ಆನ್‍ಲೈನ್ ಮೂಲಕ 10 ದಿನಗಳ ಯೋಗಾಭ್ಯಾಸ ಕಾರ್ಯಾಗಾರಕ್ಕೆ ಸಚಿವ ಡಾ.ನಾರಾಯಣಗೌಡ ಚಾಲನೆ

Update: 2021-06-11 18:00 GMT

ಬೆಂಗಳೂರು, ಜೂ.11: ವಿಶ್ವಕ್ಕೇ ಯೋಗಾಭ್ಯಾಸವನ್ನು ಹೇಳಿಕೊಟ್ಟ ದೇಶ ನಮ್ಮದು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಯೋಗದ ಬಗ್ಗೆ ಎಲ್ಲೆಡೆ ಪ್ರಚಾರ ಮಾಡುತ್ತಾರೆ. ನಾವು ಕೂಡ ಯೋಗಾಭ್ಯಾಸದ ಬಗ್ಗೆ ಯುವ ಜನರಲ್ಲಿ ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡಬೇಕಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಹೇಳಿದರು.

ವಿಶ್ವ ಯೋಗ ದಿನದ ಅಂಗವಾಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಿಮ್ಹಾನ್ಸ್ ಸಂಸ್ಥೆ ಹಾಗೂ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಆನ್‍ಲೈನ್ ಯೋಗ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೋನ ಕಾರಣದಿಂದ ಮನೆಯಲ್ಲೆ ಇರುವ ಈ ಸಂದರ್ಭದಲ್ಲಿ ಯೋಗಾಭ್ಯಾಸ ಬಹಳ ಪ್ರಾಮುಖ್ಯ. ಮನೆಯಿಂದ ಹೊರಗಡೆ ಬರಲಾಗದ ಸ್ಥಿತಿಯಲ್ಲಿರುವ ನಾವುಗಳು ಪ್ರತಿನಿತ್ಯ ದೈಹಿಕ ಹಾಗೂ ಮಾನಸಿಕ ಕ್ಷಮತೆಗೆ ಯೋಗಾಭ್ಯಾಸ ಮಾಡುವುದು ಅತ್ಯುತ್ತಮ. ಕೊರೋನ ನಮಗೆ ಬಾಧಿಸದಂತೆ ತಡೆಯುವುದಕ್ಕೂ ಇದು ಸಹಾಯವಾಗಲಿದೆ ಎಂದು ಅವರು ಹೇಳಿದರು.

ಇಂದಿನಿಂದ 10 ದಿನಗಳ ಕಾಲ ಆನ್‍ಲೈನ್ ಯೋಗ ಕಾರ್ಯಾಗಾರ ನಡೆಯಲಿದೆ. ಯುವ ಸ್ಪಂದನ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬರು ಮನೆಯಲ್ಲೇ ಇದ್ದು ಆನ್‍ಲೈನ್‍ನಲ್ಲಿ ಯೋಗವನ್ನು ಕಲಿತು ಯೋಗಾಭ್ಯಾಸ ಮಾಡಲು ಅನುಕೂಲವಾಗಲಿ ಎಂದು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್ ಕಾರಣದಿಂದ ಎಲ್ಲರು ಒಂದೆಡೆ ಸೇರಲು ಅಸಾಧ್ಯವಾಗಿರುವ ಕಾರಣ ಆನ್‍ಲೈನ್ ಮೂಲಕ ಕಾರ್ಯಕ್ರಮ ನಡೆಸಲಾಗಿದೆ. ನುರಿತ ಯೋಗ ಶಿಕ್ಷಕರು 10 ದಿನಗಳ ಕಾಲ ಯೋಗಾಭ್ಯಾಸ ಹೇಳಿಕೊಡುತ್ತಾರೆ ಎಂದು ನಾರಾಯಣಗೌಡ ತಿಳಿಸಿದರು.

https://www.youtube.com/c/yuvaspandana, https://www.facebook.com/yuvaspandanaonline, http://twitter.com/yuvaspandana1?s=08, ಮೂಲಕ ಯೋಗಾಭ್ಯಾಸವನ್ನು ವೀಕ್ಷಿಸಬಹುದು. ಪ್ರತಿ ದಿನ ಬೆಳಗ್ಗೆ 6.30 ರಿಂದ 8 ಗಂಟೆ ವರೆಗೆ ಕಾರ್ಯಾಗಾರ ನಡೆಯಲಿದೆ ಎಂದು ಅವರು ಹೇಳಿದರು.

ಈ ಕಾರ್ಯಾಗಾರದಲ್ಲಿ ಕೇವಲ ನಮ್ಮ ರಾಜ್ಯದ ಜನರು ಮಾತ್ರವಲ್ಲದೆ, ದೇಶ-ವಿದೇಶದಲ್ಲಿರುವವರು ಪಾಲ್ಗೊಳ್ಳಲು ಅವಕಾಶವಿದೆ. ಪರಿವರ್ತನಾ ಯೋಗ ಫೌಂಡೇಶನ್ ಹಾಗೂ ಆರ್ಟ್ ಆಫ್ ಲಿವಿಂಗ್ ತಂಡದವರು ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಜೂ.21 ವಿಶ್ವ ಯೋಗ ದಿನಾಚರಣೆ ಇದೆ. ಇದರ ಹಿನ್ನೆಲೆಯಲ್ಲಿ 10 ದಿನಗಳ ಕಾಲ ಆನ್‍ಲೈನ್ ಮೂಲಕ ಯೋಗ ಕಾರ್ಯಾಗಾರ ನಡೆಸಲಾಗುತ್ತಿದೆ. ವಿಶ್ವ ಯೋಗ ದಿನದಂದು ಕಾರ್ಯಾಗಾರ ಸಮಾಪ್ತಿಯಾಗಲಿದೆ. ಕಾರ್ಯಾಗಾರಕ್ಕೆ ಸಾಕಷ್ಟು ಜನ ಸ್ಪಂದಿಸಿ ಆನ್‍ಲೈನ್ ಮೂಲಕ ಪಾಲ್ಗೊಂಡು ಯೋಗ್ಯಾಭ್ಯಾಸ ಆರಂಭಿಸಿದ್ದಾರೆ ಎಂದು ಅವರು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಇಲಾಖೆ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ನಿಮ್ಹಾನ್ಸ್ ನಿರ್ದೇಶಕ ಡಾ.ಶೇಖರ್ ಪಿ ಶೇಷಾದ್ರಿ, ನಿಮ್ಹಾನ್ಸ್ ಕುಲಸಚಿವ ಡಾ.ಬಿ.ಎಸ್.ಶಂಕರನಾರಾಯಣ ರಾವ್, ನಿಮ್ಹಾನ್ಸ್ ಪ್ರಾಧ್ಯಾಪಕ ಡಾ.ಪ್ರದೀಪ್ ಬಿ.ಎಸ್. ಸೇರಿದಂತೆ ಪ್ರಮುಖರು ಆನ್‍ಲೈನ್ ಮೂಲಕ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News