ಮತ್ತೆ ಸುದ್ದಿಮಾಡುತ್ತಿರುವ ಝಿಕಾ ಜ್ವರ!

Update: 2021-07-09 19:30 GMT

ಆಧುನಿಕ ಸಂಶೋಧನೆಗಳು, ಆವಿಷ್ಕಾರಗಳು ಹೆಚ್ಚಿದಂತೆ, ವೈದ್ಯರಿಗೆ ಹೊಸ ರೋಗಗಳನ್ನು ಗುರುತಿಸುವಲ್ಲಿ ಮತ್ತು ಚಿಕಿತ್ಸೆಯನ್ನು ನೀಡುವಲ್ಲಿ ಹೆಚ್ಚಿನ ಅನುಕೂಲ ಉಂಟಾಗಿದೆ ಎನ್ನುವುದು ಸತ್ಯವಾದ ವಿಚಾರ. ಅದರ ಜೊತೆಗೆ ಕೆಲವೊಂದು ರೋಗಾಣುಗಳು ತಮ್ಮ ದೇಹದ ರಚನೆಯನ್ನು ಪರಿಸ್ಥಿತಿಗೆ ಪೂರಕವಾಗಿ ಮಾರ್ಪಾಡುಗೊಳಿಸಿಕೊಂಡು, ಹೊಸ ಹೊಸ ರೋಗಗಳಿಗೆ ಕಾರಣವಾಗಿ ವೈದ್ಯಲೋಕಕ್ಕೆ ಸವಾಲಾಗಿ ನಿಲ್ಲತೊಡಗಿರುವುದು ವಿಪರ್ಯಾಸವಾದರೂ ಸತ್ಯ. ಅಂತಹ ರೋಗಾಣು ಮತ್ತು ರೋಗಗಳ ಸಾಲಿಗೆ ಸೇರುವ ವೈರಾಣು ಝಿಕಾ ವೈರಸ್ ಮತ್ತು ಅದರಿಂದಾಗುವ ಕಾಯಿಲೆಯೇ ಝಿಕಾ ಜ್ವರ. ಸೊಳ್ಳೆಗಳಿಂದ ಹರಡುವ ಈ ವೈರಸ್ ಫ್ಲಾವಿ ವೈರಸ್ ಗುಂಪಿಗೆ ಸೇರಿದ ವೈರಾಣು ಆಗಿದ್ದು, ಮೊದಲ ಬಾರಿಗೆ ಉಗಾಂಡಾದ ‘ಝಿಕಾ’ ಅರಣ್ಯ ಪ್ರದೇಶಗಳಲ್ಲಿ 1947ರಲ್ಲಿ ರೀಸಸ್ ಮಂಗಗಳಲ್ಲಿ ಕಾಣಿಸಿಕೊಂಡಿತ್ತು. ಈ ಕಾರಣದಿಂದಲೇ ಝಿಕಾ ಜ್ಚರ ಎಂಬ ಹೆಸರು ಬಂತು. 1952ರಲ್ಲಿ ಉಗಾಂಡ ಮತ್ತು ತಾಂಜಾನಿಯದಲ್ಲಿ ಮಾನವರಲ್ಲಿ ಕಂಡುಬಂದಿತ್ತು. ಆನಂತರ 1968ರಲ್ಲಿ ನೈಜೀರಿಯಾದಲ್ಲಿ ಮನುಷ್ಯರ ರಕ್ತದಲ್ಲಿ ಈ ವೈರಾಣುಗಳು ಕಾಣಿಸಿಕೊಂಡವು. ಕ್ರಮೇಣ ಆಫ್ರಿಕಾ, ಅಮೆರಿಕ, ರಶ್ಯ ಖಂಡಗಳಲ್ಲಿ ಈ ವೈರಾಣು ಕಾಣಿಸಿಕೊಂಡವು. ಏಡಿಸ್ ಎಂಬ ಪ್ರಭೇದಕ್ಕೆ ಸೇರಿದ ಸೊಳ್ಳೆಗಳಿಂದ ಈ ಝಿಕಾ ವೈರಾಣು ಹರಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಕೇವಲ 40 ನ್ಯಾನೋಮೀಟರ್‌ನಷ್ಟು ಸೂಕ್ಷ ರಚನೆ ಹೊಂದಿರುವ ಫ್ಲಾವಿ ವೈರಸ್ ಪ್ರಭೇದಕ್ಕೆ ಸೇರಿದ RNA ಗುಂಪಿನ ಈ ಝಿಕಾ ಜಾತಿಯ ವೈರಾಣು ಈಗೀಗ ತನ್ನ ಆರ್ಭಟವನ್ನು ಜಗತ್ತಿನಾದ್ಯಂತ ತೋರಿಸತೊಡಗಿದೆ.

ರೋಗದ ಲಕ್ಷಣಗಳು ಏನು? 

ಪ್ರಾಥಮಿಕ ಹಂತದಲ್ಲಿ ಎಲ್ಲಾ ವೈರಸ್ ಜ್ವರಗಳಂತೆ, ತಲೆನೋವು, ಜ್ವರ, ಚರ್ಮದಲ್ಲಿ ತುರಿಕೆ ಮತ್ತು ಕೆಂಪು ಹಚ್ಚೆಗಳು, ಪಿಂಕ್ ಕಣ್ಣು ಅಥವಾ ಕಣ್ಣು ಉರಿ, ಸ್ನಾಯು ನೋವು, ಸಂದು ನೋವು ವಿಪರೀತ ಸುಸ್ತು, ನಿರಾಸಕ್ತಿ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಚಿಕುನ್ ಗುನ್ಯಾ ಮತ್ತು ಡೆಂಗಿ ಜ್ವರದಲ್ಲಿ ಕೂಡ ಇದೇ ರೀತಿಯ ಲಕ್ಷಣಗಳು ಪ್ರಾಥಮಿಕ ಹಂತದಲ್ಲಿ ಕಾಣಿಸುತ್ತವೆ. ಏಡಿಸ್ ಪ್ರಭೇದದ ಸೊಳ್ಳೆಗಳೇ ಡೆಂಗಿ ಮತ್ತು ಚಿಕುನ್ ಗುನ್ಯಾ ರೋಗಕ್ಕೆ ಕಾರಣವಾಗುತ್ತವೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಸಾಮಾನ್ಯವಾಗಿ ಈ ಲಕ್ಷಣಗಳು ಸೊಳ್ಳೆ ಕಚ್ಚಿದ 2ರಿಂದ 5 ದಿನಗಳಲ್ಲಿ ಆರಂಭವಾಗಿ ಒಂದು ವಾರದ ವರೆಗೆ ಇರಬಹುದು. ಉಷ್ಣವಲಯದ ದೇಶಗಳಲ್ಲಿ ಈ ರೋಗ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.

ಹೇಗೆ ಹರಡುತ್ತದೆ? 
ಝಿಕಾ ವೈರಸ್ ಸೊಂಕಿನಿಂದ ನರಳುತ್ತಿರುವ ವ್ಯಕ್ತಿಗೆ ಏಡಿಸ್ ಇಜಿಪ್ಟಿ ವೈರಾಣು ಕಚ್ಚಿದಾಗ ರೋಗಿಯ ರಕ್ತದಲ್ಲಿನ ವೈರಾಣು ಸೊಳ್ಳೆಯ ದೇಹಕ್ಕೆ ಸೇರಿಕೊಳ್ಳುತ್ತದೆ. ಈ ಸೊಳ್ಳೆ ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ, ವೈರಾಣು ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ರಕ್ತಪೂರಣ ಮತ್ತು ಲೈಂಗಿಕ ದೇಹ ಸಂಪರ್ಕದಿಂದಲೂ ರೋಗ ಹರಡುತ್ತದೆ ಎಂದು ಅಂದಾಜಿಸಲಾಗಿದೆ.

2015ರಲ್ಲಿ ಝಿಕಾ ವೈರಸ್ ಭ್ರೂಣದ ಸುತ್ತಲಿರುವ ಅಮ್ನಿಯೋಟಿಕ್ ದ್ರವದಲ್ಲಿ ಕಂಡು ಬಂದಿದ್ದು, ಫ್ಲಾಸೆಂಟಾ (ಹೊಕ್ಕಳ ಬಳ್ಳಿ) ಮೂಲಕವೂ ತಾಯಿಯಿಂದ ಮಗುವಿಗೆ ಸೇರುವ ಸಾಧ್ಯತೆ ಇರುತ್ತದೆ. ಆದರೆ ಎದೆಹಾಲಿನ ಮುಖಾಂತರ ವೈರಾಣು ಹರಡುವುದು ಇನ್ನೂ ದೃಢಪಟ್ಟಿಲ್ಲ. ಸೊಳ್ಳೆಯ ದೇಹ ಸೇರಿದ ಈ ವೈರಾಣುವಿಗೆ ಸಂತಾನೋತ್ಪತ್ತಿ ಮಾಡಲು ಕೇವಲ 10 ದಿನಗಳು ಸಾಕಾಗುತ್ತದೆ. ಸೊಳ್ಳೆಗಳ ಕಡಿತದಿಂದ ಮನುಷ್ಯ ಅಥವಾ ಮಂಗಗಳ ದೇಹ ಸೇರಿದ ಬಳಿಕ ದೇಹದ ದುಗ್ದ ಗ್ರಂಥಿಗಳು ಅಥವಾ ರಕ್ತ ಸಂಚಾರದ ರಕ್ತನಾಳಗಳಿಗೆ ಈ ವೈರಾಣುಗಳು ಸೇರಿಕೊಳ್ಳತ್ತದೆ. ಗರ್ಭಿಣಿಯರಲ್ಲಿ ಸಾಮಾನ್ಯ ಮೊದಲನೇ ತೈಮಾಸಿಕದ ಸಮಯ ಈ ವೈರಾಣುವಿಗೆ ತುತ್ತಾದಲ್ಲಿ ಬಹಳ ತೊದರೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ವೈರಾಣುವಿನ ಸೋಂಕಿಗೆ ತುತ್ತಾದಾಗ ಸಾಮಾನ್ಯವಾಗಿ ಗರ್ಭದಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಮಗುವಿನ ತಲೆಯ ಭಾಗ ಬಹಳ ಚಿಕ್ಕದಾಗಿರುತ್ತದೆ. ಆದರೆ ಈ ವೈರಾಣು ತಾಯಿಯಿಂದ ಗರ್ಭದೊಳಗಿನ ಭ್ರೂಣಕ್ಕೆ ಫ್ಲಾಸೆಂಟಾದ ಮುಖಾಂತರ ಹೇಗೆ ಹೋಗುತ್ತದೆ ಮತ್ತು ಮೆದುಳಿಗೆ ಹಾನಿ ಮಾಡುತ್ತದೆ ಎಂಬುದರ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಯ ಅಗತ್ಯವಿರುತ್ತದೆ.

ಪತ್ತೆ ಹಚ್ಚುವುದು ಹೇಗೆ? 

ರೋಗಿಯ ರಕ್ತದ ಸ್ಯಾಂಪಲ್, ಎಂಜಲು, ಮೂತ್ರದ ಪರೀಕ್ಷೆ ಮಾಡಿದಲ್ಲಿ ವೈರಾಣು ಪತ್ತೆ ಹಚ್ಚಬಹುದು. ಅದೇ ರೀತಿ ಪಿಸಿಆರ್ ಪರೀಕ್ಷೆಯ ಮುಖಾಂತರವೂ ವೈರಾಣು ಸೋಂಕಿನ ಲಕ್ಷಣ ಕಾಣಿಸಿದ 3-5 ದಿನಗಳ ನಂತರ ರೋಗವನ್ನು ಝಿಕಾ ವೈರಸ್ ಅಥವಾ ವೈರಸ್‌ನ ಆ್ಯಂಟಿಜೆನ್ ಪತ್ತೆಹಚ್ಚಿ ರೋಗವನ್ನು ಗುರುತಿಸಬಹುದು, ಅದೇ ರೀತಿ ರೋಗ ಕಾಣಿಸಿದ 5 ದಿನಗಳ ನಂತರ ಝಿಕಾ ಆ್ಯಂಟಿಬಾಡಿಗಳನ್ನು ಪತ್ತೆ ಹಚ್ಚಿ ರೋಗವನ್ನು ಗುರುತಿಸಬಹುದು. 

ಚಿಕಿತ್ಸೆ ಹೇಗೆ? 
ಸಾಮಾನ್ಯ ಜ್ವರವನ್ನು ಚಿಕಿತ್ಸೆ ಮಾಡಿದ ರೀತಿಯಲ್ಲಿಯೇ ರೋಗವನ್ನು ಉಪಶಮನಗೊಳಿಸಲಾಗುತ್ತದೆ. ರೋಗಿಗೆ ಹೆಚ್ಚಿನ ವಿಶ್ರಾಂತಿ ಮತ್ತು ಹೆಚ್ಚು ದ್ರವಾಹಾರದ ಅಗತ್ಯವಿರುತ್ತದೆ. ಈ ರೋಗಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲದ ಕಾರಣ ರೋಗವನ್ನು ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.

ತಡೆಗಟ್ಟುವುದು ಹೇಗೆ?  
ಈ ರೋಗದ ಸಾಂಧ್ರತೆ ಹೆಚ್ಚಿರುವ ದೇಶ ಮತ್ತು ಪ್ರದೇಶಗಳಿಗೆ ಪ್ರವಾಸವನ್ನು ಮಾಡಬಾರದು. ಅತೀ ಅಗತ್ಯವಿದ್ದಲ್ಲಿ ಸೊಳ್ಳೆಗಳಿಂದ ರಕ್ಷಣೆ ಸಿಗುವಂತಹ ಕಾಲು ಚೀಲ, ಕೈ ಚೀಲ, ದೇಹವನ್ನು ಮುಚ್ಚುವ ಅಂಗಿ, ಸೊಳ್ಳೆ ನಿರೋಧಕ ದ್ರಾವಣ, ಸೊಳ್ಳೆ ವಿಕರ್ಷಿಸುವ ಔಷಧಿ ಬಳಸತಕ್ಕದ್ದು. ಸೊಳ್ಳೆಗಳ ಕಡಿತದಿಂದ ಹೆಚ್ಚಿನ ತೊಂದರೆ ಉಂಟಾಗುವ ಗರ್ಭಿಣಿಯರು, ಹಿರಿಯ ನಾಗರಿಕರು, ದೇಹದ ರಕ್ಷಣಾ ಸಾಮರ್ಥ್ಯ ಕುಂಠಿತಗೊಂಡವರು ಹೆಚ್ಚಿನ ಮುತುವರ್ಜಿ ಮತ್ತು ಕಾಳಜಿವಹಿಸಬೇಕು. ಸೊಳ್ಳೆಗಳ ವಂಶಾಭಿವೃಧ್ಧಿ ಆಗಲು ಪೂರಕವಾದ ವಾತಾವರಣವನ್ನು ಇಲ್ಲದಂತೆ ಮಾಡಬೇಕು. ಸೊಳ್ಳೆಗಳ ಸಂಖ್ಯೆ ಕುಂಠಿತಗೊಳಿಸುವ ಮತ್ತು ಸಂತಾನೋತ್ಪತ್ತಿಯಾಗದಂತೆ ತಡೆಯುವ ಎಲ್ಲಾ ಪ್ರಕ್ರಿಯೆಗಳಿಗೆ ಚಾಲನೆ ನೀಡಬೇಕು. ಹಗಲು ಹೊತ್ತು ಹೆಚ್ಚಾಗಿ ಕಚ್ಚುವ ಈ ಏಡಿಸ್ ಸೊಳ್ಳೆಗಳಿಂದ ಕಡಿತಕ್ಕೊಳಗಾಗದಂತೆ ಹೆಚ್ಚಿನ ನಿಗಾ ವಹಿಸಬೇಕು.

ಕೊನೆ ಮಾತು:  
 ವಿಶ್ವದ ಯಾವುದೋ ದೇಶದ ಯಾವುದೋ ಮೂಲೆಯಲ್ಲಿ ಬಂದ ರೋಗಕ್ಕೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕೆಂದು ಮೂಗು ಮುರಿಯುವ ಸಮಯ ಇದಲ್ಲ. ಯಾಕೆಂದರೆ ಸುಧಾರಿತ ಪ್ರಯಾಣ ಸೌಕರ್ಯ ಮತ್ತು ತಂತ್ರಜ್ಞಾನದಿಂದಾಗಿ ಯಾವುದೇ ಕ್ಷಣದಲ್ಲಿ ನಮ್ಮ ದೇಶಕ್ಕೆ ಈ ರೋಗ ಬರುವ ಸಾಧ್ಯತೆ ಇದೆ. ಇದೀಗ ಕೇರಳದ ತಿರುವನಂತಪುರದಲ್ಲಿ 10 ಜನರಿಗೆ ಝಿಕಾ ಜ್ವರ ಎಂದು ವರದಿಯಾಗಿದೆ. ಇದರಲ್ಲಿ ಇಬ್ಬರು ಗರ್ಭಿಣಿಯರೂ ಇದ್ದಾರೆ ಎಂಬುದು ಆತಂಕಕಾರಿ ವಿಚಾರ. ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದ ಚೇತರಿಸಿಕೊಳ್ಳುವ ಈ ಸಂದಿಗ್ಧಕಾಲದಲ್ಲಿ ಇನ್ನೊಂದು ವೈರಾಣು ಸಾಂಕ್ರಾಮಿಕ ಸೋಂಕು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಸೂಕ್ಷ ನಿಗಾವಹಿಸಿ ಮುಂಜಾಗರೂಕತೆ ಕ್ರಮವನ್ನು ತಕ್ಷಣವೇ ಕೈಗೊಂಡಲ್ಲಿ ರೋಗ ಬರದಂತೆ ತಡೆಯಲು ಸಾಧ್ಯ.

Writer - ಡಾ. ಮುರಲೀ ಮೋಹನ್, ಚೂಂತಾರು

contributor

Editor - ಡಾ. ಮುರಲೀ ಮೋಹನ್, ಚೂಂತಾರು

contributor

Similar News