ದೇಶದ ಮೊದಲ ಪ್ರಾಣಿ ಕಲ್ಯಾಣ ಸಹಾಯವಾಣಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ

Update: 2021-06-23 17:19 GMT

ಬೆಂಗಳೂರು, ಜೂ. 23: `ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಸುಸಜ್ಜಿತ ಪ್ರಾಣಿಕಲ್ಯಾಣ ಸಹಾಯವಾಣಿ(ವಾರ್ ರೂಮ್) ಆರಂಭಿಸುವ ಮೂಲಕ ರೈತರು, ಜಾನುವಾರು ಸಾಕಣೆದಾರರನ್ನು ತಲುಪಲು ಮತ್ತು ಜಾನುವಾರುಗಳ ಆರೋಗ್ಯ ಮತ್ತು ಹೈನು ಉತ್ಪಾದಕತೆ ಹೆಚ್ಚಿಸುವಲ್ಲಿ ಮಹತ್ತರವಾದ ಹೆಜ್ಜೆಯನ್ನಿಟ್ಟಿದೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬುಧವಾರ ಇಲ್ಲಿನ ಹೆಬ್ಬಾಳದ ಪಶು ಪಾಲನಾ ಭವನದಲ್ಲಿ ಗೋಪೂಜೆ ಮಾಡಿದ ಬಳಿಕ ಪ್ರಾಣಿ ಕಲ್ಯಾಣ ಸಹಾಯವಾಣಿಗೆ (ವಾರ್ ರೂಮ್) ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಜಿಡಿಪಿಗೆ ಪಶುಸಂಗೋಪನೆ ಕೊಡುಗೆ ದೊಡ್ಡದು. ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸಂಪನ್ಮೂಲವೂ ಆಗಿರುವ ಜಾನುವಾರುಗಳ ಸುರಕ್ಷತೆಗೆ ಸರಕಾರ ವಿಶೇಷ ಆಸ್ಥೆ ವಹಿಸಲಿದೆ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್, ವಾರ್ ರೂಮ್ ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ. ಪ್ರಾಣಿ ಕಲ್ಯಾಣ ಸಹಾಯವಾಣಿ ರೈತರಿಗೆ ವರದಾನ. ರೈತರ ಆಪತ್ಬಾಂಧವ ಎಂದರೂ ತಪ್ಪಾಗುವುದಿಲ್ಲ. ಪಶುಸಂಗೋಪನೆ ಇಲಾಖೆಯ ಜಾನುವಾರು ಆರೋಗ್ಯ ಸೇವೆಗಳು ರೈತರ ಮನೆ ಬಾಗಿಲನ್ನು ತಲುಪಿವೆ. ಜಾನುವಾರುಗಳ ಆರೋಗ್ಯ ಕಾಪಾಡುವಲ್ಲಿ ಇಲಾಖೆ ಹೆಚ್ಚು ಶ್ರಮವಹಿಸುತ್ತಿದೆ. ಈಗ ಉದ್ಘಾಟನೆಗೊಂಡ ಪ್ರಾಣಿ ಕಲ್ಯಾಣ ಸಹಾಯವಾಣಿ ಉಪಯೋಗವನ್ನು ಎಲ್ಲ ರೈತರು ಪಡೆದುಕೊಳ್ಳಬೇಕು' ಎಂದು ಮನವಿ ಮಾಡಿದರು.

ವಿಶೇಷತೆಗಳು: ಪ್ರಾಣಿ ಕಲ್ಯಾಣ ಸಹಾಯವಾಣಿ ಸಂಖ್ಯೆ 8277100200. ಹೆಬ್ಬಾಳದಲ್ಲಿರುವ ಪಶುಪಾಲನಾ ಭವನದ 6ನೆ ಮಹಡಿಯಲ್ಲಿ ಪ್ರಾಣಿ ಕಲ್ಯಾಣ ಸಹಾಯವಾಣಿ ಸ್ಥಾಪಿಸಲಾಗಿದೆ. ಸುಮಾರು 45 ಲಕ್ಷ ರೂ.ವೆಚ್ವದಲ್ಲಿ ವಾರ್ ರೂಮ್ ನಿರ್ಮಾಣವಾಗಿದೆ. ಜಾನುವಾರುಗಳ ರೋಗ, ಪ್ರಕೃತಿ ವಿಕೋಪ ಮತ್ತು ಮಾನವನಿಂದ ಜಾನುವಾರುಗಳಿಗೆ ಉಂಟಾಗಬಹುದಾದ ಹಾನಿ ಮತ್ತು ಕ್ರೌರ್ಯಗಳಿಂದ ಜಾನುವಾರುಗಳನ್ನು ರಕ್ಷಿಸಲು ಹಾಗೂ ಅವುಗಳ ಅರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ 24/7 ಪ್ರಾಣಿ ಕಲ್ಯಾಣ ಸಹಾಯವಾಣಿಯು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.

ಪ್ರಾಣಿ ಕಲ್ಯಾಣ ಸಹಾಯವಾಣಿಯು ದೂರವಾಣಿ/ ವಾಟ್ಸಪ್ ಟ್ವಿಟರ್/ಫೇಸ್‍ಬುಕ್/ಇನ್ಸ್ಟಾಗ್ರಾಂ/ಇ-ಮೇಲ್ ಇತ್ಯಾದಿಗಳ ಮೂಲಕ ಸ್ವೀಕರಿಸಿದ ಕರೆ/ದೂರು/ ಪ್ರಶ್ನೆಗಳ ಸಂಖ್ಯೆಗಳು ಮತ್ತು ಈ ಕುರಿತಂತೆ ಕೈಗೊಂಡ ಕ್ರಮಗಳ ಕುರಿತು ಇಲಾಖೆಯ ವೆಬ್ಸೈಟ್ನಲ್ಲಿ ದೈನಂದಿನ ಅಂಕಿ ಅಂಶಗಳನ್ನು ಪ್ರಕಟಿಸಲಾಗುತ್ತದೆ. ಹೈನುಗಾರಿಕೆ ಕುರಿ, ಮೇಕೆಗಳ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ ತರಬೇತಿಗಳ ಬಗ್ಗೆ ಮಾಹಿತಿ ನೀಡುವುದು.

ಜಾನುವಾರು ಸಾಂಕ್ರಾಮಿಕ ರೋಗಗಳ ವಿವರ ರೋಗೋದ್ರೇಕ ಸಮಯದಲ್ಲಿ ಅವುಗಳ ಹತೋಟಿ ಹಾಗೂ ನಿಯಂತ್ರಣ ಮತ್ತು ಚಿಕಿತ್ಸೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ. ತುರ್ತು ಚಿಕಿತ್ಸೆಗಾಗಿ ಬಂದ ಕರೆಗಳಿಗೆ ಹತ್ತಿರವಿರುವ ಪಶುವೈದ್ಯ ಸಂಸ್ಥೆಯ ಸಿಬ್ಬಂದಿ /ಅಧಿಕಾರಿಗಳಿಗೆ ವರ್ಗಾಯಿಸಿ ಚಿಕಿತ್ಸೆ ನೀಡಲು ಮತ್ತು ಕ್ರಮ ತೆಗೆದುಕೊಳ್ಳಲು ಸಂಬಂಧಿಸಿದವರಿಗೆ ಸೂಚಿಸುವುದು ಹಾಗೂ ಅನುಪಾಲನೆ ಮಾಡುವುದು.

ಜಾನುವಾರು ಹತ್ಯೆ ಪ್ರತಿಬಂದಕ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ ಜಾರಿಗೊಳಿಸುವ ಸಂಬಂಧ ಸೂಕ್ತ ಸಲಹೆ ಹಾಗೂ ಮಾಹಿತಿಯನ್ನು ನೀಡುವುದು. ಇಲಾಖೆಯ 42,12 ಸಂಸ್ಥೆಗಳು, 2,900 ಪಶು ವೈದ್ಯರು ಮತ್ತು 2,200 ಇತರೆ ಸಿಬ್ಬಂದಿ ಮೂಲಕ ಸೇವೆ ಲಭವಾಗಲಿದೆ. ತಂತ್ರಜ್ಞಾನ ಬಳಸಿ ಗೋಶಾಲೆಗಳ ನಿರ್ವಹಣೆ ಮತ್ತು ಮಾಹಿತಿ ನೀಡುವುದು.ಗೋಹತ್ಯೆ ಪ್ರತಿಬಂಧಕ ಕಾಯ್ದೆ ಅನುಷ್ಟಾನದ ಕುರಿತಾಗಿ ಸಾರ್ವಜನಿಕರಿಂದ ಬರುವ ದೂರುಗಳನ್ನು ಆಯಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು. ಪಶುಸಂಜೀವಿನಿ, ಅಂಬುಲೇಟರಿ ಕ್ಲಿನಿಕ್‍ಗಳನ್ನು ತಜ್ಞ ವೈದ್ಯರೊಂದಿಗೆ ಚಿಕಿತ್ಸೆಗೆ  ವ್ಯವಸ್ಥೆ ಮಾಡುವುದು ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News