ಹಣ ಸುಲಿಗೆ ಆರೋಪ: ಎಸಿಪಿ ಮೇಲಿನ ಎಫ್‍ಐಆರ್ ರದ್ದು

Update: 2021-09-18 17:38 GMT

ಬೆಂಗಳೂರು, ಸೆ.18: ವ್ಯಾಪಾರಿಗಳಿಗೆ ಹಣ ಸುಲಿಗೆ ಆರೋಪ ಪ್ರಕರಣ ಸಂಬಂಧ ಸಹಾಯ ಪೊಲೀಸ್ ಆಯುಕ್ತರೊಬ್ಬರ ಮೇಲೆ ದಾಖಲಾಗಿದ್ದ ಆರು ಪ್ರತ್ಯೇಕ ಎಫ್‍ಐಆರ್‍ಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಪ್ರಭುಶಂಕರ್ ವಿರುದ್ಧ ದಾಖಲಿಸಿದ್ದ ಎಫ್‍ಐಆರ್‍ಗಳನ್ನು ರದ್ದು ಮಾಡಲಾಗಿದೆ.
ಲಾಕ್‍ಡೌನ್ ಅವಧಿಯಲ್ಲಿ ಸಿಗರೇಟ್ ವ್ಯಾಪಾರಿಗಳಿಂದ ಹಣ ಸುಲಿಗೆ ಮಾಡಿದ ಆರೋಪ ಸಂಬಂಧ ಇತ್ತೀಚಿಗೆ ಎಸಿಬಿ ಮತ್ತು ಕಾಟನ್‍ಪೇಟೆ ಠಾಣೆ ಪೊಲೀಸರು ದಾಖಲಿಸಿರುವ ತಲಾ ಮೂರು ಎಫ್‍ಐಆರ್‍ಗಳನ್ನು ರದ್ದುಪಡಿಸುವಂತೆ ಕೋರಿ ಪ್ರಭುಶಂಕರ್ ಅವರು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ

ಪ್ರಕರಣದಲ್ಲಿ ಅರ್ಜಿದಾರರು ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು ಮತ್ತು ಹಣ ಸ್ವೀಕರಿಸಿದವರು ಎಂಬ ಬಗ್ಗೆ ಸಮಸ್ಯೆಗೊಳಗಾದವರು ಎಸಿಬಿಗೆ ದೂರು ಸಲ್ಲಿಸಿಲ್ಲ. ಪೊಲೀಸರು ದಾಖಲಿಸಿರುವ ಎಫ್‍ಐಆರ್‍ಗಳಲ್ಲಿ ಅರ್ಜಿದಾರರ ವಿರುದ್ಧ ಮಾಡಲಾದ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷ್ಯಧಾರಗಳಲ್ಲಿ ಸಾಕಷ್ಟು ಕೊರತೆಯಿದೆ. ಇಂತಹ ಸಂದರ್ಭದಲ್ಲಿ ಪ್ರಕರಣವನ್ನು ಮುಂದುವರಿಸಲು ಅವಕಾಶ ನೀಡುವುದು ಸರಿಯಲ್ಲ ಎಂದು ತೀರ್ಮಾನಿಸಿ ಎಫ್‍ಐಆರ್‍ಗಳನ್ನು ರದ್ದುಪಡಿಸಿ ಆದೇಶಿಸಿದೆ.

ಏನಿದು ಪ್ರಕರಣ?
ಲಾಕ್‍ಡೌನ್ ಅವಧಿಯಲ್ಲಿ ಅಕ್ರಮವಾಗಿ ಸಿಗರೇಟ್ ಮಾರಾಟಕ್ಕೆ ನೆರವು ನೀಡುವುದಾಗಿ ತಿಳಿಸಿ ವ್ಯಾಪಾರಿಗಳಿಂದ 62.5 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಸಿಸಿಬಿ ಎಸಿಪಿಯಾಗಿದ್ದ ಪ್ರಭುಶಂಕರ್ ವಿರುದ್ಧ ಕಾಟನ್‍ಪೇಟೆ ಠಾಣಾ ಪೊಲೀಸರು ಕಳೆದ ವಾರ್ಷಿಕ ಸಾಲಿನ ಮೇ 7ರಂದು ಮೂರು ಪ್ರತ್ಯೇಕ ಎಫ್‍ಐಆರ್ ದಾಖಲಿಸಿದ್ದರು.

ತದನಂತರ, ಅದನ್ನು ಆಧರಿಸಿ ಎಸಿಬಿ ಡಿವೈಎಸ್‍ಪಿ ರಾಜೇಂದ್ರ ಅವರು ಸಲ್ಲಿಸಿದ ಮನವಿ ಮೇರೆಗೆ ಭ್ರಷ್ಟಾಚಾರ ಆರೋಪ ಸಂಬಂಧ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವೂ ಅನುಮತಿ ನೀಡಿತ್ತು. ಇದರಿಂದ ಎಸಿಬಿಯು ಪ್ರತ್ಯೇಕ ಮೂರು ಎಫ್‍ಐಆರ್ ದಾಖಲಿಸಿತ್ತು. ಈ ಎಫ್‍ಐಆರ್‍ಗಳನ್ನು ರದ್ದುಪಡಿಸುವಂತೆ ಕೋರಿ ಪ್ರಭುಶಂಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News