ಕೇರಳದಲ್ಲಿ ಭಾರೀ ಮಳೆ:ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಮೂವರು ಮೃತ್ಯು
ತಿರುವನಂತಪುರ: ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತದ ಪ್ರಭಾವದಿಂದ ಕೇರಳದಲ್ಲಿ ಹಲವಾರು ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಕಾಣಿಸಿಕೊಂಡು ಜಲಾವೃತವಾಗಿದೆ. ಮಂಗಳವಾರ ಮಳೆ ಸಂಬಂಧಿತ ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ.
ಮಂಗಳವಾರ ಮುಂಜಾನೆ 5 ಗಂಟೆ ಸುಮಾರಿಗೆ ಮಲಪ್ಪುರಂ ಜಿಲ್ಲೆಯ ಕರಿಪ್ಪೂರು ಸಮೀಪದ ಪಲ್ಲಿಕಲ್ ಪಂಚಾಯತ್ನಲ್ಲಿ ಸುರಿದ ಮಳೆಯಿಂದಾಗಿ ಮನೆಯ ಒಂದು ಭಾಗ ಕುಸಿದು ದಿಯಾನಾ ಫಾತಿಮಾ (7) ಹಾಗೂ ಲುಬಾನಾ ಫಾತಿಮಾ (6 ತಿಂಗಳು) ಸಾವನ್ನಪ್ಪಿದ್ದಾರೆ. ಅವರ ಪೋಷಕರು ಮತ್ತು ಕುಟುಂಬದ ಇತರ ಸದಸ್ಯರಿಗೆ ಯಾವುದೇ ಗಾಯವಾಗಿಲ್ಲ.
ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ತೆನ್ಮಾಲಾ ಬಳಿಯ ನಾಗಮಾಲದಲ್ಲಿ ಎಸ್ಟೇಟ್ ಕಾರ್ಮಿಕ ಗೋವಿಂದರಾಜ್ ಮಳೆಯಿಂದಾಗಿ ಉಕ್ಕೇರಿದ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮಂಗಳವಾರ ಮತ್ತು ಬುಧವಾರದಂದು 14 ಜಿಲ್ಲೆಗಳ ಪೈಕಿ ಒಂಬತ್ತು ಜಿಲ್ಲೆಗಳಾದ ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡಿನಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ಐಎಂಡಿ ನೀಡಿದೆ.