ಕೇಂದ್ರ ಸರಕಾರದ ದುರಾಸೆ, ಶೋಷಣೆಯಿಂದ ತೈಲ ಬೆಲೆ ಏರಿಕೆ: ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನೇಟ್ ಆರೋಪ
ಬೆಂಗಳೂರು, ಜು.14: ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಕೇಂದ್ರದ ಬಿಜೆಪಿ ಸರಕಾರ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಆರ್ಥಿಕ ಬಿಕ್ಕಟ್ಟು ಹಾಗೂ ಪಿಡುಗಿನ ಸಮಯದಲ್ಲಿ ಹಣದುಬ್ಬರ ಜನಸಾಮಾನ್ಯರಿಗೆ ಹೊರೆಯಾಗಿದೆ. ಸರಕಾರದ ದುರಾಸೆ ಹಾಗೂ ಶೋಷಣೆಯಿಂದ ಇಂಧನ ತೈಲ ಬೆಲೆ ಏರಿಕೆ ಹೆಚ್ಚುತ್ತಿದೆ. ಅತಿಯಾದ ಆಮದು ಸುಂಕದಿಂದ ತಾಳೆ ಎಣ್ಣೆ, ಬೇಳೆ ಕಾಲುಗಳ ಬೆಲೆ ಹೆಚ್ಚಾಗಿದೆ ಎಂದು ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನೇಟ್ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಟೂತ್ ಪೇಸ್ಟ್, ಸೋಪು, ಟೀ ಯಂತಹ ದಿನಬಳಕೆ ವಸ್ತುಗಳ ಮೇಲೆ ಅತಿಯಾದ ಜಿಎಸ್ಟಿಯಿಂದ ಜನ ಸಾಮಾನ್ಯ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಣದುಬ್ಬರ ವಿಚಾರವನ್ನು ಕಾಂಗ್ರೆಸ್ ಸಂಸತ್ ಸದನದಲ್ಲಿ ಪ್ರಸ್ತಾಪಿಸಲಿದೆ. ಇಂಧನ ತೈಲ ಬೆಲೆ ಇಳಿಸಬೇಕು, ಆಮದು ಸುಂಕ ಹಾಗೂ ಜಿಎಸ್ಟಿ ಪ್ರಮಾಣ ಕಡಿಮೆ ಮಾಡಬೇಕು ಎಂದು ಸರಕಾರಕ್ಕೆ ಕಾಂಗ್ರೆಸ್ ಆಗ್ರಹಿಸುತ್ತದೆ ಎಂದರು.
ಬೆಲೆ ಏರಿಕೆ ಗಾಯದ ಮೇಲೆ ಬರೆ: ಆರ್ಥಿಕ ಬಿಕ್ಕಟ್ಟು ಹಾಗೂ ಪಿಡುಗಿನ ಸಮಯದಲ್ಲಿ ಜನಸಾಮಾನ್ಯರು ತತ್ತರಿಸಿದ್ದು, ಈ ಮಧ್ಯೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಿದೆ. ಜನ ಭಯಾನಕ ವೈರಸ್ ಹಾಗೂ ಮೋದಿ ಸರಕಾರದ ಆರ್ಥಿಕ ದುರಾಡಳಿತದ ವಿರುದ್ಧ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಉದ್ಯೋಗ ನಷ್ಟ, ವೇತನ ಕಡಿತವಾಗಿದೆ. ಈ ಪರಿಸ್ಥಿತಿಯಲ್ಲಿ ಜನರ ಕೈಗೆ ಹಣ ನೀಡಬೇಕಾದ ಸರಕಾರ ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿ ಬೇಜವಾಬ್ದಾರಿ ತೋರುತ್ತಿದೆ ಎಂದು ಅವರು ಕಿಡಿಗಾರಿದರು.
ಯುಪಿಎ ಸರಕಾರದ ಉತ್ತಮ ಕೆಲಸದ ಮೂಲಕ ದೇಶದ 27 ಕೋಟಿ ಜನರನ್ನು ಬಡತನ ರೇಖೆಗಿಂತ ಹೊರಕ್ಕೆ ತಂದಿತ್ತು. ಆದರೆ ಬಿಜೆಪಿ ಸರಕಾರದ ದುರಾಡಳಿತ ದೇಶದ 23 ಕೋಟಿ ಜನ ಬಡತನ ರೇಖೆಗಿಂತ ಕೆಳಕ್ಕೆ ದೂಡಿದೆ. ಕಳೆದ ವರ್ಷ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ 2 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಶೇ.97ರಷ್ಟು ಜನ ಕಡಿಮೆ ವೇತನ ಪಡೆಯುವಂತಾಗಿದೆ. ಪರಿಣಾಮ ಭಾರತೀಯರು 1.25 ಲಕ್ಷ ಕೋಟಿ ರೂ.ಕಾರ್ಮಿಕ ನಿಧಿ ಹಣ ಪಡೆಯುವಂತಾಗಿದೆ ಎಂದು ಸುಪ್ರಿಯಾ ಶ್ರೀನೇಟ್ ಹೇಳಿದರು.
ದೇಶದ ಜಿಡಿಪಿ ಕುಸಿಯುತ್ತಿರುವಾಗ ಹಣದುಬ್ಬರ ಮಹಾಪರಾಧ. ಜನರ ಆದಾಯ ಕುಸಿದಿರುವಾಗ ಅಗತ್ಯ ವಸ್ತುಗಳ ಮೇಲೆ ಹೆಚ್ಚು ವ್ಯಯಿಸುವಂತೆ ಮಾಡುವಂತಾಗಿದೆ. ಇದು ಕೇವಲ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ವಿಚಾರ ಮಾತ್ರವಲ್ಲ. ಅಡುಗೆ ಎಣ್ಣೆ, ಬೇಳೆ ಕಾಳುಗಳು, ಚಹಾ, ಕಾಫಿ, ಸೋಪುಗಳ ಬೆಲೆ ಕೂಡ ಹೆಚ್ಚಾಗಿವೆ. ಇತ್ತೀಚಿನ ಹಣದುಬ್ಬರ ಸಂಖ್ಯೆ ಎಚ್ಚರಿಕೆ ಗಂಟೆಯಾಗಿದೆ. ಚಿಲ್ಲರೆ ಹಣದುಬ್ಬರವು ಆರ್ ಬಿ ಐನ ಗುರಿ ಶೇ.6ಕ್ಕಿಂತ ಹೆಚ್ಚಾಗಿದ್ದು, ಶೇ.6.3ರಷ್ಟು ತಲುಪಿದೆ ಎಂದು ಅವರು ಹೇಳಿದರು.
ಹಣದುಬ್ಬರದ ಮಾಹಿತಿ: ಗ್ರಾಹಕ ದರ ಸೂಚ್ಯಂಕ ಹಣದುಬ್ಬರ: ಮೇ ನಲ್ಲಿ ಶೇ.5.91 ರಿಂದ ಜೂನ್ ಗೆ ಶೇ.6.37ರಷ್ಟು ಹೆಚ್ಚಳ. ಮೂಲ ಹಣದುಬ್ಬರ (ಛಿoಡಿe iಟಿಜಿಟಚಿಣioಟಿ): ಶೇ.5.5 ರಿಂದ ಶೇ.5.8ಕ್ಕೆ ಏರಿಕೆ. ಆಹಾರ ಹಣದುಬ್ಬರ ಶೇ.5.58ರಷ್ಟು ತಲುಪಿದೆ. ಬೇಳೆಗಳ ಹಣದುಬ್ಬರ ಶೇ.10.01 ರಷ್ಟಾಗಿದೆ, ಹಣ್ಣುಗಳ ಹಣದುಬ್ಬರ ಶೇ.11.82, ಸಾರಿಗೆ ಹಣದುಬ್ಬರ ಶೇ.11.56, ಇಂಧನ ಹಣದುಬ್ಬರ ಶೇ.12.68, ತೈಲ ಹಣದುಬ್ಬರ ಶೇ.34.78 ರಷ್ಟಾಗಿದೆ. ಇದೆಲ್ಲದರ ನಡುವೆ ಜನ ಸಾಮಾನ್ಯರು ತಿನ್ನುವುದಾದರೂ ಏನು? ಈ ಪರಿಸ್ಥಿತಿಯಲ್ಲಿ ವಿದ್ಯುತ್, ಇಂಧನದಂತಹ ಮೂಲಭೂತ ಸೌಲಭ್ಯಗಳನ್ನು ಪಡೆಯುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದರು.
ಮೋದಿ ಸರಕಾರ ಜನರಿಗೆ ದ್ರೋಹ ಬಗೆದಿದೆ. ಅತಿಯಾದ ಹಣದುಬ್ಬರಕ್ಕೆ ಅತಿಯಾದ ಬೇಡಿಕೆ ಅಥವಾ ಜನರ ಕೈಯಲ್ಲಿ ಹೆಚ್ಚಿನ ಹಣವಿರುವ ಕಾರಣದಿಂದ ಉಂಟಾಗಿಲ್ಲ. ಬದಲಿಗೆ ಜನರ ಆದಾಯ ಕುಸಿದು ಜನರ ಕೈಯಲ್ಲಿ ಹಣವಿಲ್ಲದಂತಾಗಿದೆ. ಈ ಪರಿಸ್ಥಿತಿಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿರುವುದು ಸರಕಾರದ ಶೋಷಣೆ, ದುರಾಸೆ ಹಾಗೂ ಆರ್ಥಿಕತೆ ನಿರ್ವಹಣೆಯಲ್ಲಿನ ವೈಫಲ್ಯ ಎಂದು ಅವರು ದೂರಿದರು.
ಕಳೆದ 7 ವರ್ಷಗಳಲ್ಲಿ ಮೋದಿ ಸರಕಾರ ಕಚ್ಚಾ ತೈಲ ಬೆಲೆ ಕುಸಿತದ ಲಾಭವನ್ನು ಜನರಿಗೆ ನೀಡಲು ನಿರಾಕರಿಸಿದೆ. ಜನರಿಗೆ ಲಾಭ ನೀಡುವ ಬದಲು ತಾನೇ ಲಾಭ ಮಾಡಿಕೊಳ್ಳಲು ಮುಂದಾಗಿದೆ. ಕಳೆದ 7 ವರ್ಷಗಳಲ್ಲಿ 13 ಬಾರಿ ಅಬಕಾರಿ ಸುಂಕ ಹೆಚ್ಚಿಸಿ ಸರಕಾರ 23 ಲಕ್ಷ ಕೋಟಿ ರೂ.ಆದಾಯ ಮಾಡಿಕೊಂಡಿದೆ ಎಂದು ಸುಪ್ರಿಯಾ ಶ್ರೀನೇಟ್ ಆರೋಪಿಸಿದರು.
ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲಕ್ಕೆ ಭಾರತೀಯರು ಅತಿ ಹೆಚ್ಚು ಹಣ ಪಾವತಿಸುತ್ತಿದ್ದಾರೆ. ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 109 ರೂ.ಆಗಿದೆ. ಡೀಸೆಲ್ 90 ರೂ.ಗಳಿಗೂ ಹೆಚ್ಚಾಗಿದೆ. ಅಡುಗೆ ಅನಿಲ 834 ರೂ.ಆಗಿದೆ. ಈ ಬೆಲೆ ಏರಿಕೆ ಕಚ್ಚಾ ತೈಲ ಬೆಲೆ ಹೆಚ್ಚಳದಿಂದ ಆಗಿಲ್ಲ. ಅಂತರ್ರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 5 ಅಮೆರಿಕನ್ ಡಾಲರ್ ಆಗಿದೆ. ಯುಪಿಎ ಸರಕಾರದ ಅವಧಿಯಲ್ಲಿ ಇದರ ಬೆಲೆ 125 ಡಾಲರ್ ಆಗಿತ್ತು. ಆಗ ಪೆಟ್ರೋಲ್ 65 ರೂ. ಹಾಗೂ ಡೀಸೆಲ್ 44 ರೂ.ಇತ್ತು ಎಂದು ಅವರು ಹೇಳಿದರು.
ಸರಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 33 ರೂ.ಸುಂಕ ವಸೂಲಿ ಮಾಡುತ್ತಿದ್ದು, 2014ಕ್ಕಿಂತ ಶೇ.249ರಷ್ಟು ಹೆಚ್ಚು ಸುಂಕ ಪಡೆಯುತ್ತಿದೆ. ಡೀಸೆಲ್ ಮೇಲೆ 32 ರೂ.ಸುಂಕ ಪಡೆಯುತ್ತಿದ್ದು, 7 ವರ್ಷಗಳಲ್ಲಿ ಶೇ.796ರಷ್ಟು ಏರಿಕೆಯಾಗಿದೆ. ಇದರಿಂದ ಕೇಂದ್ರ ಸರಕಾರ ಒಂದೇ ಆರ್ಥಿಕ ವರ್ಷದಲ್ಲಿ 3.89 ಲಕ್ಷ ಕೋಟಿ ರೂ.ಸುಂಕದ ರೂಪದಲ್ಲಿ ಸಂಗ್ರಹಿಸುತ್ತಿದೆ. ಇದರಿಂದಾಗಿ ದೇಶದಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆಗಿಂತ ತೈಲದ ಮೇಲಿನ ತೆರಿಗೆ ಸಂಗ್ರಹ ಹೆಚ್ಚಾಗಿದೆ ಎಂದು ಅವರು ದೂರಿದರು.
ಅಡುಗೆ ಅನಿಲ ದರದಲ್ಲಿ ಕಳೆದ 6 ಬಾರಿ ಏರಿಕೆಯಿಂದ ಶೇ.240ರಷ್ಟು ಹೆಚ್ಚಾಗಿದೆ. ಕಳೆದ ನವೆಂಬರ್ ನಲ್ಲಿ 594 ರೂ.ರಷ್ಟಿದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ ಈಗ 834 ರೂ.ಆಗಿದೆ. ನಿರಂತರ ಬೆಲೆ ಏರಿಕೆಯಿಂದ ನಿಯಂತ್ರಿತ ಹಾಗೂ ಮಾರುಕಟ್ಟೆ ಬೆಲೆ ನಡುವೆ ವ್ಯತ್ಯಾಸವೇ ಇಲ್ಲದಂತಾಗಿ ಜನರಿಗೆ ಸಬ್ಸಿಡಿ ಸಿಗದಂತಾಗಿದೆ ಎಂದು ಸುಪ್ರಿಯಾ ಶ್ರೀನೇಟ್ ಹೇಳಿದರು.
ಕೇಂದ್ರ ಸರಕಾರ ಕಳೆದ 7 ವರ್ಷಗಳಿಂದ ಅಧಿಕಾರ ನಡೆಸಿದ್ದರೂ ಬೆಲೆ ಏರಿಕೆ ವಿಚಾರದಲ್ಲಿ ನಾಚಿಕೆ ಇಲ್ಲದೆ ಈ ಹಿಂದಿನ ಸರಕಾರವನ್ನು ಟೀಕಿಸಲು ಮುಂದಾಗಿದೆ. ಗ್ರಾಹಕರನ್ನು ರಕ್ಷಿಸಲು ತೈಲ ಬಾಂಡ್ ಗಳನ್ನು ಪರಿಚಯಿಸಲಾಯಿತು. ಕಳೆದ 7 ವರ್ಷಗಳಲ್ಲಿ ತೈಲ ಬಾಂಡ್ ಗಳಿಂದ ಆಗಿರುವ ಹೊರೆ ಅತ್ಯಲ್ಪ. ಮೋದಿ ಸರಕಾರ ಈ ಅವಧಿಯಲ್ಲಿ ಜನರಿಂದ ಸುಂಕದ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ಕೇವಲ ಶೇ.3.5ರಷ್ಟನ್ನು ಮಾತ್ರ ತೈಲಬಾಂಡ್ ಗೆ ವ್ಯಯಿಸಿದೆ ಎಂದು ಅವರು ಹೇಳಿದರು.
ಈ ಆರ್ಥಿಕ ನಿರ್ವಹಣೆ ವೈಫಲ್ಯ ಸರಕಾರದ ಆರ್ಥಿಕತೆ ಕುರಿತ ಅಜ್ಞಾನಕ್ಕೆ ಸಾಕ್ಷಿಯಾಗಿದೆ. ನಮ್ಮ ಜಿಡಿಪಿಯ ಶೇ.60ರಷ್ಟು ಬಳಕೆಯಾಗುತ್ತಿದೆ. ಆರ್ಥಿಕ ಮುಗ್ಗಟ್ಟಿನಿಂದ ಜನ ಉದ್ಯೋಗ ಕಳೆದುಕೊಂಡಿದ್ದು, ವೇತನ ಕಡಿತವಾಗಿರುವುದರಿಂದ ಬೇಡಿಕೆ ಕುಸಿದಿದೆ. ಇದನ್ನು ಸರಿಪಡಿಸಿ, ಬೇಡಿಕೆ, ಬಂಡವಾಳ ಹಾಗೂ ಉದ್ಯೋಗ ಮರುಕಲಿಸಲು ಜನರ ಕೈಗೆ ಹಣ ನೀಡುವ ನ್ಯಾಯ್ ಯೋಜನೆ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಜನರ ಮೇಲಿನ ಹೊರೆ ಇಳಿಸಲು ಸರಕಾರ ಕೂಡಲೇ ಪೆಟ್ರೋಲ್, ಡೀಸೆಲ್ ಹಾಗೂ ಎಲ್ ಪಿಜಿ ಬೆಲೆ ಇಳಿಸಬೇಕು. ಆಮದು ಸುಂಕ ಪರಿಶೀಲಿಸಬೇಕು. ದಿನಬಳಕೆ ವಸ್ತುಗಳ ಮೇಲಿನ ಜಿಎಸ್ಟಿ ದರ ಇಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ. ಈ ಎಲ್ಲ ವಿಚಾರಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ಜತೆಗೆ ಜನರಿಗೆ ಪರಿಹಾರ ನೀಡುವಂತೆ ಕಾಂಗ್ರೆಸ್ ಆಗ್ರಹಿಸಲಿದೆ ಎಂದು ಸುಪ್ರಿಯಾ ಶ್ರೀನೇಟ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ.ಬಿ.ಎಲ್.ಶಂಕರ್, ಕಾಂಗ್ರೆಸ್ ನಾಯಕಿ ಐಶ್ವರ್ಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.