ಬೆಂಗಳೂರು: ಫೈನಾನ್ಸ್ ಕಚೇರಿ ಮಾಲಕನ ಕೊಲೆ
Update: 2021-07-02 21:41 IST
ಬೆಂಗಳೂರು, ಜು.2: ಫೈನಾನ್ಸ್ ಕಚೇರಿ ಮಾಲಕರೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿರುವ ಘಟನೆ ಇಲ್ಲಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಫೈನಾನ್ಸ್ ಕಚೇರಿ ಮಾಲಕರಾಗಿರುವ ಮದನ್ ಎಂಬವರೇ ಮೃತ ವಕ್ತಿ. ಶುಕ್ರವಾರ ಮದನ್ ಕಾರಿನಲ್ಲಿ ಸೊಪ್ಪು ಖರೀದಿಗೆ ಬನಶಂಕರಿಗೆ ಬಂದಿದ್ದು, ಈ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಮಾರಾಕಾಸ್ತ್ರಗಳಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದು, ಇದರ ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕೊಲೆಯಾದ ಮದನ್ ಆಡುಗೋಡಿಯಲ್ಲಿ ಫೈನಾನ್ಸ್ ಕಚೇರಿ ನಡೆಸುತ್ತಿದ್ದು, ಹಣದ ವಿಚಾರಕ್ಕೆ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಬನಶಂಕರಿ ಠಾಣೆಯ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.