದಗಿಸುವಂತೆ ಮನವಿ ಮಾಡಲಾಗಿದ್ದು, ಸಂಸ್ಥೆಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು.

ಸರಕಾರಿ ಆಸ್ಪತ್ರೆಯಲ್ಲಿ 7 ವೆಂಟಿಲೇಟರ್ ಗಳನ್ನು ಅಳವಡಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಇನ್ನೂ ಮೂರು ವೆಂಟಿಲೇಟರ್ ಗಳನ್ನು ಅಳವಡಿಸಿ, ಇಂಟೆನ್ಸಿವ್ ಕೇರ್ ಯೂನಿಟ್‍ಗಳನ್ನು ಸುಸಜ್ಜಿತಗೊಳಿಸಲಾಗುತ್ತಿದೆ. ಸರಕಾರದಿಂದ ಸೋಂಕಿತರಿಗೆ ಔಷಧವನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News