×
Ad

ಸಿದ್ದಲಿಂಗಯ್ಯ ಸ್ಮಾರಕ ನಿರ್ಮಾಣದ ಬಗ್ಗೆ ಶೀಘ್ರದಲ್ಲೇ ನಿರ್ಧಾರ: ಸಚಿವ ಅರವಿಂದ ಲಿಂಬಾವಳಿ

Update: 2021-06-30 22:46 IST

ಬೆಂಗಳೂರು, ಜೂ.30: ಇತ್ತೀಚೆಗೆ ನಿಧನರಾದ ಕವಿ, ನಾಡೋಜ ಡಾ.ಸಿದ್ದಲಿಂಗಯ್ಯ ಅವರ ಸ್ಮಾರಕ ನಿರ್ಮಾಣದ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಬುಧವಾರ ನಗರದಲ್ಲಿರುವ ಡಾ.ಸಿದ್ದಲಿಂಗಯ್ಯ ಅವರ ಮನೆಗೆ ಭೇಟಿ ಕೊಟ್ಟು ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಅರವಿಂದ ಲಿಂಬಾವಳಿ, ಈ ಸಂದರ್ಭದಲ್ಲಿ ಕುಟುಂಬ ಸದಸ್ಯರ ಬೇಡಿಕೆಗಳಿಗೆ ಸ್ಪಂದಿಸಿ ಈ ಭರವಸೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಲಿಂಬಾವಳಿ, ಸಿದ್ದಲಿಂಗಯ್ಯ ಅವರು ಇಡೀ ಕರ್ನಾಟಕದ ಆಸ್ತಿ. ಅವರು ನೀಡಿದ ಕೊಡುಗೆ  ಮರೆಯುವಂತಿಲ್ಲ. ಅವರು ನನ್ನೊಂದಿಗೆ ಅತ್ಯಂತ ಆತ್ಮೀಯ ಸಂಬಂಧ ಹೊಂದಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಪರಿಶಿಷ್ಟ ಜಾತಿ ವರ್ಗದವರ ಹೊಸ ಲೇಖಕರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರೊಂದಿಗೆ ಭಾಗವಹಿಸಿದ್ದೆ, ಅದೇ ಅವರ ಕಡೆಯ ಕಾರ್ಯಕ್ರಮ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸಿದ್ದಲಿಂಗಯ್ಯ ಅವರ ಸ್ಮಾರಕ ನಿರ್ಮಿಸುವುದು, ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಿದ್ದಲಿಂಗಯ್ಯ ನವರ ಕುಟುಂಬ ನಮಗೆ ಸಲ್ಲಿಸಿದೆ. ಅವರ ಬೇಡಿಕೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದರು.

ಸಿದ್ದಲಿಂಗಯ್ಯ ಅವರ ಪುಸ್ತಕಗಳ ಸಂಗ್ರಹವನ್ನು ವೀಕ್ಷಿಸಿದ ಸಚಿವರಿಗೆ ಅವರ ಕುಟುಂಬದವರು ಇತ್ತೀಚಿನ ಅವರ ಪ್ರಕಟಿತ ಪುಸ್ತಕಗಳನ್ನು ನೀಡಿದರು. ಸಿದ್ದಲಿಂಗಯ್ಯನವರ ಪತ್ನಿ ರಮಾಕುಮಾರಿ, ಪುತ್ರಿ ಡಾ.ಮಾನಸ, ಅಳಿಯ ಡಾ.ಗಿರೀಶ್ ಮತ್ತು ಅವರ ಸಹೋದರ ಶಿವಶಂಕರ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News