ಅಮಾನತುಗೊಂಡಿರುವ ಎಎಸ್ಸೈ ಮನೆ ಮೇಲೆ ಎಸಿಬಿ ದಾಳಿ
Update: 2021-06-15 17:22 GMT
ಬೆಂಗಳೂರು, ಜೂ.15: ಲಂಚ ಸ್ವೀಕಾರ ಆರೋಪ ಬೆನ್ನಲ್ಲೇ ಅಮಾನತುಗೊಂಡಿರುವ ಪೊಲೀಸ್ ಇಲಾಖೆಯ ಎಎಸ್ಸೈ ಮನೆ ಮೇಲೆ ಎಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಮಂಗಳವಾರ ಇಲ್ಲಿನ ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿರುವ ಎಎಸ್ಸೈ ದಯಾನಂದಸ್ವಾಮಿ ಅವರ ಮನೆ ಮೇಲೆ ಅಧಿಕಾರಿಗಳ ತಂಡವು ದಾಳಿ ನಡೆಸಿತು.
ಮನೆಯಲ್ಲಿ ದೊರೆತ ದಾಖಲಾತಿ ಪತ್ರಗಳನ್ನು ಪರಿಶೀಲಿಸಿದ ತನಿಖಾಧಿಕಾರಿಗಳ ತಂಡವು ಚರಾಸ್ತಿ ಹಾಗೂ ಸ್ಥಿರಾಸ್ತಿ ಬಗ್ಗೆ ಮಾಹಿತಿ ಕಲೆಹಾಕಿದೆ.
ಇತ್ತೀಚಿಗೆ ಲಂಚ ಪಡೆದ ಆರೋಪದಡಿ ಉದ್ಯಮಿಯೊಬ್ಬರು ನಗರದ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಹಾಗೂ ಎಸಿಬಿಗೆ ದೂರು ನೀಡಿದ್ದರು. ಆಂತರಿಕ ತನಿಖೆ ನಡೆಸಿ ಪ್ರಾಥಮಿಕ ತನಿಖಾ ವರದಿಯನ್ನು ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅವರು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಸಲ್ಲಿಸಿದ್ದರು. ಮೇಲ್ನೋಟಕ್ಕೆ ಎಎಸ್ಸೈ ತಪ್ಪಿತಸ್ಥರೆಂದು ಕಂಡು ಬಂದಿದ್ದರಿಂದ ಅಮಾನತು ಮಾಡಿ ತನಿಖೆಗೆ ಶಿಫಾರಸು ಮಾಡಲಾಗಿತ್ತು.