"ನೆಹರು, ವಾಜಪೇಯಿ ಆದರ್ಶ ನಾಯಕರು, ಸರ್ವಪಕ್ಷಗಳೂ ಆತ್ಮಾವಲೋಕನ ಮಾಡಿಕೊಳ್ಳಬೇಕು": ಕೇಂದ್ರ ಸಚಿವ ನಿತಿನ್‌ ಗಡ್ಕರಿ

Update: 2021-08-20 17:27 GMT

ಹೊಸದಿಲ್ಲಿ,ಆ.20: ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಜವಾಹರಲಾಲ್ ನೆಹರು ಅವರನ್ನು ಆದರ್ಶ ನಾಯಕರು ಎಂದು ಬಣ್ಣಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು, ಎಲ್ಲ ರಾಜಕೀಯ ಪಕ್ಷಗಳು ಸಂಸತ್ತಿನಲ್ಲಿ ತಮ್ಮ ನಡವಳಿಕೆಯ ಬಗ್ಗೆ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಹಿಂದಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗಡ್ಕರಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇತ್ತೀಚಿಗೆ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳಿಂದ ಕಲಾಪಗಳಿಗೆ ವ್ಯತ್ಯಯ ಕುರಿತು ಅವರ ಅಭಿಪ್ರಾಯವನ್ನು ಸಂದರ್ಶನದಲ್ಲಿ ಕೋರಲಾಗಿತ್ತು.

‘ವಾಜಪೇಯಿ ಅವರು ನಮಗೆ ಸ್ಫೂರ್ತಿಯ ಮೂಲವಾಗಿದ್ದರೆ ನೆಹರು ಅವರೂ ಭಾರತಕ್ಕೆ ಮಹತ್ವದ ಕೊಡುಗೆಯನ್ನು ಸಲ್ಲಿಸಿದ್ದಾರೆ ’ಎಂದ ಗಡ್ಕರಿ, ಭಾರತೀಯ ಪ್ರಜಾಪ್ರಭುತ್ವದಲ್ಲಿ ವಾಜಪೇಯಿ ಮತ್ತು ನೆಹರು ಅವರು ಇಬ್ಬರು ಆದರ್ಶಪ್ರಾಯ ನಾಯಕರಾಗಿದ್ದಾರೆ. ತಾವು ಪ್ರಜಾಪ್ರಭುತ್ವದ ಘನತೆಯನ್ನು ಕಾಯ್ದುಕೊಳ್ಳುತ್ತೇವೆ ಎಂದು ಈ ಇಬ್ಬರೂ ನಾಯಕರು ಹೇಳುತ್ತಿದ್ದರು ಎಂದು ಹೇಳಿದರು.

ಹಿಂದೊಮ್ಮೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಲಾಪಗಳಿಗೆ ವ್ಯತ್ಯಯವನ್ನುಂಟು ಮಾಡಿದ್ದ ಗದ್ದಲದಲ್ಲಿ ತಾನೂ ಭಾಗಿಯಾಗಿದ್ದನ್ನು ನೆನಪಿಸಿಕೊಂಡ ಗಡ್ಕರಿ,‘ನಾನು ವಾಜಪೇಯಿಯವರನ್ನು ಭೇಟಿಯಾಗಿದ್ದಾಗ ಇದು ಪ್ರಜಾಪ್ರಭುತ್ವದಲ್ಲಿ ನಡೆದುಕೊಳ್ಳುವ ರೀತಿಯಲ್ಲ ಮತ್ತು ನಮ್ಮ ಸಂದೇಶವನ್ನು ಜನರಿಗೆ ತಲುಪಿಸುವುದು ಮುಖ್ಯವಾಗಿದೆ ಎಂದು ಅವರು ನನಗೆ ತಿಳಿಹೇಳಿದ್ದರು ’ಎಂದರು.

ಸದನ ಕಲಾಪಗಳಿಗೆ ವ್ಯತ್ಯಯ ದುರದೃಷ್ಟಕರ ಎಂದು ಹೇಳಿದ ಅವರು,‘ನಾವು ಪ್ರತಿಪಕ್ಷದಲ್ಲಿದ್ದಾಗ ಏನು ಮಾಡಿದ್ದೆವು ಎಂದು ಅವರು (ವಿರೋಧಪಕ್ಷಗಳು) ನಮ್ಮನ್ನು ಪ್ರಶ್ನಿಸುತ್ತಾರೆ. ಅದು ನಿಜ. ಅಧಿಕಾರದ ಖುರ್ಚಿಯ ಸ್ವರೂಪ ಹೇಗಿರುತ್ತದೆ ಎಂದರೆ ಅಲ್ಲಿ ಯಾರೇ ಕುಳಿತರೂ ಒಂದೇ ರೀತಿಯಲ್ಲಿ ವರ್ತಿಸುತ್ತಾರೆ. ನಾವೆಲ್ಲ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕು ಮತ್ತು ಕೊಂಚವಾದರೂ ಘನತೆಯನ್ನು ಕಾಯ್ದುಕೊಳ್ಳಬೇಕು ’ ಎಂದರು.

ನೆಹರು ಕುರಿತು ಗಡ್ಕರಿಯವರ ಹೇಳಿಕೆಯು ಅವರ ಪಕ್ಷದ ಸಹೋದ್ಯೋಗಿಗಳು ಮಾಜಿ ಪ್ರಧಾನಿಯವರ ವಿರುದ್ಧ ಮಾಡಿರುವ ಟೀಕೆಗಳಿಗೆ ತದ್ವಿರುದ್ಧವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ನಾಯಕರು ಜಮ್ಮು ಮತ್ತು ಕಾಶ್ಮೀರ ಹಾಗೂ 1962ರ ಚೀನಾ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ ನೆಹರು ಅವರನ್ನು ಟೀಕಿಸುತ್ತಲೇ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News