ಆಹಾರ ನಿರ್ವಹಣೆಯಲ್ಲಿ ಗುಣಮಟ್ಟ ಕಾಪಾಡಿ: ಸಚಿವ ಉಮೇಶ್ ಕತ್ತಿ
ಬೆಂಗಳೂರು, ಜು.14: ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಭಾರತೀಯ ಆಹಾರ ನಿಗಮದ ಮುಖ್ಯ ಆಹಾರ ಸಂಗ್ರಹಣಾಗಾರಕ್ಕೆ ಇಂದು ದಿಢೀರ್ ಭೇಟಿ ನೀಡಿದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ, ನಿಗಮವು ಸದಾ ಆಹಾರ ನಿರ್ವಹಣೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಹೆಚ್ಚಿನ ಆಧ್ಯತೆ ನೀಡಬೇಕು ಮತ್ತು ಗುಣಮಟ್ಟದ ಆಹಾರ ಧಾನ್ಯಗಳನ್ನು ಮಾತ್ರ ಜನರಿಗೆ ಬಿಡುಗಡೆ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂಗ್ರಹಣಾಗಾರವು ರಾಜ್ಯದಲ್ಲೇ ಅತಿ ದೊಡ್ಡ ಸಂಗ್ರಹಣಾಗಾರಗಳಲ್ಲಿ ಒಂದಾಗಿದ್ದು, ಇಲ್ಲಿ 1.05 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಸಂಗ್ರಹಿಸಬಹುದು ಎಂದ ಅವರು, ಈ ಸಂಕೀರ್ಣದಲ್ಲಿ 17 ಉಗ್ರಾಣ ಗಳಿದ್ದು ಪ್ರತಿ ಉಗ್ರಾಣದಲ್ಲಿ 5000 ಮೆಟ್ರಿಕ್ ಟನ್ ಆಹಾರ ದಾಸ್ತಾನು ಮಾಡಬಹುದಾಗಿದೆ ಎಂದರು.
ಸಂಗ್ರಹಣಾಗಾರಕ್ಕೆ ರೈಲು ರೇಕ್ ಮೂಲಕ ಆಹಾರ ಧಾನ್ಯಗಳ ಆಗಮನ, ಧಾನ್ಯಗಳ ವೈಜ್ಞಾನಿಕ ಸಂಗ್ರಹಣೆ ಹಾಗೂ ವಿತರಣೆ ಪ್ರಕ್ರಿಯೆಗಳನ್ನು ಸಚಿವರು ಪರಿಶೀಲಿಸಿದರು. ನಂತರ ನಿಗಮದ ಆಹಾರ ವಿಶ್ಲೇಷಣಾ ಪ್ರಯೋಗಾಲಯಕ್ಕೆ ಭೇಟಿ ನೀಡಿ ಧಾನ್ಯ ವಿಶ್ಲೇಷಣಾ ವಿಧಾನಗಳನ್ನು ವೀಕ್ಷಿಸಿದರು.
ನಿಗಮದ ಕಾರ್ಯವಿಧಾನಗಳ ಬಗ್ಗೆ ರಾಜ್ಯದ ಪ್ರಧಾನ ವ್ಯವಸ್ಥಾಪಕ ರಾಜು ವಿವರಿಸಿದರು. ನಿಗಮದ ಉಪ ಪ್ರಧಾನ ವ್ಯವಸ್ಥಾಪಕ ಕಮಲಾಕರ್, ಜಿಲ್ಲಾ ವ್ಯವಸ್ಥಾಪಕ ಭಾಸ್ಕರ್, ಗುಣಮಟ್ಟ ವಿಶ್ಲೇಷಕರಾದ ಜನಾರ್ಧನ ಹಾಗೂ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ರಾಮೇಶ್ವರಪ್ಪ, ಮತ್ತಿತರರು ಉಪಸ್ಥಿತರಿದ್ದರು.