ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ ಧರ್ಮಗಳ ಧರ್ಮ ಗುರುಗಳಿಗೆ ರೇಷನ್ ಕಿಟ್, 5,000 ರೂ. ವಿತರಿಸಿದ ಝಮೀರ್ ಅಹ್ಮದ್

Update: 2021-06-09 13:34 GMT

ಬೆಂಗಳೂರು, ಜೂ.9: ಸರ್ವ ಧರ್ಮೀಯ ಪ್ರಾರ್ಥನಾ ಸ್ಥಳಗಳ 380ಕ್ಕೂ ಹೆಚ್ಚು ಮಂದಿ ಮುಖ್ಯಸ್ಥರಿಗೆ ಚಾಮರಾಜಪೇಟೆ ಕ್ಷೇತ್ರದ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ತಲಾ 5 ಸಾವಿರ ರೂ.ನಗದು ಹಾಗೂ ಎರಡು ತಿಂಗಳುಗಳಿಗೆ ಆಗುವಷ್ಟು ರೇಷನ್ ಕಿಟ್‍ಗಳನ್ನು ಬುಧವಾರ ಶಾಸಕರ ಕಚೇರಿ ಆವರಣದಲ್ಲಿ ವಿತರಿಸಿದರು.

ಚಾಮರಾಜಪೇಟೆ ಕ್ಷೇತ್ರದ ವ್ಯಾಪ್ತಿಗೊಳಪಡುವ ಮಸೀದಿಗಳ ಇಮಾಮ್ ಹಾಗೂ ಮುಅಝ್ಝಿನ್, ದೇವಸ್ಥಾನಗಳ ಅರ್ಚಕರು, ಚರ್ಚ್‍ಗಳ ಪಾದ್ರಿಗಳು ಹಾಗೂ ಗುರುದ್ವಾರದ ಗುರುಗಳು ಸೇರಿದಂತೆ 380ಕ್ಕೂ ಹೆಚ್ಚು ಮಂದಿಗೆ ಶಾಸಕ ಝಮೀರ್ ಅಹ್ಮದ್ ಖಾನ್ ವೈಯಕ್ತಿಕವಾಗಿ ತಲಾ 5 ಸಾವಿರ ರೂ.ಗಳು ಹಾಗೂ ಎರಡು ತಿಂಗಳು ರೇಷನ್ ವಿತರಣೆ ಮಾಡಿದರು. 

ವಕ್ಫ್ ಬೋರ್ಡ್ ನಲ್ಲಿ ನೋಂದಾಯಿತವಾಗಿರುವ ಸಂಸ್ಥೆಗಳ ಇಮಾಮ್ ಹಾಗೂ ಮುಅಝ್ಝಿನ್‍ಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಲಾ 3 ಸಾವಿರ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ, ನಾವು ಚರ್ಚುಗಳ ಪಾದ್ರಿಗಳು, ಜೈನಗುರುಗಳು ಹಾಗೂ ಗುರುದ್ವಾರದ ಗುರುಗಳನ್ನು ಒಳಗೊಂಡು ಎಲ್ಲ ಧರ್ಮಗಳ ಗುರುಗಳಿಗೂ ಆರ್ಥಿಕ ನೆರವಿನ ಜೊತೆಗೆ ರೇಷನ್ ಕಿಟ್‍ಗಳನ್ನು ವಿತರಿಸುತ್ತಿದ್ದೇವೆ ಎಂದು ಶಾಸಕ ಝಮೀರ್ ಅಹ್ಮದ್ ಖಾನ್ ಹೇಳಿದರು.

ಕೋವಿಡ್ ಸಾಂಕ್ರಮಿಕ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಆದುದರಿಂದಲೇ, ತನ್ನ ವೈಫಲ್ಯ ಮುಚ್ಚಿಕೊಳ್ಳುವ ಉದ್ದೇಶದಿಂದ ಲಾಕ್‍ಡೌನ್ ಅನ್ನು ಅನಿವಾರ್ಯವಾಗಿ ವಿಸ್ತರಣೆ ಮಾಡುತ್ತಿದೆ. ಸರಕಾರ ಲಾಕ್ ಡೌನ್ ವಿಸ್ತರಣೆ ಮಾಡುವುದೇ ಆದಲ್ಲಿ ಬಿಪಿಎಲ್ ಕಾರ್ಡುಗಳನ್ನು ಹೊಂದಿರುವ ಕುಟುಂಬಗಳಿಗೆ ತಲಾ 10 ಸಾವಿರ ರೂ.ಗಳ ನೆರವು ನೀಡಿ, ಆನಂತರ ಲಾಕ್‍ಡೌನ್ ಮಾಡಲಿ ಎಂದು ಅವರು ಆಗ್ರಹಿಸಿದರು.

ಕೇಂದ್ರದ ವಿರುದ್ಧ ವಾಗ್ದಾಳಿ: ಕೇಂದ್ರ ಸರಕಾರವು ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಗಳ ಏರಿಕೆಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ. ಇವತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಶೇ.69ರಷ್ಟು ತೆರಿಗೆಯನ್ನು ವಿಧಿಸುತ್ತಿವೆ. ಆದುದರಿಂದ, ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 100 ರೂ.ಗಳ ಗಡಿ ದಾಟಿದೆ. ತೈಲೋತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತೀವೆ. ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ ಎಂದು ಝಮೀರ್ ಅಹ್ಮದ್ ಖಾನ್ ಕಿಡಿಗಾರಿದರು.

ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 140 ಡಾಲರ್ ಇದ್ದಾಗ ಪ್ರತಿ ಲೀಟರ್ ಪೆಟ್ರೋಲ್ 65 ರೂ.ಗಳಿಗೆ ಮಾರಾಟವಾಗುತ್ತಿತ್ತು. ಆದರೆ, ಈಗ ಪ್ರತಿ ಬ್ಯಾರೆಲ್ ಕಚ್ಚಾ ತೈಲ 65 ಡಾಲರ್ ಗೆ ಲಭ್ಯವಿದ್ದಾಗ ಪೆಟ್ರೋಲ್ 100 ರೂ.ಗಳಿಗೆ ಮಾರಾಟವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಧಿಸುತ್ತಿರುವ ಹೆಚ್ಚಿನ ತೆರಿಗೆಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಅವರು ಹೇಳಿದರು.

ಎಚ್ಡಿಕೆ ಲಾಭದ ಹಿಂದೆ ಹೋಗುವ ರಾಜಕಾರಣಿ: ಜೆಡಿಎಸ್ ಪಕ್ಷದಲ್ಲಿ ನಾನು ಬೆಳೆದಿದ್ದು, ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಜೆಡಿಎಸ್ ವರಿಷ್ಠ ದೇವೇಗೌಡರ ರಾಜಕಾರಣವೇ ಬೇರೆ. ಅವರಿಗೆ ಸಿದ್ಧಾಂತವಿದೆ, ಜಾತ್ಯತೀತ ತತ್ವದ ಮೇಲೆ ನಂಬಿಕೆಯಿದೆ. ಕುಮಾರಸ್ವಾಮಿಗೆ ಎಲ್ಲಿ ಲಾಭ ಕಂಡು ಬಂದರೂ ಅಲ್ಲಿ ಪಲ್ಟಿ ಹೊಡೆದು ಬಿಡುತ್ತಾರೆ. ಅವರಿಗೆ ಅಧಿಕಾರ ಬೇಕು ಅಷ್ಟೇ ಎಂದು ಝಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಮನೆಗೆ ಕುಮಾರಸ್ವಾಮಿ ಎಷ್ಟು ಬಾರಿ ಹೋಗಿದ್ದಾರೆ ? ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು, ಅವರು ಎಷ್ಟು ಬಾರಿ ಯಡಿಯೂರಪ್ಪ ಮನೆಗೆ ಹೋಗಿದ್ದಾರೆ. ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದರೆ ಸಾಕಲ್ಲವೇ? ಸಿದ್ದರಾಮಯ್ಯ ಪತ್ರ ಬರೆದು ತಮ್ಮ ಕ್ಷೇತ್ರಕ್ಕೆ ಅನುದಾನ ಪಡೆದುಕೊಳ್ಳುತ್ತಾರೆ. ಆದರೆ, ಕುಮಾರಸ್ವಾಮಿ ಯಾಕೆ ಪದೇ ಪದೇ ಯಡಿಯೂರಪ್ಪ ಮನೆಗೆ ಹೋಗುತ್ತಾರೆ. ಅವರು ಯಾವಾಗ ಏನು ಬೇಕಾದರೂ ಮಾಡಬಹುದು. ಅವರೊಬ್ಬ ಪಲ್ಟಿ ಗಿರಾಕಿ ಎಂದು ಅವರು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಕೆ.ಅಲ್ತಾಫ್ ಖಾನ್, ಅಯ್ಯೂಬ್ ಖಾನ್, ಚಂದ್ರಶೇಖರ್ ಅಪ್ಲೋಡೊ, ಡಿ.ಸಿ.ರಮೇಶ್, ಮಲೀಕ್ ಬೇಗ್, ಸೈಯದ್ ಮುಜಾಹಿದ್, ಡಾ.ಶಾಂತಪ್ಪ, ರಿಝ್ವಾನ್ ಖಾನ್, ಸಿ.ಆರ್.ರವಿಪ್ರಸಾದ್, ಎಂ.ಎಂ.ಫಯಾಝ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News