ತಮಿಳುನಾಡಿನ ಮಾಜಿ ಸಚಿವ ಬೆಂಗಳೂರಿನಲ್ಲಿ ಬಂಧನ

Update: 2021-06-20 05:50 GMT

ಆನೇಕಲ್, ಜೂ,20: ಮಲೇಶ್ಯ ಮೂಲದ ಮಹಿಳೆಯೊಬ್ಬಳನ್ನು ಅತ್ಯಾಚಾರಗೈದ ಆರೋಪಕ್ಕೆ ಸಂಬಂಧಿಸಿ ತಮಿಳುನಾಡಿನ ಮಾಜಿ ಸಚಿವ ಎಐಎಡಿಎಂಕೆ ಮುಖಂಡ ಎಂ.ಮಣಿಕಂಠನ್ ಅವರನ್ನು ಇಂದು ಬೆಳಗ್ಗೆ ಚೆನ್ನೈ ಪೊಲೀಸರು ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ.

ಮಣಿಕಂಠನ್ ಮಲೇಶ್ಯ ಮೂಲದ ನಟಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿಯಾಗಿದ್ದು, ಇವರಿಗೆ ತಮಿಳುನಾಡು ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಈ ಹಿನ್ನೆಲೆ ಬೆಂಗಳೂರಿನ ಆನೇಕಲ್ ಗಡಿಯಲ್ಲಿರುವ ನಾಯಕನಹಳ್ಳಿ ಹಸಿರುವ್ಯಾಲಿ ರೆಸಾರ್ಟ್ ನಲ್ಲಿ ಇವರು ತಲೆಮರೆಸಿಕೊಂಡಿದ್ದರೆನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಚೆನ್ನೈ ನ ಪೆರುಂಬಾಕಂ ಠಾಣೆಯ ಇನ್ ಸ್ಪೆಕ್ಟರ್ ಟಿ.ವೀರಕುಮಾರ್ ನೇತೃತ್ವದ ಪೊಲೀಸ್ ತಂಡ ಇಲ್ಲಿಗೆ ಆಗಮಿಸಿ ಮಣಿಕಂಠನ್ ಅವರನ್ನು ಬಂಧಿಸಿದೆ. ಬಳಿಕ ಆನೇಕಲ್ ಪೊಲೀಸ್ ಠಾಣೆಗೆ ಕರೆತಂದು ಮಾಹಿತಿ ಒದಗಿಸಿ ಚೆನ್ನೈಗೆ ಕರೆದೊಯ್ದಿದೆ.

ಮಲೇಶ್ಯ ಮೂಲದ ನಟಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ, ಮೂರು ಬಾರಿ ಒತ್ತಾಯಪೂರ್ವವಾಗಿ ಗರ್ಭಪಾತ ಮಾಡಿಸಿದ ಹಾಗೂ ಸಂತ್ರಸ್ತೆಗೆ ಬೆದರಿಕೆ ಒಡ್ಡಿದ ಆರೋಪವನ್ನು ಸಚಿವರು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News