×
Ad

ಕೋವಿಡ್ ಲಸಿಕೆ, ಆಕ್ಸಿಜನ್ ಸಾಂದ್ರಕಗಳ ಮೇಲೆ ಜಿಎಸ್ಟಿ ಮನ್ನಾ ಕೋರಿ ಸುಪ್ರೀಂ ಮಧ್ಯಪ್ರವೇಶಕ್ಕೆ ಎಸ್‍ಎಫ್‍ಐ ಅರ್ಜಿ

Update: 2021-05-09 18:13 IST

ಬೆಂಗಳೂರು, ಮೇ 9: ದೇಶದ ಎಲ್ಲ ನಾಗರಿಕರಿಗೆ ಕೋವಿಡ್ ಲಸಿಕೆ ಉಚಿತವಾಗಿ ನೀಡುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸಲು ಮತ್ತು ವೈಯಕ್ತಿಕ ಬಳಕೆಯ ಆಮದು ಮೇಲೆ ವಿಧಿಸಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಮನ್ನಾ ಮಾಡಬೇಕೆಂದು ಕೋರಿ ಎಸ್‍ಎಫ್‍ಐ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ.

2021ರ ಮೇ 1ರಂದು ಹೊರಡಿಸಲಾದ ಅಧಿಸೂಚನೆಯ ಮೂಲಕ ಕೇಂದ್ರ ಸರಕಾರವು ಆಕ್ಸಿಜನ್ ಸಾಂದ್ರಕಗಳ ಆಮದಿಗೆ ಶೇ.12ರಷ್ಟು ಜಿಎಸ್ಟಿ ವಿಧಿಸಿದೆ. ಇದು ಅತ್ಯಂತ ಜನವಿರೋಧಿ ನೀತಿಯಾಗಿದೆ. ದೇಶದಲ್ಲಿ ಜನ ಆಕ್ಸಿಜನ್ ಸಿಗದೆ ಪ್ರಾಣ ಬಿಡುತ್ತಿದ್ದರೂ ಕೇಂದ್ರ ಸರಕಾರ ಶೇ.12ರಷ್ಟು ಜಿಎಸ್ಟಿ ಮೂಲಕ ತೆರಿಗೆ ಸಂಗ್ರಹಕ್ಕೆ ಹೊತ್ತು ನೀಡಿರುವುದು ನೋಡಿದರೆ ಬಿಜೆಪಿ ಸರಕಾರಕ್ಕೆ ಜನರ ಹಿತ ಕಾಪಾಡುವ ಸಂವೇದನೆ ಕಳೆದುಕೊಂಡಿದೆ. ಆದುದರಿಂದ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಎಸ್‍ಎಫ್‍ಐ ಕೋರಿದೆ.

ಚಾಲ್ತಿಯಲ್ಲಿರುವ ಸಾಂಕ್ರಾಮಿಕ ರೋಗವನ್ನು ಗಮನಿಸಿದರೆ, ದೇಶಾದ್ಯಂತ ಆಮ್ಲಜನಕದ ಪೂರೈಕೆ ಕೊರತೆಯಿದೆ ಮತ್ತು ನಾಗರಿಕರಿಗೆ ಮೂಲಭೂತ ಆರೋಗ್ಯ ಸೌಲಭ್ಯಗಳನ್ನು ಖಾತ್ರಿಪಡಿಸುವಲ್ಲಿ ಕೇಂದ್ರ ಸರಕಾರಿ ಸಂಸ್ಥೆಗಳು ವಿಫಲವಾಗಿವೆ. ಆಮ್ಲಜನಕದ ಬೇಡಿಕೆ ಪೂರೈಸಲು, ವಿವಿಧ ದೇಶಗಳಿಂದ ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಸನ್ನಿವೇಶದಲ್ಲಿ ಎಲ್ಲ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಆಕ್ಸಿಜನ್ ಪ್ರವೇಶವನ್ನು ಖಾತ್ರಿಪಡಿಸಿಕೊಳ್ಳಲು ಜಿಎಸ್ಟಿ ಮನ್ನಾ ಮಾಡಬೇಕು ಎಂದು ಎಸ್‍ಎಫ್‍ಐ ಆಗ್ರಹಿಸಿದೆ.

ಸಾರ್ವತ್ರಿಕ ಸಾಮೂಹಿಕ ಲಸಿಕೆ ನೀತಿಯನ್ನು ರೂಪಿಸಲು ಮತ್ತು ಅದನ್ನು ಉಚಿತವಾಗಿ ನೀಡಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿದೆ. ಪ್ರಸ್ತುತ ಎರಡು ಔಷಧೀಯ ಕಂಪೆನಿಗಳಾದ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಮಾತ್ರ ಭಾರತದಲ್ಲಿ ಕೋವಿಡ್-19 ಲಸಿಕೆಗಳನ್ನು ತಯಾರಿಸಲು ಪರವಾನಿಗೆ ನೀಡಿದೆ.

ಪೇಟೆಂಟ್ ಕಾಯ್ದೆ 1970ರ ಸಂಬಂಧಿತ ನಿಬಂಧನೆಗಳನ್ನು ಲಸಿಕೆಗಳ ಉತ್ಪಾದನೆಯನ್ನು ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಖಚಿತಪಡಿಸಿಕೊಳ್ಳಲು ಹಲವು ಔಷಧೀಯ ಕಂಪೆನಿಗಳಿಗೆ ಕಡ್ಡಾಯ ಪರವಾನಿಗೆಗಳನ್ನು ಒದಗಿಸಲು ಅರ್ಜಿಯನ್ನು ಮುಂದಿಡಲಾಗಿದೆ. ದೇಶದಲ್ಲಿ ಹಲವು ಸರಕಾರಿ ನಿಯಂತ್ರಿತ ಔಷಧೀಯ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರಕಾರವು ಮೂಲಸೌಕರ್ಯಗಳನ್ನು ಬಳಸಿಕೊಳ್ಳಬಹುದು ಮತ್ತು ಲಸಿಕೆಗಳ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಆ ಸೌಲಭ್ಯಗಳಲ್ಲಿ ಕೋವಿಡ್ ಲಸಿಕೆ ತಯಾರಿಸಬಹುದು ಎಂದು ಎಸ್‍ಎಫ್‍ಐ ತಿಳಿಸಿದೆ.

ಕೋವಿಡ್ ಮಹಾಮಾರಿ ಹಬ್ಬುತ್ತಿರುವ ಸಮಯದಲ್ಲಿ ಅಗತ್ಯ ಸರಬರಾಜು ಮತ್ತು ಸೇವೆಗಳ ವಿತರಣೆಗೆ ಸಂಬಂಧಿಸಿದ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಸುಯೊ ಮೊಟೊ ರಿಟ್ ಅರ್ಜಿಯಲ್ಲಿ ಎಸ್‍ಎಫ್‍ಐ ಕೇಂದ್ರ ಸಮಿತಿ ಸಲ್ಲಿಸಿದೆ ಎಂದು ಎಸ್‍ಎಫ್‍ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News