ಬೆಂಗಳೂರಿನ ಜಲಾವೃತವಾಗುವ ಪ್ರದೇಶಗಳಿಗೆ ಶಾಶ್ವತ ಪರಿಹಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-10-06 15:29 GMT
ಫೈಲ್ ಚಿತ್ರ

ಮೈಸೂರು, ಅ.6: ಮಳೆ ಬಂದಾಗ ಬೆಂಗಳೂರಿನ ಜಲಾವೃತವಾಗುವ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರು ಜಿಲ್ಲಾಡಳಿತದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರಿ ಮಳೆ ಬಂದಾಗ ಬೆಂಗಳೂರು ನಗರದಲ್ಲಿ ಅತ್ಯಂತ ತಗ್ಗುಪ್ರದೇಶ, ಕೆರೆಗಳ ಆವರಣಗಳ ಭಾಗ, ರಾಜಾಕಾಲುವೆ ಭಾಗಗಳು ಜಲಾವೃತವಾಗುತ್ತಿವೆ. ಮಳೆ ಬಂದಾಗ ಸಮಸ್ಯೆಗಳನ್ನು ಸರಿಪಡಿಸುವುದು ತಾತ್ಕಾಲಿಕ ಪರಿಹಾರವಾಗುತ್ತದೆ. ಆದುದರಿಂದ, ಜಲಾವೃತವಾಗುವ ಪ್ರದೇಶಗಳಲ್ಲಿ ಶಾಶ್ವತ ಪರಿಹಾರವನ್ನು ನೀಡಲು ಪುನರ್ನಿರ್ಮಾಣ ಮತ್ತು ಪುರ್ನವಸತಿ ಕಾರ್ಯವಾಗಬೇಕು ಎಂದರು.

ರಾಜಾಕಾಲುವೆಯಲ್ಲಿ ಹಾಗೂ ಕೆರೆ ಆವರಣಗಳಲ್ಲಿ ಒತ್ತುವರಿಯಾಗಿ ನಿರ್ಮಾಣವಾದ ವಸತಿ ಪ್ರದೇಶಗಳ ಬಗ್ಗೆ ಸರ್ವೇ ಮಾಡಿ ಪುನರ್ವಸತಿ ಕಲ್ಪಿಸಲಾಗುವುದು. ದೀರ್ಘಕಾಲಿಕ ಹಾಗೂ ಶಾಶ್ವತ ಪರಿಹಾರ ನೀಡಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ರಸ್ತೆಗಳು ನಿರ್ಮಾಣದ ಅವಧಿ, ನಿರ್ವಹಣೆ, ದುರಸ್ತಿ, ಗುಣಮಟ್ಟ ಹಾಗೂ ಕಳಪೆ ರಸ್ತೆ ನಿರ್ಮಿಸಿದ ಗುತ್ತಿಗೆದಾರರ ಬಗ್ಗೆ ಸಂಪೂರ್ಣ ವರದಿ ನೀಡಲು ಟಾಸ್ಕ್  ರ್ಸ್‍ನ್ನು ರಚಿಸಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ವೈಜ್ಞಾನಿಕವಾಗಿ ಆಗಬೇಕು. ಮಳೆಗಾಲವಾದ ನಂತರ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದ ಅವರು, ಚಾಮರಾಜನಗರ ಜಿಲ್ಲೆಯ ಹಿಂದುಳಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುವುದು ನನ್ನ ಕರ್ತವ್ಯ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದರು.

ದಸರಾ ಉತ್ಸವವನ್ನು ಎಸ್.ಎಂ.ಕೃಷ್ಣ ಉದ್ಘಾಟನೆ ಮಾಡಲಿದ್ದಾರೆ. ಒಬ್ಬ ಸಾಮಾನ್ಯ ನಾಗರಿಕನಾಗಿ ಈ ಬಾರಿಯ ದಸರಾ ಉತ್ಸವವನ್ನು ಮುನ್ನಡೆಸುತ್ತಿರುವುದು ನನಗೆ ಸಂತೋಷ ತಂದಿದೆ. ಕೋವಿಡ್‍ನಿಂದಾಗಿ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾವನ್ನು ಆಚರಿಸಲಾಗುತ್ತಿದೆ. ಕನ್ನಡ ನಾಡು ಸುಭಿಕ್ಷವಾಗಿರಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News