ಕಾಲ್ ಸೆಂಟರ್ ಗಳ ಮೂಲಕ ಆಸ್ಪತ್ರೆಗಳ ರಿಯಾಲಿಟಿ ಚೆಕ್: ಸಚಿವ ಅರವಿಂದ ಲಿಂಬಾವಳಿ

Update: 2021-05-14 11:41 GMT

ಬೆಂಗಳೂರು ಮೇ 14: ಆಸ್ಪತ್ರೆಗಳ ವಾಸ್ತವ ಸ್ಥಿತಿಗತಿಗಳನ್ನು ತಿಳಿಯಲು ಕಾಲ್ ಸೆಂಟರ್ ಗಳ ಮೂಲಕ ಆಸ್ಪತ್ರೆಗಳ ರಿಯಾಲಿಟಿ ಚೆಕ್ ಮಾಡಲಾಗುತ್ತದೆ. ಇದರಿಂದ ಆಸ್ಪತ್ರೆಗಳಲ್ಲಿ ಬಿಡುಗಡೆಯಾಗುತ್ತಿರುವ ರೋಗಿಗಳು ಮತ್ತು ದಾಖಲಾಗುತ್ತಿರುವ ರೋಗಿಗಳ ನಿಖರ ಮಾಹಿತಿ, ಬೆಡ್‍ಗಳ ಲಭ್ಯತೆ ಬಗ್ಗೆ ವಾಸ್ತವ ವರದಿಗಳು ದೊರಕಲು ಸಾಧ್ಯವಾಗುತ್ತದೆ ಎಂದು ವಾರ್ ರೂಂ, ಕಾಲ್ ಸೆಂಟರ್ ನಿರ್ವಹಣೆ ಮತ್ತು ಸೋಂಕಿತರಿಗೆ ವೈದ್ಯಕೀಯ ಸಲಹೆ ವ್ಯವಸ್ಥೆಯ ಮೇಲ್ವಿಚಾರಣೆಯ ನೋಡಲ್ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಶುಕ್ರವಾರ ಯಶವಂತಪುರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನ ಸೋಂಕಿತರಿಗೆ ನೆರವು ನೀಡಲು ಸ್ಥಾಪಿಸಿರುವ 1912 ಸಹಾಯವಾಣಿಯ ಹೆಚ್ಚುವರಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ 1912 ಸಹಾಯವಾಣಿಯಲ್ಲಿ 60 ಮಾರ್ಗಗಳಿದ್ದವು, ಈಗ ಅದಕ್ಕೆ ಹೆಚ್ಚುವರಿಯಾಗಿ 70 ಮಾರ್ಗಗಳನ್ನು(ಸೀಟರ್) ಸೇರಿಸಲಾಗಿದೆ. ಈವರೆಗೂ ಈ ಸಹಾಯವಾಣಿಗೆ ಕರೆ ಮಾಡಿದಾಗ 12 ರಿಂದ 20 ನಿಮಿಷಗಳ ಕಾಯುವಿಕೆ ಇರುತ್ತಿತ್ತು, ಆದರೆ ಈ ಹೆಚ್ಚುವರಿ ಕರೆ ಮಾರ್ಗಗಳನ್ನು ಸ್ಥಾಪಿಸಿರುವುದರಿಂದ ಈಗ ಕರೆ ಮಾಡಿದ ಕೂಡಲೇ ಸೇವೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಈ ಕಾಲ್ ಸೆಂಟರ್ ನಲ್ಲಿ ವೈದ್ಯರು ಉಪಸ್ಥಿತರಿದ್ದು, ವಲಯಗಳಿಗೆ ಕರೆ ವರ್ಗಾವಣೆ ವಿಳಂಬವಾದಲ್ಲಿ ಅವರೇ ಸ್ವತಃ ಮಾತನಾಡಿ ಅಗತ್ಯ ವೈದ್ಯಕೀಯ ಸಲಹೆ ಸೂಚನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಈ ಕಾಲ್ ಸೆಂಟರ್ ಆಸ್ಪತ್ರೆಗಳ ರಿಯಾಲಿಟಿ ಚೆಕ್ ಜೊತೆಗೆ ಟ್ರಯೇಜಿಂಗ್ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಈ ಕೇಂದ್ರವನ್ನು ಸ್ಥಾಪಿಸುವ ಮೂಲಕ ಎಲ್ಲ ವಲಯಗಳನ್ನು ಒಳಗೊಂಡಂತೆ 9 ವಾರ್ ರೂಮ್ ಮತ್ತು ಒಂದು ಕೇಂದ್ರ ವಾರ್ ರೂಮ್ ಮೇಲಿನ ಒತ್ತಡ ಕಡಿಮೆ ಮಾಡಲಾಗಿದೆ. ಜೊತೆಗೆ ಇದರಿಂದ ವಾರ್ ರೂಮ್ ಮತ್ತು ಕಾಲ್ ಸೆಂಟರ್‍ಗಳ ಕಾರ್ಯನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ, ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತ, ವಿಶೇಷ ಆಯುಕ್ತ ರಂದೀಪ್, ಸಹಾಯವಾಣಿ ನೋಡಲ್ ಅಧಿಕಾರಿ ವಿಪಿನ್ ಸಿಂಗ್ ಸೇರಿ ಉನ್ನತ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News