ಡೆಂಗಿ ಇರಲಿ ಜಾಗೃತಿ

Update: 2021-05-16 05:04 GMT

ಈಗಿನ ಕೋವಿಡ್-19ರ ಸಂದರ್ಭದಲ್ಲಿ ದೇಶದ ವೈದ್ಯ ಪರಿವಾರ ಮತ್ತು ನಾಗರಿಕರು ಕೊರೋನದ ಬಗ್ಗೆಯೇ ಸಂಪೂರ್ಣ ಗಮನ ನೀಡುತ್ತಿದ್ದೇವೆ. ಆದರೆ ಕೊರೋನ ಆಗಮಿಸುವ ಮುನ್ನ ಮತ್ತು ಇಂದೂ ಕಾಡುತ್ತಿರುವ ಇನ್ನಿತರ ಮಾರಕ ಕಾಯಿಲೆಗಳ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸುವುದು ಅತ್ಯವಶ್ಯವಾಗಿದೆ.

ಪ್ರತೀ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಎಲ್ಲೆಡೆ ಡೆಂಗಿ ಜ್ವರದ ಹಾವಳಿ ಸಾಮಾನ್ಯ. ಡೆಂಗಿ ಜ್ವರ ಮತ್ತು ಕೋವಿಡ್ ಜ್ವರ ಎರಡರಲ್ಲೂ ಜ್ವರ, ತಲೆನೋವು, ಮೈಕೈನೋವು, ಸುಸ್ತು ಕಂಡುಬರುತ್ತದೆ. ಆದರೆ ಕೋವಿಡ್ ಜ್ವರದಲ್ಲಿ ಗಂಟಲು ಕೆರೆತ, ಗಂಟಲು ನೋವು, ಶೀತ, ನೆಗಡಿ, ಕೆಮ್ಮು, ವಾಸನೆ ಮತ್ತು ರುಚಿಯ ಸಮಸ್ಯೆ ಕಂಡು ಬರುತ್ತದೆ. ಅದೇ ರೀತಿ ಡೆಂಗಿ ಜ್ವರದಲ್ಲಿ ವಾಂತಿ ಮತ್ತು ವಾಕರಿಕೆ ಹೆಚ್ಚಿರುತ್ತದೆ. ಅತಿಯಾದ ಮುಂದುವರಿದ ಹಂತದಲ್ಲಿ ಡೆಂಗಿ ಜ್ವರ ಇರುವವರಲ್ಲಿ ವಸಡಿನಲ್ಲಿ ರಕ್ತ ಮತ್ತು ಮೆದುಳಿನಲ್ಲಿ ರಕ್ತಸ್ರಾವ ಕಂಡುಬರಬಹುದು. ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆ ಇರುವುದೇ ಇದಕ್ಕೆ ಮುಖ್ಯ ಕಾರಣ. ಆದರೆ ಕೋವಿಡ್ ಜ್ವರದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆ ಇರುವುದಿಲ್ಲ.

ಪ್ರತಿ ವರ್ಷ ಮೇ 16 ರಂದು ಕೇಂದ್ರ ಆರೋಗ್ಯ ಮಂತ್ರಾಲಯ, ಭಾರತ ಸರಕಾರ ಇದರ ಆದೇಶದಂತೆ ಭಾರತದಾದ್ಯಂತ ‘ರಾಷ್ಟ್ರೀಯ ಡೆಂಗಿ ಜಾಗೃತಿ ದಿನ’ ಎಂದು ಆಚರಿಸಿ ಡೆಂಗಿಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಡೆಂಗಿ ಜ್ವರ ಯಾಕೆ, ಹೇಗೆ?

ಡೆಂಗಿ ಜ್ವರ ಮತ್ತು ಡೆಂಗಿ ರಕ್ತಸ್ರಾವ ಜ್ವರಗಳು ಉಷ್ಣವಲಯದ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿಯಾದ, ತೀವ್ರ ಜ್ವರ ಲಕ್ಷಣದ ಒಂದು ರೋಗವಾಗಿದೆ. ಡೆಂಗಿ ಎಂಬ ವೈರಸ್ ಸೋಂಕುವಿನಿಂದ ಉಂಟಾಗುವ ಈ ಜ್ವರವು ‘ಏಡಿಸ್’ ಎಂಬ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಡೆಂಗಿ ಜ್ವರವು ಸಾಂಕ್ರಾಮಿಕ ರೋಗವಾಗಿರುತ್ತದೆ. ಈ ರೋಗಕ್ಕೆ ‘ಲಸಿಕೆ’ ಭ್ಯವಿಲ್ಲದ ಕಾರಣ, ರೋಗವನ್ನು ತಡೆಗಟ್ಟುವಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಸಾಮಾನ್ಯವಾಗಿ ರೋಗವನ್ನು ಹರಡುವ ‘ಏಡಿಸ್’ ಸೊಳ್ಳೆಯ ಸಂಖ್ಯೆಯನ್ನು ಕಡಿಮೆಗೊಳಿಸುವ ಮತ್ತು ಸೊಳ್ಳೆ ಕಡಿಯದಂತೆ ಎಚ್ಚರ ವಹಿಸಬೇಕಾಗುತ್ತದೆ. ಡೆಂಗಿ ಜ್ವರ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಜ್ವರವಾಗಿದ್ದು, ಈಗ ನಗರ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುತ್ತಿದೆ.

ರೋಗದ ಲಕ್ಷಣಗಳು:

ಸಾಮಾನ್ಯವಾಗಿ ಸುಮಾರು ಶೇ. 80 ರೋಗಗಳಲ್ಲಿ ಸಣ್ಣಜ್ವರ ಕಾಣಿಸಿ ಕೊಳ್ಳಬಹುದು. ಕೇವಲ 5ರಿಂದ 10 ಶೇ. ರೋಗಿಗಳಲ್ಲಿ ವಿಪರೀತ ಹಠಾತ್ ಜ್ವರ, ಸ್ನಾಯು ನೋವು, ವಾಂತಿಭೇದಿ, ಚರ್ಮ ತುರಿತ, ಹೊಟ್ಟೆನೋವು, ಗಂಟು ನೋವು ಮತ್ತು ವಸಡು, ಮೂಗುಗಳಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ವಿಪರೀತ ಸ್ನಾಯು ನೋವು ಮತ್ತು ಗಂಟು ನೋವಿರುವ ಕಾರಣ ಡೆಂಗಿ ಜ್ವರವನ್ನು ಬ್ರೇಕ್‌ಬೋನ್ ಜ್ವರ (Breakbone Fever) ಎಂದೂ ಕರೆಯಲಾಗುತ್ತದೆ. ಡೆಂಗಿ ಜ್ವರದ ಆರಂಭದ ಅವಧಿ (window period) ಅಂದರೆ ಸೊಳ್ಳೆ ಕಡಿತಕ್ಕೆ ಮತ್ತು ರೋಗದ ಲಕ್ಷಣ ಕಾಣಿಸಿಕೊಳ್ಳುವ ನಡುವಿನ ಅವಧಿ, ಸುಮಾರು 4ರಿಂದ 7 ದಿನಗಳು ಆಗಿರುತ್ತವೆ.

ಡೆಂಗಿ ಜ್ವರದ ಅವಧಿಯನ್ನು ಮೂರು ಹಂತಗಳಲ್ಲಿ ವಿವರಿಸಲಾಗಿದೆ. 1. ಜ್ವರದ ಅವಧಿ 2. ತೀವ್ರತೆಯ ಅವಧಿ 3. ಚೇತರಿಕೆಯ ಅವಧಿ

► ಜ್ವರದ ಅವಧಿ ಈ ಅವಧಿ ಸಾಮಾನ್ಯವಾಗಿ 2ರಿಂದ 7ದಿನಗಳವರೆಗೆ ಇರಬಹುದು. ಈ ಅವಧಿಯಲ್ಲಿ ವಿಪರೀತ ಜ್ವರ ಅಂದರೆ 40oC (104oF) ಬರಬಹುದು. ಜೊತೆಗೆ ವಿಪರೀತ ಸ್ನಾಯು ನೋವು, ಕಣ್ಣಿನ ಸುತ್ತ ನೋವು, ತಲೆನೋವು, ಹೊಟ್ಟೆನೋವು ಮತ್ತು ಗಂಟುನೋವು ಬರಬಹುದು. ವಾಂತಿ ಮತ್ತು ವಾಂತಿ ಬಂದಂತೆ ಬಾಸವಾಗಿರಬಹುದು. ಚರ್ಮದಲ್ಲಿ ವಿಪರೀತ ತುರಿಕೆ ಇದ್ದು, ಅಲ್ಲಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಬಾಯಿಯ ವಸಡುಗಳಲ್ಲಿ ಮತ್ತು ಮೂಗುಗಳಲ್ಲಿ ರಕ್ತಸ್ರಾವ ಆಗಬಹುದು. ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಬಹಳ ಕಡಿಮೆಯಾದಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗುವ ಸಾಧ್ಯತೆಯೂ ಇರುತ್ತದೆ.

► ತೀವ್ರತೆಯ ಅವಧಿ

ಈ ಅವಧಿಯಲ್ಲಿ ರಕ್ತನಾಳಗಳಿಂದ ಪ್ಲಾಸ್ಮಾ ದ್ರವದ ಸೋರಿಕೆಯಾಗಿ ಎದೆಗೂಡು ಮತ್ತು ಅನ್ನನಾಳದ ಹೊಟ್ಟೆಯ ಭಾಗದಲ್ಲಿ ನೀರು ತುಂಬಿಕೊಳ್ಳಬಹುದು. ಪ್ಲಾಸ್ಮಾದ್ರವದ ಸೋರಿಕೆಯಿಂದಾಗಿ ರಕ್ತದ ಒತ್ತಡ ಕಡಿಮೆಯಾಗಿ, ಮೆದುಳು, ಕಿಡ್ನಿ ಮುಂತಾದ ಮುಖ್ಯ ಅಂಗಗಳಿಗೆ ರಕ್ತದ ಪೂರೈಕೆ ಕಡಿಮೆಯಾಗಿ ವಿಪರೀತ ವೈಕಲ್ಯ ಉಂಟಾಗಬಹುದು. ರಕ್ತದಒತ್ತಡ ಕಡಿಮೆಯಾಗಬಹುದು. ಇದನ್ನು ಡೆಂಗಿ ಶಾಕ್ ಸಿಂಡ್ರೋಮ್ ಎನ್ನುತ್ತಾರೆ. ಇದರ ಜೊತೆಗೆ ಅನ್ನನಾಳಗಳಲ್ಲಿ ರಕ್ತಸ್ರಾವವು ಉಂಟಾಗ ಬಹುದು. ಕೇವಲ ಶೇ. 5 ಡೆಂಗಿ ಜ್ವರದ ರೋಗಿಗಳಲ್ಲಿ ಮಾತ್ರ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಮಕ್ಕಳು ಮತ್ತು ಯುವಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ತೀವ್ರತೆಯ ಅವಧಿ ಒಂದರಿಂದ 2 ದಿನಗಳವರೆಗೆ ಮಾತ್ರ ಕಾಣಿಸಿಕೊಳ್ಳಬಹುದು.

► ಚೇತರಿಕೆ ಅವಧಿ

ಈ ಅವಧಿ 2ರಿಂದ 3ದಿನಗಳ ವರೆಗೆ ಇರುತ್ತದೆ. ಈ ಅವಧಿಯಲ್ಲಿ ರಕ್ತದಿಂದ ಹೊರಡುವ ಎಲ್ಲಾ ದ್ರವಗಳು ಪುನಃ ರಕ್ತಕ್ಕೆ ಸೇರಬಹುದು. ವಿಪರೀತ ತುರಿಕೆ ಮತ್ತು ಚರ್ಮದಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ರೋಗಿಗಳಲ್ಲಿ ವಿಪರೀತ ಆಯಾಸ ಮತ್ತು ಸುಸ್ತು ಕಾಣಿಸಿಕೊಳ್ಳಬಹುದು. ರೋಗಿಗಳು ಬಹಳ ಬಳಲಿದಂತೆ ಮತ್ತು ಭ್ರಮಾ ಲೋಕದಲ್ಲಿದ್ದಂತೆ ಭಾಸವಾಗಬಹುದು.

ತಡೆಗಟ್ಟುವುದು ಹೇಗೆ?

ಇತ್ತೀಚಿನ ಕೊರೋನಕ್ಕೆ ಲಸಿಕೆಗಳು ಸಿದ್ಧವಾಗಿವೆ. ಆದರೆ ಡೆಂಗಿಗೆ ಈ ವರೆಗೆ ಲಸಿಕೆಯನ್ನು ಕಂಡುಹಿಡಿಯಲಾಗಿಲ್ಲ. ಆ ಕಾರಣದಿಂದಲೇ, ಏಡಿಸ್ ಸೊಳ್ಳೆ ಕಡಿತವನ್ನು ತಡೆಗಟ್ಟುವುದು ಮತ್ತು ಸೊಳ್ಳೆಗಳ ಸಂಖ್ಯೆ ಕಡಿಮೆ ಮಾಡುವತ್ತ ಎಲ್ಲರೂ ಗಮನ ಹರಿಸಬೇಕಾಗಿದೆ. 1. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹೆಚ್ಚಾಗಿ ನಿಂತ ನೀರಲ್ಲಿ ಏಡಿಸ್ ಸೊಳ್ಳೆ ಸಂತಾನೋತ್ಪತ್ತಿ ಮಾಡುತ್ತದೆ. ಹೂಕುಂಡಗಳಲ್ಲಿ, ಮನೆಯ ಛಾವಣಿಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು. ಮನೆಯ ಅಕ್ಕಪಕ್ಕ ನೀರು ಸರಾಗವಾಗಿ ಚಲಿಸುವ ರೀತಿಯಲ್ಲಿ ನೋಡಿಕೊಳ್ಳಬೇಕು.

2. ಮನೆಯ ಸುತ್ತಮುತ್ತ ಇರುವಂತಹ ಹಳೆ ಬಕೆಟ್ ಮತ್ತು ನೀರಿನ ಕ್ಯಾನ್‌ಗಳನ್ನು ಬೋರಲಾಗಿ ಹಾಕಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಇಂತಹ ನೀರು ತುಂಬುವ ವಸ್ತುಗಳನ್ನು ನೀರು ಬೀಳದಂತಹ ಸೂರಿನಡಿಯಲ್ಲಿ ಇಡಬೇಕು. ಹೂ ಕುಂಡಗಳ ಕೆಳಗಿರುವ ತಟ್ಟೆಗಳನ್ನು ತೆಗೆಯಬೇಕು. ಮನೆಯೊಳಗೆ ಅಲಂಕಾರಕ್ಕಾಗಿ ಬಳಸುವ ಹೂದಾನಿಗಳ ನೀರನ್ನೂ ದಿನವೂ ಬದಲಿಸಬೇಕು ಮತ್ತು ಶುಭ್ರವಾಗಿ ಇಟ್ಟುಕೊಳ್ಳಬೇಕು.

3. ಉದ್ದ ತೋಳಿನ ಅಂಗಿ, ಕಾಲುಮುಚ್ಚುವ ಪ್ಯಾಂಟ್ ಮತ್ತು ಕಾಲು ಚೀಲ ಧರಿಸಿದಲ್ಲಿ ಸೊಳ್ಳೆಗಳಿಂದ ಕಡಿಸಿಕೊಳ್ಳುವ ಸಾಧ್ಯತೆ ಕಡಿಮೆಯಿರುತ್ತದೆ. ಮೈ ತುಂಬಾ ಬಟ್ಟೆಧರಿಸಿ ಆದಷ್ಟು ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಬೇಕು.

4. ಕಡ್ಡಾಯವಾಗಿ ಸೊಳ್ಳೆ ಪರದೆಯನ್ನು ಬಳಸಬೇಕು. ಹಗಲು ಹೊತ್ತು ವಿಶ್ರಮಿಸುವಾಗಲೂ ಸೊಳ್ಳೆಯ ಸಾಂದ್ರತೆ ಜಾಸ್ತಿ ಇರುವ ಪ್ರದೇಶಗಳಲ್ಲಿ ಸೊಳ್ಳೆ ಪರದೆ ಬಳಸುವುದು ಸೂಕ್ತ.

5. ಸೊಳ್ಳೆ ಮೈ ಮೇಲೆ ಕುಳಿತುಕೊಳ್ಳದೆ ಇರುವಂತಹ ಸೊಳ್ಳೆ ನಿರೋಧಕ ಅಥವಾ ವಿಕರ್ಷಕ ದ್ರಾವಣಗಳನ್ನು ಬಳಸಬಹುದು.

6. ಅತ್ಯಂತ ವಾಸನೆಯುಕ್ತ ಸಾಬೂನು ಮತ್ತು ಶೃಂಗಾರಯುಕ್ತ ದ್ರವ್ಯಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು. ಇವುಗಳು ಕೂಡಾ ಕೆಲವೊಮ್ಮೆ ಸೊಳ್ಳೆಗಳನ್ನು ಆಕರ್ಷಿಸಬಹುದು.

7. ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯಬಾರದು. ವಿಶೇಷವಾಗಿ ಬಹು ಮಹಡಿ ಕಟ್ಟಡಗಳಲ್ಲಿ ಘನತ್ಯಾಜ್ಯಗಳು, ನೀರಿನ ಸರಾಗ ಹರಿಕೆಗೆ ಅಡ್ಡಿಮಾಡಿ, ನೀರು ಸಂಗ್ರಹಕ್ಕೆ ಕಾರಣವಾಗಿ, ಸೊಳ್ಳೆಗಳ ಉತ್ಪತ್ತಿಗೆ ಪರೋಕ್ಷವಾಗಿ ಕಾರಣವಾಗುತ್ತದೆ.

ಚಿಕಿತ್ಸೆ ಹೇಗೆ?

ಜ್ವರ ಬಂದ ಕೂಡಲೇ ವೈದ್ಯರನ್ನು ಕಾಣಬೇಕು. ಸ್ವಯಂ ಮದ್ದುಗಾರಿಕೆ ಯಾವತ್ತೂ ಮಾಡಬಾರದು. ಯಾವಕಾರಣದಿಂದಲೂ (aspirin) ಗುಳಿಗೆ ತೆಗೆದುಕೊಳ್ಳಬಾರದು. ಸೊಳ್ಳೆಕಡಿತ ನಿಮ್ಮ ಗಮನಕ್ಕೆ ಬಂದಿದ್ದಲ್ಲಿ ವೈದ್ಯರಿಗೆ ತಿಳಿಸಬೇಕು. ಸಾಮಾನ್ಯವಾಗಿ ಜ್ವರವನ್ನು, ವೈದ್ಯರ ಸೂಚನೆಯಂತೆ ಗುಣಪಡಿಸಿಕೊಳ್ಳಬೇಕು. ವಿಪರೀತ ಜ್ವರ, ತುರಿಕೆ, ತಲೆನೋವು, ರಕ್ತಸ್ರಾವವಿದ್ದಲ್ಲಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಬೇಕಾಗಬಹುದು. ಹೆಚ್ಚು ಹೆಚ್ಚು ದ್ರವಾಹಾರ ತೆಗೆದುಕೊಳ್ಳಬೇಕು. ಎಲ್ಲವನ್ನೂ ವೈದ್ಯರ ಸಲಹೆಯಂತೆ ಪಡೆಯಬೇಕು. ವೈದ್ಯರ ಸಲಹೆ ಇಲ್ಲದೆ, ಸಾಮಾನ್ಯ ಜ್ವರ ಎಂದುಕೊಂಡು ಸ್ವಂತ ಮದ್ದುಗಾರಿಕೆ ಮಾಡುವುದು ಖಂಡಿತ ಸಹ್ಯವಲ್ಲ. ಬರೀ ಜ್ವರ ಎಂದು ಉದಾಸೀನ ತೋರಿದಲ್ಲಿ, ಜೀವಕ್ಕೆ ತೊಂದರೆಯಾಗಬಹುದು. ತೀವ್ರತೆಯ ಅವಧಿಯಲ್ಲಿ, ರಕ್ತದ ಒತ್ತಡ ಕಡಿಮೆಯಾದಲ್ಲಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಅತೀಅಗತ್ಯ. ಅದೇರೀತಿ ಪ್ಲೇಟ್‌ಲೇಟ್ ರಕ್ತಕಣಗಳ ಸಂಖ್ಯೆ ಕಡಿಮೆಯಾದಲ್ಲಿ ರಕ್ತಪೂರಣ ಅತೀಅಗತ್ಯ. ಒಟ್ಟಿನಲ್ಲಿ ಡೆಂಗಿ ಜ್ವರ ಉಳಿದ ಮಾಮೂಲಿ ಜ್ವರಕ್ಕಿಂತ ಭಿನ್ನವಾಗಿದ್ದು, ನುರಿತ ವೈದ್ಯರ ಸಲಹೆ, ಮಾರ್ಗದರ್ಶನ ಮತ್ತು ಚಿಕಿತ್ಸೆ ಅತೀ ಅಗತ್ಯ. ನಿರ್ಲಕ್ಷ ಮಾಡಿದ್ದಲ್ಲಿ ಜೀವಕ್ಕೆ ಸಂಚಕಾರ ಬರುವ ಸಾಧ್ಯತೆಯೂ ಇದೆ.

Writer - ಡಾ. ಮುರಲೀ ಮೋಹನ್, ಚೂಂತಾರು

contributor

Editor - ಡಾ. ಮುರಲೀ ಮೋಹನ್, ಚೂಂತಾರು

contributor

Similar News