ಕೆಎಸ್ಸಾರ್ಟಿಸಿ ಸಿಬ್ಬಂದಿಯ ರೋಗ ನಿರೋಧಕ ಶಕ್ತಿ ವೃದ್ಧಿಗೆ 'ಸಿಂಹ ಕ್ರಿಯಾ ಯೋಗ'

Update: 2021-06-30 16:58 GMT

ಬೆಂಗಳೂರು, ಜೂ. 30: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಸಿಬ್ಬಂದಿಗೆ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ಹಾಗೂ ಶ್ವಾಸಕೋಶವನ್ನು ಕಾಪಾಡಿಕೊಳ್ಳಲು ಈಶಾ ಫೌಂಡೇಶನ್ ಆಶ್ರಯದಲ್ಲಿ `ಸಿಂಹ ಕ್ರಿಯಾ ಯೋಗ' ನಾಳೆ(ಜು.1)ಯಿಂದ ನಡೆಯುವ ಆನ್‍ಲೈನ್ ಕಾರ್ಯಕ್ರಮಕ್ಕೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರು ಚಾಲನೆ ನೀಡಿದರು.

ಬುಧವಾರ ಶಾಂತಿನಗರದಲ್ಲಿರುವ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಯೋಗ ಸಿ.ಕಳಸದ, `ನಿಗಮದ ಸಿಬ್ಬಂದಿ ಶ್ರಮಜೀವಿಗಳು. ಹಗಲು-ರಾತ್ರಿಯನ್ನದೆ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ, ಸಾವಿರಾರು ವರುಷಗಳ ಇತಿಹಾಸವನ್ನು ಹೊಂದಿರುವ ಯೋಗ ಕಾರ್ಯಕ್ರಮವು ದೈಹಿಕ, ಮಾನಸಿಕ ಹಾಗೂ ಭೌತಿಕ ಆರೋಗ್ಯಕ್ಕೆ ಸಹಕಾರಿಯಾಗಲಿದೆ' ಎಂದು ಹೇಳಿದರು.

ಈಶಾ ಫೌಂಡೇಶನ್ ಸದರಿ ಯೋಗ ಕಾರ್ಯಕ್ರಮವು ಅತ್ಯಂತ ಪರಿಣಾಮಕಾರಿಯಾಗಿದ್ದು, ಮನೆಯಲ್ಲಿಯೇ ಮಾಡಬಹುದಾದ ಸರಳ ಕ್ರಿಯೆ ಇದಾಗಿದೆ. ಕಾರ್ಯಕ್ರಮವು ಕನ್ನಡದಲ್ಲಿಯೇ ರೂಪಿಸಲಾಗಿದ್ದು, ಸಿಬ್ಬಂದಿಗಳಿಗೆ ಯಾವುದೇ ಪ್ರಶ್ನೆಗಳಿಗೂ ಕಾರ್ಯಕ್ರಮದ ಕೊನೆಯಲ್ಲಿ ಉತ್ತರಿಸಲಾಗುವುದು. ನಾಳೆಯಿಂದ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ 30 ನಿಮಿಷಗಳ ಅವಧಿ ಒಂದು ವಾರ ಕಾಲ ಫೌಂಡೇಷನ್ ಯೋಗ ಹೇಳಿಕೊಡಲಿದೆ' ಎಂದು ಅವರು ತಿಳಿಸಿದರು.

`ಸಂಸ್ಥೆಯ ಎಲ್ಲ ಅಧಿಕಾರಿ/ಸಿಬ್ಬಂದಿಗಳ ವಾಟ್ಸಾಪ್ ಗುಂಪುಗಳಲ್ಲಿ ಕಾರ್ಯಕ್ರಮದ ಯೂಟ್ಯೂಬ್ ಲಿಂಕ್ ಅನ್ನು ರವಾನಿಸಿ, ಸಮಸ್ತ ಸಿಬ್ಬಂದಿಗೂ ಕುಟುಂಬದವರು ಅವರಿಗೆ ಅನುಕೂಲವಾದ ಸಮಯದಲ್ಲಿ ಭಾಗವಹಿಸಿ ಸದರಿ ಕಾರ್ಯಕ್ರಮವನ್ನು  ಸದುಪಯೋಗಪಡಿಸಿಕೊಳ್ಳಬೇಕು. ಕೊವಿಡ್‍ನಿಂದಾಗಿ ಜನರ ಜೀವನಶೈಲಿ ಬದಲಾವಣೆಯಾಗಬೇಕಾಗಿರುವುದು ಅನಿವಾರ್ಯ. ಅದರಲ್ಲಿಯೂ ಯೋಗ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. ಈಶಾ ಫೌಂಡೇಶನ್ ನಮ್ಮ ಸಿಬ್ಬಂದಿಗಳಿಗಾಗಿ ಸಿದ್ಧಪಡಿಸಿರುವ ಈ ಯೋಗ ಕಾರ್ಯಕ್ರಮವು ಸಿಬ್ಬಂದಿಗಳ ಆರೋಗ್ಯ ಸ್ನೇಹಿ ಉಪಕ್ರಮವಾಗಿದೆ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಫೌಂಡೇಶನ್‍ನ ರಾಧಿಕಾ ಶ್ರೀನಾಥ್, ನಿಗಮದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News