ಕರ್ನಾಟಕಕ್ಕೆ ನಾಲ್ಕು ಎನ್‍ಎಸ್‍ಎಸ್ ರಾಷ್ಟ್ರೀಯ ಪ್ರಶಸ್ತಿ; ಸಚಿವ ಡಾ. ನಾರಾಯಣಗೌಡ ಅಭಿನಂದನೆ

Update: 2021-09-18 10:46 GMT

ಬೆಂಗಳೂರು : ಪ್ರತಿಷ್ಠಿತ ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರೀಯ ಪ್ರಶಸ್ತಿಗೆ ರಾಜ್ಯದ ನಾಲ್ವರು ಆಯ್ಕೆಯಾಗಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನಾಲ್ವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅಭಿನಂದಿಸಿದ್ದಾರೆ.

ವಿಶ್ವವಿದ್ಯಾಲಯ ಮಟ್ಟದ ರಾಷ್ಟ್ರೀಯ ಪ್ರಶಸ್ತಿಗೆ ರಾಜ್ಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಾರ್ಯಕ್ರಮ ಸಂಯೋಜಕ ಡಾ. ಬಿ. ವಸಂತ ಶೆಟ್ಟಿ, ಕಾಲೇಜು ಮಟ್ಟದ ಅಧಿಕಾರಿಗಳಿಗೆ ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿಗೆ ಧಾರವಾಡದ ಜೆಎಸ್‍ಎಸ್‍ ಬನಶಂಕರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕಾರ್ಯಕ್ರಮ ಅಧಿಕಾರಿ ಸುರೇಶಪ್ಪ ಕೆ. ಸಜ್ಜನ, ರಾಷ್ಟ್ರಮಟ್ಟದಲ್ಲಿ ಕಾರ್ಯ ನಿರ್ವಹಿಸಿದ ಸ್ವಯಂಸೇವಕರ ವಿಭಾಗದಲ್ಲಿ ಬೆಂಗಳೂರಿನ ಕೆ.ಎಸ್‍.ಇನ್‍ಸ್ಟಿಟ್ಯೂಟ್‍ ಆಫ್ ಟೆಕ್ನಾಲಜಿಯ ಸ್ವಯಂ ಸೇವಕ ಸಿರೀಶ್ ಗೋವರ್ಧನ್‍ ಮತ್ತು ಮಂಗಳೂರು ಸೂರತ್ಕಲ್‍ನ ಗೋವಿಂದ ದಾಸ್ ಕಾಲೇಜಿನ ಬಿಂದಿಯಾ ಶೆಟ್ಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಳೆದ 6 ವರ್ಷಗಳಲ್ಲಿ ಎನ್‍ಎಸ್‍ಎಸ್‍ ರಾಷ್ಟ್ರೀಯ ಪ್ರಶಸ್ತಿಗೆ ರಾಜ್ಯದಿಂದ ಯಾರೂ ಆಯ್ಕೆಯಾಗಿರಲಿಲ್ಲ. ಈ ಬಾರಿ 4 ಜನ ಸಾಧಕರು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಸೆ. 24 ರಂದು ರಾಷ್ಟ್ರೀಯ ಸೇವಾ ಯೋಜನೆ ಸಂಸ್ಥಾಪನಾ ದಿನದ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ ಪ್ರಶಸ್ತಿ ಪುರಸ್ಕೃತರಿಗೆ ಸಚಿವ ಡಾ. ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News