ನರಮೇಧ ನಾಗರಿಕತೆಯ ಫೋಟೊಗಳು ಮತ್ತು ಫೋಟೊಗ್ರಾಫರುಗಳು

Update: 2021-09-28 19:30 GMT

ಪೊಲೀಸರ ವರ್ತನೆಯಲ್ಲಿ ಸರಕಾರಿ ಜಮೀನನ್ನು ವಶಪಡಿಸಿಕೊಳ್ಳುವ ಕರ್ತವ್ಯಪಾಲನೆಯ ಜೊತೆಗೆ ಮುಸ್ಲಿಮರ ವಿರುದ್ಧ ಯುದ್ಧ ಮಾಡಿ ದೇಶವನ್ನು ರಕ್ಷಿಸಿಕೊಳ್ಳುತ್ತಿರುವ ಉಮೇದೂ ಸೇರಿಕೊಂಡಿದೆ. ಈ ದ್ವೇಶದ ಕಣ್ಣಿಗೆ ಅಸಹಾಯಕ, ನಿರ್ಗತಿಕ, ಇತರರಂತೆ ಈ ದೇಶದಲ್ಲಿ ಹಲವು ತಲೆಮಾರುಗಳಿಂದ ವಾಸ ಮಾಡಿಕೊಂಡು ಬಂದಿರುವ ಮೊಯಿನುಲ್ ಹಕ್ ಕೇವಲ ಮುಸ್ಲಿಂ ಎಂಬ ಕಾರಣಕ್ಕೆ ಉಗ್ರಗಾಮಿಯಾಗಿ ಕಾಣುತ್ತಾನೆ. ಶೇಕ್ ಫರೀದ್ ಎಂಬ 14 ವರ್ಷದ ಬಾಲಕನ ಜೇಬಲ್ಲಿ ಭಾರತದ ನಾಗರಿಕ ಎಂಬ ಪುರಾವೆ ನೀಡುವ ಆಧಾರ್ ಕಾರ್ಡ್ ಇದ್ದರೂ ಕಾಣುವುದಿಲ್ಲ. ಹಿಂದೂರಾಷ್ಟ್ರದ ಸೈದ್ಧಾಂತಿಕ ಅಮಲನ್ನು ತುಂಬಿಕೊಂಡಿರುವ ಅಸ್ಸಾಮಿನ ಪೊಲೀಸರು ಸುಟ್ಟುಕೊಲ್ಲುತ್ತಾರೆ.



ಕಾಯಬೇಕಾದ ಸರಕಾರವೇ ಬಂದೂಕು ಹಿಡಿದು ಜನರ ಬೇಟೆಗೆ ಹೊರಟರೆ, ಒಲೆ ಉರಿಯುವ ಬದಲು ಧರೆ ಹತ್ತಿ ಉರಿವ ತೊಡಗಿದರೆ, ಅಸಹಾಯಕರ ಕೊಲೆಗೆ ಕಣ್ಣೀರಿಡುವ ಬದಲು ಹೆಣಗಳ ಮೇಲೆ ವಿಕೃತ ನರ್ತನ ಮಾಡತೊಡಗಿದರೆ, ನಿಷ್ಪಕ್ಷವಾಗಿರಬೇಕಾದ ಮಾಧ್ಯಮಗಳು ಕೊಲೆಗಾರರ ವಕ್ತಾರರಾದರೆ.. ಆ ದೇಶದ ಆತ್ಮ ಸತ್ತಿದೆ ಎಂದರ್ಥ. ಸಮಾಜ ಕೊಳೆಯತೊಡಗಿದೆ ಎಂದರ್ಥ ಹಾಗೂ ಆ ದೇಶ ನರಮೇಧದ ಹೊಸ್ತಿಲಲ್ಲಿದೆ ಎಂದರ್ಥ..

ಮುಸ್ಲಿಂ ದ್ವೇಷದ ಬೆಂಕಿಯನ್ನು ಹಚ್ಚುತ್ತಲೇ ಅಸ್ಸಾಮಿನಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಹಿಮಂತ್ ಬಿಸ್ವಾಸ್ ಶರ್ಮರ ಬಿಜೆಪಿ ಸರಕಾರ ಕಳೆದ ಎರಡು ವಾರಗಳಿಂದ ಅಸ್ಸಾಮಿನಲ್ಲಿ ಹತ್ತಾರು ವರ್ಷಗಳಿಂದ ವಾಸಮಾಡುತ್ತಿರುವ ರೈತಾಪಿಗಳನ್ನು ಬಾಂಗ್ಲಾದೇಶದಿಂದ ಅಕ್ರಮ ಮುಸ್ಲಿಂ ವಲಸೆಕೋರರು ಎಂದು ಆರೋಪಿಸಿ ಪೊಲೀಸ್ ದಮನ ಬಳಸಿ ಎತ್ತಂಗಡಿ ಮಾಡುತ್ತಿದೆ. ಆ ಜಮೀನುಗಳನ್ನು ಹಿಂದೂಗಳಿಗೆ ಕೊಡಲಾಗುವುದು ಎಂದು ಘೋಷಿಸಿದೆ. ಆ ಮೂಲಕ ಬಡ ಹಿಂದೂಗಳ ಅಸಹಾಯಕತೆಯನ್ನು ಕೋಮುವಾದದ ಪಾಶವೀತನಕ್ಕೆ ಗೊಬ್ಬರವಾಗಿ ಬಳಸಿಕೊಳ್ಳುತ್ತಿದೆ. ಮತ್ತೊಂದು ಕಡೆ ಪೊಲೀಸರಲ್ಲೂ ಕೇವಲ ಸರಕಾರಿ ಆದೇಶದ ಪಾಲನೆಯ ಉದ್ದೇಶ ಮಾತ್ರವಲ್ಲದೇ ಅಪಾರವಾದ ಮುಸ್ಲಿಂ ದ್ವೇಷದ ಸಿದ್ಧಾಂತವೂ ತುಂಬಿಕೊಂಡಿದೆ.

ಹೀಗಾಗಿ ಪೊಲೀಸರ ವರ್ತನೆಯಲ್ಲಿ ಸರಕಾರಿ ಜಮೀನನ್ನು ವಶಪಡಿಸಿಕೊಳ್ಳುವ ಕರ್ತವ್ಯಪಾಲನೆಯ ಜೊತೆಗೆ ಮುಸ್ಲಿಮರ ವಿರುದ್ಧ ಯುದ್ಧ ಮಾಡಿ ದೇಶವನ್ನು ರಕ್ಷಿಸಿಕೊಳ್ಳುತ್ತಿರುವ ಉಮೇದೂ ಸೇರಿಕೊಂಡಿದೆ. ಈ ದ್ವೇಶದ ಕಣ್ಣಿಗೆ ಅಸಹಾಯಕ, ನಿರ್ಗತಿಕ, ಇತರರಂತೆ ಈ ದೇಶದಲ್ಲಿ ಹಲವು ತಲೆಮಾರುಗಳಿಂದ ವಾಸ ಮಾಡಿಕೊಂಡು ಬಂದಿರುವ ಮೊಯಿನುಲ್ ಹಕ್ ಕೇವಲ ಮುಸ್ಲಿಂ ಎಂಬ ಕಾರಣಕ್ಕೆ ಉಗ್ರಗಾಮಿಯಾಗಿ ಕಾಣುತ್ತಾನೆ. ಶೇಕ್ ಫರೀದ್ ಎಂಬ 14 ವರ್ಷದ ಬಾಲಕನ ಜೇಬಲ್ಲಿ ಭಾರತದ ನಾಗರಿಕ ಎಂಬ ಪುರಾವೆ ನೀಡುವ ಆಧಾರ್ ಕಾರ್ಡ್ ಇದ್ದರೂ ಕಾಣುವುದಿಲ್ಲ. ಹಿಂದೂ ರಾಷ್ಟ್ರದ ಸೈದ್ಧಾಂತಿಕ ಅಮಲನ್ನು ತುಂಬಿಕೊಂಡಿರುವ ಅಸ್ಸಾಮಿನ ಪೊಲೀಸರು ಸುಟ್ಟು ಕೊಲ್ಲುತ್ತಾರೆ.

ಈ ಕಾರ್ಯಾಚರಣೆಯನ್ನು ದಾಖಲಿಸಲು ಹೋಗಿದ್ದ ಬಿಜಯ್ ಶಂಕರ್ ಬನಿಯಾ ಎಂಬ ಕ್ಯಾಮರಾ ಹಿಂದೆ ಇದ್ದು ನಡೆದದ್ದನ್ನು ದಾಖಲಿಸುವ ಫೋಟೊಗ್ರಾಫರ್ ಕ್ಯಾಮರಾ ಮುಂದೆಯೂ ಕಾರ್ಯಾಚರಣೆ ಮಾಡುತ್ತಾನೆ. ಮುಸ್ಲಿಂ ದ್ವೇಶದಲ್ಲಿ ಉಮ್ಮಳಿಸುತ್ತಾ ಮೊಯಿನುಲ್ ಹಕ್ ಹೆಣದ ಮೇಲೆ ಕುಪ್ಪಳಿಸಿ ಅಬ್ಬರಿಸುತ್ತಾನೆ. ಈ ಪಾಶವೀತನವನ್ನು ಖಂಡಿಸಬೇಕಾದ ಮುಖ್ಯಮಂತ್ರಿ ಬಲಿಯಾದ ಅಮಾಯಕರ ಮೇಲೆ ಇಸ್ಲಾಮಿಕ್ ಉಗ್ರಗಾಮಿತನದ ಆರೋಪವನ್ನು ಹೊರಿಸುತ್ತಾರೆ. ಹೀಗೆ ಮಾಡದೆ ಈ ದೇಶವನ್ನು ಉಳಿಸಲು ಸಾಧ್ಯವಿಲ್ಲವೆಂದು ಸಮರ್ಥಿಸಿಕೊಳ್ಳುತ್ತಾ ಕೋಮುವಾದಿ ಕ್ರೌರ್ಯಕ್ಕೆ ರಾಷ್ಟ್ರರಕ್ಷಣೆಯ ಕವಚ ತೊಡಿಸುತ್ತಾರೆ ಹಾಗೂ ಒಂದು ದೊಡ್ಡ ಅಲ್ಪಸಂಖ್ಯಾತ ಸಮುದಾಯವನ್ನೇ ರಾಷ್ಟ್ರದ ಪರಿಕಲ್ಪನೆಯಿಂದ ಅನ್ಯೀಕರಿಸುತ್ತಾರೆ ಹಾಗೂ ಮುಂದೆಯೂ ನಡೆಯಲಿರುವ ಇಂತಹ ಕಾನೂನುಬಾಹಿರ ನರಹತ್ಯೆಗಳನ್ನು ಸರ್ವೇಸಾಮಾನ್ಯವಾಗಬೇಕಾದ ಅತ್ಯಗತ್ಯವಾದ ನಡೆಗಳೆಂಬ ಮುನ್ಸೂಚನೆ ನೀಡುತ್ತಾರೆ. 1983ರಲ್ಲಿ ನೆಲ್ಲಿ, 84ರಲ್ಲಿ ಸಿಖ್ ಹತ್ಯಾಕಾಂಡ, 92ರ ಮುಂಬೈ ಹಾಗೂ 2002ರ ಗುಜರಾತ್ ನರಮೇಧಗಳಲ್ಲಿ ಅಪವಾದವೆಂಬಂತೆ ಕಾಣಿಸಿಕೊಂಡ ಸ್ವಾತಂತ್ರ್ಯೋತ್ತರ ಭಾರತದ ನರಮೇಧದ ಚಹರೆಗಳು 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ನಿತ್ಯವಿದ್ಯಮಾನವಾಗಿಬಿಟ್ಟಿವೆ. ಇಂತಹ ಆಮಾನವೀಯ ನರಮೇಧಗಳನ್ನು ಸಮಾಜ ಒಪ್ಪಿಕೊಳ್ಳತೊಡಗುತ್ತಿದ್ದಂತೆ ಅಂತಹ ಸಮಾಜ ಒಂದು ದೊಡ್ಡ ನರಮೇಧಕ್ಕೆ ಸಜ್ಜಾಗುತ್ತಿದೆಯೆಂದೇ ಅರ್ಥ ಎಂದು ಹಿಟ್ಲರ್‌ನ ಜರ್ಮನಿ ಹಾಗೂ 94ರ ರವಾಂಡಾ ಸಾಬೀತು ಮಾಡಿದೆ.

ಹಿಟ್ಲರ್‌ನ ಜರ್ಮನಿ, ಹುಟುಗಳ ರವಾಂಡಾ ಮತ್ತು ಮೋದಿಯ ಭಾರತ?

ಹಿಟ್ಲರ್‌ನ ಜರ್ಮನಿಯಲ್ಲಿ 1943-45ರ ನಡುವಿನ ಕೇವಲ ಮೂರು ವರ್ಷಗಳಲ್ಲಿ 60 ಲಕ್ಷ ಯಹೂದಿಗಳನ್ನು ನಾಝಿಗಳು ಕೊಂದುಹಾಕಿದರು. ಬಹುಸಂಖ್ಯಾತ ಜರ್ಮನ್ ಸಮಾಜದ ಸಮ್ಮತಿ ಮತ್ತು ಪಾಲುದಾರಿಕೆಯೊಂದಿಗೆ.. ಹಾಗೆಯೇ, ಆಫ್ರಿಕಾದ ರವಾಂಡಾ ದೇಶದಲ್ಲಿ 1994ರಲ್ಲಿ ಕೇವಲ ಮೂರು ತಿಂಗಳಲ್ಲಿ ಬಹುಸಂಖ್ಯಾತ ಹುಟು ಜನಾಂಗೀಯರು 10 ಲಕ್ಷ ಅಲ್ಪಸಂಖ್ಯಾತ ಟುಟ್ಸಿಗಳನ್ನು ಹಾಗೂ 60,000ಕ್ಕೂ ಹೆಚ್ಚು ಉದಾರವಾದಿ ಹುಟುಗಳನ್ನು ಕೊಂದುಹಾಕಿದರು. ಇವೆಲ್ಲವನ್ನೂ ನರಮೇಧ-ಜಿನೋಸೈಡ್ ಎಂದು ಈಗ ಇತಿಹಾಸಕಾರರೂ ಮತ್ತು ವಿಶ್ವಸಂಸ್ಥೆಯೂ ವರ್ಗೀಕರಿಸುತ್ತದೆ. ಆದರೆ ಇದು ಇತಿಹಾಸಕ್ಕೆ ಸಂದುಹೋದ ಸಂಗತಿಯಲ್ಲ. ಕಳೆದ ಕೆಲವು ವರ್ಷಗಳಲ್ಲಿ ಭಾರತವನ್ನೂ ಒಳಗೊಂಡಂತೆ ಜಗತ್ತಿನ ಹಲವಾರು ಪ್ರಜಾತಂತ್ರ ದೇಶಗಳಲ್ಲಿ ಬಹುಸಂಖ್ಯಾತ ದುರಭಿಮಾನಿ ಸರಕಾರಗಳು ಆಳ್ವಿಕೆಗೆ ಬಂದಿರುವುದರಿಂದ ಜಗತ್ತಿನಲ್ಲಿ ಮತ್ತೆ ನರಮೇಧಗಳ ಸಂಭವನೀಯತೆ ಹೆಚ್ಚಿದೆಯೆಂದು ಸ್ವತಂತ್ರ ಸಂಸ್ಥೆಗಳು ಆತಂಕ ವ್ಯಕ್ತಪಡಿಸುತ್ತಿವೆ ಹಾಗೂ ಆಧುನಿಕ ಸಮಾಜದಲ್ಲಿ ಅಂತಹ ಚಹರೆಗಳನ್ನು ಅಧ್ಯಯನ ಮಾಡಿ ಜಗತ್ತಿಗೆ ಅದರ ಬಗ್ಗೆ ಮುನ್ಸೂಚನೆ ಕೊಡುವ ಪ್ರಯತ್ನಗಳನ್ನೂ ಪ್ರಾರಂಭಿಸಲಾಗಿದೆ.
 
ಜಿನೋಸೈಡ್ ಜಗತ್ತು  
ಪ್ರಪಂಚ ಮಟ್ಟದಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮತ್ತು ‘ಜಿನೋಸೈಡ್ ವಾಚ್’ ಎಂಬ ಸಂಸ್ಥೆ ಜಿನೋಸೈಡ್ ಸಂದರ್ಭವನ್ನು ಮೂರು ವರ್ಗಗಳಾಗಿ ವಿಂಗಡಿಸಿವೆ.
 ಅದರಲ್ಲಿ ಅತ್ಯಂತ ಗಂಭೀರವಾದ ಘಟ್ಟ ಜಿನೋಸೈಡ್ ಎಮರ್ಜೆನಿ  ್ಸ ಹಂತ. ಈ ಹಂತದಲ್ಲಿ ಹಾಲಿ ಟರ್ಕಿ, ಸಿರಿಯಾ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಮ್ಯಾನ್ಮಾರ್ ದೇಶಗಳಿವೆ. ಇದಕ್ಕೆ ಮುಂಚಿನ ಹಂತ ಜಿನೋಸೈಡ್ ವಾರ್ನಿಂಗ್ 
ಹಂತ. ಸದ್ಯ ಇಥಿಯೋಪಿಯಾ ದೇಶದಲ್ಲಿ ಅಂತಹ ಸಂದರ್ಭವಿದೆ. ಅದಕ್ಕೆ ಪೂರ್ವಭಾವಿಯಾದ ಹಂತ ಜಿನೋಸೈಡ್ ವಾಚ್ ಘಟ್ಟ. ಭಾರತದ ಕಾಶ್ಮೀರ ಹಾಗೂ ಅಸ್ಸಾಮಿನಲ್ಲಿ ಕಳೆದ ಒಂದೆರಡು ವರ್ಷಗಳಲ್ಲಿ ಈ ಬಗೆಯ ಪರಿಸ್ಥಿತಿ ಉದ್ಭವವಾಗಿದೆಯೆಂದು ಈ ವರದಿ ಹೇಳುತ್ತಿದೆ. ಹಾಗಿದ್ದಲ್ಲಿ ಜಿನೋಸೈಡ್ ಎಮರ್ಜೆನ್ಸಿ ಹಾಗೂ ವಾರ್ನಿಂಗ್ ಹಂತಗಳಲ್ಲಿರುವ ದೇಶಗಳಿಗೆ ಹೋಲಿಸಿಕೊಂಡಲ್ಲಿ ಭಾರತದ ಪರಿಸ್ಥಿತಿ ಸದ್ಯಕ್ಕೆ ಅಪಾಯಕಾರಿ ಹಂತಕ್ಕೆ ಮುಟ್ಟಿಲ್ಲವೆಂದು ಸಮಾಧಾನಿಸಿಕೊಳ್ಳಬಹುದೇ?

ನರಮೇಧಿಗಳ ಚಹರೆಗಳು 

ವಿಶ್ವಸಂಸ್ಥೆಯ ಪ್ರಕಾರ ಜಿನೋಸೈಡ್-ನರಮೇಧ ಎಂದರೆ: ‘‘ಒಂದು ರಾಷ್ಟ್ರೀಯ, ಜನಾಂಗಿಯ, ಧಾರ್ಮಿಕ ಅಥವಾ ವರ್ಣೀಯ ಗುಂಪನ್ನು ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶಮಾಡುವ ಉದ್ದೇಶದಿಂದ ಈ ಕೆಳಗಿನ ಯಾವುದೇ ಕ್ರಮಗಳನ್ನು ಎಸಗುವುದನ್ನು ನರಮೇಧದ ಕ್ರಮ-ಜಿನೋಸೈಡಲ್ ಎಂದು ಪರಿಗಣಿಸಲಾಗುವುದು: ಒಂದು ನಿರ್ದಿಷ್ಟ ಗುಂಪಿನ ಸದಸ್ಯರನ್ನು ಕೊಲ್ಲುವುದು; ಆ ಗುಂಪಿನ ಸದಸ್ಯರಿಗೆ ಗಂಭೀರವಾದ ಮಾನಸಿಕ ಅಥವಾ ದೈಹಿಕ ಹಾನಿಗಳನ್ನು ಉಂಟುಮಾಡುವುದು; ಆ ನಿರ್ದಿಷ್ಟ ಗುಂಪಿನ ಭೌತಿಕ ಅಸ್ತಿತ್ವವು ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶಮಾಡಬೇಕೆಂಬ ಉದ್ದೇಶದಿಂದಲೇ ದುರ್ಭರ ಜೀವನಸ್ಥಿತಿಗತಿಗಳನ್ನು ಸೃಷ್ಟಿಸುವುದು; ಆ ನಿರ್ದಿಷ್ಟ ಗುಂಪಿನ ಸದಸ್ಯರ ಸಂತಾನ ವೃದ್ಧಿಯಾಗದಂತಹ ಕ್ರಮಗಳನ್ನು ಜಾರಿ ಮಾಡುವುದು ಅಥವಾ ಅ ಗುಂಪಿನ ಮಕ್ಕಳನ್ನು ಮತ್ತೊಂದು ಗುಂಪಿಗೆ ಹಸ್ತಾಂತರಿಸುವುದು’’.

ಆದರೆ ಇಂತಹ ಪರಿಸ್ಥಿತಿಯು ರಾತ್ರೋರಾತ್ರಿ ಸೃಷ್ಟಿಯಾಗುವುದಿಲ್ಲ ಮತ್ತು ಇಂತಹ ನರಮೇಧಗಳು ಆಯಾ ದೇಶಗಳ ದುರ್ಬಲ ಮತ್ತು ಅಲ್ಪಸಂಖ್ಯಾತ ವರ್ಗಗಳ ಮೇಲೆ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಹಂತಕ ಪಡೆಗಳು ಬಹುಪಾಲು ಜನರ ಸಮ್ಮತಿಯೊಂದಿಗೆ ಹಾಗೂ ಪ್ರಭುತ್ವದ ಸಕ್ರಿಯ ಅಥವಾ ಪರೋಕ್ಷ ಭಾಗೀದಾರಿಕೆಯೊಂದಿಗೆ ನಡೆಸುತ್ತಾರೆ. ಉದಾಹರಣೆಗೆ, ರವಾಂಡಾ ದೇಶದಲ್ಲಿ 1994ರಲ್ಲಿ ನಡೆದ ಟುಟ್ಸಿ ಜನಾಂಗದ ನರಮೇಧವನ್ನು ವರದಿ ಮಾಡಿದ ಬಿಬಿಸಿ ವರದಿಗಾರ ಫರ್ಗಲ್ ಕೇನ್ ಅವರು ನಂತರ ಅದರ ಬಗ್ಗೆಯೇ "Season Of Blood-A Rwandan Journey' ಎಂಬ ಪುಸ್ತಕ ಬರೆದರು. ಅದರಲ್ಲಿ ಅವರು ಆ ದೇಶದಲ್ಲಿ ನೂರು ದಿನಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಹತ್ಯೆಯಾಗುವ ಮುಂಚೆ ನಡೆದ ಪ್ರಕ್ರಿಯೆಗಳನ್ನು ಹೀಗೆ ವಿವರಿಸುತ್ತಾರೆ:

   ‘‘... ಈ ರಕ್ತಸಿಕ್ತ ದೇಶದಲ್ಲಿ ಕೆಲ ವ್ಯಕ್ತಿಗಳಂತೂ ನಿಜಕ್ಕೂ ವಿಕೃತ ಮನಸ್ಸುಳ್ಳವರು. ಚಿಂದಿಯುಟ್ಟ ಬಡ ಜನರನ್ನು ಹಾಗೂ ಅನಕ್ಷರಸ್ಥ ರೈತಾಪಿ ಜನರನ್ನು ಟುಟ್ಸಿಗಳ ವಿರುದ್ಧ ದ್ವೇಶದಿಂದ ಕುದಿಯುವಂತೆ ಮಾಡುವುದು ಸುಲಭವೇ ಆಗಿತ್ತು. ಆದರೆ ನಾನು ಆ ದೇಶದಲ್ಲಿ ಭೇಟಿಯಾದ ಅತ್ಯಂತ ಕುತಂತ್ರಿ ಹಾಗೂ ಕ್ರೂರ ಜನರೆಂದರೆ ಆ ದೇಶದ ಸುಶಿಕ್ಷಿತ-ಪ್ರತಿಷ್ಠಿತ ವರ್ಗದ ಗಂಡಸರು ಮತ್ತು ಹೆಂಗಸರು. ಅವರು ಅತ್ಯಂತ ನಾಜೂಕಿನ ಸಂಸ್ಕಾರವಂತರು. ಸಾಸಿವೆಯಷ್ಟು ಲೋಪವಿಲ್ಲದ ಶುದ್ಧ ಫ್ರೆಂಚಿನಲ್ಲಿ ಸಂಭಾಷಣೆ ಮಾಡಬಲ್ಲವರು. ಯುದ್ಧದ ಸ್ವರೂಪ ಮತ್ತು ಪ್ರಜಾತಂತ್ರದ ಬಗ್ಗೆ ಕೊನೆಯಿಲ್ಲದ ತಾತ್ವಿಕ ಚರ್ಚೆಗಳನ್ನು ನಡೆಸಬಲ್ಲವರು. ಆದರೆ ಅವರೆಲ್ಲರೂ ತಮ್ಮ ದೇಶದ ಸೈನಿಕರು ಮತ್ತು ರೈತಾಪಿಗಳಂತೆ ತಮ್ಮ ಸಹೋದರ ದೇಶವಾಸಿಗಳ ರಕ್ತಕೂಪದಲ್ಲಿ ಮಿಂದೇಳುತ್ತಿದ್ದರು.’’

ಆದರೆ ಇಂತಹ ಅನಾಗರಿಕ, ಅಮಾನುಷ ನರಮೇಧಗಳಿಗೆ ಬಹುಸಂಖ್ಯಾತರ ಜನಸಮ್ಮತಿ ದೊರೆಯುವುದಾದರೂ ಹೇಗೆ? ಜಗತ್ತಿನಾದ್ಯಂತ ನಡೆಯುತ್ತಿರುವ ಇಂತಹ ನರಮೇಧಗಳ ಬಗ್ಗೆಯೇ ವಿಶೇಷ ಅಧ್ಯಯನ ಮಾಡುತ್ತಿರುವ ಪ್ರೊಫೆಸರ್ ಹೆಲೆ ಫೇನ್ ಅವರು ಇದಕ್ಕೆ ಕಂಡುಕೊಂಡಿರುವ ಉತ್ತರವಿದು:
ನರಮೇಧಗಳು ಅಥವಾ ಇನ್ನಿತರ ಸಾಮೂಹಿಕ ಹಿಂಸಾಚಾರಗಳು ಇದ್ದಕ್ಕಿದ್ದ ಹಾಗೆಯೋ ಆಯೋಜಿತವಾಗಿಯೋ ಸಂಭವಿಸುವುದಿಲ್ಲ. ಅವು ದ್ವೇಷ ಹಾಗೂ ಭೀತಿಗಳ ಸಾಮಾಜಿಕ ಸಂದರ್ಭವನ್ನು ಹುಟ್ಟಿಸುವ ಪ್ರಕ್ರಿಯೆಯನ್ನು ಅನುಸರಿಸುತ್ತವೆ. ಈ ಭಾವನೆಗಳ ಮೂಲಕ ಜನಮಾನಸದಲ್ಲಿ ಸರ್ವಸಹಜವಾಗಿ ಇತರ ಮನುಷ್ಯರನ್ನು ನಮ್ಮ ನೈತಿಕ ಹೊಣೆಗಾರಿಕೆಯ ಲೋಕದಿಂದ ಹೊರಗಿರಿಸುವ ತನಕ ನಡೆಯುತ್ತಲೇ ಇರುತ್ತದೆ. ನಮ್ಮವರ ಬಗ್ಗೆ ನಾವು ಸಹಜವಾಗಿ ಹೊಂದಿರುವ ನೈತಿಕ ಹೊಣೆಗಾರಿಕೆಯನ್ನು ಅನ್ಯರಿಗೆ ನಿರಾಕರಿಸಲು ಬೇಕಾದ ಮನಸ್ಥಿತಿ ಹಾಗೂ ಸಮರ್ಥನೆಗಳನ್ನು ಈ ಕಲ್ಪಿತ ದ್ವೇಷ, ಭೀತಿ ಮತ್ತು ಸಾಮಾಜಿಕ ಪೂರ್ವಗ್ರಹಗಳು ಬಿತ್ತುತ್ತವೆ.

ಮನುಷ್ಯರು ಮೃಗವಾಗುವ ಹತ್ತು ಹಂತಗಳು 

ಸಹವಾಸಿಗಳ ಈ ಅನ್ಯೀಕರಣ ಮತ್ತು ಪರಾಯೀಕರಣವು ಕೂಡಾ ಏಕಾಏಕಿ ಸಂಭವಿಸುವುದಿಲ್ಲ. ನರಮೇಧಗಳ ಬಗ್ಗೆ ನಿರಂತರವಾದ ಅಧ್ಯಯನ ನಡೆಸುತ್ತಿರುವ ಅಮೆರಿಕದ ಪ್ರೊಫೆಸರ್ ಗ್ರೆಗೋರೊ ಸ್ಟಾನ್ಟನ್ ಅವರು ನರಮೇಧದ ಕ್ಲೈಮಾಕ್ಸ್ ತಲುಪುವ ಮುನ್ನ ಸಮಾಜ ಹಾದು ಹೋಗುವ ಹತ್ತು ಹಂತಗಳನ್ನು ಹೀಗೆ ಗುರುತಿಸುತ್ತಾರೆ:
1. Classification-ಅನ್ಯ ಗುಂಪು ಯಾವುದು ಮತ್ತು ಏಕೆ ಎಂಬ ವರ್ಗೀಕರಣ

2. Symbolisation-ಆ ಗುಂಪಿನ ಚಹರೆಗಳ ಪಟ್ಟಿಕರಣ

3. Discrimination -ಆ ಗುಂಪಿನ ಸದಸ್ಯರ ಬಗ್ಗೆ ತಾರತಮ್ಯ ಅನುಸರಿಸುವುದು

4. Dehumanisation- ಆ ಗುಂಪನ್ನು ಅಪಮಾನಿಸುತ್ತಾ ಮಾನವೀಯ ಘನತೆಗಳನ್ನು ನಿರಾಕರಿಸುತ್ತಾ ಅಮಾನವೀಯಗೊಳಿಸುವುದು

5. Oraganisation- ಈ ತಾರತಮ್ಯ ಧೋರಣೆಗಳನ್ನು ವ್ಯವಸ್ಥಿತವಾಗಿ ಸಂಘಟಿಸುವುದು

6. Polarisation- ಇವುಗಳ ಆಧಾರದ ಮೇಲೆ ನಾವು-ಅವರು ಎಂದು ಸಮಾಜವನ್ನು ಧ್ರುವೀಕರಿಸುವುದು

7. Preparation-ನರಮೇಧಕ್ಕೆ ಬೇಕಿರುವ ವ್ಯವಸ್ಥಿತ ಸಿದ್ಧತೆಗಳನ್ನು ಮಾಡಿಕೊಳ್ಳುವುದು

8. Persecution- ಆ ಗುಂಪುಗಳನ್ನು ಶಾಸನಾತ್ಮಕವಾಗಿ ಬೇರ್ಪಡಿಸಿ ನಾಗರಿಕ ಹಕ್ಕುಗಳನ್ನು ನಿರಾಕರಿಸುತ್ತಾ ದಮನವನ್ನು ಪ್ರಾರಂಭಿಸುವುದು.

9. Extermination-ಸಾಮೂಹಿಕ ಕಗ್ಗೊಲೆ

10. Denial- ಹತ್ಯಾಕಾಂಡದ ನಿರಾಕರಣೆ, ಸಾಕ್ಷಿ ನಾಶ, ಸಾಕ್ಷಿ ಬೆದರಿಕೆ, ಇವೆಲ್ಲವೂ ಮುಂದಿನ ನರಮೇಧಕ್ಕೆ ತಯಾರಿಯೇ ಆಗಿರುತ್ತವೆ. ಇವೆಲ್ಲವೂ ಅನುಕ್ರಮ ಹಂತಗಳಾಗಿಯೂ ಕಾಣಿಸಿಕೊಳ್ಳಬಹುದು ಅಥವಾ ಒಂದೇ ಸಮಯದಲ್ಲಿ ಹಲವು ಹಂತಗಳ ಪ್ರಕ್ರಿಯೆಗಳೂ ಕಾಣಿಸಬಹುದು. ಈ ವೈಜ್ಞಾನಿಕ ಹಂತೀಕರಣಗಳ ಹಾಗೂ ಅನ್ಯೀಕರಣದ ಹಿನ್ನೆಲೆಯಲ್ಲಿ ಭಾರತದ ಇತಿಹಾಸವನ್ನು ಮತ್ತು ವರ್ತಮಾನವನ್ನೂ ಅವಲೋಕಿಸಿದರೆ ಭಾರತವು ಒಂದು ಶಾಶ್ವತ ನರಮೇಧದ ಸಾಮಾಜಿಕ ಪರಿಸ್ಥಿತಿಯಲ್ಲೇ ಇದೆಯೆಂಬುದು ಗಾಬರಿಯುಂಟು ಮಾಡುತ್ತದೆ.

ಮನುಸ್ಮತಿ-ನರಮೇಧದ ಸನಾತನ ಕೈಪಿಡಿ

ವಾಸ್ತವದಲ್ಲಿ ಡಾ. ಸ್ಟಾನ್ಸನ್ ಅವರ ಜಿನೋಸೈಡ್‌ನ ಮೊದಲ ಐದು ವರ್ಗೀಕರಣವು ಭಾರತದ ‘ವೈದಿಕ ನಾಗರಿಕತೆ’ಯ ಸಾಮಾಜಿಕ ವ್ಯವಸ್ಥೆಯ ಮಾರ್ಗದರ್ಶಿ ಸೂತ್ರವಾದ ಮನುಸ್ಮತಿಯ ಐದು ಅಧ್ಯಾಯಗಳಂತೆಯೇ ಭಾಸವಾಗುತ್ತದೆ. ಇದರ ಆಧಾರದಲ್ಲೇ ಭಾರತದ ದಲಿತ-ಅತಿ ಶೂದ್ರ ಸಮುದಾಯವನ್ನು ಹಾಗೂ ಮಹಿಳೆಯರನ್ನು ಸವರ್ಣೀಯ ಸಮಾಜ ‘‘ಅನ್ಯೀ’’ಕರಿಸಿ, ಅವರು ಯಾವ ಬಟ್ಟೆ ಹಾಗೂ ವರ್ತನೆಗಳನ್ನು ಅನುಸರಿಸಬೇಕೆಂಬ ಚಹರೆಗಳನ್ನು ‘‘ನಿರ್ದಿಷ್ಟೀ’’ಕರಿಸಿ, ಅವರ ಬಗ್ಗೆ ಬಹಿರಂಗ ಹಾಗೂ ದೇವಮಾನ್ಯ ‘‘ತಾರತಮ್ಯ’’ಗಳನ್ನು ಅನುಸರಿಸುತ್ತಲೇ ಬಂದಿದ್ದಾರೆ. ಹಾಗೆಯೇ ಆ ಸಮುದಾಯಗಳನ್ನು ಅಮಾನವೀಕರಿಸುವ ಪದ್ಧತಿಗಳನ್ನು, ಜಾತಿ ವ್ಯವಸ್ಥೆಯ ರೂಪದಲ್ಲಿ ‘‘ಸಂಘಟಿಸು’’ತ್ತಲೇ ಬರಲಾಗಿದೆ. ಹೀಗೆ ಈ ದೇಶದಲ್ಲಿ ದಲಿತ ಮತ್ತು ಅತಿ ಶೂದ್ರ ಹಾಗೂ ಮಹಿಳೆಯರು ಜಾತಿ ವ್ಯವಸ್ಥೆಯ ಲಕ್ಷಣ ರೇಖೆಯನ್ನು ದಾಟಿದಲ್ಲಿ ಅವರ ನರಮೇಧ ನಡೆಸುವ ಶಾಶ್ವತ ಸಿದ್ಧತೆ ಬ್ರಾಹ್ಮಣಶಾಹಿ ಸವರ್ಣೀಯ ವ್ಯವಸ್ಥೆಯಲ್ಲಿ ಅಂತರ್ಗತವಾಗಿಯೇ ಇದೆ. ಹೀಗಾಗಿಯೇ ಇತಿಹಾಸದಲ್ಲೂ, ಪುರಾಣದಲ್ಲೂ ದಲಿತರ ಮೇಲೆ ಹಾಗೂ ಆದಿವಾಸಿಗಳ ಮೇಲೆ ನಡೆದ ನರಮೇಧಗಳು ಭಾರತೀಯ ಸಮಾಜದಲ್ಲಿ ಪುಣ್ಯ ಸಂಕಥನಗಳಾಗಿ ಬಹುಸಂಖ್ಯಾತರ ಸಮ್ಮತಿಯನ್ನು ಗಿಟ್ಟಿಸಿಕೊಂಡಿವೆ. ಈ ದೇಶದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಬಹುಸಂಖ್ಯಾತ ಕೆಳಸ್ಥರದವರು ಬ್ರಾಹ್ಮಣೀಯ ವ್ಯವಸ್ಥೆಯ ಲಕ್ಷ್ಮಣ ರೇಖೆಯನ್ನು ದಾಟಿದ ಶೂದ್ರ ಹಾಗೂ ದಲಿತರೇ ಆಗಿರುವುದರಿಂದ ಅವರ ಕಗ್ಗೊಲೆಗಳ ಬಗ್ಗೆ ಸವರ್ಣೀಯ ಸಮಾಜದಲ್ಲಿ ಸಕ್ರಿಯ ಸಮ್ಮತಿ ದೊರಕುತ್ತಿದೆ.

ಇಲ್ಲದಿದ್ದರೆ ಸ್ವತಂತ್ರ ಭಾರತದಲ್ಲಿ ಪಾರ್ಟಿಷನ್ ಹಿಂಸಾಚಾರಗಳ ನಂತರ 1969ರಲ್ಲಿ ಗುಜರಾತಿನಲ್ಲಿ ಮುಸ್ಲಿಮರ ಮೇಲೆ ನಡೆದ ಹಿಂಸಾಚಾರಗಳಿಂದ ಮೊದಲುಗೊಂಡು ನೆಲ್ಲಿ, ಭಾಗಲ್ಪುರ್, ಮುರಾದಾಬಾದ್, ಮುಂಬೈ, ಗುಜರಾತ್, ಮುಝಫ್ಫರ್‌ನಗರ್ ಹಾಗೂ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಮುಸ್ಲಿಮರ ಏಕಪಕ್ಷೀಯ ಕಗ್ಗೊಲೆಗಳನ್ನೂ, 1967ರಲ್ಲಿ ಕೀಲ್ವೇನ್ಮಣಿಯಲ್ಲಿ ನಡೆದ ದಲಿತ ಹತ್ಯಾಕಾಂಡಗಳಿಂದ ಹಿಡಿದು, ಬೆಲ್ಚಿ, ಪಿಪ್ರಾ, ಲಕ್ಷಣ್‌ಪುರ್ ಬಾತೆ, ಕರಂಚೇಡು, ಕಂಬಾಲಪಲ್ಲಿ ಹಾಗೂ ಇತ್ತೀಚಿನ ಭೀಮಾ ಕೋರೆಗಾಂವ್ ಪ್ರಕರಣದವರೆಗೆ ನಡೆಯುತ್ತಲೇ ಇರುವ ನರಮೇಧಗಳನ್ನೂ, ಧುಲೆಯಿಂದ ಹಿಡಿದು ಕಂಧಮಾಲ್‌ವರೆಗೆ ನಡೆದ ಆದಿವಾಸಿ ಕ್ರಿಶ್ಚಿಯನ್ನರ ನರಮೇಧಗಳು, 84ರಲ್ಲಿ ನಡೆದ ಸಿಖ್ ನರಮೇಧ, ಹಿಂದೂ ರಾಷ್ಟ್ರೀಯತೆಯನ್ನು ಒಪ್ಪದ ಕಾಶ್ಮೀರಿ, ನಾಗಾ, ಅಸ್ಸಾಮಿಗಳ ನಿರಂತರ ಹತ್ಯಾಕಾಂಡಗಳನ್ನೂ, ರೂಪಾ ಕನ್ವರ್‌ರಿಂದ ಹಿಡಿದು ಕುಟುಂಬದೊಳಗೆ ಹಾಗೂ ಬೀದಿಯಲ್ಲಿ ದಿನನಿತ್ಯ ಬಲಿಯಾಗುತ್ತಿರುವ ಲೆಕ್ಕಕ್ಕೂ ಸಿಗದ ಮಹಿಳೆಯರ ನರಬಲಿಗಳನ್ನೂ...

...ಈ ಎಲ್ಲಕ್ಕೂ ಸಿಕ್ಕಿರುವ ಸವರ್ಣೀಯ ಸಮಾಜದ ಸಕ್ರಿಯ ಅಥವಾ ಪರೋಕ್ಷ ಸಮ್ಮತಿಯನ್ನೂ, ಈ ನರಮೇಧಗಳಲ್ಲಿ ಯಾವುದೇ ಶಿಕ್ಷಾಭಯವಿಲ್ಲದೆ ಪಾಲುಗೊಂಡ ಪ್ರಭುತ್ವದ ಭಾಗೀದಾರಿಕೆಯನ್ನೂ ಜಿನೋಸೈಡ್-ನರಮೇಧ ಎಂದಲ್ಲದೆ ಬೇರೆ ಹೇಗೆ ಅರ್ಥಮಾಡಿಕೊಳ್ಳುವುದು?
ಈ ನರಮೇಧಗಳಿಗೆ ಬೇಕಾದ ಸಾಮಾಜಿಕ ಕಂಡಿಷನಿಂಗ್ ನಮ್ಮ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯೊಳಗೇ ಇದೆ. ಹೀಗಾಗಿ ಈ ನಾಗರಿಕತೆಯೊಳಗೇ ಒಂದು genocidal instinct - ನರಮೇಧ ಸ್ವಭಾವ ಇಲ್ಲವೇ ಎಂಬ ಸಹಜ ಪ್ರಶ್ನೆ ಹುಟ್ಟುತ್ತದೆ.

ಮೋದಿ ಭಾರತ ಮತ್ತು ನರಮೇಧ ನಾಗರಿಕತೆ

ಗುಜರಾತ ನರಮೇಧದ ನಂತರವೂ ನರೇಂದ್ರ ಮೋದಿಯನ್ನು ಮೂರು ಬಾರಿ ಮುಖ್ಯಮಂತ್ರಿಯಾಗಿ ಮಾತ್ರವಲ್ಲದೇ ಎರಡೆರಡು ಬಾರಿ ಪ್ರಧಾನ ಮಂತ್ರಿಯನ್ನಾಗಿಯೂ ಆಯ್ಕೆ ಮಾಡಿಕೊಂಡ ಸವರ್ಣೀಯ ಸಮಾಜದೊಳಗೆ ಮತ್ತು ಬ್ರಾಹ್ಮಣೀಕರಣಗೊಳ್ಳುತ್ತಿರುವ ಇತರ ಸಮುದಾಯದೊಳಗೆ ಈ genocidal instinct ಗುಪ್ತವಾಗಿ ಹರಿದಿದೆಯೇ?
 2015ರಲ್ಲಿ ಪೆಹ್ಲೂ ಖಾನ್‌ರಿಂದ ಮೊದಲುಗೊಂಡು 2021ರ ಮೊಯಿನುಲ್ ಹಕ್‌ವರೆಗೆ ಅಲ್ಪಸಂಖ್ಯಾತರ ಮೇಲೆ ದ್ವೇಷರೂಪದ ಪ್ರಭುತ್ವ ದಮನ ಹಾಗೂ ಅದರ ಬಗ್ಗೆ ಸಮಾಜದ ಮೌನ ಸಮ್ಮತಿ ಇತ್ಯಾದಿಗಳು ಏನು ಹೇಳುತ್ತಿವೆ?
ಮೋದಿ ಸರಕಾರ ಬಂದ ಮೇಲೆ ಭಾರತದ ಸಮಾಜದಲ್ಲಿ genocidal instinctಗೆ ಬಹಿರಂಗ ಪ್ರೋತ್ಸಾಹ, ನಿರ್ದಿಷ್ಟ ಕಾರ್ಯಕ್ರಮ ಮತ್ತು ಶ್ರೀರಕ್ಷೆ ಸಿಗುತ್ತಿದೆಯೇ?
ಹಾಗಿದ್ದಲ್ಲಿ genocidal instinctಗೆ ಪ್ರತಿಯಾಗಿ ಜನರಲ್ಲಿ ಸಹಜವಾಗಿರುವ Human Instinct-Moral Instinct- Justice Instinct-ಗಳನ್ನು ಗಟ್ಟಿಗೊಳಿಸುವುದು ಹೇಗೆ? ಈ ಬಗೆಯಲ್ಲಿ ಬಹುಸಂಖ್ಯಾತ ಸಮುದಾಯ ಮರುಮಾನವೀಕರಣಗೊಳ್ಳದೆ ನರಮೇಧವನ್ನು ಹಾಗೂ ಮೋದಿ ಮಾಡೆಲ್‌ನ ಭಾರತೀಯ ಫ್ಯಾಶಿಸಂನ್ನು ಸೋಲಿಸಲು ಸಾಧ್ಯವೇ?

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News