ರೇಬಿಸ್ ನಿರ್ಲಕ್ಷ್ಯ ಸಲ್ಲದು

Update: 2021-09-27 19:30 GMT
ಸಾಂದರ್ಭಿಕ ಚಿತ್ರ (source: PTI)

ಸೆಪ್ಟಂಬರ್ 28ರಂದು ಮೊದಲ ರೇಬಿಸ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ಪ್ರೆಂಚ್ ರಸಾಯನ ಶಾಸ್ತ್ರ ತಜ್ಞ ಹಾಗೂ ಸೂಕ್ಷ್ಮಜೀವಿ ವಿಜ್ಞಾನಿ, ಸರ್ ಲೂಯಿಸ್ ಪ್ಯಾಶ್ಚರ್ ಅವರು ಮರಣ ಹೊಂದಿದ ದಿನ. ಅವರ ನೆನಪಿಗಾಗಿ ಈ ದಿನವನ್ನು ‘ವಿಶ್ವ ರೇಬಿಸ್ ದಿನ’ ಎಂದು ಆಚರಣೆಗೆ ತರಲಾಯಿತು.

ರೇಬಿಸ್ ರೋಗ ಸಾವಿರಾರು ವರ್ಷಗಳಿಂದ ಮನುಕುಲವನ್ನು ಕಾಡುತ್ತಿದ್ದರೂ, ಈ ಕಾಯಿಲೆಗೆ ಈವರೆಗೂ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಕಂಡು ಹಿಡಿಯಲಾಗದಿರುವುದು ಬಹಳ ಸೋಜಿಗದ ಸಂಗತಿ. ಜಾಗತಿಕವಾಗಿ ಪ್ರತಿ ವರ್ಷ ಸುಮಾರು 50,000ಕ್ಕೂ ಹೆಚ್ಚು ಮಂದಿ ಈ ರೋಗದಿಂದ ಸಾವನ್ನಪ್ಪುತ್ತಿದ್ದು, ಇದರಲ್ಲಿ ಶೇ. 95 ಮಂದಿ ಏಶ್ಯ ಮತ್ತು ಆಫ್ರಿಕಾ ಖಂಡದಲ್ಲಿಯೇ ಸಾಯುತ್ತಿದ್ದಾರೆ. ಜಾಗತಿಕ ಅಂಕಿ-ಅಂಶಗಳ ಪ್ರಕಾರ ಹುಚ್ಚು ನಾಯಿಯ ಕಡಿತಕ್ಕೊಳಗಾಗುವ ಶೇ. 95ರಿಂದ 97 ಮಂದಿ ಸಾವಿಗೀಡಾಗುತ್ತಿದ್ದು, ಪ್ರತಿ ಹತ್ತು ನಿಮಿಷಕ್ಕೊಮ್ಮೆ ಜಗತ್ತಿನ ಯಾವುದಾದರೊಂದು ಸ್ಥಳದಲ್ಲಿ, ಒಬ್ಬ ಮನುಷ್ಯ ರೇಬಿಸ್‌ನಿಂದಾಗಿ ಸಾಯುತ್ತಿದ್ದಾನೆ. ಆದಾಗ್ಯೂ, ರೇಬಿಸ್ ರೋಗ ಮಾರಣಾಂತಿಕವಾದರೂ, ಸೂಕ್ತ ಸಮಯದಲ್ಲಿ ಲಸಿಕೆಗಳನ್ನು ನೀಡಿದರೆ ಅದು ಪ್ರತಿಶತ 100 ಗುಣಪಡಿಸಬಹುದಾದ ಕಾಯಿಲೆಯಾಗಿದೆ. ರೇಬಿಸ್ ಪ್ರಾಣಿಗಳ ಮೂಲಕ ಮಾನವರಿಗೆ ಹರಡುವ ಕಾಯಿಲೆಯಾಗಿದ್ದು, ಸೋಂಕನ್ನು ಹೊಂದಿರುವ ನಾಯಿ, ಬೆಕ್ಕು, ಬಾವಲಿ, ರಕೂನ್ ಮತ್ತು ನರಿಗಳ ಕಡಿತದಿಂದ ಉಂಟಾಗುತ್ತದೆ. ಸಾಕು ನಾಯಿಗಳಿಗೆ ಮತ್ತು ಬೆಕ್ಕುಗಳಿಗೆ ಲಸಿಕೆಯನ್ನು ಹಾಕುವುದರ ಮೂಲಕ ರೋಗವನ್ನು ಖಂಡಿತವಾಗಿಯೂ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ.

ರೇಬಿಸ್ ಬಗ್ಗೆ ಒಂದಿಷ್ಟು...
ವಿಶ್ವದೆಲ್ಲೆಡೆ ರೇಬಿಸ್‌ನಿಂದ ಆಗುವ ಮರಣದ ಸಂಖ್ಯೆಯಲ್ಲಿ ಭಾರತವೊಂದರಲ್ಲೇ ಶೇ. 36ರಷ್ಟು ಕಾಣಸಿಗುತ್ತದೆ. ರೇಬಿಸ್ ಎನ್ನುವ ವೈರಸ್‌ನ ಸೋಂಕು ಹೆಚ್ಚಾಗಿ ನಾಯಿಯ ಕಡಿತದಿಂದ ಹರಡುತ್ತದೆ. ಸಾಮಾನ್ಯವಾಗಿ ಸುಮಾರು ಶೇ. 60 ಬೀದಿನಾಯಿಗಳಿಂದ ಮತ್ತು ಶೇ.40 ಸಾಕು ನಾಯಿಗಳಿಂದ ಆಗುತ್ತದೆ. ಸಮಾಧಾನಕರ ಅಂಶವೆಂದರೆ ನಾಯಿ ಕಡಿತದ ತಕ್ಷಣ ಚಿಕಿತ್ಸೆ ದೊರೆತಲ್ಲಿ ಹೆಚ್ಚಿನ ಪ್ರಾಣಹಾನಿಯನ್ನು ತಡೆಗಟ್ಟಬಹುದು. ಕಚ್ಚಿದ ನಾಯಿಯ ಎಂಜಲಿನ ಮುಖಾಂತರ ರೋಗಿಯ ದೇಹವನ್ನು ಸೇರುವ ವೈರಸ್ ಸಾಮಾನ್ಯವಾಗಿ ನರಮಂಡಲವನ್ನು ಕ್ಷೀಣಗೊಳಿಸುತ್ತದೆ. ಹೆಚ್ಚಾಗಿ ನೀರನ್ನು ಕಂಡರೆ ಭಯಪಡುವ ವಿಚಿತ್ರ ಸ್ಥಿತಿಯು ರೇಬಿಸ್ ರೋಗದ ಪ್ರಾಥಮಿಕ ಲಕ್ಷಣವಾಗಿರುತ್ತದೆ. ಹೆಚ್ಚಾಗಿ 15 ವರ್ಷಗಳಿಗಿಂತ ಚಿಕ್ಕ ಮಕ್ಕಳು ನಾಯಿ ಕಡಿತಕ್ಕೆ ಒಳಗಾಗುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು 3 ವಿಂಗಡಣೆಯನ್ನು ಮಾಡಿದೆ. ಮೊದಲ ಗುಂಪಿನಲ್ಲಿ ರೋಗಿ ರೇಬಿಸ್‌ನಿಂದ ಬಳಲುತ್ತಿದ್ದ ಪ್ರಾಣಿಯ ಸಂಪರ್ಕಕ್ಕೆ ಬಂದಿರುತ್ತಾನೆ. ಆದರೆ ದೇಹದಲ್ಲಿ ಯಾವುದೇ ರೀತಿಯ ಗಾಯವಿರುವುದಿಲ್ಲ. ಎರಡನೇ ಗುಂಪಿನಲ್ಲಿ ಸಣ್ಣ ಮಟ್ಟದ ತರಚಿದ ಗಾಯ (ರಕ್ತ ಸೋರದೆ) ಅಥವಾ ಗಾಯಗೊಂಡ ರೋಗಿಯ ಭಾಗವನ್ನು ರೇಬಿಸ್ ಸಂಶಯಿತ ನಾಯಿ ನೆಕ್ಕಿದಲ್ಲಿ ರೇಬಿಸ್‌ನ ಸಾಧ್ಯತೆ ಇರಬಹುದು. ಮೂರನೇ ಗುಂಪಿನಲ್ಲಿ ರೋಗಿಗಳು ರೇಬಿಸ್ ಸಂಶಯದ ಪ್ರಾಣಿಯಿಂದ ಕಡಿತಕ್ಕೊಳಗಾಗಿರುತ್ತಾರೆ ಅಥವಾ ಎಂಜಲು ಗಾಯಗೊಂಡ ದೇಹದ ಭಾಗಕ್ಕೆ ಸ್ಪರ್ಶವಾಗಿರುತ್ತದೆ. ಎರಡನೇ ಮತ್ತು ಮೂರನೇ ಗುಂಪಿನ ರೋಗಿಗಳಿಗೆ ರೇಬಿಸ್ ಲಸಿಕೆ ಹಾಕಲೇಬೇಕು.

ಭಾರತ ದೇಶವೊಂದರಲ್ಲೇ ರೇಬಿಸ್‌ನಿಂದಾಗಿ ಸುಮಾರು 20,000 ಜನರು ಸಾವಿಗೀಡಾಗುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದ ಮಕ್ಕಳು. ಒಂದು ಅಂದಾಜಿನ ಪ್ರಕಾರ ಭಾರತ ದೇಶವೊಂದರಲ್ಲೇ ಸುಮಾರು 25 ಮಿಲಿಯನ್ ನಾಯಿಗಳಿವೆ ಎಂದು ಅಂಕಿ ಅಂಶಗಳು ಹೇಳುತ್ತದೆ. ಇವುಗಳಲ್ಲಿ 50 ಶೇ.ನಾಯಿಗಳಿಗೂ ಲಸಿಕೆ ಹಾಕಲಾಗುವುದಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ. ನಾಯಿಯಲ್ಲದೆ ಬೆಕ್ಕು, ತೋಳ, ಕತ್ತೆ, ಮಂಗ, ಮುಂಗುಸಿ, ದನ, ಬಾವಲಿ ಮುಂತಾದ ಪ್ರಾಣಿಗಳಿಂದಲೂ ರೇಬಿಸ್ ಹರಡುವ ಸಾಧ್ಯತೆ ಇದೆ. ಆದರೆ ಮುಖ್ಯವಾಗಿ ಶೇ. 90ರಷ್ಟು ನಾಯಿ ಕಡಿತದಿಂದಲೇ ರೇಬಿಸ್ ಉಂಟಾಗುತ್ತದೆ. ನಾಯಿ ಸಾಕಲು ಲೈಸನ್ಸ್ ಮತ್ತು ಕಡ್ಡಾಯ ಲಸಿಕೆ ಇತ್ಯಾದಿ ಕಾರ್ಯಗಳಿಂದ ಮುಂದುವರಿದ ರಾಷ್ಟ್ರಗಳಲ್ಲಿ ರೇಬಿಸ್ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಬ್ರಿಟನ್ ಮತ್ತು ಆಸ್ಟ್ರೇಲಿಯಾದಲ್ಲಿ ರೇಬಿಸ್ ಪ್ರಮಾಣ ಬಹಳ ಕಡಿಮೆ. ಏಶ್ಯ ಖಂಡದ ಭಾರತ, ಪಾಕಿಸ್ತಾನ, ಬಾಂಗ್ಲಾ ಮತ್ತು ಶ್ರೀಲಂಕಾಗಳಲ್ಲಿ ಅತೀ ಹೆಚ್ಚು ಕಾಣಸಿಗುತ್ತದೆ. ಆಫ್ರಿಕಾ ಖಂಡದ ದೇಶದಲ್ಲೂ ಹೆಚ್ಚು ರೇಬಿಸ್ ಕಾಣಸಿಗುತ್ತದೆ. ವಿಷಾದನೀಯ ವಿಚಾರವೆಂದರೆ ರೇಬಿಸ್ ರೋಗಕ್ಕೆ ಚಿಕಿತ್ಸೆ ಇಲ್ಲ. ಆದರೆ ರೇಬಿಸ್ ತಡೆಯಲು ಲಸಿಕೆಯಂತೂ ಲಭ್ಯವಿದೆ. ಈ ಕಾರಣಕ್ಕಾಗಿಯೇ ನಾಯಿ ಕಡಿದ ಕೂಡಲೇ ಲಸಿಕೆ ಹಾಕಿಸಿಕೊಳ್ಳುವುದರಲ್ಲಿಯೇ ಜಾಣತನ ಅಡಗಿದೆ.

ತಡೆಗಟ್ಟುವುದು ಹೇಗೆ? 

ಶೇ. 60ರಷ್ಟು ಬೀದಿ ನಾಯಿಗಳು ಮತ್ತು ಶೇ. 40 ಸಾಕು ನಾಯಿಗಳು ನಾಯಿ ಕಡಿತಕ್ಕೆ ಕಾರಣವಾಗುತ್ತವೆ. ಸಾಕುನಾಯಿಗಳನ್ನು ಆಯ್ಕೆ ಮಾಡುವಾಗ ಹುಷಾರಾಗಿರಬೇಕು. ಪರಿಚಯವಿಲ್ಲದ ನಾಯಿಗಳಿಂದ ದೂರವಿರಬೇಕು. ಸಣ್ಣ ಮಕ್ಕಳನ್ನು ನಾಯಿಗಳ ಜೊತೆ ಏಕಾಂಗಿಯಾಗಿ ಬಿಡಬಾರದು. ನಾಯಿ ತಿನ್ನುತ್ತಿರುವಾಗ ಅಥವಾ ತನ್ನ ಮರಿಗಳಿಗೆ ಹಾಲುಣಿಸುವಾಗ ಅದರ ತಂಟೆಗೆ ಹೋಗಲೇಬಾರದು. ನಾಯಿಯನ್ನು ಮುದ್ದಿಸಬೇಕೆಂದಿದ್ದಲ್ಲಿ ನಿಧಾನವಾಗಿ ನಾಯಿಯ ಬಳಿ ಸಾಗಬೇಕು. ನಾಯಿಯು ನಮ್ಮ ಬಳಿ ಬರುವಂತೆ ಆಕರ್ಷಿಸಬೇಕು. ಅಪರಿಚಿತ ಅಥವಾ ಪರಿಚಿತ ನಾಯಿ ಕ್ರೂರವಾಗಿ ವರ್ತಿಸಿದಲ್ಲಿ ನಾಯಿಯಿಂದ ತಪ್ಪಿಸಿಕೊಳ್ಳುವಂತೆ ಓಡಬಾರದು ಮತ್ತು ಕಿರುಚಬಾರದು. ಧೈರ್ಯದಿಂದ ಶಾಂತಿಯಿಂದ ವರ್ತಿಸಬೇಕು. ಯಾವತ್ತೂ ನಾಯಿಯನ್ನು ದುರುಗುಟ್ಟಬಾರದು. ನಾವು ಓಡಿದಲ್ಲಿ ನಾಯಿ ಮತ್ತಷ್ಟು ಉದ್ರೇಕಗೊಳ್ಳುತ್ತದೆ. ಸಾಕುನಾಯಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಬೇಕು. ಜಗಳವಾಡುತ್ತಿರುವ ಎರಡು ನಾಯಿಗಳ ಮಧ್ಯೆ ಯಾವತ್ತೂ ತಲೆಹಾಕಬಾರದು. ನೀವು ನಾಯಿಪ್ರಿಯರಾಗಿದ್ದರೂ ಸಿಟ್ಟಿನಲ್ಲಿರುವ ನಾಯಿಗಳ ತಂಟೆಗೆ ಹೋಗಬಾರದು. ಮಲಗಿರುವ ನಾಯಿಯ ಜೊತೆ ಆಟ ಒಳ್ಳೆಯದಲ್ಲ.

ರೇಬಿಸ್ ರೋಗದ ಲಕ್ಷಣಗಳು 

ರೇಬಿಸ್ ಎಂಬ ವೈರಾಣುವಿನ ಸೋಂಕಿನಿಂದ ಬರುವ ರೇಬಿಸ್ ರೋಗ ಮುಖ್ಯವಾಗಿ ಮೆದುಳಿನ ಜೀವಕೋಶಗಳಿಗೆ ಊತವನ್ನುಂಟುಮಾಡುತ್ತದೆ. ಮೊದಲು ಜ್ವರ ಬರಬಹುದು. ಬಳಿಕ ಗಾಯದ ಬಳಿ ಸಂವೇದನೆ ಇಲ್ಲದಾಗಬಹುದು. ತಡೆದು ಕೊಳ್ಳಲಾಗದ ಉದ್ರೇಕ, ನಿಯಂತ್ರಣವಿಲ್ಲದ ದೇಹದ ಚಲನವಲನ, ನೀರಿನ ಭಯ (ಹೈಡ್ರೋಪೋಬಿಯಾ), ದೇಹದ ಭಾಗಗಳ ಮೇಲಿನ ನಿಯಂತ್ರಣ ತಪ್ಪುವಿಕೆ ಮತ್ತು ನಿಶ್ಚಲಗೊಂಡ ದೇಹದ ಭಾಗಗಳು, ಮನೋವ್ಯಾಕುಲತೆ ಮತ್ತು ಪ್ರಜ್ಞೆ ತಪ್ಪುವುದು. ರೇಬಿಸ್ ಲಕ್ಷಣಗಳು ಕಾಣಿಸಿಕೊಂಡು ನರಮಂಡಲಕ್ಕೆ ವ್ಯಾಪಿಸಿದ ಬಳಿಕ ಚಿಕಿತ್ಸೆ ಪರಿಣಾಮಕಾರಿಯಾಗದು. ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ಲಸಿಕೆ ಹಾಕಿಸಿದಲ್ಲಿ ರೋಗವನ್ನು ತಡೆಗಟ್ಟಬಹುದು. ನಾಯಿ ಕಚ್ಚಿದ ಒಂದು ತಿಂಗಳು ಅಥವಾ 3 ತಿಂಗಳ ಒಳಗೆ ಈ ಚಿಹ್ನೆಗಳು ಕಾಣಿಸಿಕೊಳ್ಳಬಹುದು. (ಲಸಿಕೆ ಹಾಕಿಸದಿದ್ದಲ್ಲಿ) ಕೆಲವೊಮ್ಮೆ ಕಚ್ಚಿದ ವಾರಗಳ ಬಳಿಕವೂ ಅಥವಾ ವರ್ಷದ ಬಳಿಕವೂ ಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ನಾಯಿ ಕಚ್ಚಿದ ಬಳಿಕ ವೈರಸ್ ನರಮಂಡಲವನ್ನು ತಲುಪುವ ಸಮಯವನ್ನು ಅಂದಾಜಿಸಲು ಸಾಧ್ಯವಿಲ್ಲ. ನರಮಂಡಲ ತಲುಪಿ ಮೆದುಳಿಗೆ ವ್ಯಾಪಿಸಿ ರೇಬಿಸ್ ಲಕ್ಷಣಗಳು ಕಾಣಿಸಿದ ಬಳಿಕ ವ್ಯಕ್ತಿ ಬದುಕಿ ಉಳಿಯುವ ಸಾಧ್ಯತೆ ಕಡಿಮೆ.

ರೇಬಿಸ್ ಲಸಿಕೆ

ಲಸಿಕೆ ಮುಖಾಂತರ ರೇಬಿಸ್ ರೋಗವನ್ನು ತಡೆಯಬಹುದು. ರೇಬಿಸ್ ಲಸಿಕೆಯನ್ನು ಸತ್ತ ರೇಬಿಸ್‌ನ ವೈರಾಣುವಿನಿಂದ ಮಾಡಲಾಗಿದ್ದು ಲಸಿಕೆಯಿಂದ ರೇಬಿಸ್ ಬರುವ ಸಾಧ್ಯತೆ ಇಲ್ಲ. ರೋಗದ ಲಕ್ಷಣ ಕಾಣಿಸಿಕೊಂಡ ಬಳಿಕ ಈ ಲಸಿಕೆ ಪಡೆಯುವುದರಿಂದ ಉಪಯೋಗವಿಲ್ಲ. ನಾಯಿ ಕಚ್ಚುವ ಮೊದಲು ರೇಬಿಸ್ ತಡೆಗಟ್ಟಲೆಂದು ಹೆಚ್ಚಾಗಿ ಈ ರೀತಿ ನಾಯಿಗಳು ಮತ್ತು ರೇಬಿಸ್ ಹರಡುವ ಪ್ರಾಣಿಗಳ ಜೊತೆ ವ್ಯವಹರಿಸುವವರಿಗೆ 3 ಆ್ಯಂಟಿ ರೇಬಿಸ್ ಲಸಿಕೆ ನೀಡಲಾಗುತ್ತದೆ. ಮೊದಲ ಲಸಿಕೆಯ ಬಳಿಕ 7 ದಿನಗಳ ನಂತರ 2ನೇ ಲಸಿಕೆ ಮತ್ತು 21 ಅಥವಾ 28 ದಿನಗಳ ಬಳಿಕ 3ನೇ ಲಸಿಕೆ ಹಾಕಲಾಗುತ್ತದೆ. ನಾಯಿ ಕಚ್ಚಿದ ಬಳಿಕ ಲಸಿಕೆ ಹಾಕಿಸುವುದಾದಲ್ಲಿ (ಈ ಹಿಂದೆ ಲಸಿಕೆ ಹಾಕಿಸಿಕೊಂಡಿಲ್ಲ ವಾದಲ್ಲಿ) ನಾಲ್ಕು ಲಸಿಕೆಗಳ ಅವಶ್ಯಕತೆ ಇರುತ್ತದೆ. ಮೊದಲನೇ ಲಸಿಕೆಯನ್ನು ನಾಯಿ ಕಚ್ಚಿದ ಕೂಡಲೇ ಹಾಕಿಸಬೇಕು. ಆ ಬಳಿಕ 3ನೇ, 7ನೇ ಮತ್ತು 14ನೇ ದಿನ ಹಾಕಿಸತಕ್ಕದ್ದು. ಇದರ ಜೊತೆಗೆ ಮೊದಲ ಲಸಿಕೆ ಜೊತೆಗೆ ರೇಬಿಸ್ ಇಮ್ಯುನೋಗ್ಲೋಬುಲಿನ್ ಎಂಬ ಇನ್ನೊಂದು ಲಸಿಕೆಯನ್ನು ನೀಡಲಾಗುತ್ತದೆ. ಹಾಗೆಯೇ ಈ ಹಿಂದೆ ರೇಬಿಸ್ ಲಸಿಕೆ ರಕ್ಷಣೆಗೆಂದು ಹಾಕಿಸಿಕೊಂಡಿದ್ದಲ್ಲಿ ಅಂತಹ ವ್ಯಕ್ತಿಗೆ ನಾಯಿ ಅಥವಾ ಇನ್ನಾವುದೇ ರೇಬಿಸ್ ಶಂಕಿತ ಪ್ರಾಣಿ ಕಚ್ಚಿದಲ್ಲಿ ಎರಡು ಲಸಿಕೆಗಳ ಅವಶ್ಯಕತೆ ಇರುತ್ತದೆ.

ಪ್ರಥಮ ಚಿಕಿತ್ಸೆ ಹೇಗೆ?

ನಾಯಿಕಡಿತದ ಬಳಿಕ ನೀಡುವ ಪ್ರಥಮ ಚಿಕಿತ್ಸೆಯ ಮೂಲ ಉದ್ದೇಶವೇನೆಂದರೆ ರೇಬಿಸ್ ತಡೆಗಟ್ಟುವುದು. ಇದರ ಜೊತೆಗೆ ಕೀವು ಮತ್ತು ಸೋಂಕು ತಗಲದಂತೆ ನೋಡಿಕೊಳ್ಳಬೇಕು ಮತ್ತು ಆದಷ್ಟು ಬೇಗ ವೈದ್ಯಕೀಯ ನೆರವು ದೊರಕುವಂತೆ ಮಾಡಬೇಕು. ಮೊದಲು ಗಾಯಗೊಂಡ ವ್ಯಕ್ತಿಯ ದೇಹದ ಭಾಗವನ್ನು ಶುಭ್ರವಾದ ಕರವಸ್ತ್ರ ಅಥವಾ ಬಟ್ಟೆಯಿಂದ ಒರೆಸಬೇಕು. ನಾಯಿಯ ಎಂಜಲನ್ನು ಸಾಧ್ಯವಾದಷ್ಟು ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ಖಾಲಿ ಕೈಯಿಂದ ಎಂಜಲನ್ನು ಸ್ಪರ್ಶಿಸಬೇಡಿ. ಗಾಯವನ್ನು ಚೆನ್ನಾಗಿ ಸೋಪಿನ ದ್ರಾವಣ ಮತ್ತು ಶುದ್ಧ ನೀರಿನಲ್ಲಿ ಶುಚಿಗೊಳಿಸಬೇಕು. ಗಾಯಗೊಂಡ ಭಾಗವನ್ನು ಒಣಗಿದ, ಕಲ್ಮಶ ರಹಿತ ಬಟ್ಟೆಯಿಂದ ಅಥವಾ ಹತ್ತಿಯಿಂದ ಮುಚ್ಚಬೇಕು. ಆನಂತರ ಆದಷ್ಟು ಬೇಗ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಲಸಿಕೆ ಹಾಕಿಸಬೇಕು. ಕಚ್ಚಿದ ನಾಯಿಯನ್ನು ಯಾವುದೇ ಕಾರಣಕ್ಕೂ ಕೊಲ್ಲಬಾರದು. ಹತ್ತು ದಿನಗಳ ಕಾಲ ಕಚ್ಚಿದ ನಾಯಿಯ ಆರೋಗ್ಯವನ್ನು ಅಭ್ಯಸಿಸಬೇಕು. ನಾಯಿಗೆ ರೇಬಿಸ್ ಇದ್ದಲ್ಲಿ ನೀರು ಕಂಡಾಗ ಅದು ಬೆದರುತ್ತದೆ. 10 ದಿನಗಳ ಬಳಿಕವೂ ನಾಯಿ ಆರೋಗ್ಯವಾಗಿದ್ದಲ್ಲಿ ಕಚ್ಚಿಸಿಕೊಂಡ ವ್ಯಕ್ತಿಗೆ ರೇಬಿಸ್ ಬರುವ ಸಾಧ್ಯತೆ ಕಡಿಮೆ. ಆದರೆ ತಿಂಗಳುಗಳ ಬಳಿಕ ಅಥವಾ ವರ್ಷಗಳ ಬಳಿಕ ಬಂದರೂ ಬರಬಹುದು. ಒಟ್ಟಿನಲ್ಲಿ ಲಸಿಕೆ ಹಾಕಿಸಿಕೊಂಡಲ್ಲಿ ರೇಬಿಸನ್ನು ತಡೆಗಟ್ಟಬಹುದು. ಆಲಕ್ಷ ಮಾಡಿದಲ್ಲಿ ಜೀವಕ್ಕೆ ಸಂಚಕಾರ ಬರಬಹುದು.  

Writer - ಡಾ. ಮುರಲೀ ಮೋಹನ್, ಚೂಂತಾರು

contributor

Editor - ಡಾ. ಮುರಲೀ ಮೋಹನ್, ಚೂಂತಾರು

contributor

Similar News