ದೇಶದಲ್ಲಿ ಯುವಕರು, ಮಹಿಳೆಯರಿಂದ ಬದಲಾವಣೆ ಸಾಧ್ಯ: ಡಿ.ಕೆ.ಶಿವಕುಮಾರ್
ಬೆಂಗಳೂರು, ಆ.13: ಈ ದೇಶದಲ್ಲಿ ವಿದ್ಯಾವಂತ, ಬುದ್ಧಿವಂತರು ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಪ್ರಜ್ಞಾವಂತರಿರಬೇಕು. ನಾವು ಈ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಅದು ಇಬ್ಬರಿಂದ ಮಾತ್ರ ಸಾಧ್ಯ. ಒಂದು ಮಹಿಳೆಯರು, ಮತ್ತೊಂದು ಯುವಕರು. ಇವರಿಬ್ಬರು ದೇಶದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಶುಕ್ರವಾರ ನಗರದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ನಡೆದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಇಬ್ಬರಿಗಾಗಿ ಒಂದು ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.
ಯುವಕರನ್ನು ಪ್ರತಿ ಹಳ್ಳಿ ಹಾಗೂ ಬೂತ್ಗಳಿಗೆ ಕಳುಹಿಸಿ. ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಸರಕಾರ ನಿಮಗೆ ಏನು ಮಾಡಿದೆ? ಉದ್ಯೋಗ, ಊಟ, ಮನೆ ಕೊಟ್ಟಿದ್ದಾರಾ? ಬೆಲೆ, ಹಣದುಬ್ಬರ ಇಳಿಸಿದ್ದಾರಾ? ನಾವು 60 ವರ್ಷದಲ್ಲಿ ಏನೂ ಮಾಡಿಲ್ಲ ಎಂದು ಹೇಳುತ್ತಾರೆ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಜನರಿಗೆ ಗೊತ್ತಿದೆ. ಈ ದೇಶಕ್ಕೆ ಕಾಂಗ್ರೆಸ್ ಏನು ಮಾಡಿದೆ ಎಂಬುದು ಎಂದು ಶಿವಕುಮಾರ್ ಹೇಳಿದರು.
ನಿನ್ನೆ ಕಳೆದುಹೋಗಿದೆ, ಅದು ನಿಮ್ಮ ಕೈಗೆ ಮತ್ತೆ ಸಿಗದ ಇತಿಹಾಸ. ನಾಳೆ ಎಂಬುದು ಭವಿಷ್ಯ. ನಾವು ಇರುತ್ತೇವೋ, ಇಲ್ಲವೋ ಗೊತ್ತಿಲ್ಲ. ಆದರೆ ಇಂದು ಎಂಬುದು ನಿಮ್ಮ ಕೈಯಲ್ಲಿದೆ. ಆ ದಿನವನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ಹೇಗೆ ಮುಡಿಪಿಟ್ಟಿದ್ದೇನೆ ಎಂಬುದು ಮುಖ್ಯ. ಇಂದು ಪ್ರತಿಯೊಬ್ಬ ವ್ಯಕ್ತಿ ಕೂಡ ಮುಖ್ಯ. ನಮ್ಮ ಧೃವನಾರಾಯಣ್ ಒಂದು ಮತದಿಂದ ಗೆಲುವು ಸಾಧಿಸಿದ್ದರು. ಅವಕಾಶ ಯಾವಾಗಲೂ ಸಿಗಲ್ಲ. ಇತ್ತೀಚೆಗೆ ಬೆಳಗಾವಿ ಚುನಾವಣೆಯಲ್ಲಿ ಪ್ರತಿ ಬೂತ್ನಲ್ಲಿ ಒಂದೆರಡು ಮತಗಳು ಹೆಚ್ಚಾಗಿದ್ದರೂ ಈ ರಾಜ್ಯದಲ್ಲಿ ಇತಿಹಾಸ ಸೃಷ್ಟಿಯಾಗುತ್ತಿತ್ತು. ಪ್ರಜಾಪ್ರಭುತ್ವದಲ್ಲಿ 49 ಬಂದರೂ ಶೂನ್ಯ, 51 ಬಂದರೆ ಶತಕ ಇದ್ದಂತೆ ಎಂದು ಅವರು ಹೇಳಿದರು.
ನೂತನ ತಲೆಮಾರಿನ ನಾಯಕರನ್ನು ಆರಿಸಬೇಕು. ನನಗೂ ಈ ಬಗ್ಗೆ ಆದೇಶ ಇದೆ. ಹೀಗಾಗಿ ನೀವು ನಾಯಕರಾಗಿ ಬೆಳೆಯಲು ಸಿದ್ಧರಾಗಿ. ನೀವು ಪ್ರತಿ ಕಾಲೇಜು, ಹಳ್ಳಿಗೆ ಹೋಗಬೇಕು. ನಾವು ಡಿಜಿಟಲ್ ಯೂಥ್ ಬಗ್ಗೆ ಮಾತನಾಡುತ್ತೇವೆ. ಇದು ಮತ ನೀಡುವುದಿಲ್ಲ. ಆದರೆ ನಮ್ಮ ಆಚಾರ-ವಿಚಾರ, ಪಕ್ಷದ ಕಾರ್ಯಕ್ರಮವನ್ನು ಜನರಿಗೆ ತಲುಪಿಸಬೇಕು ಎಂದು ಅವರು ತಿಳಿಸಿದರು.
ಮನಮೋಹನ್ ಸಿಂಗ್ ಹಾಗೂ ಸಿದ್ದರಾಮಯ್ಯ ಸರಕಾರದ ಕಾರ್ಯಕ್ರಮಗಳನ್ನು ನಾವು ಜನರಿಗೆ ಮುಟ್ಟಿಸಿದ್ದರೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ವಿಫಲರಾಗುತ್ತಿರಲಿಲ್ಲ. ಪ್ರತಿ ಬೂತ್ನಲ್ಲಿ ತಂಡ ರಚನೆಯಾಗಬೇಕು. ಮಾಧ್ಯಮಗಳು ನಮ್ಮನ್ನು ಬೆಂಬಲಿಸುತ್ತವೋ ಇಲ್ಲವೋ ಗೊತ್ತಿಲ್ಲ. ನಿಮ್ಮದೇ ಆದ ಜನ, ತಂಡ ಇರಬೇಕು ಎಂದು ಶಿವಕುಮಾರ್ ಕರೆ ನೀಡಿದರು.
ದಿಲ್ಲಿಯಲ್ಲಿ 74ನೇ ತಿದ್ದುಪಡಿ ವಿಚಾರದ ಬಗ್ಗೆ ಚರ್ಚೆ ಮಾಡುವಾಗ, ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ತುಂಬಿದ್ದರು. ಆ ಸಮಯದಲ್ಲಿ ನಾನು ಇದು ಯಾಕೆ, ಅದರ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದೆ. ಆಗ ರಾಜೀವ್ ಗಾಂಧಿ ಅವರು, ಈ ಹಿಂದೆ ಕಾಲೇಜು ಚುನಾವಣೆಗಳು ನಡೆದು ನಾಯಕರು ಹುಟ್ಟಿಕೊಳ್ಳುತ್ತಿದ್ದರು. ಆದರೆ ಈಗ ಈ ತಿದ್ದುಪಡಿಯಿಂದ ಪಂಚಾಯಿತಿಯಿಂದ ಪಾರ್ಲಿಮೆಂಟ್ವರೆಗೂ ನಾಯಕರನ್ನು ಬೆಳೆಸಲು ಅವಕಾಶವಿದೆ ಎಂದು ಹೇಳಿದ್ದರು ಎಂದು ಅವರು ತಿಳಿಸಿದರು.
ಹೀಗಾಗಿ ಇಲ್ಲಿ ಮೀಸಲಾತಿ ನೀಡಬೇಕು. ಎಲ್ಲ ಸಮಾಜದವರು, ಮಹಿಳೆಯರು ಹಾಗೂ ಯುವಕರಿಗೆ ಅವಕಾಶ ಸಿಗಬೇಕು. ನಾಯಕರನ್ನು ಬೆಳೆಸುವವನು ನಿಜವಾದ ನಾಯಕ, ಹಿಂಬಾಲಕರನ್ನು ಬೆಳೆಸುವವನಲ್ಲ ಎಂದು ರಾಜೀವ್ ಗಾಂಧಿ ಹೇಳಿದ್ದರು ಎಂದು ಶಿವಕುಮಾರ್ ಸ್ಮರಿಸಿದರು.
ನೀವು ಬರುತ್ತಿದ್ದಂತೆ ವಿಧಾನಸೌಧ ನೋಡಬೇಡಿ. ನಾನು ಮೊದಲು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. ವಿಲಾಸ್ರಾವ್ ದೇಶ್ಮುಖ್ ಪಂಚಾಯತ್ ಮುಖ್ಯಸ್ಥರಾಗಿದ್ದರು. ಜವಾಹರಲಾಲ್ ನೆಹರೂ ಅವರು ಮುನ್ಸಿಪಲ್ ಅಧ್ಯಕ್ಷರಾಗಿದ್ದರು. ಕೆಂಗಲ್ ಹನುಮಂತಯ್ಯ ಅವರು ಬೆಂಗಳೂರು ಮುನ್ಸಿಪಲ್ ಸದಸ್ಯರಾಗಿದ್ದವರು. ರಾಮಲಿಂಗಾರೆಡ್ಡಿ ಅವರು ಕಾರ್ಪೊರೇಟರ್ ಆಗಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ನೀವು ಕೆಳ ಹಂತದಿಂದ ಒಂದೊಂದೇ ಹೆಜ್ಜೆ ಇಡಬೇಕು ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಶಿವಕುಮಾರ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಆರ್.ಧೃವನಾರಾಯಣ್, ರಾಮಲಿಂಗಾರೆಡ್ಡಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಶ್ರೀನಿವಾಸ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್, ಮಾಜಿ ಸಚಿವ ಎಂ.ಆರ್.ಸೀತಾರಾಮ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.