‘ದಿ ಡೈರಿ ಆಫ್ ಎ ಯಂಗ್ ಗರ್ಲ್ ಆ್ಯನ್ ಫ್ರಾಂಕ್’ ಬಿಚ್ಚಿಟ್ಟ ನಾಝಿಗಳ ಕ್ರೌರ್ಯ

Update: 2021-05-22 19:30 GMT

ದಾಂಡೇಲಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ ಕ್ರಿಯಾಶೀಲ ಲೇಖಕಿಯಾಗಿರುವ ನಾಗರೇಖಾ ಗಾಂವಕರ ಅವರು ಇತ್ತೀಚೆಗೆ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ ಸಿಂದಗಿಯ ‘ನೆಲೆ ಪ್ರಕಾಶನ’ದವರು ಪ್ರಕಟಿಸಿರುವ ‘ದಿ ಡೈರಿ ಆಫ್ ಎ ಯಂಗ್ ಗರ್ಲ್ ಆ್ಯನ್ ಫ್ರಾಂಕ್’ ಎಂಬ ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ದಾಖಲೆಯ ಕೊಡುಗೆ ಎನ್ನಬಹುದು.

ಜನಾಂಗೀಯ ದ್ವೇಷವುಳ್ಳ ಜರ್ಮನಿಯ ನಾಝಿಗಳು ನೆದರ್‌ಲ್ಯಾಂಡ್‌ಅನ್ನು ವಶಪಡಿಸಿಕೊಂಡಾಗ ಆಹಾರ ಸಂಸ್ಕರಣಾ ಘಟಕ ಹೊಂದಿದ ಓಟ್ಟೊ ಫ್ರಾಂಕ್ ಎಂಬ ವ್ಯಾಪಾರಿ ತನ್ನ ಮಳಿಗೆಯ ಉಗ್ರಾಣದ ಮಾಳಿಗೆಯ ಅಡಗುದಾಣದಲ್ಲಿ ತನ್ನ ಹೆಂಡತಿ ಎಡಿಫ್ ಮತ್ತು ಹೆಣ್ಣು ಮಕ್ಕಳಾದ ಮಾರ್ಗೋಟ್ ಹಾಗೂ ಆ್ಯನ್ ಫ್ರಾಂಕ್ ಮತ್ತಿತರ ಏಳೆಂಟು ಸಹಚರರೊಂದಿಗೆ ಸುಮಾರು 2 ವರ್ಷ ಕಾಲ ಗುಪ್ತವಾಸದಲ್ಲಿದ್ದಾಗ ಆ್ಯನ್ ಫ್ರಾಂಕ್‌ಬರೆದ ದಿನಚರಿಯೇ ಈ ಕೃತಿಯ ತಿರುಳು. ಸುಮಾರು 1942ರಿಂದ 1944ರ ತನಕ ಅವಳ ದಿನಚರಿಯಲ್ಲಿ ನಾಝಿಗಳಿಂದ ಬಂಧಿಸಲ್ಪಟ್ಟು ಯಾತನಾಶಿಬಿರದಲ್ಲಿನ ಗುಪ್ತಸ್ಥಾನದಲ್ಲಿದ್ದ ಎಲ್ಲರೂ ಅನುಭವಿಸಿದ ಕ್ರೌರ್ಯದ ವೈಖರಿ ಓದಿದಾಗ ನಾಝಿಗಳು ಎಸಗಿದ ಆ ಕ್ರೌರ್ಯದ ಚಿತ್ರಣಗಳು ಕಣ್ಣೆದುರು ಸುಳಿದು ಎದೆ ನಡುಗುತ್ತದೆ.

1942ರ ಜೂನ್ 12ರಂದು ಆ್ಯನ್‌ಳ ಹುಟ್ಟುಹಬ್ಬದಂದು ಅವಳಿಗೊಂದು ಡೈರಿ ಉಡುಗೊರೆಯಾಗಿ ಸಿಗುತ್ತದೆ. ಅಂದಿನಿಂದಲೇ ಆ ಡೈರಿಯನ್ನು ತನ್ನ ಪ್ರೀತಿಯ ಗೆಳೆಯ ಕಿಟ್ಟಿ ಎಂದು ಸಂಬೋಧಿಸುತ್ತಾ ತನ್ನ ದಿನಚರಿಯನ್ನು ಹಾಕಿ ದಾಖಲಿಸ ತೊಡಗುತ್ತಾಳೆ.

ಅದು ಹೀಗಿದೆ: ‘‘ನಮ್ಮ ಕುಟುಂಬ ಅಡಗುದಾಣ ಸೇರಿ ಒಂದು ವರ್ಷದ ಮೇಲಾಯಿತು. ನಮ್ಮ ಬದುಕಿನ ಕೆಲವು ಕ್ಷಣಗಳನ್ನು ನಿನ್ನಲ್ಲಿ ನನಗೆ ಹೇಳುವುದಿದೆ. ನಿನಗೆ ನಾನು ಹೇಳುವುದು ಹಗಲು ಹೊತ್ತಿನ ಸಂಗತಿಗಳನ್ನು ಮಾತ್ರ. ರಾತ್ರಿಯ ಹೊತ್ತಿನ ಸಂಗತಿಗಳನ್ನು ಕೂಡ ನಿನಗೆ ನಾನು ಹೇಳಬೇಕು. ರಾತ್ರಿಯಾಗುತ್ತಲೇ ಮೇಲ್ಮಹಡಿಯಲ್ಲಿ ಗುಡುಗಿನ ಸದ್ದು ಕೇಳಿಸುತ್ತದೆ. ಆದರೆ ಅದು ಗುಡುಗಿನ ಸದ್ದಲ್ಲ. ಶ್ರೀಮತಿ ವ್ಯಾನ್‌ನ್ ಹಾಸಿಗೆಯನ್ನು ಅತ್ತಿತ್ತ ಸರಿಸುವ ಸದ್ದು’’ ಹೀಗೆ ಇನ್ನೂ ಕೆಲವು ಸಂಗತಿಗಳನ್ನು ಆಕೆ ಗೆಳೆಯ ಕಿಟ್ಟಿಯೊಂದಿಗೆ ಹಂಚಿಕೊಳ್ಳುತ್ತಾಳೆ.

ಆ್ಯನ್‌ಳ ತಾರುಣ್ಯ ಅಡಗುದಾಣದಲ್ಲಿ ರಾತ್ರಿ ಹೊತ್ತು ಗುಂಡಿನ ಸದ್ದು ಕೇಳುತ್ತ ಭಯ ಮತ್ತು ಆತಂಕದಿಂದ ಕಳೆಯುತ್ತದೆ. ಡೈರಿಯಲ್ಲಿ ಅವಳು ದಾಖಲಿಸಿದ ಕೊನೆಯ ಬರಹ 1944ರ ಆಗಸ್ಟ್ 1 ರಂದು. ಅದಾದ ಮೂರು ದಿನಗಳ ನಂತರ ಗೆಸ್ಟಪೊ (ಗುಪ್ತ ಪೊಲೀಸರು)ಗಳಿಗೆ ಅವರ ಅಡಗುದಾಣದ ಮಾಹಿತಿ ಸಿಕ್ಕಿ ಅಡಗಿ ಕುಳಿತ ಎಂಟು ಯಹೂದಿಗಳು ಶರಣಾಗುತ್ತಾರೆ. ಅವರನ್ನೆಲ್ಲ ಜೈಲಿಗಟ್ಟಲಾಗುತ್ತದೆ. ಮುಂದೆ ಇತರ ಯಹೂದಿ ಕುಟುಂಬಗಳನ್ನು ಹಿಡಿದು ಸರಕು ಸಾಗಣೆ ರೈಲಿನಲ್ಲಿ ತುಂಬಿ ಪೋಲೆಂಡಿನ ಅಕ್ವಿಟ್ಜ್ ಎಂಬಲ್ಲಿನ ಯಾತನಾಶಿಬಿರಕ್ಕೆ ಕಳಿಸಲಾಗುತ್ತದೆ. ಮುಂದೆ ಎಲ್ಲಾ ಯಹೂದಿಗಳ ಇತಿಶ್ರೀ ಹಾಡಲಾಗುತ್ತದೆ. ಹಿಟ್ಲರ್‌ನ ಜನಾಂಗೀಯ ದ್ವೇಷದಿಂದ ಸುಮಾರು ಆರು ಮಿಲಿಯನ್‌ಗಿಂತ ಹೆಚ್ಚು ಯಹೂದಿ ಹೆಂಗಸರು ಮತ್ತು ಮಕ್ಕಳನ್ನು ಹಿಡಿದು ತಂದು ಕೂಡಿ ಹಾಕಿ ವಿಷಾನಿಲದಿಂದ ಕೊಲ್ಲಲಾಗುತ್ತದೆ. ಇದಕ್ಕೆ ಮುನ್ನ ಯಾತನಾಶಿಬಿರಕ್ಕೆ ಕರೆದು ತಂದ ನಂತರ ಪ್ರತಿ ಕುಟುಂಬದ ಸದಸ್ಯರನ್ನು ಪರಸ್ಪರ ಬೇರ್ಪಡಿಸಲಾಗುತ್ತದೆ. ಸೆರೆಹಿಡಿದ ಯಹೂದಿಗಳನ್ನು ವಿಷಾನಿಲದಿಂದ ಸಾಯಿಸಿ ಆನಂತರ ಸುಡಲಾಗುತ್ತಿತ್ತು. ಬಂಧಿತರಿಗೆ ಕೆಟ್ಟ ಆಹಾರ ನೀಡಿ ಹತಾಶೆಗೊಳಪಡಿಸಲಾಗುತ್ತಿತ್ತು. ಬಂಧನದಲ್ಲಿಯೇ ವಿಷಾನಿಲದಿಂದ ಸತ್ತ ಯಹೂದಿಗಳನ್ನು ಚಿತಾಗಾರದಲ್ಲಿ ಸುಡುತ್ತಿದ್ದು ಪರಿಸರವೆಲ್ಲ ಕೆಟ್ಟ ವಾಸನೆಯಿಂದ ಕೂಡಿರುತ್ತಿತ್ತು.

ನಾಝಿಗಳ ಕೈಕೆಳಗೆ ಬಂಧಿತರಾದವರಲ್ಲಿ ಆ್ಯನ್ ಕೂಡ ಒಬ್ಬಳಾಗಿರುತ್ತಾಳೆ. ಅವಳು ಈ ಯಾತನಾಶಿಬಿರದಲ್ಲಿ ಮಾನಸಿಕ ವ್ಯಥೆಯಿಂದ ನರಳುತ್ತಾಳೆ. ಸರಿಯಾದ ಆಹಾರವಿಲ್ಲದೆ ಹಾಗೂ ವಿಪರೀತ ಚಳಿಯಿಂದ ಆಕೆ ನಿಸ್ತೇಜವಾಗುತ್ತಾಳೆ. ಅವಳ ಕೊನೆಗಾಲದಲ್ಲಿ ಅವರ ಜತೆಯಲ್ಲಿದ್ದ ಅವಳ ಗೆಳತಿ ಲೀಸ್ ಗೂಸೆನ್ಸ್ ಚಿಂದಿಬಟ್ಟೆ ಉಟ್ಟ, ಬಡಕಲು ಶರೀರದ, ಗುಳಿಬಿದ್ದ ಕೆನ್ನೆಗಳ ಆ್ಯನ್‌ಳನ್ನು ನೋಡಿ ವ್ಯಥೆ ಪಡುತ್ತಾಳೆ. 1945ರ ಪ್ರಥಮಾರ್ಧದಲ್ಲಿ ಆ್ಯನ್‌ಳ ಅಕ್ಕ ಮಾರ್ಗೋಟ್ ತೀರಿಕೊಂಡರೆ, ಇದಕ್ಕಿಂತ ಮೊದಲೇ ತಾಯಿ ತೀರಿಕೊಂಡಿರುತ್ತಾರೆ. ಆದರೆ ಮಾನಸಿಕವಾಗಿ ಜರ್ಜರಿತಳಾದ ಆ್ಯನ್‌ಗೆ ಇದ್ಯಾವುದರ ಅರಿವೂ ಇರುವುದಿಲ್ಲ. ತನ್ನ ಆಸುಪಾಸಿನ ಆಗುಹೋಗುಗಳ ಕುರಿತಾಗಿ ಒಂದಿಷ್ಟು ಪರಿಜ್ಞಾನವಿಲ್ಲದ ಸ್ಥಿತಿಯಲ್ಲಿ ಸರಿಯಾದ ಆರೈಕೆ ಇಲ್ಲದೆ ನಿತ್ರಾಣವಾಗಿ ಹಾಗೂ ಮಾನಸಿಕವಾಗಿ ಅಸ್ವಸ್ಥಗೊಂಡ ಆ್ಯನ್ 1945ರ ಮಾರ್ಚ್ ತಿಂಗಳಲ್ಲಿ ತನ್ನ ಹದಿನಾರನೇ ವಯಸ್ಸಿನಲ್ಲಿ ತೀರಿಕೊಳ್ಳುತ್ತಾಳೆ.

ಆನಂತರ ರದ್ದಿ ಕಾಗದದ ಜತೆ ಸಿಕ್ಕಿದ ಅವಳ ಡೈರಿ ರೂಪದ ಬರಹಗಳ ಕಟ್ಟು ಆಕೆಯ ತಂದೆಯ ಕೈಸೇರುತ್ತದೆ. ಕುಟುಂಬದಲ್ಲಿ ಬದುಕುಳಿದ ಏಕೈಕ ಸದಸ್ಯ ಆ್ಯನ್‌ಳ ದುಃಖತಪ್ತ ತಂದೆ ಆ ಡೈರಿಯನ್ನು ತಮ್ಮ ಆತ್ಮೀಯರಿಗೆ ಹಾಗೂ ಕುಟುಂಬದ ವರ್ಗದವರಿಗೆ ಕೊಡುತ್ತಾನೆ. ತದನಂತರ ಬಹಳ ಬೇಗ ಆ ಡೈರಿ ಪುಸ್ತಕರೂಪದಲ್ಲಿ ಡಚ್ ಭಾಷೆಯಲ್ಲಿ ಪ್ರಕಟವಾಗುತ್ತದೆ. ತದನಂತರ ಜಗತ್ತಿನ ಎಪ್ಪತ್ತರಷ್ಟು ಭಾಷೆಗಳಲ್ಲಿ ಅನುವಾದಗೊಂಡು ಪ್ರಕಟವಾಗಿ ಆ್ಯನ್ ಸಾವಿನಲ್ಲೂ ಅಮರಳಾಗುತ್ತಾಳೆ. ತನ್ನ ಸಾವಿನ ನಂತರವೂ ತಾನು ಬದುಕ ಬಯಸುವೆ ಎನ್ನುವ ಅವಳ ಆಕಾಂಕ್ಷೆ ಹೀಗೆ ನೆರವೇರುತ್ತದೆ. ಅವಳ ಈ ಡೈರಿಯ ಮೂಲಕ ನಾಝಿಗಳು ಯಹೂದಿಗಳ ಮೇಲೆ ನಡೆಸಿದ ಕ್ರೌರ್ಯದ ಚಿತ್ರಣವನ್ನು ಡೈರಿ ತೆರೆದಿಡುತ್ತದೆ. ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ನಾಗರೇಖಾ ಗಾಂವಕರ ಮತ್ತು ಕೃತಿಯನ್ನು ಪ್ರಕಟಿಸಿದ ನೆಲೆ ಪ್ರಕಾಶನದವರು ಒಂದು ಮೌಲ್ಯಯುತ ಕೆಲಸ ಮಾಡಿದ್ದಾರೆ ಎನ್ನಲಡ್ಡಿಯಿಲ್ಲ.

Writer - ಕೆ. ಶಾರದಾ ಭಟ್

contributor

Editor - ಕೆ. ಶಾರದಾ ಭಟ್

contributor

Similar News