ಚಳವಳಿಯ ಅಸಲಿ ಕಸಬುದಾರನ ವೃತ್ತಾಂತ ‘ಚಂದ್ರಶಿಕಾರಿ’

Update: 2021-04-28 19:30 GMT

ಅಕಾಲ ಮೃತ್ಯುವಿಗೀಡಾದ ಹೋರಾಟಗಾರ ಚಂದ್ರಶೇಖರ ತೋರಣಘಟ್ಟ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕೃತಿ ‘ಚಂದ್ರ ಶಿಕಾರಿ’. ಚಳವಳಿಯ ಅಸಲು ಕಸಬುದಾರರನ್ನು ಗುರುತಿಸುವ ಕೆಲಸವನ್ನು ಸಂಪಾದಕ ಕೈದಾಳ್ ಕೃಷ್ಣಮೂರ್ತಿ ಅವರು ಮಾಡಿದ್ದಾರೆ. ಚಳವಳಿಯ ಕಾಲ ಮುಗಿಯಿತೆಂದು ಸ್ವತಃ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಬರಹಗಾರರೇ ಕೈ ಕೊಡವಿ ವಿಶ್ರಾಂತಿ ಕೊಠಡಿ ಸೇರಿದ ಹೊತ್ತಿನಲ್ಲೇ ದೇಶಾದ್ಯಂತ ರಾಜಕೀಯ ಆಯಾಮಗಳಿರುವ ಬೇರೆ ಬೇರೆ ರೀತಿಯ ಚಳವಳಿಗಳು ನೆಲದಿಂದಲೇ ಪುಟಿದೆದ್ದವು. ಆದರೆ ಹಿರಿಯ ಕವಿಗಳಿಗೆ, ಲೇಖಕರಿಗೆ ವಿಶ್ರಾಂತಿ ಬೇಕಾಗಿದೆ. ಅವರು ಅದನ್ನು ಗುರುತಿಸುವ ಸ್ಥಿತಿಯಲ್ಲೂ ಇಲ್ಲ. ಈ ಹೋರಾಟಗಳನ್ನು ರಾಜಕೀಯ ಕನ್ನಡಕ ಧರಿಸಿ ನೋಡುವುದರಲ್ಲಷ್ಟೇ ಅವರು ಮಗ್ನರಾದರು. ಆ ಮೂಲಕ ಪರೋಕ್ಷವಾಗಿ ಪ್ರಭುತ್ವದ ಜೊತೆ ನಿಂತರು. ಇಂತಹ ಸಂದರ್ಭದಲ್ಲೂ ದೇಶದ ಸಹಸ್ರಾರು ಯುವಕರು ಈ ನೆಲದ ಪೌರತ್ವದ ಹಕ್ಕಿಗಾಗಿ, ರೈತರ ಉಳಿವಿಗಾಗಿ ಬೀದಿಗಿಳಿದಿದ್ದಾರೆ. ದೇಶಾದ್ಯಂತ ಭುಗಿಲೆದ್ದಿರುವ ಈ ಚಳವಳಿಗೆ ಕನ್ನಡದ ಮನಸ್ಸುಗಳೂ ಸ್ಪಂದಿಸಿವೆ. ಹೀಗೆ ಚಳವಳಿಯ ಕಾಲದ ಕುರಿತ ಕಾಳಜಿ ಮತ್ತು ಕೊರತೆಗಳ ಚರ್ಚೆಗಳ ನಡುವೆ, ಚಂದ್ರಶೇಖರ ತೋರಣಘಟ್ಟ ಅವರ ಹೋರಾಟದ ಬದುಕನ್ನು ನೆನೆಯುವ ಮೂಲಕ ವರ್ತಮಾನದ ಹೋರಾಟಕ್ಕೆ ಸ್ಫೂರ್ತಿ ತುಂಬುವ ಕೆಲಸವನ್ನು ‘ಚಂದ್ರ ಶಿಕಾರಿ’ ಮಾಡಿದೆ.

ಮೂರು ದಶಕಗಳ ಹೋರಾಟದ ಕಥನವನ್ನು ಕಟ್ಟಿಕೊಡುವ ಈ ಕೃತಿ, ಯುವ ತಲೆಮಾರಿಗೆ ಮಾರ್ಗದರ್ಶಿಯಾಗಿದೆ. ಚಂದ್ರಶೇಖರ ತೋರಣಘಟ್ಟರ ಬದುಕನ್ನಷ್ಟೇ ಅಲ್ಲದೆ, ಅವರ ಕಾಲದ ಹೋರಾಟಗಳ ಕಥನಗಳನ್ನು ಬೇರೆ ಬೇರೆ ಕಣ್ಣುಗಳಲ್ಲಿ ನಿರೂಪಿಸುವ ಪ್ರಯತ್ನವನ್ನು ಸಂಪಾದಕರು ಮಾಡಿದ್ದಾರೆ. ಕೃತಿಯಲ್ಲಿ ಒಟ್ಟು ಆರು ಅಧ್ಯಾಯಗಳಿವೆ. ಈ ಅಧ್ಯಾಯಗಳು ತೋರಣ ಘಟ್ಟ ಅವರ ಬದುಕಿನ ವಿವಿಧ ಹಂತಗಳನ್ನು ಬೇರೆ ಬೇರೆ ಲೇಖಕರು, ಹೋರಾಟಗಾರರ ಮೂಲಕ ತೆರೆದಿಡುತ್ತವೆ. ಮೊದಲ ಅಧ್ಯಾಯವನ್ನು ‘ಕರುಳ ಬಳ್ಳಿಯ ಕಥನ’ ಎಂದು ಕರೆದಿದ್ದಾರೆ. ತೋರಣಘಟ್ಟ ಅವರ ಕುಟುಂಬದ ಹೋರಾಟದ ಹಿನ್ನೆಲೆ, ಅದು ತೋರಣಘಟ್ಟರ ಮೇಲೆ ಬೀರಿದ ಪ್ರಭಾವಗಳನ್ನು ಈ ಅಧ್ಯಾಯ ವಿವರಿಸುತ್ತದೆ.

ಕೌಟುಂಬಿಕ ಹಿನ್ನೆಲೆಯನ್ನು ಅವರ ತಂದೆ ಕೃಷ್ಣಪ್ಪರ ಡೈರಿಯಿಂದ ಹೆಕ್ಕಿ ಬರೆಯಲಾಗಿದೆ. ತೋರಣಘಟ್ಟ ಅವರ ಬದುಕಿನಲ್ಲಿ ಆಗಿ ಹೋದ ಬಂಧುಗಳು, ಗೆಳೆಯರು ಬಾಲ್ಯವನ್ನು ಅತ್ಯಂತ ಆರ್ದ್ರವಾಗಿ ತೆರೆದಿಡುತ್ತಾರೆ. ‘ಯಶೋ ಸಾಂಗತ್ಯ’ ಇನ್ನೊಂದು ಪ್ರಮುಖ ಅಧ್ಯಾಯವಾಗಿದೆ. ಜೀವನ ಸಂಗಾತಿ ಯಶೋದಾ ಕಣ್ಣಲ್ಲಿ ತೋರಣಘಟ್ಟರನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಯಶೋದಾ ಕೂಡ ಓದುಗರ ಮನಸ್ಸಲ್ಲಿ ಗಾಢವಾಗಿ ಉಳಿಯುತ್ತಾರೆ. ಜೀವನಪ್ರೀತಿ, ಮಗ-ಗಂಡ ತೀರಿದಾಗ ಎದುರಿಸಿದ ವೇದನೆ, ಬಾಳನ್ನು ಸಂಭಾಳಿಸಿದ ಬಗೆ, ಅವರನ್ನು ಕೃತಿಯ ಪರೋಕ್ಷ ನಾಯಕಿಯಾಗಿಸಿದೆ.

‘‘ತನ್ನನ್ನೂ ಎಳೆಗೂಸನ್ನೂ ಸಿದ್ಧಾರ್ಥ ಬಿಟ್ಟು ಹೋದಾಗ ಯಶೋಧರ ಎದುರಿಸಿದ್ದಕ್ಕಿಂತ ಕಠಿಣವಾದ ಸವಾಲನ್ನು ಈ ಯಶೋದಾ ಎದುರಿಸಿದಂತಿದೆ’’ ಎಂದು ಹಿರಿಯ ಲೇಖಕ ಪ್ರೊ. ರಹಮತ್ ತರೀಕೆರೆ ಬರೆಯುತ್ತಾರೆ. ಜಮೀನ್ದಾರರ ವಿರುದ್ಧ, ವೌಢ್ಯಗಳ ವಿರುದ್ಧ, ಶೋಷಣೆಗಳ ವಿರುದ್ಧ ಕೋಮುವಾದಿಗಳ ವಿರುದ್ಧ, ರೈತ ವಿರೋಧಿ ಸರಕಾರದ ವಿರುದ್ಧ ನಿರಂತರ ಹೋರಾಡುತ್ತಾ ತನ್ನ ಬದುಕನ್ನು ಸಮರ್ಪಿಸಿಕೊಂಡ, ಒಂದು ರೀತಿಯಲ್ಲಿ ದುರಂತಗಳಿಗೆ ತನ್ನನ್ನು ತಾನೇ ತೆತ್ತುಕೊಂಡ ಚಂದ್ರಶೇಖರ ಅವರ ಕಥನಗಳ ಚೂರುಗಳು ನಮ್ಮನ್ನು ಬೆಂಕಿ ಕಿಡಿಯಂತೆ ಸುಡುತ್ತಾ ಹೋಗುತ್ತವೆ.

ಹೋರಾಟದ ಹಾದಿ ರೋಚಕವಾಗಿರುವುದಿಲ್ಲ. ಅದು ಕೃತಿಯಲ್ಲಿ ಓದಿದಂತೆ ರಮ್ಯವೂ ಅಲ್ಲ. ಒಂದು ರೀತಿಯಲ್ಲಿ ದೀಪದ ಬೆಳಕಿಗೆ ಹಾತೊರೆದು ಸುಟ್ಟುಕೊಳ್ಳುವ ಚಿಟ್ಟೆಯಂತಿರುತ್ತದೆ. ಸಾರ್ವಜನಿಕ ಹೋರಾಟದ ಸಂದರ್ಭದಲ್ಲಿ ವೈಯಕ್ತಿಕ ಬದುಕನ್ನು ಬಲಿಕೊಡಬೇಕಾದ ಅನಿವಾರ್ಯತೆಗಳನ್ನು ಓದುವಾಗ, ಹೋರಾಟದ ಕಲ್ಲು ಮುಳ್ಳಿನ ಹಾದಿಯಲ್ಲಿ ಕಳೆದುಹೋದ ನೂರಾರು ಸಂಗಾತಿಗಳ ಬಗ್ಗೆ ಒಂದು ಕ್ಷಣಕಳವಳವಾಗುತ್ತದೆ.

ವಿಪ್ಲವ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 276. ಮುಖಬೆಲೆ 150 ರೂಪಾಯಿ. ಆಸಕ್ತರು 99728 99131 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News